Advertisement

ಸಾಗರ ಭಾಗದಲ್ಲಿ ಹೆಚ್ಚುತ್ತಿರುವ ಮಳೆ ಪ್ರಮಾಣ; ನಿಲ್ಲದ ಆತಂಕ

02:58 PM Aug 10, 2019 | Naveen |

ಸಾಗರ: ತಾಲೂಕಿನಲ್ಲಿ ಶುಕ್ರವಾರ ಬೆಳಗಿನ ಸಮಯದಲ್ಲಿ ಮಳೆ ಬಿಡುವ ಬಿಟ್ಟಿದ್ದರೂ ಮಧ್ಯಾಹ್ನ 12ರ ನಂತರ ಮತ್ತೂಮ್ಮೆ ತನ್ನ ರುದ್ರ ಸ್ವರೂಪ ಪ್ರದರ್ಶಿಸುತ್ತಿದೆ. ಇತ್ತ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಆತಂಕ ಸಹ ಹೆಚ್ಚಾಗುತ್ತಿದೆ.

Advertisement

ತಾಲೂಕು ಆಡಳಿತದ ಪ್ರಕಾರ, ತಾಲೂಕಿನಲ್ಲಿ 3,870 ಹೆಕ್ಟೇರ್‌ ಪ್ರದೇಶ ಜಲಾವೃತವಾಗಿದೆ. ಶುಕ್ರವಾರ ಕುಸಿದ ಒಂದು ಮನೆ ಸೇರಿ ಇದುವರೆಗೆ ತಾಲೂಕಿನಲ್ಲಿ 22 ಮನೆಗಳು ಕುಸಿದಿವೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಗ್ಗೋಡು ಗ್ರಾಪಂ ವ್ಯಾಪ್ತಿಯ ಹೊನ್ನೇಸರದ ಗ್ರಾಮದ ಸನಂ 60ರ ಕಿಲಗೆರೆ ಕೆರೆ ಕೋಡಿ ಒಡೆದು ಸಮೀಪದ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ನಷ್ಟವಾಗಿದೆ. ಆಸುಪಾಸಿನ ತೋಟಗಳಲ್ಲಿನ ಪೈಪ್‌ಲೈನ್‌ ಕಾಮಗಾರಿ ಸಂಪೂರ್ಣ ಹಾಳಾಗಿದೆ. ದಂಡೆ ಒಡೆದ ಪರಿಣಾಮ ಪುಟ್ಟಪ್ಪ, ರಾಜಶೇಖರ, ಮಧುಕೇಶ್ವರ ಹೆಗಡೆ ಎಂಬುವರ ತೋಟಕ್ಕೆ ತುಂಬಾ ಹಾನಿಯಾಗಿದೆ. ಪುಟ್ಟಪ್ಪ ಅವರ ತೋಟಕ್ಕೆ ಮಾಡಿದ ಪೈಪ್‌ಲೈನ್‌ ನೀರಿನಲ್ಲಿ ಕೊಚ್ಚಿ ಸುಮಾರು ಒಂದು ಕಿಮೀ ದೂರಕ್ಕೆ ಹೋಗಿದೆ. ಒಟ್ಟಾರೆಯಾಗಿ ಅಂದಾಜು 70 ಸಾವಿರ ರೂ. ಹಾನಿಯಾಗಿದೆ.

ಬಾರಂಗಿ ಹೋಬಳಿಯ ಬ್ರಾಹ್ಮಣ ಇಳಕಳಲೆ ಗ್ರಾಮದ ಹುಕ್ಲು ರಮೇಶ ಅವರ ಮನೆಯ ಮೇಲೆ ಮರವೊಂದು ಬಿದ್ದಿದ್ದು, ಪವಾಡಸದೃಶವಾಗಿ ಕುಟುಂಬ ಸದಸ್ಯರು ಹಾಗೂ ಜಾನುವಾರುಗಳು ಪಾರಾಗಿದ್ದಾರೆ. ಸುಮಾರು 2 ಲಕ್ಷಗಳಷ್ಟು ಹಾನಿಯಾಗಿದೆ. ಕಲ್ಮನೆ ಗ್ರಾಪಂ ವ್ಯಾಪ್ತಿಯ ಬ್ರಾಹ್ಮಣ ಬೇದೂರಿನ ಚಕ್ರಪಾಣಿ ಅವರ ಮನೆಯ ಹಿಂದಿನ ಧರೆ ಕುಸಿದಿದ್ದು ಮನೆಗೆ ತೀವ್ರ ಹಾನಿಯಾಗಿದೆ. ಹೆಚ್ಚಿನ ಅನಾಹುತಗಳಾಗದಂತೆ ತಡೆಯಲು ಮನೆ ಖಾಲಿ ಮಾಡಲು ಸೂಚಿಸಲಾಗಿದೆ. ಸ್ಥಳಕ್ಕೆ ಶಾಸಕ ಎಚ್. ಹಾಲಪ್ಪ ಎಸಿ ದರ್ಶನ್‌ ಭೇಟಿ ನೀಡಿದ್ದರು.

ಗೌತಮಪುರ ಸಮೀಪದ ಹೊಸಕೊಪ್ಪದಲ್ಲಿ ಕೊಟ್ಟಿಗೆ ಕುಸಿದು ಕೇಶವ ಬಿನ್‌ ಬಸಪ್ಪ ಕಣ್ಣೂರು ಅವರಿಗೆ ಸೇರಿದ ಹಸುವೊಂದು ಸಾವನ್ನಪ್ಪಿದೆ. ಪಶುವೈದ್ಯ ಇಲಾಖೆಯ ವೈದ್ಯರು ಸ್ಥಳಕ್ಕೆ ಭೇಟಿ ನೀಡಿದ್ದರು. ತಾಲೂಕಿನ ಗೆಣಸಿನಕುಣಿಯ ಹಿರೇತೋಟದ ಮೂಲಕ ಶೆಡ್ತಿಕೆರೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಹತ್ತಿರದ ಭಾಗ ಸಂಪೂರ್ಣ ಕೊಚ್ಚಿ ಹೋಗಿದೆ. ಹಿರೇತೋಟ ಗೆಣಸಿನಕುಣಿ ಸಂಪರ್ಕ ಕಡಿದಿದೆ. ಸ್ಥಳಕ್ಕೆ ಶಾಸಕ ಎಚ್. ಹಾಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಮುಖಂಡ ಜಿ.ಡಿ. ಪ್ರಶಾಂತ ಹೆಗಡೆ, ನಗರಸಭಾ ಸದಸ್ಯ ಟಿ.ಡಿ.ಮೇಘರಾಜ ಮುಂತಾದವರು ಈ ಸಮಯದಲ್ಲಿ ಶಾಸಕರ ಜೊತೆಗಿದ್ದರು.

ನಗರದಲ್ಲಿ ಗುರುವಾರ ಪೊಲೀಸ್‌ ಸ್ಟೇಷನ್‌ ಪಕ್ಕದಲ್ಲಿ ಚಾಮರಾಜಪೇಟೆಯಲ್ಲಿ ಮರವೊಂದು ಬಿದ್ದು ಮಾರುತಿ ಓಮ್ನಿ ವಾಹನ ಜಖಂಗೊಂಡ ಘಟನೆ ನಡೆದಿತ್ತು.

Advertisement

ತಾಳಗುಪ್ಪ ಹೋಬಳಿಯ ಬೀಸನಗದ್ದೆ ಗ್ರಾಮವು ನೆರೆಯಿಂದ ಸಂಪೂರ್ಣ ನಡುಗಡ್ಡೆಯಾಗಿ ಪರಿವರ್ತನೆಯಾಗಿದ್ದು ತಾಲೂಕು ಆಡಳಿತದ ವತಿಯಿಂದ ಗ್ರಾಮಸ್ಥರ ಸಂಚಾರಕ್ಕೆ ಒಂದು ದೋಣಿಯನ್ನು ಬಿಡಲಾಗಿದೆ. ಅಲ್ಲಿನ ಪರಿಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ. ಕಣಸೆ ಸೇತುವೆಯಲ್ಲಿ ಬ್ಯಾರಿಕೇಡ್‌ ಅಳವಡಿಸಿದ್ದನ್ನು ಹೊರತುಪಡಿಸಿದರೆ ಪೊಲೀಸ್‌ ಪಹರೆ ಹಾಕದಿರುವುದರಿಂದ, ಆ ಸ್ಥಳವನ್ನು ಪ್ರವಾಸಿ ತಾಣವಾಗಿಸಿಕೊಂಡು ಆಗಮಿಸುತ್ತಿರುವವರು ಅಪಾಯಕ್ಕೆ ತುತ್ತಾಗಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ಗುಡುಗು ಮಿಂಚು ಸಮೇತ ಮೇಘಸೋಟದಂತಹ ಘಟನೆ ನಡೆದಿದ್ದರೆ ಶುಕ್ರವಾರ ಆ ರೀತಿಯ ಅನುಭವ ಕಂಡುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ ಗಾಳಿ ಇರುತ್ತದೆ. 40 ಕಿಮೀ ವೇಗದಲ್ಲಿ ಗಾಳಿ ಬೀಸಲಿರುವುದರಿಂದ ಯಾರೂ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುವ ಪ್ರಯತ್ನ ನಡೆದಿದೆ. ನಗರದಲ್ಲಿ ಮಳೆಯ ಅಬ್ಬರ ಕುಸಿದಿರುವುದರಿಂದ ಜನ ಸ್ವಲ್ಪ ನಿಟ್ಟುಸಿರುಬಿಡುವಂತಾಗಿದೆ. ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ಸತತ ಐದನೇ ದಿನ ರಜೆ ಘೋಷಣೆಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್‌. ಶನಿವಾರ ರಜೆ ಘೋಷಿಸಿದ್ದಾರೆ. ಸೋಮವಾರ ಕೂಡ ಬಕ್ರೀದ್‌ ರಜೆ ಇರುವುದರಿಂದ ವಿದ್ಯಾರ್ಥಿಗಳು ಈಗಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದರೆ ಮಂಗಳವಾರ ಶಾಲೆಗೆ ಹೋಗಬಹುದು.

ತುಂಬಿ ಹರಿಯುತ್ತಿರುವ ಬಸವನಹೊಳೆ ಡ್ಯಾಂ ಪ್ರದೇಶದಲ್ಲಿ ಪೊಲೀಸರು ಎಚ್ಚರಿಕೆಯ ಫ್ಲೆಕ್ಸ್‌ ಅಳವಡಿ ಈ ಭಾಗದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದ್ದಾರೆ. ಈ ನಡುವೆ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಅಡಕೆಗೆ ಕೊಳೆ ರೋಗ ತಗುಲಿದ್ದು ಕೃಷಿಕರು ಚಿಂತಾಕ್ರಾಂತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಜೋಸೆಫ್‌ ನಗರದಲ್ಲಿ ಮನೆಯೊಂದರ ಸಂಪಿಗೆ ಬಿದ್ದ ಹೋರಿಯೊಂದನ್ನು ಅಗ್ನಿ ಶಾಮಕ ದಳದವರು ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ಯಶಸ್ವಿಯಾಗಿ ರಕ್ಷಿಸಿದರು. ಈ ಕಾರಣದಿಂದ ನೆರೆ ಪರಿಹಾರ ಸಮಾಲೋಚನಾ ಸಭೆಯಲ್ಲಿ ಅಗ್ನಿ ಶಾಮಕ ದಳದ ಅಧಿಕಾರಿಗಳು ಪಾಲ್ಗೊಳ್ಳುವುದು ವಿಳಂಬವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next