Advertisement

ಭಿನ್ನ ಕಥೆಗೆ ಖಡಕ್‌ ವಿಲನ್‌ ಖುಷ್‌ ಸದ್ಗುಣ ಶಂಕರ

12:30 AM Mar 22, 2019 | |

ಸದ್ಗುಣ ಸಂಪನ್ನ ಚಿತ್ರ, ಚಿತ್ರೀಕರಣಕ್ಕೆ ಅಣಿಯಾಗಿದೆ. ಪ್ರೀತಂ ಶೆಟ್ಟಿ ನಿರ್ದೇಶಕರು. ಕಥೆ, ಚಿತ್ರಕಥೆ ಜವಾಬ್ದಾರಿ ಇವರದೇ. ಇನ್ನು, ಪೂಜಾರಾಜ್‌ ಮತ್ತು ಭಾ.ಮ.ಗಿರೀಶ್‌ ಚಿತ್ರದ ನಿರ್ಮಾಪಕರು. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನಡೆದಿದ್ದು, ಏಪ್ರಿಲ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ.

Advertisement

ರವಿಶಂಕರ್‌ ಮತ್ತು ಸುಮನ್‌ ಇಲ್ಲಿ ಹೈಲೈಟ್‌. ರವಿಶಂಕರ್‌ ಪ್ರಕಾರ, ಇದು ವಿಶೇಷ ಕಥೆಯಂತೆ. ಪ್ರತಿಯೊಂದು ದೃಶ್ಯ ಕೂಡ ವಿಶೇಷವಾಗಿದ್ದು, ಆರಂಭದಿಂದ ಅಂತ್ಯದವರೆಗೂ ಚಿತ್ರ ಮನರಂಜನೆ ಜೊತೆಗೆ ಒಂದಷ್ಟು ಸಂದೇಶ ಕೊಡುತ್ತಾ ಸಾಗುತ್ತದೆ ಎಂಬುದು ಅವರ ಮಾತು. ಬಾಲ್ಯದ ಗೆಳೆಯರ ಬದುಕಿನ ಪಯಣ ಹೇಗೆಲ್ಲಾ ಇರುತ್ತೆ ಎಂಬ ಕಥೆ ಇಲ್ಲಿದ್ದು, ಒಬ್ಬನು ಏನೂ ಇಲ್ಲದವನು. ಇನ್ನೊಬ್ಬ ಎಲ್ಲಾ ಇರುವವನು. ಕೊನೆಯಲ್ಲಿ ಅವರ ನಡುವೆ ಆಗುವ ವ್ಯತ್ಯಾಸಗಳು ಏನು ಅನ್ನೋದು ಸಸ್ಪೆನ್ಸ್‌’ ಎಂದರು ರವಿಶಂಕರ್‌. 

ನಿರ್ದೇಶಕ ಪ್ರೀತಂಶೆಟ್ಟಿ, “ದೇವರನ್ನು ನಂಬುವ ವ್ಯಕ್ತಿಯೊಬ್ಬ ಭಕ್ತಿ ಪರವಶನಾದರೆ ಏನೂ ಆಗಲ್ಲ ಎಂಬುದನ್ನು ಅರಿತು, ಕೊನೆಗೆ ಗೌರವ ಕೊಡದೆ, ಹೆತ್ತವರನ್ನೂ ಕಡೆಗಣಿಸಿ, ಬೇರೇನೋ ಮಾಡಬೇಕು ಎಂದು ಯೋಚಿಸುವ ವೇಳೆ, ಬದುಕಿನಲ್ಲಿ ಒಂದಷ್ಟು ಹೊಸ ಬದಲಾವಣೆಗಳು ಆಗುತ್ತವೆ. ಆಗ ಅವನು ಸದ್ಗುಣ ಸಂಪನ್ನ ಆಗುತ್ತಾನಾ ಇಲ್ಲವಾ ಎಂಬುದನ್ನು ಹಾಸ್ಯ ಮೂಲಕ ಹೇಳಲಾಗುತ್ತಿದೆ’ ಎಂದರು ಅವರು. ನಟ ಸುಮನ್‌ ಅವರಿಲ್ಲಿ ಗೆಳೆಯನ ಪಾತ್ರ ಮಾಡುತ್ತಿದ್ದು, ಅವರಿಗೆ ಪವಿತ್ರಾ ಲೋಕೇಶ್‌ ಪತ್ನಿಯಾಗಿ, ಅನಿತಾಭಟ್‌ ಪ್ರೇಯಸಿಯಾಗಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ  ಕರಿಸುಬ್ಬು, ಚಂದ್ರಕಲಾ ಮೋಹನ್‌, ವಿಜಯಲಕ್ಷೀ, ರಾಧಾ ರಾಮಚಂದ್ರ, ಶಿಲ್ಪಾ ಶ್ರೀನಿವಾಸ್‌, ಭವಾನಿಪ್ರಕಾಶ್‌ ನಟಿಸುತ್ತಿದ್ದಾರೆ. ಜಲದಂಕ ಸುಧಾಕರ್‌ ಸಂಭಾಷಣೆ ಬರೆದಿದ್ದಾರೆ. ಪಳನಿರಾಜ್‌ ಐದು ಗೀತೆಗಳಿಗೆ ಸಂಗೀತ ನೀಡುತ್ತಿದ್ದಾರೆ. ಹೊಸ ಪ್ರತಿಭೆಗಳಾದ ಮೇಘನಾಕುಲಕರ್ಣಿ, ಚೇತನ್‌ನಾಯಕ್‌ ಅವರಿಗೆ ಹಾಡಲು ಅವಕಾಶ ಕೊಡಲಾಗಿದೆ.

ಚಿತ್ರದಲ್ಲಿ ರಾಧಿಕಾ ರಾವ್‌, ವಿ.ಮನೋಹರ್‌, ಹರ್ಷನ್‌ ಗೌಡ, ದೇವ್‌ನಾಗ್‌, ಬಿ.ಜಯಮ್ಮ, ಯಮುನಾ ಶ್ರೀನಿಧಿ, ಅನಿಲ್‌ ನೀನಾಸಂ, ಮಾ. ಆಯುಷ್‌ರಾಜ್‌, ಆರ್ಣವ್‌ರಾಜ್‌ ನಟಿಸುತ್ತಿದ್ದಾರೆ.  ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಪವನ್‌ಕುಮಾರ್‌ ಛಾಯಾಗ್ರಹಣವಿದೆ. 

Advertisement

Udayavani is now on Telegram. Click here to join our channel and stay updated with the latest news.

Next