Advertisement

ಕೋವಿಡ್ ಭೀತಿ: ಜೂನ್ 14ರಿಂದ ಭಕ್ತರಿಗಿಲ್ಲ ಶಬರಿಮಲೆ ಅಯ್ಯಪ್ಪ ದರ್ಶನ: ಟಿಡಿಬಿ

05:41 PM Jun 11, 2020 | Nagendra Trasi |

ತಿರುವನಂತಪುರಂ:ದೇಶದಲ್ಲಿ ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ತೆರೆಯದಿರಲು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಗುರುವಾರ ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.

Advertisement

ದೇವಳದ ಪ್ರಧಾನ ತಂತ್ರಿ(ಅರ್ಚಕ) ಗಂಭೀರವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನಂತರ ವಾರ್ಷಿಕ ಪೂಜೆಯನ್ನು ಕೂಡಾ ರದ್ದುಗೊಳಿಸಲಾಗಿದೆ ಎಂದು ಹೇಳಿದೆ. ಗುರುವಾರ ತಿರುವನಂತಪುರಂನಲ್ಲಿ ದೇವಳದ ಮಂಡಳಿ ಮತ್ತು ಪುರೋಹಿತರು ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ವಿವರಿಸಿದೆ.

ಸಂಪ್ರದಾಯದಂತೆ ಜೂನ್ 14ರಂದು ಶಬರಿಮಲೆಯಲ್ಲಿ ಮಾಸಿಕ ಪೂಜೆ ಆರಂಭವಾಗಬೇಕಿತ್ತು. ಈ ಪೂಜೆಗೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದರು. ಏತನ್ಮಧ್ಯೆ ಕೇಂದ್ರ ಸರ್ಕಾರ ಕೂಡಾ ಜೂನ್ 8ರಿಂದ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಿತ್ತು. ಆದರೆ ಸಾಮಾಜಿಕ ಅಂತರ ಹಾಗೂ ವೈರಸ್ ಹರಡುವುದನ್ನು ತಡೆಯುವುದು ಕಷ್ಟಸಾಧ್ಯ ಎಂಬ ನಿಟ್ಟಿನಲ್ಲಿ ಭಕ್ತರಿಗೆ ದೇಗುಲ ಪ್ರವೇಶ ರದ್ದುಗೊಳಿಸುವ ನಿರ್ಧಾರ
ತೆಗೆದುಕೊಂಡಿರುವುದಾಗಿ ತಿಳಿಸಿದೆ.

ಇದಕ್ಕೂ ಮುನ್ನ ದೇವಸ್ಥಾನವನ್ನು ವಿಳಂಬವಾಗಿ ತೆರೆಯುವ ಬಗ್ಗೆ ತಂತ್ರಿ ಅವರು ಟಿಡಿಬಿ ಕಮಿಷನರ್ ಅವರಿಗೆ ಪತ್ರ ಬರೆದು ತಿಳಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾಗಿತ್ತು. ಸಂಪ್ರದಾಯ ಪ್ರಕಾರ ತಂತ್ರಿ ಅವರ ನಿರ್ಧಾರವೇ ಅಂತಿಮ ಎಂಬುದನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next