Advertisement

ರವಿಶಂಕರ್‌ ಈಗ ಸದ್ಗುಣ ಸಂಪನ್ನ!

12:30 AM Feb 22, 2019 | Team Udayavani |

ಇಲ್ಲಿಯವರೆಗೆ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ, ಪೋಷಕ ನಟನಾಗಿ, ಹಾಸ್ಯನಟನಾಗಿ ನೋಡುಗರಿಗೆ ಭರಪೂರ ಮನರಂಜನೆ ನೀಡಿದ್ದ “ಆರುಗಂ’ ಖ್ಯಾತಿಯ ನಟ ರವಿಶಂಕರ್‌, ಈಗ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹೌದು, ರವಿಶಂಕರ್‌ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ “ಸದ್ಗುಣ ಸಂಪನ್ನ ಮಾಧವ 100%’ ಹೆಸರಿನ ಚಿತ್ರ ಪ್ರಾರಂಭವಾಗಿದೆ. 

Advertisement

ಇತ್ತೀಚೆಗೆ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ ಚಿನ್ನೇಗೌಡ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ಸಾ.ರಾ ಗೋವಿಂದು ಕ್ಯಾಮರಾ ಸ್ವಿಚ್‌ ಆನ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿದರು. ಮಾಜಿ ಸಚಿವ ವಿ. ಸೋಮಣ್ಣ, ನಿರ್ಮಾಪಕ ಎಂ.ಎನ್‌ ಸುರೇಶ್‌, ಕರಿಸುಬ್ಬು, ವಿಕ್ಟರಿ ವಾಸು, ಭಾ.ಮಾ ಹರೀಶ್‌ ಮೊದಲಾದವರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಪಕ್ಕಾ ಕಾಮಿಡಿ ಕಥಾಹಂದರ ಹೊಂದಿರುವ “ಸದ್ಗುಣ ಸಂಪನ್ನ ಮಾಧವ 100%’ ಚಿತ್ರದಲ್ಲಿ ರವಿಶಂಕರ್‌ ಮಧ್ಯಮ ಕುಟುಂಬದ, ಮಧ್ಯ ವಯಸ್ಕ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಇಡೀ ಚಿತ್ರ ಸಂಪೂರ್ಣ ಹಾಸ್ಯಮಯವಾಗಿ ಸಾಗಲಿದ್ದು, ಜೊತೆಗೊಂದು ಸಂದೇಶ ಕೂಡ ಇದೆ’ ಎನ್ನುತ್ತದೆ ಚಿತ್ರತಂಡ. 

“ಸದ್ಗುಣ ಸಂಪನ್ನ ಮಾಧವ 100%’ ಚಿತ್ರಕ್ಕೆ ಆರ್‌.ಪ್ರೀತಂ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಪಳನಿ ಸೇನಾಪತಿ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ವಿ. ಪವನ್‌ ಕುಮಾರ್‌ ಛಾಯಾಗ್ರಹಣ, ಸಿ. ರವಿಚಂದ್ರನ್‌ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. “ಶಾರ್ವ ಎಂಟರ್‌ಟೈನ್ಮೆಂಟ್‌’ ಬ್ಯಾನರ್‌ನಲ್ಲಿ ಭಾ.ಮಾ ಗಿರೀಶ್‌ ಹಾಗೂ ಪೂಜ ರಾಜ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಮುಂಬರುವ ಮಾರ್ಚ್‌ ವೇಳೆಗೆ ಚಿತ್ರದ ಶೂಟಿಂಗ್‌ ಶುರುವಾಗಲಿದೆ.

ಒಟ್ಟಾರೆ ಇಲ್ಲಿಯವರೆಗೆ ವಿಭಿನ್ನ ಗೆಟಪ್‌ಗ್ಳಲ್ಲಿ ಥಿಯೇಟರ್‌ನಲ್ಲಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ರವಿಶಂಕರ್‌, “ಸದ್ಗುಣ ಸಂಪನ್ನ ಮಾಧವ’ನ ಗೆಟಪ್‌ನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದ್ದಾರೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next