Advertisement

ಮಹರ್ಷಿಗೌತಮರ ಶಾಪ; ಟಗರಿನ ವೃಷಣಕ್ಕೂ,ಇಂದ್ರನಿಗೂ ಏನು ಸಂಬಂಧ!

11:26 AM Feb 19, 2019 | |

ಮಿಥಿಲೆಯ ಉಪವನದಲ್ಲಿ ಒಂದು  ಹಳೆಯ ಆಶ್ರಮವಿತ್ತು. ಹಿಂದಿನ ಕಾಲದಲ್ಲಿ ಈ ಸ್ಥಾನವು ಮಹಾತ್ಮರಾದ ಗೌತಮರ ಆಶ್ರಮವಾಗಿತ್ತು. ಆಗ ಆ ಆಶ್ರಮವು ದಿವ್ಯವಾಗಿ ಕಂಡುಬರುತ್ತಿತ್ತು. ಹಿಂದೆ ಮಹರ್ಷಿ ಗೌತಮರು ತನ್ನ ಪತಿವ್ರತೆಯಾದ ಪತ್ನಿ ಅಹಲ್ಯೆಯೊಂದಿಗೆ ಅದೇ ಆಶ್ರಮದಲ್ಲೆ ವಾಸಿಸುತ್ತಿದ್ದರು. ಅವರು ತಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಬಹಳ ವರ್ಷಗಳು ತಪಸ್ಸನ್ನಾಚರಿಸಿದರು. ಆ ದಂಪತಿಗಳ ತಪಸ್ಸಿಗೆ ಮೂರುಲೋಕಗಳು ನಡುಗಿಹೋಗಿದ್ದವು. ಇವರ ತಪಸ್ಸಿನಿಂದಾಗಿ ಆಶ್ರಮಕ್ಕೆ ಒಂದು ದಿವ್ಯವಾದ ಶಕ್ತಿಯಿತ್ತು. ಆದ್ದರಿಂದ ದೇವತೆಗಳೂ ಕೂಡ ಇದರ ಪೂಜೆ ಹಾಗೂ ಪ್ರಶಂಸೆ ಮಾಡುತ್ತಿದ್ದರು.

Advertisement

           ಇಂದ್ರಿಯಗಳ ಒಡೆಯನಾದ ದೇವೇಂದ್ರನು ಈ ದಂಪತಿಗಳ ತಪಸ್ಸನ್ನು ಪರೀಕ್ಷಿಸಲು ಆಲೋಚಿಸಿದನು. ಇಂದ್ರನ ಪರೀಕ್ಷೆಯಲ್ಲಿ ಗೆದ್ದರೆ ಮಾತ್ರ ಅವರ ತಪಸ್ಸು ಫಲಿಸುತ್ತದೆ.  ಒಂದು ದಿನ ಗೌತಮರು ಆಶ್ರಮದಲ್ಲಿ ಇಲ್ಲದಿದ್ದಾಗ, ಇದೇ ಸರಿಯಾದ ಸಂದರ್ಭವೆಂದು ತಿಳಿದ ಶಚೀಪತಿ ಇಂದ್ರನು ಗೌತಮ ಮುನಿಯ ವೇಷಧರಿಸಿ ಆಶ್ರಮದಲ್ಲಿರುವ ಅಹಲ್ಯೆಯ ಬಳಿಗೆ ಬಂದು  ” ಸಿಂಹಕಟಿಯುಳ್ಳ ಸುಂದರಿಯೇ! ನಿನ್ನ ಅಪ್ರತಿಮ ಸೌಂದರ್ಯಕ್ಕೆ ಮನಸೋತ ನಾನು ಇಂದು ನಿನ್ನಲ್ಲಿ ಸಮಾಗಮವನ್ನು ಬಯಸುತ್ತಿರುವೆನು. ನೀನು ಕೂಡ ಮನಃಪೂರ್ತಿಯಾಗಿ ನನ್ನೊಂದಿಗೆ ಸೇರಿ ನನ್ನ ಇಚ್ಚೆಯನ್ನು ಪೂರ್ಣಗೊಳಿಸು ಎಂದು ಕೇಳಿದನು.

           ಗೌತಮರ ವೇಷಧರಿಸಿ ಬಂದ ಇಂದ್ರನನ್ನು ತನ್ನ ತಪಃಶಕ್ತಿಯಿಂದ ಅಹಲ್ಯೆಯು ಗುರುತಿಸಿದರೂ ” ಆಹಾ ದೇವರಾಜ ಇಂದ್ರನೂ ನನ್ನ ಅಂದಕ್ಕೆ ಮನಸೋತು,ನನ್ನ ಪತಿಯ ವೇಷವನ್ನು ಧರಿಸಿ ನನ್ನ ಸಮಾಗಮವನ್ನು ಬಯಸುತ್ತಿರುವನು” ಎಂದು ಅಹಂಗೊಂಡು ಅವನೊಂದಿಗೆ ಸಮಾಗಮವನ್ನು ಹೊಂದಲು ಇಂದ್ರನ ಪ್ರಸ್ತಾಪವನ್ನು ಸ್ವೀಕರಿಸಿ ಮೈ ಮರೆತಳು. ಸ್ವಲ್ಪ ಸಮಯದ ನಂತರ ಅಹಲ್ಯೆಯು “ಸುರಶ್ರೇಷ್ಠನೇ ! ನಾನು ನಿಮ್ಮ ಸಮಾಗಮದಿಂದ ಕೃತಾರ್ಥಳಾದೆನು. ಈಗ ನೀವು ಬೇಗನೆ ಇಲ್ಲಿಂದ ಹೊರಟುಹೋಗಿ ಮಹರ್ಷಿ ಗೌತಮರ ಕೋಪದಿಂದ ನಿಮ್ಮನ್ನು ರಕ್ಷಿಸಿಕೊಂಡು ನನ್ನನ್ನು ರಕ್ಷಿಸಿ” ಎಂದು ಹೇಳಿದಳು.

          ಆಗ ಇಂದ್ರನೂ ಅಹಲ್ಯೆಯಲ್ಲಿ ವ್ಯಂಗ್ಯವಾಗಿ ನಗುತ್ತ ಮನಸ್ಸಿನಲ್ಲಿಯೇ ಅಹಲ್ಯೆಯ ತಪಸ್ಸನ್ನು ಭಂಗಮಾಡಿದ ಕೆಲಸ ಮುಗಿಯಿತು ಎಂದು ಸಂತೋಷ ಚಿತ್ತನಾಗಿ  – ಸುಂದರಿ! ನಾನೂ ಸಂತುಷ್ಟನಾಗಿದ್ದೇನೆ. ಈಗ ಬಂದ ಹಾಗೆಯೇ ಹೊರಟು ಹೋಗುವೆನು ಎಂದು, ಗೌತಮರು ಬರುವ ಶಂಕೆಯಿಂದ  ಅಲ್ಲಿಂದ ನಿಧಾನವಾಗಿ ಹೆಜ್ಜೆ ಹಾಕುತ್ತ  ಕುಟೀರದಿಂದ ಹೊರಗೆ ಹೊರಟನು. ಇಂದ್ರನಿಗೆ ನಿಂತಲ್ಲಿಯೇ ಮಾಯವಾಗುವ ಶಕ್ತಿಯಿದ್ದರೂ ಗೌತಮರಿಗೆ ತಿಳಿಯಲೆಂದೇ ನಡೆದುಕೊಂಡು ಹೋಗುತ್ತಿದ್ದನು.

Advertisement

          ಅಷ್ಟರಲ್ಲಿ ದೇವತೆಗಳಿಗೆ ಮತ್ತು ದಾನವರಿಗೆ ದುರ್ದಶರೂ, ತಪೋಬಲ ಸಂಪನ್ನರೂ ಆದ ಮಹಾಮುನಿ ಗೌತಮರು ಕೈಯಲ್ಲಿ ಸಮಿಧೆಯನ್ನೆತ್ತಿಕೊಂಡು ಆಶ್ರಮವನ್ನು ಪ್ರವೇಶಿಸಿದರು. ಅವರ ಶರೀರ ತೀರ್ಥಸ್ನಾನದಿಂದ ಒದ್ದೆಯಾಗಿತ್ತು ಮತ್ತು ಪ್ರಜ್ವಲಿತ ಅಗ್ನಿಯಂತೆ ಉದ್ದೀಪ್ತರಾಗಿದ್ದರು. ಅವರನ್ನು ನೋಡುತ್ತಲೇ ದೇವೇಂದ್ರನು ಭಯದಿಂದ ನಡುಗಿಹೋದನು. ಅವನ ಮುಖದಲ್ಲಿ ವಿಷಾದ ತುಂಬಿತ್ತು. ದುರಾಚಾರಿ ಇಂದ್ರನೂ ಮುನಿ ವೇಶದಲ್ಲಿರುವುದನ್ನು ಕಂಡು, ಸದಾಚಾರ ಸಂಪನ್ನ  ಮುನಿವರ ಗೌತಮರಿಗೆ ಎಲ್ಲವು ಅರ್ಥವಾಗಿಹೋಯಿತು.

            ಇಂದ್ರನೇ ! ನೀನು ನನ್ನ ರೂಪವನ್ನು ಧರಿಸಿ ಮಾಡಲು ಯೋಗ್ಯವಲ್ಲದ ಪಾಪಕರ್ಮವನ್ನು ಮಾಡಿರುವೆ. ಅದಕ್ಕಾಗಿ ನೀನು ‘ವಿಫಲ’ (ವೃಷಣ ರಹಿತ)ನಾಗಿ ಹೋಗು ಎಂದು ಶಪಿಸಿದರು. ಇದನ್ನು ಕಂಡು ಅಹಲ್ಯೆಯು ನಡುಗಿ ಭಯದಿಂದ ತತ್ತರಿಸಿ ಹೋಗಿದ್ದಳು. ಅಹಲ್ಯೆಯನ್ನು ಕಂಡ ಗೌತಮರು “ದುರಾಚಾರಿಣಿಯೇ ! ನೀನು ಎಂತ ಘೋರ ಕೆಲಸ ಮಾಡಿಬಿಟ್ಟೆ, ನೀನು ಇಲ್ಲೇ ಅನೇಕ ಸಾವಿರ ವರ್ಷಗಳವರೆಗೆ ಕೇವಲ ಗಾಳಿಯನ್ನು ಸೇವಿಸಿಕೊಂಡು, ಉಪವಾಸವಿದ್ದು ಕಷ್ಟಪಡುತ್ತಾ, ಸಮಸ್ತ ಜೀವರಾಶಿಗಳಿಂದ ಅದೃಶ್ಯಳಾಗಿ ಈ ಆಶ್ರಮದಲ್ಲಿ ಕಲ್ಲು ಬಂಡೆಯಂತೆ ಬಿದ್ದುಕೊಂಡಿರು” ಎಂದು ಶಪಿಸಿದರು. ಅಲ್ಲಿಗೆ ಗೌತಮರ ಕ್ರೋಧದಿಂದ ತಪಸ್ಸಿನಲ್ಲಿ ವಿಘ್ನ ಉಂಟಾಯಿತು. ಮುನಿಸ್ಸನ್ನು ಗೆದ್ದರೆ ಮಾತ್ರ ಮುನಿಗಳಾಗುತ್ತಾರೆ.

         ಅಹಲ್ಯೆಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಾ ಗೋಳಾಡಿದಳು. ದೈನ್ಯತೆಯಿಂದ ಪತಿಯಲ್ಲಿ ಕ್ಷಮೆಯಾಚಿಸಿದಳು. ಆಗ ಗೌತಮರು  ” ಈ ದಿವ್ಯವಾದ ಆಶ್ರಮವು ಹೊರಜಗತ್ತಿಗೆ ಘೋರವಾದ ವನದಂತೆ ತೋರುತ್ತದೆ. ಇಲ್ಲಿ ನೀನು ಸಹಸ್ರಾರುವರ್ಷ ಏಕಾಂಗಿಯಾಗಿ ತಪಸ್ಸನ್ನು ಆಚರಿಸು. ಇಲ್ಲಿ ನೀನು ವಾಸಿಸುವುದು ಯಾವ ಜೀವರಾಶಿಗೂ ಗೋಚರವಾಗುವುದಿಲ್ಲ. ನೀನು ನಿನ್ನ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಿ ನಿನ್ನ ಪಾತಿವ್ರತ್ಯವನ್ನು ಕಾಪಾಡಿಕೊಳ್ಳಬಹುದು. ನಿನ್ನ ತಪಸ್ಸಿನಿಂದ ನೀನು ಮಾಡಿದ ಈ ಘೋರಾಪರಾಧವು ಕ್ಷೀಣವಾಗುವುದು. ಏಕೆಂದರೆ ಈ ಶಾಪವು ನಿನಗೆ ವರವಾಗಿಯೇ ಇದೆ. ಶ್ರೀಮನ್ನಾರಾಯಣನು ರಾಮಾವತಾರದಲ್ಲಿ ಇಲ್ಲಿಗೆ ಬಂದು ನಿನಗೆ ದರ್ಶನ ನೀಡುತ್ತಾನೆ. ರಾಮನ ಪಾದ ಸ್ಪರ್ಶದಿಂದ ನಿನಗೂ ಹಾಗೂ ಆಶ್ರಮಕ್ಕೂ ದಿವ್ಯವಾದ ರೂಪ ಸಿಗುತ್ತದೆ. ಶ್ರೀರಾಮನ ಆತಿಥ್ಯ ಸತ್ಕಾರ ಮಾಡುವುದರಿಂದ ನಿನ್ನ ಲೋಭ- ಮೋಹ ಮೊದಲಾದ ಪಾಪಗಳೆಲ್ಲ ನಶಿಸಿ ಪವಿತ್ರಳಾಗುವೆ. ಅಂದು ಮತ್ತೆ ನಿನ್ನನ್ನು ನಾನು  ಸಂತೋಷದಿಂದ ಸ್ವೀಕರಿಸುವೆ” ಎಂದು ಹೇಳಿ ಆ ಆಶ್ರಮವನ್ನು ಬಿಟ್ಟು, ಸಿದ್ದರೂ ,ಚಾರಣರು ವಾಸಿಸುತ್ತಿದ್ದ ಹಿಮಾಲಯದ ರಮಣೀಯ ಶಿಖರದಲ್ಲಿ ತಪಸ್ಸು ಮಾಡತೊಡಗಿದರು.

          ಅನಂತರ ವೃಷಣರಹಿತನಾದ ಇಂದ್ರನು ಬಹಳ ದೈನ್ಯಮುಖಭಾವದಿಂದ ಅಗ್ನಿಯೇ ಮೊದಲಾದ ದೇವತೆಗಳಲ್ಲಿ ಸಿದ್ದಗಂಧರ್ವರಲ್ಲಿ, ಚಾರಣರಲ್ಲಿ ದೀನ ಧ್ವನಿಯಲ್ಲಿ “ದೇವತೆಗಳಿರಾ ! ಮಹಾತ್ಮ ಗೌತಮರ ತಪಸ್ಸಿನಲ್ಲಿ ವಿಘ್ನವನ್ನು ಉಂಟುಮಾಡಿ ಅವರನ್ನು ಕ್ರೋಧಗೊಳಿಸಿ ನಾನು ದೇವತೆಗಳ ಕಾರ್ಯವನ್ನೇ ಸಿದ್ಧಗೊಳಿಸಿರುವೆನು. ಆದ್ದರಿಂದ ನೀವೆಲ್ಲ, ಋಷಿಸಮುದಾಯವನ್ನು ಮತ್ತು ಚಾರಣರು ಸೇರಿ ನನ್ನನು ವೃಷಣಯುಕ್ತನನ್ನಾಗಿಸಲು (ಶಾಪಮುಕ್ತನಾಗಲು) ಪ್ರಯತ್ನಿಸಿರಿ” ಎಂದು ಕೇಳಿಕೊಂಡನು.

           ಇಂದ್ರನ ಈ ಮಾತನ್ನು ಕೇಳಿ ಮರುದ್ಗಣಸಹಿತ ಅಗ್ನಿಯೇ ಮೊದಲಾದ ಸಮಸ್ತ ದೇವತೆಗಳು ಪಿತೃದೇವತೆಗಳ ಬಳಿಗೆ ಹೋಗಿ ನಡೆದ ವೃತ್ತಾಂತವನ್ನೆಲ್ಲಾ ತಿಳಿಸಿ ಎರಡೂ ವೃಷಣಗಳನ್ನು ಕೇಳಿದರು. ಪಿತೃದೇವತೆಗಳು ಟಗರಿನ ವೃಷಣಗಳನ್ನು ಕಿತ್ತು  ಇಂದ್ರನ ಶರೀರಕ್ಕೆ ಜೋಡಿಸಿದರು. ಅದಕ್ಕೆ ಪ್ರತಿಯಾಗಿ ಇಂದ್ರನು ವೃಷಣರಹಿತ ಟಗರನ್ನು ದಾನಮಾಡುವವನಿಗೆ ದಾನಕ್ಕೆ ಉತ್ತಮ ಪೂರ್ಣಫಲವನ್ನು ದೊರಕುವಂತೆ ವಚನವಿತ್ತನು.

             ರಾಮವತಾರದಲ್ಲಿ ವಿಶ್ವಾಮಿತ್ರರೊಂದಿಗೆ ಮಿಥಿಲೆಯ ಜನಕನ ಆಸ್ಥಾನಕ್ಕೆ ಹೊರಟ ಲಕ್ಷ್ಮಣ ಸಹಿತ ಶ್ರೀರಾಮನು ದಾರಿಯಲ್ಲಿ ಅಹಲ್ಯೆಯ ಉದ್ಧಾರಕ್ಕೆಂದು ಅದೇ ಆಶ್ರಮಕ್ಕೆ ಪ್ರವೇಶಿಸಿದನು. ರಾಮನ ಪಾದಸ್ಪರ್ಶದಿಂದ ಘೋರವಾದ ಆಶ್ರಮವು ದಿವ್ಯವಾಗಿ ಕಾಣಿಸತೊಡಗಿತು. ಎಲ್ಲರಿಗೂ ಕಲ್ಲುಬಂಡೆಯಂತೆ ತೋರುತ್ತಿದ್ದ ಅಹಲ್ಯೆಯು ಅಲ್ಲಿ ಮಹಾಸೌಭಾಗ್ಯಶಾಲಿನೀಯಾಗಿ ತಪ್ಪಸ್ಸಿನಿಂದ ಪ್ರಕಾಶಿಸುತ್ತಿದ್ದಳು. ಈ ಲೋಕದ ಮನುಷ್ಯರು ಹಾಗೂ ಸಮಸ್ತ ದೇವತೆಗಳು, ಅಸುರರೂ ಅಲ್ಲಿಗೆ ಬಂದರು ಆಕೆಯ ಪ್ರಖರತೆಯನ್ನು ನೋಡಲಾಗುತ್ತಿರಲಿಲ್ಲ. ಆಕೆಯ ಸ್ವರೂಪವು ದಿವ್ಯವಾಗಿತ್ತು. ಆಕೆ ಮಾಯಾಮಯದಂತೆ ಕಂಡುಬರುತ್ತಿದ್ದಳು. ಹೊಗೆಯಿಂದ ಆವರಿಸಿದ ಪ್ರಜ್ವಲಿತ ಅಗ್ನಿಯಂತೆ ಕಾಣುತ್ತಿದ್ದಳು. ಅವಳನ್ನು ನೋಡಲು ಸೂರ್ಯನ ಪ್ರಭೆಯಂತೆ ಕಾಣುತ್ತಿದ್ದಳು. ಶ್ರೀರಾಮನ ದರ್ಶನದಿಂದ ಆಕೆಯ ಶಾಪವು ಅಂತ್ಯವಾಗಿ ಅವಳು ಎಲ್ಲರಿಗೆ ಕಾಣುವಂತಾದಳು. ಆಗ ಶ್ರೀರಾಮನು ಅಹಲ್ಯೆಯ ಎರಡೂ ಚರಣಗಳನ್ನು ಸ್ಪರ್ಶಿಸಿದನು. ಪಾದ ಸ್ಪರ್ಶದಿಂದ ಎಚ್ಚರಗೊಂಡ ಅಹಲ್ಯೆಯು ಗೌತಮರ ಮಾತನ್ನು ನೆನೆದು ಭಕ್ತಿಯಿಂದ ಆದರಣೀಯ ಅತಿಥಿಗಳನ್ನು ಅರ್ಘ್ಯಪಾದ್ಯಾದಿಗಳಿಂದ ಪೂಜಿಸಿದಳು. ಶ್ರೀರಾಮನು ಅಹಲ್ಯೆಯ ಆತಿಥ್ಯವನ್ನು ಸ್ವೀಕರಿಸಿದನು.

            ಆಗ ದೇವದುಂದುಭಿಗಳು ಮೊಳಗಿದವು. ಜೊತೆಗೆ ಆಕಾಶದಿಂದ ಪುಪ್ಪವೃಷ್ಟಿಯಾಯಿತು. ಅಹಲ್ಯೆಯು ವಿಶುದ್ಧ ಸ್ವರೂಪವನ್ನು ಹೊಂದಿದಳು. ಅದೇ ಸಮಯಕ್ಕೆ ಗೌತಮರು ಅಲ್ಲಿಗೆ ಬಂದು ಶ್ರೀರಾಮನನ್ನು ವಿಧಿವತ್ತಾಗಿ ಪೂಜಿಸಿ, ಅಹಲ್ಯೆಯನ್ನು ಪಡೆದು ಪರಮ ಸುಖಿಗಳಾದರು.  

ಪಲ್ಲವಿ 

Advertisement

Udayavani is now on Telegram. Click here to join our channel and stay updated with the latest news.

Next