Advertisement

ಸಾಧ್ವಿ ನಿರಾಳ, ಪುರೋಹಿತ್‌ಗಿಲ್ಲ ಜಾಮೀನು

01:03 PM Apr 26, 2017 | Karthik A |

ಮುಂಬಯಿ: ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ 2008ರಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಆರೋಪ ಹೊತ್ತಿದ್ದ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರಿಗೆ ಬಾಂಬೆ ಹೈಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ. ಹೀಗಾಗಿ, 9 ವರ್ಷಗಳ ಕಾಲ ಜೈಲಲ್ಲಿದ್ದ ಸಾಧ್ವಿ ನಿರಾಳರಾಗಿದ್ದಾರೆ. ಆದರೆ, ಪ್ರಕರಣದ ಮತ್ತೂಬ್ಬ ಆರೋಪಿ ಲೆ| ಕ| ಪ್ರಸಾದ್‌ ಪುರೋಹಿತ್‌ಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಈ ಕುರಿತ ಆದೇಶ ಹೊರಡಿಸಿದ ನ್ಯಾಯಾಲಯ, ಸಾಧ್ವಿಯ ಜಾಮೀನು ಅರ್ಜಿಯನ್ನು ಪುರಸ್ಕರಿಸಲಾಗಿದ್ದು, 5 ಲ. ರೂ. ಶ್ಯೂರಿಟಿ ಪಡೆದು ಬಿಡುಗಡೆ ಮಾಡಬಹುದು ಎಂದಿದೆ. ಅಲ್ಲದೆ, ತಮ್ಮ ಪಾಸ್‌ಪೋರ್ಟ್‌ ಅನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಒಪ್ಪಿಸುವಂತೆ ಮತ್ತು ಸಾಕ್ಷ್ಯಗಳ ಮೇಲೆ ಯಾವುದೇ ಪ್ರಭಾವ ಬೀರದಂತೆ ಸೂಚಿಸಿದೆ. ಜತೆಗೆ, ಅಗತ್ಯ ಬಿದ್ದಾಗ ಎನ್‌ಐಎ ಕೋರ್ಟ್‌ಗೆ ಹಾಜರಾಗುವಂತೆಯೂ ಹೇಳಿದೆ.

Advertisement

ಆರೋಪಿಯು ಮಹಿಳೆಯಾಗಿದ್ದು, 9 ವರ್ಷಗಳಿಂದ ಜೈಲಲ್ಲಿದ್ದಾರೆ. ಜತೆಗೆ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮೇಲ್ನೋಟಕ್ಕೆ ಸಾಧ್ವಿಯ ಮೇಲಿನ ಯಾವುದೇ ಆರೋಪ ಸಾಬೀತಾಗದ ಕಾರಣ ಅವರಿಗೆ ಜಾಮೀನು ನೀಡುತ್ತಿದ್ದೇವೆ ಎಂದಿತು. ಜತೆಗೆ, ಆದೇಶಕ್ಕೆ ತಡೆಯಾಜ್ಞೆ ತರುವಂತೆ ಸಂತ್ರಸ್ತರು ಮಾಡಿದ ಮನವಿ ಯನ್ನೂ ನ್ಯಾ| ರಂಜಿತ್‌ ಮೋರೆ ಮತ್ತು ಶಾಲಿನಿ ಫ‌ನ್ಸಾಲ್ಕರ್‌ ಜೋಷಿ ನೇತೃತ್ವದ ವಿಭಾಗೀಯ ಪೀಠ ತಿರಸ್ಕರಿಸಿತು. ಇತ್ತೀಚೆಗಷ್ಟೇ ನ್ಯಾಯಾಲಯಕ್ಕೆ ವರದಿ ನೀಡಿದ್ದ ಎನ್‌ಐಎ, ಸಾಧ್ವಿಗೆ ಕ್ಲೀನ್‌ಚಿಟ್‌ ನೀಡಿತ್ತು. ಅಲ್ಲದೆ, ಅವರಿಗೆ  ಜಾಮೀನು ನೀಡುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದಿತ್ತು.

ಪುರೋಹಿತ್‌ಗಿಲ್ಲ ಜಾಮೀನು: ಸಾಧ್ವಿಗೆ ಜಾಮೀನು ಕೊಟ್ಟರೂ ಪುರೋಹಿತ್‌ಗೆ ಅದನ್ನು ನಿರಾಕರಿಸ ಲಾಗಿದೆ. ‘ಲೆ| ಕ|  ಪುರೋಹಿತ್‌ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದು. ಅದು ದೇಶದ ಏಕತೆ ಮತ್ತು ಸಮಗ್ರತೆ ಮೇಲೆ ಯುದ್ಧ ಸಾರುವಂಥದ್ದು. ಬಾಂಬ್‌ ಸ್ಫೋಟ‌ದಂತಹ ಹಿಂಸಾತ್ಮಕ ಮಾರ್ಗದಿಂದ ಜನರ ಮನದಲ್ಲಿ ಭಯ ಸೃಷ್ಟಿಸಲಾಗಿದೆ. ಅಷ್ಟೇ ಅಲ್ಲ, ಅವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯವೆಂದು ಕಾಣುತ್ತಿವೆ. ಹೀಗಾಗಿ, ಅವರ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ’ ಎಂದು ನ್ಯಾಯಪೀಠ ಹೇಳಿತು.

ಪ್ರತ್ಯೇಕ ಸಂವಿಧಾನ
ಆರೋಪಿ ಪುರೋಹಿತ್‌ ಹಿಂದೂ ರಾಷ್ಟ್ರಕ್ಕೆಂದೇ ಪ್ರತ್ಯೇಕ ಸಂವಿಧಾನ ರೂಪಿಸಿದ್ದು, ಪ್ರತ್ಯೇಕ ಕೇಸರಿ ಬಣ್ಣದ ಧ್ವಜವನ್ನೂ ಸಿದ್ಧಪಡಿಸಿದ್ದರು. ಜತೆಗೆ, ಹಿಂದೂಗಳ ಮೇಲೆ ಮುಸ್ಲಿಮರು ಮಾಡಿರುವ ದೌರ್ಜನ್ಯಗಳಿಗೆ ಪ್ರತೀಕಾರ ತೀರಿಸುವುದಾಗಿ ಹೇಳಿದ್ದರು ಎಂದು ಎನ್‌ಐಎ ಆರೋಪಪಟ್ಟಿ ಹೇಳಿತ್ತು. ಜತೆಗೆ, ಪುರೋಹಿತ್‌ ಆಡಿರುವ ಮಾತುಗಳ ಆಡಿಯೋ, ವಿಡಿಯೋ ದಾಖಲೆಗಳು, ಕರೆಗಳ ಮಾಹಿತಿ, ಸಾಕ್ಷ್ಯಗಳ ಹೇಳಿಕೆಗಳು ತಮ್ಮ ಬಳಿಯಿದ್ದು, ಅವರಿಗೆ ಜಾಮೀನು ನೀಡಬಾರದು ಎಂದು ಎನ್‌ಐಎ ಕೋರಿತ್ತು. ಮಂಗಳವಾರದ ವಿಚಾರಣೆ ವೇಳೆ, ‘ಬಲಪಂಥೀಯ ಸಂಘಟನೆಯಾದ ಅಭಿನವ ಭಾರತವು ಕೇವಲ ರಾಜಕೀಯ ಪಕ್ಷವಾಗಿ ಮಾತ್ರವಲ್ಲ, ನಮ್ಮನ್ನು ವಿರೋಧಿಸುವವರನ್ನು ನಿರ್ಮೂಲನೆ ಮಾಡುವ ಶಕ್ತಿಯಿರುವ ಪ್ರತ್ಯೇಕತಾವಾದಿ ಸಂಘಟನೆಯಾಗಿ ಕೆಲಸ ಮಾಡಲಿದೆ’ ಎಂಬ ಪುರೋಹಿತ್‌ ಹೇಳಿಕೆಯನ್ನೂ ನ್ಯಾಯಾಲಯ ಸ್ಮರಿಸಿತು.

ಏನಿದು ಪ್ರಕರಣ?
2008ರ ಸೆ.29ರಂದು ಮಹಾರಾಷ್ಟ್ರದ ಮಾಲೇಗಾಂವ್‌ನ ಶಕೀಲ್‌ ಗೂಡ್ಸ್‌ ಟ್ರಾನ್ಸ್‌ಪೋರ್ಟ್‌ ಕಂಪೆನಿಯ ಮುಂಭಾಗದಲ್ಲಿ ಮೋಟಾರು ಸೈಕಲ್‌ ಮೇಲೆ ಬಾಂಬ್‌ ಇಟ್ಟು ಸ್ಫೋಟಿಸಲಾಗಿತ್ತು. ಪರಿಣಾಮ 8 ಮಂದಿ ಸಾವಿಗೀಡಾಗಿ, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ 2008ರಲ್ಲಿ ಸಾಧ್ವಿ ಪ್ರಜ್ಞಾ, ಪುರೋಹಿತ್‌ ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿತ್ತು. ಜತೆಗೆ, ಅವರ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮಕೋಕಾ)ಯನ್ವಯ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಅನಂತರ ಸುಪ್ರೀಂ ಕೋರ್ಟ್‌ ಆದೇಶದಂತೆ, ಮಕೋಕಾದಡಿಯ ಆರೋಪಗಳನ್ನು ಕೈಬಿಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next