Advertisement

ಮರಕ್ಕೆ ಕೊಡಲಿಯೇಟು; ಬೇಸ್ತು ಬಿದ್ದ ಪರಿಸರ ಹೋರಾಟಗಾರರು

04:49 PM Jan 24, 2020 | Naveen |

ಸಾಗರ: ವಿವಿಧ ಪ್ರದೇಶಗಳಲ್ಲಿ ಸಾಲು ಮರಗಳಿಗೆ ಕೊಡಲಿ ಏಟು ಬೀಳುವುದನ್ನು ವಿರೋಧಿಸಿ ಮರವನ್ನು ಬಚಾಯಿಸಲು ಹೋರಾಟ ನಡೆಸುವ ಕಾಲದಲ್ಲಿ ಸಾಗರದಲ್ಲಿ ಇಂತಹ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವವರಿಂದಲೇ ಮನವಿ ಸೃಷ್ಟಿಸಿ ಎರಡು ಬೃಹತ್‌
ಮಾವಿನ ಮರಗಳನ್ನು ಅರಣ್ಯ ಇಲಾಖೆ ಕಡಿದುರುಳಿಸಿದ ವಿಪರ್ಯಾಸದ ಘಟನೆ ಬುಧವಾರ ನಡೆದಿರುವುದು ಈಗ ಬಯಲಾಗಿದೆ.

Advertisement

ಈ ಕಡಿತಲೆ ಸಂದರ್ಭದಲ್ಲಿ ಇಕ್ಕೇರಿ ವೃತ್ತದಿಂದ ಚಿಪ್ಳಿ ಲಿಂಗದಹಳ್ಳಿಯವರಿಗಿನ ರಸ್ತೆ ಸಂಚಾರವನ್ನು ಬಸ್‌ ಸೇರಿದಂತೆ ಎಲ್ಲ ವಾಹನಗಳಿಗೆ ಪೊಲೀಸ್‌ ಇಲಾಖೆ ನೆರವಿನಿಂದ
ನಿರ್ಬಂಧಿಸಲಾಗಿತ್ತು. ಸಾಗರ- ಸಿಗಂದೂರು ನಡುವಿನ ಆವಿನಹಳ್ಳಿ ರಸ್ತೆಯಲ್ಲಿ ಇಕ್ಕೇರಿ ವೃತ್ತ ಸಮೀಪದ ಆದಿಶಕ್ತಿ ನಗರದ ರಸ್ತೆ ಆಜುಬಾಜಲ್ಲಿ ಬೃಹತ್‌ ಆಕಾರದ ಮಾವು, ಧೂಪ ಮೊದಲಾದ ಸಾಲು ಮರಗಳಿವೆ. ಕಳೆದ ಕೆಲ ವರ್ಷಗಳಲ್ಲಿ ಈ ಮರಗಳ ಒಣಗಿದ ರೆಂಬೆಗಳು ಬಿದ್ದು ಜನಕ್ಕೆ ಸಮಸ್ಯೆಯಾಗಿತ್ತು. ಕಳೆದ ವರ್ಷ ರೆಂಬೆಯೊಂದು ಬಿದ್ದು ಬೈಕ್‌ ಸವಾರ
ಸಾವನ್ನಪ್ಪಿದ ಘಟನೆ ಕೂಡ ನಡೆದಿತ್ತು.

ಆರ್‌ಟಿಒ ಕಚೇರಿ ವಾಹನದ ಮೇಲೆ ಇದೇ ರೀತಿ ರೆಂಬೆ ಬಿದ್ದಿದ್ದರೂ ಅದರಲ್ಲಿದ್ದವರು
ಅದೃಷ್ಟವಶಾತ್‌ ಬಚಾವಾದ ಘಟನೆ ನಡೆದಿತ್ತು. ಆದರೆ ಈ ರೀತಿಯ ಒಣಗಿದ ರೆಂಬೆ,
ಅಪಾಯಕಾರಿ ಕೊಂಬೆಗಳನ್ನು ಕತ್ತರಿಸುವ ಬದಲು ಅರಣ್ಯ ಇಲಾಖೆ ಮೆಸ್ಕಾಂ, ಪೊಲೀಸ್‌ ಮೊದಲಾದ ಇಲಾಖೆಗಳನ್ನು ಬಳಸಿ ಬುಧವಾರ ಮರಗಳನ್ನು ಬುಡಸಮೇತ ಕತ್ತರಿಸಿದರೂ ಪರಿಸರಾಸಕ್ತರು ಮಾಡಿದ ತಪ್ಪಿಗೆ ಕೈ ಕೈ ಹಿಸುಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ 7ರಂದು ಆದಿಶಕ್ತಿ ನಗರದ ಕೆ. ಪುರುಷೋತ್ತಮ್‌ ಹಾಗೂ ಇತರರು,
ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಅಪಾಯಕಾರಿ ಸ್ಥಿತಿಯಲ್ಲಿರುವ ಸಾಲು ಮರಗಳ ರೆಂಬೆಗಳನ್ನು ಕಡಿಯುವಂತೆ ವಿನಂತಿಸಿದ್ದಾರೆ.

ಮಳೆಗಾಲದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರದ ರೆಂಬೆಗಳು ರಸ್ತೆ ಹಾಗೂ ಮನೆಗಳ ಮೇಲೆ ಉರುಳುವಂತಿದೆ. ಜುಲೈ 6ರಂದು ಇಂತಹ ಮಳೆಗೆ ಹಲವಾರು ರೆಂಬೆಕೊಂಬೆಗಳು ಬಿದ್ದು ಭಾರೀ ಹಾನಿಯಾಗಿತ್ತು. ಆದ್ದರಿಂದ ತಾವು ತಕ್ಷಣ ಗಮನಿಸಿ ರಸ್ತೆಯ ಪಕ್ಕದಲ್ಲಿ ಅಪಾಯಕಾರಿ ಎನ್ನಿಸುವ ಮರ ಹಾಗೂ ರೆಂಬೆಗಳನ್ನು ಕಡಿತಲೆ ಮಾಡಿಕೊಡಬೇಕು ಎಂದು ಆ ಮನವಿಯಲ್ಲಿ ವಿನಂತಿಸಲಾಗಿತ್ತು. ಈ ರೀತಿ ಮರಗಳನ್ನು ಕಡಿತ ಮಾಡುವ ವಿನಂತಿಗೆ ಪರಿಸರವಾದಿ, ನಗರದ ಸ್ವಾನ್‌ ಆ್ಯಂಡ್‌ ಮ್ಯಾನ್‌ ಸಂಸ್ಥೆಯ ಕಾರ್ಯದರ್ಶಿ ಅಖೀಲೇಶ್‌ ಚಿಪ್ಳಿ ಕೂಡ ಸಹಿ ಹಾಕಿರುವ ದಾಖಲೆ ಪತ್ರಿಕೆಗೆ ಲಭಿಸಿದೆ.

ಈ ಕುರಿತು ಸ್ಪಷ್ಟೀಕರಣ ಒದಗಿಸುವ ಅಖೀಲೇಶ್‌, ಈ ಭಾಗದ ಒಂದು ಮಾವಿನ ಮರಕ್ಕೆ ಭಾಗಶಃ ಸಿಡಿಲು ಹೊಡೆದಿತ್ತು. ಈ ಕಾರಣ ಇದೊಂದು ಮರವನ್ನು ಕಡಿತಲೆ ಮಾಡಿಸುವುದು ಅಗತ್ಯ ಎಂದು ಈ ಭಾಗದ ಜನರ ಅಭಿಪ್ರಾಯವಾಗಿತ್ತು. ಸಾಧ್ಯವಾದಷ್ಟು ಮಟ್ಟಿಗೆ ಅಪಾಯಕಾರಿ ರೆಂಬೆ ಕೊಂಬೆಗಳನ್ನು ಕತ್ತರಿಸುವ ಮೂಲಕ ತೊಂದರೆ ನಿವಾರಿಸಿಕೊಳ್ಳುವುದು ಹಾಗೂ ತೀರಾ ಅನಿವಾರ್ಯ ಪ್ರಸಂಗಗಳಲ್ಲಿ ಮಾತ್ರ ಮರವನ್ನು ಬುಡಸಮೇತ ಕತ್ತರಿಸಿ ಪರ್ಯಾಯವಾಗಿ ಇನ್ನೊಂದು ಗಿಡ ಬೆಳೆಸುವುದು ಪರಿಹಾರ ಎಂಬುದನ್ನು ಪರಿಸರವಾದಿಯಾಗಿಯೂ ನಾವು ಪ್ರತಿಪಾದಿಸುತ್ತೇವೆ. ಈ ಕುರಿತು ಅರಣ್ಯ
ಇಲಾಖೆಗೆ ನಾನು, ಗೋಳಿಕೊಪ್ಪದ ಪರಿಸರ ಕಾರ್ಯಕರ್ತ ಜಯಪ್ರಕಾಶ್‌ ಮೊದಲಾದವರು ಪತ್ರ ಬರೆದು ಸ್ಪಷ್ಟಪಡಿಸಿರುವುದೂ ಇದೆ ಎಂದರು.

Advertisement

ಘಟನೆಯಲ್ಲಿ ನಮ್ಮನ್ನು ಸಂಪೂರ್ಣ ವಂಚಿಸಲಾಗಿದೆ. ತೀರಾ ಅನಿವಾರ್ಯ
ಎಂಬ ಕಾರಣದಿಂದ ಆ ಒಂದು ಸಿಡಿಲು ಬಡಿದ ಮರವನ್ನು ಕತ್ತರಿಸಬಹುದು ಎಂದು
ನಾನು, ಕೊಡ್ಲುತೋಟದ ಬನಜಾಲಯದ ಕೆ.ಪಿ. ರಮೇಶ್‌ ಇತರರು ಪುರುಷೋತ್ತಮ ಅವರ ಮನವಿ ಪತ್ರಕ್ಕೆ ಸಹಿ ಹಾಕಿದ್ದೆವು. ಬುಧವಾರ ಬೆಳಗಿನವರೆಗೂ ನಮಗೆ ಕಡಿತಲೆಯ ಮಾಹಿತಿ ಇಲ್ಲ. ಆ ನಂತರವೂ ಮಧ್ಯಾಹ್ನ ಮೂರು ಮರಗಳ ಕಡಿತಲೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಪಡೆದ ನಂತರ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ಇನ್ನೊಂದು ಮರವನ್ನು ಕಡಿಯದಂತೆ ತಡೆಯಲಾಗಿದೆ. ಈ ಹಿಂದೆ ಅರಣ್ಯ ಇಲಾಖೆಯ ಫಾರೆಸ್ಟರ್‌ ಆಗಿ ಕೆಲಸ ಮಾಡಿರುವ ಪುರುಷೋತ್ತಮ್‌ ಅವರ ಹಸಿರು ಪ್ರೀತಿಯನ್ನು ನಾವು ಸಂಶಯಿಸಿರಲಿಲ್ಲ ಎಂದರು.

ಕಳೆದ ವರ್ಷದ ಮನವಿಯ ವಿಷಯದಲ್ಲಿ ಮರದ ರೆಂಬೆಕೊಂಬೆ ಎಂಬ ವಿಷಯ ಇದ್ದ ಹಿನ್ನೆಲೆಯಲ್ಲಿ ನಾನು ಸಂಪೂರ್ಣ ಮನವಿಯನ್ನು ಓದಿರಲಿಲ್ಲ. ಆದರೆ ಮನವಿಯ ವಿಷಯ ಭಾಗದಲ್ಲಿ ಮರಗಳ ಕಡಿತಲೆಯ ಪ್ರಸ್ತಾಪವನ್ನೂ ಸೇರಿಸಲಾಗಿದೆ. ನಾವು ಮೋಸ ಹೋಗಿರುವುದು ನಿಜ ಎಂದು ಅಖೀಲೇಶ್‌ ಒಪ್ಪಿಕೊಳ್ಳುತ್ತಾರೆ. ಸಿಡಿಲು ಹೊಡೆದ ಮಾವಿನ ಮರ ಒಣಗಿರಲಿಲ್ಲ. ಆದರೆ ಸಿಡಿಲು ಹೊಡೆದ ಸಂದರ್ಭದಲ್ಲಿ ಅದು ಬಾಡಿತ್ತು. ಇದನ್ನು ನೆಪವಾಗಿ ಬಳಸಿಕೊಂಡವರು ಪರಿಸರವಾದಿಗಳನ್ನೇ ಮುಂದೆ ಬಿಟ್ಟು ತಮ್ಮ ಮನೆಯ ಸುತ್ತಮುತ್ತ ಇರುವ ಮೂರು ಬೃಹತ್‌ ಮರಗಳ ಕಡಿತಲೆಗೆ ಯೋಜನೆ ರೂಪಿಸಿದ್ದಾರೆ. ಅರಣ್ಯ ಇಲಾಖೆಯ ನಿಯಮಗಳ ಪ್ರಕಾರವೇ ಮರಗಳ ಕಡಿತಲೆ ಅನುಮತಿ ಹಾಗೂ ಮರಗಳ ಹರಾಜು
ಪ್ರಕ್ರಿಯೆಗಳು ನಡೆದಿವೆ. ಮರ ಉಳಿಸುವ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದವರೇ ಇಂತಹ ಕೃತ್ಯಕ್ಕೆ ಮುಂದಾದರೆ ಯಾರಿಗೆ ನಾವು ಪರಿಸರ ಕಾಳಜಿಯನ್ನು ಹೇಳ್ಳೋಣ
ಎಂದು ಈ ಭಾಗದ ಪರಿಸರ ಆಸಕ್ತರೊಬ್ಬರು ಅಳಲು ವ್ಯಕ್ತಪಡಿಸಿದರು.

ನೂರಾರು ವರ್ಷಗಳ ಮರದ ಕೆಳಗೆ ಮನೆ ನಿರ್ಮಿಸಿ, ಆ ನಂತರ ಮನೆಗೆ ಅಪಾಯವಿದೆ ಎಂದು
ಮರ ಕಡಿತಲೆ ಮಾಡಲು ನಿವಾಸಿಗಳು ವಿನಂತಿಸುವ ವಿದ್ಯಮಾನಗಳು ನಡೆಯುತ್ತಿವೆ. ಮರ ಬೀಳುವ ಸಾಧ್ಯತೆ ಇಲ್ಲದಿದ್ದರೂ ಅದರ ಎಲೆ ಮನೆಯಂಗಳಕ್ಕೆ ಬಿದ್ದರೂ ಭಯ ಬೀಳುವವರಿದ್ದಾರೆ. ಮರ ಕಡಿಯುವ ದುರುದ್ದೇಶದಿಂದಲೇ ನಮ್ಮ ಮನವಿಯನ್ನು ದುರುಪಯೋಗಪಡಿಸಿ ಕೊಳ್ಳಲಾಗಿದೆಯೇ ವಿನಃ ನಾವು ಈ ಕಡಿತಲೆಯಲ್ಲಿ ಭಾಗಿಗಳಲ್ಲ.
ಅಖೀಲೇಶ್‌ ಚಿಪ್ಳಿ,
ಸಾಗರ ತಾಲೂಕು
ಜೀವಜಲ ಕಾರ್ಯಪಡೆ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next