Advertisement

ಆರೋಗ್ಯ ಶಿಬಿರಗಳ ಪ್ರಯೋಜನ ಅಪಾರ

12:04 PM Jul 22, 2019 | Naveen |

ಸಾಗರ: ನಗರಗಳಲ್ಲಿ ಆರೋಗ್ಯದ ಬಗ್ಗೆ ಜನರ ಮುಂಜಾಗ್ರತೆ ಹೆಚ್ಚುತ್ತಿದೆ. ಹೀಗಾಗಿ ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಬಹುಸಂಖ್ಯಾತರು ಮಾಡಿಸುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಈಗಲೂ ಆರೋಗ್ಯದ ಬಗ್ಗೆ ಎಚ್ಚರಿಕೆಗಳನ್ನು ತೆಗೆದುಕೊಳ್ಳುವಲ್ಲಿ ಆಲಸ್ಯ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಿಯಮಿತವಾಗಿ ಹಳ್ಳಿ ಪ್ರದೇಶದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ|ಮುನಿವೆಂಕಟ ರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ಎಡಜಿಗಳೇಮನೆಯ ಇಕ್ಕೇರಿ ಪ್ರೌಢಶಾಲೆಯಲ್ಲಿ ಭಾನುವಾರ ಉಡುಪಿಯ ಪ್ರಸಾದ್‌ ನೇತ್ರಾಲಯ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್‌, ಡಾ| ಪಿ. ದಯಾನಂದ ಪೈ ಮತ್ತು ಸತೀಶ್‌ ಪೈ ಚಾರಿಟೆಬಲ್ ಟ್ರಸ್ಟ್‌, ಸೆಂಚುರಿ ಗ್ರೂಪ್ಸ್‌, ಎಡಜಿಗಳೇಮನೆ ಗ್ರಾಪಂ ಮುಂತಾದ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ, ನೇತ್ರ ಪೊರೆ ಶಸ್ತ್ರ ಚಿಕಿತ್ಸೆ, ಮಸೂರ ಅಳವಡಿಕೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ಥಳೀಯ ಆಡಳಿತಗಳು ಆಸಕ್ತಿ ವಹಿಸಿದರೆ ಈ ರೀತಿಯ ಶಿಬಿರಗಳನ್ನು ಸುಲಭವಾಗಿ ಆಯೋಜಿಸಬಹುದು. ಎಡಜಿಗಳೇಮನೆಯ ಗ್ರಾಪಂ ಈ ನಿಟ್ಟಿನಲ್ಲಿ ಸ್ತುತ್ಯರ್ಹ ಕೆಲಸ ಮಾಡಿದೆ. ಆರೋಗ್ಯ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಬೆಂಬಲಿಸಲಿದೆ ಎಂದರು.

ಉಡುಪಿಯ ಪ್ರಸಾದ್‌ ನೇತ್ರಾಲಯದ ಡಾ|ಶರತ್‌ ಶಿಬಿರವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಿಂದಲೇ ಬಂದ ನಮಗೆ ಈ ರೀತಿಯ ಶಿಬಿರಗಳು ಋಣಸಂದಾಯದ ಪ್ರಕ್ರಿಯೆಯಂತೆ. ಬಡತನದಲ್ಲಿದ್ದಾರೆ ಎಂಬ ಕಾರಣಕ್ಕಾಗಿ ನಾಗರಿಕರು ಆರೋಗ್ಯ ಚಿಕಿತ್ಸೆಯಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಈ ನಿಟ್ಟಿನಲ್ಲಿ ನಮ್ಮ ನೇತ್ರ ಜ್ಯೋತಿ ಟ್ರಸ್ಟ್‌ ಉಚಿತ ಶಿಬಿರಗಳ ಹೊರತಾಗಿಯೂ ಅರ್ಹರಿಗೆ ಖರ್ಚುವೆಚ್ಚವಿಲ್ಲದ ಚಿಕಿತ್ಸೆಯನ್ನು ವರ್ಷದ 365 ದಿನವೂ ಒದಗಿಸುವ ಮನಸ್ಸು ಮಾಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆತಿಥೇಯ ಗ್ರಾಪಂನ ಅಧ್ಯಕ್ಷ ಎಂ.ಡಿ. ರಾಮಚಂದ್ರ ಮಾತನಾಡಿ, ಕಣ್ಣಿನ ದೃಷ್ಟಿದೋಷ ದೇಹದ ಇತರ ಕಾಯಿಲೆಗಳ ಪರಿಣಾಮದಿಂದಲೇ ಸಂಭವಿಸುತ್ತವೆ ಎಂದು ವೈದ್ಯ ಶಾಸ್ತ್ರ ಹೇಳುತ್ತದೆ. ಹಳ್ಳಿಯ ಜನ ಥೈರಾಯ್ಡ ಗ್ರಂಥಿ ಸಮಸ್ಯೆ, ಬಿಪಿ, ಸಕ್ಕರೆ ಕಾಯಿಲೆಗಳತ್ತ ಗಮನ ಹರಿಸುವುದಿಲ್ಲ. ರೋಗ ಉಲ್ಭಣವಾದ ಪರಿಸ್ಥಿತಿಯಲ್ಲಿ ಅವರು ವೈದ್ಯರನ್ನು ಕಾಣಲು ಬರುವ ಪರಿಸ್ಥಿತಿಯಿದೆ. ಇದರಿಂದ ಆರೋಗ್ಯ, ಹಣಕಾಸು ಎಲ್ಲದಕ್ಕೂ ಒತ್ತಡ ನಿರ್ಮಾಣವಾಗುತ್ತದೆ. ಗ್ರಾಪಂ ಜನರ ಆರೋಗ್ಯಕ್ಕಾಗಿ ವರ್ಷದಲ್ಲಿ ಎರಡು ಬಾರಿಯಾದರೂ ಆರೋಗ್ಯ ಶಿಬಿರ ಏರ್ಪಡಿಸುವ ಕುರಿತು ಚಿಂತನೆ ನಡೆಸಿದೆ ಎಂದರು.

ಪಂಚಾಯತ್‌ ಉಪಾಧ್ಯಕ್ಷೆ ಸುಭದ್ರಾ ಗಣಪತಿ, ಸದಸ್ಯರಾದ ಸಿ.ವಿ. ಗುರುಮೂರ್ತಿ, ಪದ್ಮಾವತಿ, ರಜನೀಶ್‌ ಹೆಗಡೆ ಟಿ.ಎನ್‌., ಪ್ರಕಾಶ್‌ ಎಸ್‌.ಜಿ., ಎಂ.ಡಿ.ಮಂಜಗೌಡ್ರು, ಪ್ರೌಢಶಾಲಾ ಮುಖ್ಯ ಶಿಕ್ಷಕ ರಜನೀಶ್‌ ಸಿ., ಡಾ| ಸುಧಾರಾಣಿ, ಡಾ| ನಂದಾ ಇನ್ನಿತರರು ಇದ್ದರು. ಅಮೃತಾ ಪ್ರಾರ್ಥಿಸಿದರು. ಸುಧಾಕರ ಸ್ವಾಗತಿಸಿದರು. ಪಂಚಾಯತ್‌ ಪಿಡಿಒ ಬಿ.ಎಸ್‌. ಧರ್ಮಪ್ಪ ವಂದಿಸಿದರು. ಆರೋಗ್ಯ ಇಲಾಖೆಯ ಸುರೇಶ್‌ ಬೆಳ್ಳಣ್ಣೆ ಕಾರ್ಯಕ್ರಮ ನಿರ್ವಹಿಸಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ, ಜಿಲ್ಲಾ ಎನ್‌ಸಿಡಿ ಘಟಕಗಳ ನೇತೃತ್ವದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ನಡೆಸಲಾಯಿತು. ಗ್ರಾಪಂ ವ್ಯಾಪ್ತಿಯ 250ಕ್ಕೂ ಹೆಚ್ಚಿನ ಗ್ರಾಮಸ್ಥರು ಕಣ್ಣಿನ ತಪಾಸಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next