Advertisement

ತಾಳಗುಪ್ಪದಲ್ಲೇ ರೈಲ್ವೆ ಟರ್ಮಿನಲ್‌ ಆಗಲಿ

03:50 PM Jan 01, 2020 | |

ಸಾಗರ: ರೈಲ್ವೆ ತಾಂತ್ರಿಕ ವರದಿಯ ಅನ್ವಯ ತಾಳಗುಪ್ಪದಲ್ಲಿ ಆಗಬೇಕಿದ್ದ ರೈಲ್ವೆ ಟರ್ಮಿನಲ್‌ ಹಿತಾಸಕ್ತಿಗಳ ಕಾರಣ ಶಿವಮೊಗ್ಗ ಸಮೀಪದ ಕೋಟೆಗಂಗೂರಿನಲ್ಲಿ ಆಗುವುದನ್ನು ಸಮರ್ಥಿಸಲಾಗುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಹೋರಾಟವೇ ಗತಿ ಎಂಬ ವಾತಾವರಣವಿದೆ. ಟರ್ಮಿನಲ್‌ಗೆ ಕೋಟೆಗಂಗೂರನ್ನೇ ಆಯ್ಕೆ ಮಾಡಿ, ಶಂಕುಸ್ಥಾಪನೆಗೆ ಮುಂದಾದರೆ ಆ ದಿನ ಹತ್ತು ಜನ ಸಾವನ್ನಪ್ಪಿದರೂ ಹೆದರದೆ ಆ ಸ್ಥಳದಲ್ಲಿ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎಚ್ಚರಿಸಿದರು.

Advertisement

ನಗರದ ಸಾಗರ ಜಂಬಗಾರು ರೈಲ್ವೆ ನಿಲ್ದಾಣದ ಬಳಿ ಮಲೆನಾಡು ರೈಲ್ವೆ ಹೋರಾಟ ಸಮಿತಿ ವತಿಯಿಂದ ತಾಳಗುಪ್ಪದಿಂದ ಕೋಟೆಗಂಗೂರಿಗೆ ರೈಲ್ವೆ ಟರ್ಮಿನಲ್‌ ಸ್ಥಳಾಂತರಿಸಿರುವುದನ್ನು ಖಂಡಿಸಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಭಾಷಣದಿಂದ ಬದಲಾವಣೆ ಸಾಧ್ಯವಿಲ್ಲ. ನಮ್ಮ ಹಕ್ಕುಗಳನ್ನು ಕಿತ್ತುಕೊಂಡಾಗ ಅವಿರತ ಹೋರಾಟ ಮಾಡುವ ಮೂಲಕ ತಪ್ಪಿ ಹೋಗಿದ್ದನ್ನು ಮರಳಿ ತರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ತಾಳಗುಪ್ಪಕ್ಕೆ ಮಂಜೂರಾದ ರೈಲ್ವೆ ಟರ್ಮಿನಲ್‌ ಶಿವಮೊಗ್ಗದ ಕೋಟೆಗಂಗೂರಿಗೆ ವರ್ಗಾವಣೆ ಮಾಡಲಾಗಿದೆ. ಅದನ್ನು ವಾಪಸ್‌ ತಾಳಗುಪ್ಪಕ್ಕೆ ತರಲು ಹೋರಾಟ ಮಾತ್ರ ದಾರಿಯಾಗಿದೆ ಎಂದರು.

ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್‌ ಮಾತನಾಡಿ, ಕ್ಷೇತ್ರದ ಶಾಸಕರು, ಸಂಸದರಿಗೆ ಕನಿಷ್ಟ ಜವಾಬ್ದಾರಿಗಳಿಲ್ಲದಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತವೆ. ಟರ್ಮಿನಲ್‌ ತಾಳಗುಪ್ಪಕ್ಕೆ ಬರದಿರುವುದನ್ನು ವಿರೋ ಧಿಸುವುದಕ್ಕೂ ಬೆದರುವ ಶಾಸಕರನ್ನು ನಾಲಾಯಕ್‌ ಎನ್ನಬೇಕಾಗಿದೆ. ಸಾವಿರಾರು ಎಕರೆ ಬೇನಾಮಿ ಆಸ್ತಿಯನ್ನು ಶಿವಮೊಗ್ಗದಲ್ಲಿ ಹೊಂದಿರುವ ಕುಟುಂಬ ಕೋಟೆಗಂಗೂರಿನ ಸುತ್ತಮುತ್ತ ಇರುವ ತಮ್ಮ ಜಮೀನಿನ ಬೆಲೆ ಹೆಚ್ಚಿಸಿಕೊಳ್ಳಲು ಟರ್ಮಿನಲ್‌ನ್ನು ಅಲ್ಲಿ ಸ್ಥಾಪಿಸಲು ಮುಂದಾಗಿದ್ದಾರೆ. ಬೇನಾಮಿ ಆಸ್ತಿ ಕುರಿತು ನಮಗೆ ಮಾಹಿತಿ ಸಿಕ್ಕಿದೆ ಎಂದರು.

ಸಂಸದರ ನಿರ್ಲಕ್ಷ್ಯದಿಂದ ಸಾಗರ ಕ್ಷೇತ್ರಕ್ಕೆ ಬಂದ ಅವಕಾಶವನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಅಧಿಕಾರಿಗಳು ಪಕ್ಷದ ಏಜೆಂಟರಂತೆ ಕೆಲಸ ಮಾಡಬಾರದು. ಹಿಂದೆ ಸ್ಥಳೀಯ ಶಾಸಕ ಎಚ್‌. ಹಾಲಪ್ಪ ರೈಲ್ವೆ ಟರ್ಮಿನಲ್‌ ತಾಳಗುಪ್ಪದಲ್ಲಿಯೇ ಮಾಡಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಸೊರಬದ ಶಾಸಕ ಕುಮಾರ್‌ ಬಂಗಾರಪ್ಪ ತಮ್ಮ ತಂದೆಯ ಹೆಸರಿಗೆ ಕಳಂಕ ತರುವಂತೆ ವರ್ತಿಸುತ್ತಿದ್ದಾರೆ. ಎಲ್ಲರಿಗೂ ಶಿಕಾರಿಪುರ ಮಾದರಿಯ ಅಭಿವೃದ್ಧಿ ಎಂದು ಹೇಳಲಾಗುತ್ತಿದೆಯೇ ವಿನಃ ಸಾಗರ ಮಾದರಿ, ಸೊರಬ ಮಾದರಿ ಇಲ್ಲ ಎಂದು ವ್ಯಂಗ್ಯವಾಡಿದರು.

Advertisement

ರೈಲ್ವೆ ಹೋರಾಟ ಸಮಿತಿ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಡಾ|ನಾ.ಡಿಸೋಜಾ ಮಾತನಾಡಿ, ಕೇಂದ್ರ ರೈಲ್ವೆ ಇಲಾಖೆ ತಾಳಗುಪ್ಪದಲ್ಲಿ ಟರ್ಮಿನಲ್‌ ಮಾಡಲು ಸೂಕ್ತ ಜಾಗವಿದೆ ಎಂದು ತೀರ್ಮಾನಿಸಿದಾಗ ರೈಲ್ವೆ ಹೋರಾಟ ಸಮಿತಿ ಅದನ್ನು ತಡೆಯಲು ಸಾಕಷ್ಟು ಪ್ರಯತ್ನ ನಡೆಸಿದೆ. ಹೋರಾಟ ಸುದೀರ್ಘ‌ವಾದದ್ದು. ನಿರಂತರವಾದ ಹೋರಾಟ ಇರಲಿ. ಯಾವುದೇ ಕಾರಣಕ್ಕೂ ನಿರಾಶೆ ಹೊಂದುವುದು ಬೇಡ ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ಬಿ.ಎಚ್‌.ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಸಂಸದರ ಮಾತುಗಳು ನಂಬಿಕೆಗೆ ಅರ್ಹವಲ್ಲ. ಶಿವಮೊಗ್ಗದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಸಂದರ್ಭದಲ್ಲಿ ನಾನು ವಿಷಯ ಪ್ರಸ್ತಾಪಿಸಿದಾಗ, ಇನ್ನೂ ನಿರ್ಧಾರ ಆಗಿಲ್ಲ ಎಂದು ಹೇಳುತ್ತಾರೆ. ನೂರಾರು ರೈಲ್ವೆ ಅಧಿಕಾರಿಗಳು ಟರ್ಮಿನಲ್‌ನಲ್ಲಿ ಕೆಲಸ ಮಾಡಬೇಕಾಗಿದ್ದು, ಅವರು ತಾಳಗುಪ್ಪದಲ್ಲಿ ಕೆಲಸ ಮಾಡಲು ಹಿಂಜರಿಯುತ್ತಾರೆ. ಹಾಗಾಗಿ ಟರ್ಮಿನಲ್‌ ಅಲ್ಲಿ ಆಗುವುದು ಕಷ್ಟ ಎಂದು ತಿಳಿಸುತ್ತಾರೆ. ಜನಪರವಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕೇ ವಿನಃ ಅಧಿಕಾರಿಗಳ ಅನುಕೂಲಕ್ಕಾಗಿ ಅಲ್ಲ ಎಂಬುದೇ ಇವರಿಗೆ ಅರಿವಿದ್ದಂತಿಲ್ಲ ಎಂದು ಟೀಕಿಸಿದರು.

ಜಿಪಂ ಮಾಜಿ ಸದಸ್ಯ ರವಿ ಕುಗ್ವೆ, ಉತ್ತರ ಕನ್ನಡ ರೈತ ಸಂಘದ ಅಧ್ಯಕ್ಷ ವೀರಭದ್ರಪ್ಪ, ಜಿಪಂ ಸದಸ್ಯೆ ಅನಿತಾಕುಮಾರಿ ಇತರರು ಮಾತನಾಡಿದರು. ವಿಧಾನ ಪರಿಷತ್‌ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್‌, ಎಪಿಎಂಸಿ ಅಧ್ಯಕ್ಷ ರವಿಕುಮಾರ್‌ ಹುಣಾಲಮಡಿಕೆ, ಬಳಕೆದಾರರ ವೇದಿಕೆ ಕಾರ್ಯದರ್ಶಿ ಜನಾರ್ದನ ರಾವ್‌ ಹಕ್ರೆ, ಬಿ.ಆರ್‌. ಜಯಂತ್‌, ನಂದಾ ಗೊಜನೂರು, ಶಿವಾನಂದ ಕುಗ್ವೆ, ಜಯಲಕ್ಷ್ಮೀ ನಾರಾಯಣಪ್ಪ, ಕುಮಾರಸ್ವಾಮಿ, ಚೂಡಾಮಣಿ ರಾಮಚಂದ್ರ, ಮಹಾಬಲೇಶ್ವರ ಕುಗ್ವೆ, ಸುಳಗೋಡು ಗಣಪತಿ, ದಳವಾಯಿ ದಾನಪ್ಪ ಇನ್ನಿತರರು ಇದ್ದರು.

ಹೋರಾಟ ಸಮಿತಿಯ ಪರಮೇಶ್ವರ ದೂಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಎನ್‌. ಹುಬ್ಬಳ್ಳಿ ಹಾಗೂ ವಸಂತ್‌ ಕುಗ್ವೆ ಕ್ರಾಂತಿಗೀತೆ ಹಾಡಿದರು. ಎ.ಎಸ್‌. ಶೇಟ್‌ ಸ್ವಾಗತಿಸಿದರು. ಕೆ.ಎನ್‌. ವೆಂಕಟಗಿರಿ ಹಕ್ಕೊತ್ತಾಯ ಪತ್ರ ವಾಚಿಸಿದರು. ಸುಧಾಕರ ಕುಗ್ವೆ ನಿರೂಪಿಸಿದರು. ಈ ಸಂದರ್ಭದಲ್ಲಿ ಇದಕ್ಕೂ ಮೊದಲು ಮಹಾಗಣಪತಿ ದೇವಸ್ಥಾನದಿಂದ ರೈಲ್ವೆ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next