Advertisement

ಜಲಸಾರಿಗೆ ಜಾಲವಾಗಲಿದೆ ಗುರುಪುರ, ಹಂಗಾರಕಟ್ಟೆ: ಸಾಗರಮಾಲಾದಡಿ 168 ಕೋ.ರೂ. ಮಂಜೂರು

10:48 AM Apr 26, 2022 | Team Udayavani |

ಕುಂದಾಪುರ: ಸಾಗರಮಾಲಾ ಯೋಜನೆಯಡಿ ರಾಜ್ಯದ 6 ತಾಣಗಳ ಅಭಿವೃದ್ಧಿಗೆ ಕೇಂದ್ರ ಸರಕಾರ 168 ಕೋ.ರೂ. ಬಿಡುಗಡೆಗೆ ಅನುಮೋದನೆ ನೀಡಿದ್ದು, ಇದರಲ್ಲಿ ಉಡುಪಿ ಮತ್ತು ದಕ್ಷಿಣ ಕನಡ ಜಿಲ್ಲೆಯ 3 ತಾಣಗಳೂ ಸೇರಿವೆ.

Advertisement

ದೇಶದ ನದಿಗಳನ್ನು ಜಲಸಾರಿಗೆಯ ಮಾರ್ಗ ಗಳಾಗಿ ಪರಿವರ್ತಿಸಲು ಕೇಂದ್ರ ಸರಕಾರ ಈ ಯೋಜನೆಯನ್ನು ರೂಪಿಸಿದೆ. ಇದರಡಿ ನದಿ, ಬಂದರುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಗರ ಚಟುವಟಿಕೆಗಳಿಗೆ ಸಂಬಂಧಿಸಿದ ಆರ್ಥಿಕತೆ (ಬ್ಲೂ ಎಕಾನಮಿ)ಯನ್ನು ಬಲಪಡಿಸುವ ಉದ್ದೇಶವಿದೆ. ಸಾಗರ ಮಾರ್ಗಗಳ ಭದ್ರತೆ ಹೆಚ್ಚಳವೂ ಸೇರಿದೆ.

ಎಲ್ಲೆಲ್ಲಿ?: ದ.ಕ. ಜಿಲ್ಲೆಯ ಗುರುಪುರ ನದಿಯ ಹಿನ್ನೀರಿನ ನಡುಗಡ್ಡೆಗಳ ಅಭಿವೃದ್ಧಿಗೆ 9 ಕೋ.ರೂ., ಗುರುಪುರ ನದಿಯಲ್ಲಿ ಜಲಮಾರ್ಗ ಅಭಿವೃದ್ಧಿಗೆ 30 ಕೋ.ರೂ. ಮತ್ತು ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಪ್ರದೇಶದ ಅಭಿವೃದ್ಧಿಗೆ 78 ಕೋ.ರೂ. ಒದಗಲಿದೆ. ಕಾರವಾರ ಬಂದರು ಪ್ರದೇಶ ಅಭಿವೃದ್ಧಿಗೆ 19 ಕೋ.ರೂ., ತದಡಿ ಅಘನಾಶಿನಿ ನದಿ ಜಲಮಾರ್ಗ ಅಭಿವೃದ್ಧಿಗೆ 20 ಕೋ.ರೂ. ಮತ್ತು ಬಾಗಲಕೋಟೆಯ ಆಲಮಟ್ಟಿ ನದಿ ಜಲಮಾರ್ಗದ ಅಭಿವೃದ್ಧಿಗೂ 12 ಕೋ.ರೂ. ಮಂಜೂರಾಗಿದೆ. ಈ 6 ತಾಣಗಳು ರಾಜ್ಯದ ಒಳನಾಡು ಜಲಸಾರಿಗೆ ಜಾಲವಾಗಿ ರೂಪುಗೊಂಡರೆ ವ್ಯಾಪಾರ ವಹಿವಾಟು ಹಾಗೂ ಪ್ರವಾಸೋದ್ಯಮಕ್ಕೆ ಪೂಕರವಾಗಲಿವೆ.

ಏನೆಲ್ಲ ಅಭಿವೃದ್ಧಿ?
ಈ ಅನುದಾನದಲ್ಲಿ ಗುರುಪುರದ 3 ದ್ವೀಪಗಳಲ್ಲಿ 5 ಫ್ಲೋಟಿಂಗ್‌ ಜೆಟ್ಟಿಗಳು ನಿರ್ಮಾಣವಾಗಲಿವೆ. ಹಂಗಾರಕಟ್ಟೆ ಬಂದರು ಪ್ರದೇಶಕ್ಕೆ ಸ್ವರ್ಣಾ-ಸೀತಾನದಿಯಡಿ ಜಲಮಾರ್ಗ ನಿರ್ಮಾಣವಾಗಲಿದೆ. ಸಣ್ಣ ಹಡಗು, ಬೋಟು, ಬಾರ್ಜ್‌ಗಳು ಸಂಚರಿ ಸಲು ನೆರವಾಗುವಂತೆ ಸಮಾನ ಆಳದಲ್ಲಿ ಡ್ರೆಜ್ಜಿಂಗ್‌ ನಡೆಯಲಿದೆ. ಅಲ್ಲಲ್ಲಿ ಫ್ಲೋಟಿಂಗ್‌ ಜೆಟ್ಟಿಗಳು ನಿರ್ಮಾಣವಾಗಲಿವೆ. ವ್ಯಾಪಾರ ವಹಿವಾಟಿನ ಸಲುವಾಗಿ ಹಡಗುಗಳಿಂದ ಸರಕುಗಳನ್ನು ತುಂಬಲು ಮತ್ತು ಇಳಿಸಲು ಕ್ರೇನ್‌ಗಳ ವ್ಯವಸ್ಥೆಯೂ ಇರಲಿದೆ.

ಕರಾವಳಿಯಲ್ಲಿ ಸಾಗರ ಜಲಮಾರ್ಗದ ಜತೆಗೆ ಒಳನಾಡು ಜಲಸಾರಿಗೆ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದರೂ ಈವರೆಗೆ ಸಾಕಾರಗೊಂಡಿರಲಿಲ್ಲ. ಈಗ ಈ ಯೋಜನೆಯಡಿ ನಿರೀಕ್ಷೆ ಈಡೇರುವ ಸಾಧ್ಯತೆ ಇದೆ. ಕಾಲಮಿತಿಯೊಳಗೆ ಈ ಯೋಜನೆಗಳು ಜಾರಿಗೊಳ್ಳುವವೋ ಕಾದು ನೋಡಬೇಕಿದೆ.

Advertisement

ಹಿನ್ನೀರು ಪ್ರವಾಸೋದ್ಯಮಕ್ಕೆ ವಿಫ‌ುಲ ಅವಕಾಶ
ದ.ಕ., ಉಡುಪಿ ಮತ್ತು ಉ.ಕ. ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಸಾಗರ ಮತ್ತು ನದಿಯ ಮೂಲಕ ಜಲ ಪ್ರವಾಸೋದ್ಯಮ ಇದರಲ್ಲಿ ಪ್ರಮುಖ ವಾದುದು. ಸಾಗರತೀರ ಪ್ರವಾಸೋದ್ಯಮ ಒಂದು ಪ್ರಮುಖ ಆದಾಯ ತರುವ ಕ್ಷೇತ್ರ. ಮಂಗಳೂರು, ಮಲ್ಪೆ, ಗಂಗೊಳ್ಳಿ ಬಂದರು, ದ.ಕ.ದ ನೇತ್ರಾವತಿ, ಫಲ್ಗುಣಿ, ಉಡುಪಿಯ ಸ್ವರ್ಣಾ, ಸೀತಾನದಿ, ಸೌಪರ್ಣಿಕಾ, ಪಂಚಗಂಗಾವಳಿ, ಉತ್ತರ ಕನ್ನಡದ ಕಾಳಿ ನದಿಗಳ ಇಕ್ಕೆಲಗಳ ಹಿನ್ನೀರಿನಲ್ಲಿ ಸುಂದರ ಪ್ರಕೃತಿ ತಾಣಗಳಿವೆ. ಬೋಟು ಹೌಸ್‌ಗಳನ್ನು ಒಳಗೊಂಡ ಪ್ರವಾಸೋದ್ಯಮ ತಾಣಗಳನ್ನಾಗಿ ಅಭಿವೃದ್ಧಿಪಡಿಸಬಹುದು.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next