Advertisement

ಮರಳಿ ಗೂಡು ಸೇರಿದ ಅರಳಗೋಡಿನ ಜನ

11:55 AM Jun 23, 2019 | Naveen |

ಮಾ.ವೆಂ.ಸ. ಪ್ರಸಾದ್‌
ಸಾಗರ:
ಮಾರಣಾಂತಿಕ ಮಂಗನಕಾಯಿಲೆಯಿಂದ ಹೈರಾಣಾಗಿ ಊರು ತೊರೆದ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಜನ ನಿಧಾನವಾಗಿ ಊರಿನತ್ತ ಮರಳುತ್ತಿದ್ದಾರೆ.

Advertisement

ಕಳೆದ ನವೆಂಬರ್‌ನಿಂದ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜನರನ್ನು ಪ್ರಾಣಭೀತಿಗೆ ತಳ್ಳಿದ್ದ ಮಂಗನ ಕಾಯಿಲೆಯ ಆತಂಕ ಮಳೆಗಾಲ ಆರಂಭಗೊಂಡಿದ್ದರಿಂದ ಕೆಲ ಮಟ್ಟಿಗೆ ಕಡಿಮೆಯಾಗಿದ್ದು ಮನೆಗೆ ಬೀಗ ಹಾಕಿ ಸಾಗರ ನಗರ ಸೇರಿದಂತೆ ವಿವಿಧೆಡೆಗಳಿಗೆ ವಲಸೆ ಹೋದವರು ಕಳೆದ ಒಂದು ವಾರದಿಂದ ವಾಪಸ್‌ ತಮ್ಮ ಮನೆಯತ್ತ ಮುಖ ಮಾಡುತ್ತಿದ್ದಾರೆ.

ತಗ್ಗಿದ ಜ್ವರಬಾಧೆ: ಅಂದಾಜು 20 ಮಂದಿಯನ್ನು ಬಲಿ ತೆಗೆದುಕೊಂಡ ಮಂಗನಕಾಯಿಲೆ ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ಕಾಣಿಸಿಕೊಂಡಿಲ್ಲ. ಯಾವುದೇ ಶಂಕಿತ ಮಂಗನ ಕಾಯಿಲೆ ಜ್ವರದ ಪ್ರಕರಣವೂ ವರದಿಯಾಗಿಲ್ಲ. ಸದ್ಯ ಮಣಿಪಾಲ್ನಲ್ಲಿ ತುಮರಿಯ ನಿಶಾಂತ್‌ ಎಂಬುವವರು ಕೆಎಫ್‌ಡಿ ಪಾಸಿಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಬಿಟ್ಟರೆ ಅರಳಗೋಡು ಭಾಗದವರಾರೂ ಆಸ್ಪತ್ರೆಯಲ್ಲಿಲ್ಲ. ಪ್ರಸ್ತುತ ನಿಶಾಂತ್‌ ಕೂಡ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ತೋಟಕ್ಕಿಳಿದ ಕೃಷಿಕರು-ಕಾರ್ಮಿಕರು: ಕೆಎಫ್‌ಡಿ ಆತಂಕ ತಗ್ಗಿದ್ದರಿಂದ ಇಲ್ಲಿನ ಅಲಗೋಡು, ಸಂಪ, ಮಂಡವಳ್ಳಿ, ಐತುಮನೆಯ ಹಲವು ಗ್ರಾಮಸ್ಥರು ತಮ್ಮ ಮನೆಗಳಿಗೆ ಮರಳಿದ್ದಾರೆ. ಕೆಎಫ್‌ಡಿಯಿಂದ ಸಾವು ನೋವಿನ ಪ್ರಕರಣ ಕಾಣಿಸಿಕೊಳ್ಳದ ನಂದೋಡಿ, ಆರೋಡಿ, ಮಂಡವಳ್ಳಿ ಮೊದಲಾದ ಭಾಗಗಳಲ್ಲಿ ವಾರದಿಂದೀಚೆಗೆ ತೋಟಕ್ಕೆ ಇಳಿದು ಕೃಷಿಕರು, ಕಾರ್ಮಿಕರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಮಳೆ ಕೂಡ ಕಳೆದ ಎರಡು ದಿನಗಳಿಂದ ಸಾಕಷ್ಟು ಪ್ರಮಾಣದಲ್ಲಿ ಸುರಿಯುತ್ತಿದೆ. ಹೀಗಾಗಿ ಹಲವು ತಿಂಗಳಿನಿಂದ ಕೆಲಸವಿಲ್ಲದೆ ಪರದಾಡುತ್ತಿದ್ದ ಕೃಷಿ ಕಾರ್ಮಿಕರು ಕೂಡ ತೋಟಕ್ಕೆ ಇಳಿದಿದ್ದಾರೆ.

ದೇವರಿಗೂ ಸಮಾಧಾನ: ಅರಳಗೋಡು ಭಾಗದಲ್ಲಿ ಈ ವರ್ಷ ಹರಡಿದ ಮಂಗನ ಕಾಯಿಲೆ ದೇವರ ಸಿಟ್ಟಿನ ಕಾರಣದಿಂದಾಗಿಯೇ ಎಂಬ ಅನುಮಾನವೂ ಕಾಡಿದ್ದರಿಂದ ಜನ ಗೇರುಸೊಪ್ಪದಿಂದ ಆಂಜನೇಯ ದೇವರನ್ನು ಮರಾಠಿಕೇರಿಗೆ ಕರೆಸಿ ಪಲ್ಲಕ್ಕಿ ಉತ್ಸವ ನಡೆಸಿ ಕೃತಾರ್ಥರಾಗಿದ್ದಾರೆ.

Advertisement

ಮನೆ ಬಿಟ್ಟು ಪರ ಊರಿಗೆ ತೆರಳಿದ್ದವರು ನಿಧಾನವಾಗಿ ಮರಳುತ್ತಿದ್ದರೂ ಇನ್ನೂ ಆತಂಕ ಮಾತ್ರ ಕಡಿಮೆಯಾಗಿಲ್ಲ. ಆದರೂ ಮಳೆಯಾಗಿ ರೋಗ ಹರಡುವ ಉಣುಗುಗಳು ಸಾಯುವುದರಿಂದ ಮತ್ತೆ ರೋಗ ಹರಡುವ ಬೀತಿ ಇಲ್ಲ ಎಂಬ ಧೈರ್ಯದಿಂದ ತಮ್ಮಮನೆಗಳಿಗೆ ವಾಪಸ್‌ ಬರುತ್ತಿದ್ದಾರೆ.

‘ಕಳೆದ ಐದು ತಿಂಗಳಿನಿಂದ ನಾವು ತೋಟದಲ್ಲಿ ಕಾಲಿರಿಸಿರಲಿಲ್ಲ. ಮನೆಯಲ್ಲಿದ್ದ ಅಷ್ಟೂ ಜಾನುವಾರುಗಳನ್ನು ಹಾಗೆಯೇ ಹೊರಗೆ ಬಿಟ್ಟು ಬೇರೆ ಊರುಗಳಿಗೆ ತೆರಳಿದ್ದೆವು. ವಾರದ ಹಿಂದೆ ಮರಳಿದ್ದೇವೆ. ಮೂರ್‍ನಾಲ್ಕು ಹಳ್ಳಿಕಾರು ದನ ಮನೆಗೆ ಮರಳಿವೆ. ಕೊಳೆ ಔಷಧ ಇನ್ನಷ್ಟೇ ಹೊಡೆಯಬೇಕು. ಊರಿನಲ್ಲಿ ಇನ್ನೂ ಕೆಲವರು ವಾಪಸಾಗಿಲ್ಲ. ಒಂದು ರೀತಿಯ ಅನಿಶ್ಚಿತತೆಯಿಂದಲೇ ಊರಿಗೆ ಮರಳಿದ್ದೇವೆ ಎನ್ನುತ್ತಾರೆ ಯಲಗೋಡಿನ ನಾಗರತ್ನ ದೇವಪ್ಪ.

ಮಂಗನ ಕಾಯಿಲೆಯಿಂದ ಮನೆಯಲ್ಲಿಯೇ ಒಂದು ಸಾವು ಕಂಡ ಅರಲಗೋಡಿನ ಪರಮೇಶ್ವರ್‌, ನಾವು ಸಾಯದಿರುವುದರಿಂದ ಬದುಕಿದ್ದೇವೆ ಅಷ್ಟೇ. ಕಳೆದ ವರ್ಷ ತಮ್ಮನ ಮಾರಣಾಂತಿಕ ಅನಾರೋಗ್ಯದ ಕಾರಣ ನಾವು ಬೆಂಗಳೂರಿಗೆ ತೆರಳಬೇಕಾಯಿತು. ಸಮಯಕ್ಕೆ ಸರಿಯಾಗಿ ಮದ್ದು ಹೊಡೆಯದ್ದರಿಂದ ಕೊಳೆರೋಗ ಕಾಡಿತ್ತು. ಉಳಿದ ಫಸಲನ್ನು ಕೊಯ್ಲು ಮಾಡಲು ಮಂಗನ ಕಾಯಿಲೆ ಭಯ ಅಡ್ಡಿಯಾಗಿ ಒಂದೂವರೆ ಎಕರೆ ಕೊಯ್ಲನ್ನೇ ಮಾಡಲಿಲ್ಲ. ಮನೆಯಲ್ಲಿ ತಮ್ಮನ ಪತ್ನಿ ಪೂರ್ಣಿಮಾ ಕೆಎಫ್‌ಡಿಗೆ ಬಲಿಯಾದರು. ಸರ್ಕಾರ ಪರಿಹಾರ ಒದಗಿಸಿದ್ದರೆ ತಮ್ಮನ ಪುಟ್ಟ ಮಗಳ ಜೀವನಕ್ಕೆ ಆಧಾರವಾಗುತ್ತಿತ್ತು. ಈಗ ತೋಟದಲ್ಲಿ ಉದುರಿದ ಅಡಕೆ ಹೆಕ್ಕುತ್ತಿದ್ದೇವೆ. ಈ ಮಳೆಯಲ್ಲಿ ಹೊಗೆತಟ್ಟಿ ಮಾಡಿ ಒಣಗಿಸಬೇಕು ಎಂದರೂ ಮನೆಯಲ್ಲಿ ಸೌದೆ ಸಂಗ್ರಹವಿಲ್ಲ ಎಂಬ ಅಂಶದತ್ತ ಗಮನ ಸೆಳೆಯುತ್ತಾರೆ.

ಬರುವ ದಿನಗಳೇ ಕಷ್ಟ!: ಅರಲಗೋಡಿನ ರಾಜೇಶ್‌ ಈ ಭಾಗದ ಜನರ ಸಮಸ್ಯೆಗಳತ್ತ ಗಮನ ಹರಿಸದ ಜನಪ್ರತಿನಿಧಿಗಳತ್ತ ಆಕ್ರೋಶ ವ್ಯಕ್ತಪಡಿಸಿ, ಹಿಂದಿನಿಂದಲೂ ಈ ಪ್ರದೇಶದಲ್ಲಿ ಬಿಜೆಪಿ ಪಕ್ಷದ ಒಲವು ವ್ಯಕ್ತವಾಗುತ್ತಿರುವುದರಿಂದಲೇ ರಾಜ್ಯ ಸರ್ಕಾರದ ಜನ ಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಪರಿಹಾರ ಘೋಷಣೆಯಿಂದ ಹಿಂಜರಿಯಲೂ ಇದೇ ಕಾರಣ. ಬಣ್ಣುಮನೆ, ಕೊಪ್ಪರಿಗೆ ಮೊದಲಾದ ಕಾಯಿಲೆ ಪೀಡಿತ ಪ್ರದೇಶದಲ್ಲಿ ಮೇವಿನ ತೀವ್ರ ಕೊರತೆಯಿದ್ದರೂ ಗುರುವಾರ ಒದಗಿಸಲಾದ ಮೇವು ಕೆಎಫ್‌ಡಿಗೆ ತುತ್ತಾಗದ ಆರೋಡಿ ಭಾಗಕ್ಕೆ ಹೋಗಿದೆ. ಊರಿಗೆ ಮರಳಿ ಬಂದವರಿಗೆ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ತಾಲೂಕಿನ ಶಾಸಕರು, ಸಂಸದರು ಹೆಚ್ಚಿನ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next