ಸಾಗರ: ಇಲ್ಲಿನ ಉಪವಿಭಾಗೀಯ ಆಸ್ಪತ್ರೆಗೆ ವಿಷ ಸೇವಿಸಿ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿಯೊಬ್ಬ ಏಕಾಏಕಿ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವಿಚಿತ್ರ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಕಾರ್ಗಲ್ ನಿವಾಸಿ 23 ವರ್ಷದ ಮಂಜುನಾಥ್ ಮನೆಯಲ್ಲಿ ವಿಷ ಸೇವನೆ ಮಾಡಿದ್ದನ್ನು ಗಮನಿಸಿದ ಪೋಷಕರು ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದರು. ತುರ್ತು ಚಿಕಿತ್ಸಾ ಘಟಕದಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ಡಾ. ಗಜೇಂದ್ರ ಮಂಜುನಾಥ್ರನ್ನು ಪರೀಕ್ಷಿಸಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ. ವಾಂತಿ ಮಾಡಿಸಬೇಕಾದ ಹಿನ್ನೆಲೆಯಲ್ಲಿ ಗ್ರೂಪ್ ಡಿ ನೌಕರ ಮಧು ಎಂಬುವವರಿಗೆ ಬಾತ್ರೂಂಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ.
ಬಾತ್ರೂಂನಲ್ಲಿ ಏಕಾಏಕಿ ತೀವ್ರ ಉದ್ವೇಗಕ್ಕೆ ಒಳಗಾದ ಮಂಜುನಾಥ್ ಏಕಾಏಕಿ ಮಧು ಅವರ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿ, ತಲೆಯನ್ನು ಕಬ್ಬಿಣದ ಕಿಟಕಿಗೆ ಬಡಿದಿದ್ದಾರೆ. ಅಲ್ಲೇ ಇದ್ದ ಕಬ್ಬಿಣದ ಕುರ್ಚಿಯಿಂದ ಹೊಡೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ :ಬಿಜೆಪಿ ಆಡಳಿತದಿಂದ ರಾಜ್ಯದ ಜನ ಬೇಸರಗೊಂಡಿದ್ದಾರೆ: ಸಿದ್ದರಾಮಯ್ಯ
ಆಕಸ್ಮಿಕ ದಾಳಿಯಿಂದ ನಲುಗಿದ ಮಧು ಜೋರಾಗಿ ಕೂಗಿ ಕೊಂಡಿದ್ದು ಆಸ್ಪತ್ರೆಯಲ್ಲಿದ್ದವರು ಮಧ್ಯಪ್ರವೇಶ ಮಾಡಿ ಮಧುವನ್ನು ಬಚಾವ್ ಮಾಡಿದ್ದಾರೆ. ಹಲ್ಲೆಯಿಂದಾಗಿ ಮಧು ಅವರ ಹಣೆ ಒಡೆದಿದ್ದು ರಕ್ತಸ್ರಾವವಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಮಂಜುನಾಥನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಆರೋಗ್ಯ ಇಲಾಖೆಯ ಮಧು ಮೇಲಿನ ಹಲ್ಲೆಯನ್ನು ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷ ವೈ.ಮೋಹನ್ ಖಂಡಿಸಿದ್ದು, ತಪ್ಪಿತಸ್ಥ ಮಂಜುನಾಥ್ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.