Advertisement

Russia-Ukraine War; ಭಾರತದ ನಿಲುವು ಶ್ಲಾಘನೀಯ: ಡಾ| ಮನಮೋಹನ್‌ ಸಿಂಗ್‌

12:12 AM Sep 09, 2023 | Team Udayavani |

ಹೊಸದಿಲ್ಲಿ: “ರಷ್ಯಾ-ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಭಾರತವು ಕೈಗೊಂಡ ನಿಲುವು ಅತ್ಯಂತ ಸಮಂಜಸವಾಗಿತ್ತು. ಶಾಂತಿ ಸ್ಥಾಪನೆಗೆ ಮನವಿ ಮಾಡುವುದರ ಜತೆಗೆ ದೇಶದ ಸಾರ್ವಭೌಮತೆ ಮತ್ತು ಆರ್ಥಿಕ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಿರುವ ಕ್ರಮ ಸಮರ್ಥನೀಯವಾಗಿತ್ತು’.
ಹೀಗೆಂದು ಯುದ್ಧದ ವಿಚಾರದಲ್ಲಿ ಭಾರತ ಸರಕಾರ ತಾಳಿದ್ದ ನಿಲುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ದೇಶದ ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌.

Advertisement

ಜಿ20 ರಾಷ್ಟ್ರಗಳ ಸಮ್ಮೇಳನದ ಹಿನ್ನೆಲೆಯಲ್ಲಿ “ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸಿಂಗ್‌ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಂಗ್‌ ಅವರ ಆಡಳಿತಾವಧಿಯಲ್ಲೇ ಅಂದರೆ 2008ರ ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ಜಿ20 ಎಂಬುದು “ವಿಶ್ವ ನಾಯಕರ ಶೃಂಗ’ವಾಗಿ ಅಸ್ತಿತ್ವಕ್ಕೆ ಬಂದಿತ್ತು.

ಸಂದರ್ಶನದಲ್ಲಿ, ಭಾರತದ ಜಿ20 ಅಧ್ಯಕ್ಷತೆಯ ಕುರಿತು ಸಂತಸ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಸಿಂಗ್‌, “ನನ್ನ ಜೀವಿತಾವಧಿಯಲ್ಲಿ ಭಾರತಕ್ಕೆ ಈ ಅವಕಾಶ ದೊರೆತಿರುವುದನ್ನು ನೋಡಲು ಸಂತೋಷವಾಗುತ್ತಿದೆ. ಭಾರತದ ಆಡಳಿತದ ಚೌಕಟ್ಟಿನಲ್ಲಿ ವಿದೇಶಾಂಗ ನೀತಿ ಎನ್ನುವುದು ಸದಾ ಪ್ರಾಮುಖ್ಯ ಗಳಿಸಿದೆ. ಆದರೆ ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿಯನ್ನು ಪಕ್ಷದ ಪರವಾಗಿ ಅಥವಾ ವೈಯಕ್ತಿಕ ರಾಜಕೀಯಕ್ಕಾಗಿ ಬಳಸಬಾರದು’ ಎಂದು ಕಿವಿಮಾತು ಹೇಳಿದ್ದಾರೆ.

ಸಂಘರ್ಷದಲ್ಲಿ ಸಿಲುಕಬಾರದು

2005ರಿಂದ 2015ರ ಅವಧಿಯಲ್ಲಿ ಜಿಡಿಪಿಯಲ್ಲಿ ದೇಶದ ವಿದೇಶಾಂಗ ವ್ಯವಹಾರದ ಪಾಲು ದುಪ್ಪಟ್ಟಾಗಿದೆ. ಇದು ಲಕ್ಷಾಂತರ ಮಂದಿಯನ್ನು ಬಡತನದಿಂದ ಹೊರಬರುವಂತೆ ಮಾಡಿತು. ಅಂದರೆ ಭಾರತದ ಆರ್ಥಿಕತೆಯು ಜಾಗತಿಕ ಆರ್ಥಿಕತೆಯೊಂದಿಗೆ ಹೇಗೆ ನಂಟು ಹೊಂದಿದೆ ಎನ್ನುವುದಕ್ಕೆ ಇದು ಸಾಕ್ಷಿ. 2008ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ, ಜಿ20 ಅತ್ಯುತ್ತಮ ಕಾರ್ಯಗಳನ್ನು ಮಾಡಿತು. ಪ್ರಸ್ತುತ ಡೀಗ್ಲೋಬಲೈಸೇಶನ್‌(ರಾಷ್ಟ್ರಗಳ ನಡುವಿನ ಪರಸ್ಪರ ಅವಲಂಬನೆ ಕುಗ್ಗಿಸುವ ಪ್ರಕ್ರಿಯೆ), ಹೊಸ ರೀತಿಯ ವ್ಯಾಪಾರ ನಿರ್ಬಂಧದ ಕುರಿತ ಮಾತುಗಳು ಕೇಳಿಬರುತ್ತಿವೆ. ಆದರೆ ಭಾರತದ ಆರ್ಥಿಕ ಹಿತಾಸಕ್ತಿಯು ಯಾವತ್ತೂ ಸಂಘರ್ಷದಲ್ಲಿ ಸಿಲುಕ ಬಾರದು ಮತ್ತು ಎಲ್ಲ ದೇಶಗಳು ಹಾಗೂ ಪ್ರದೇಶಗ ಳೊಂದಿಗೆ ಸಮಾನ ವ್ಯಾಪಾರ ಸಂಬಂಧವನ್ನು ಭಾರತ ಹೊಂದಿರಬೇಕು ಎಂದೂ ಸಿಂಗ್‌ ಸಲಹೆ ನೀಡಿದ್ದಾರೆ.

Advertisement

ಇಂದಿನ ಅಂತಾರಾಷ್ಟ್ರೀಯ ಸ್ಥಿತಿಗತಿಯೇ ಭಿನ್ನವಾಗಿದೆ. ಅದರಲ್ಲೂ ರಷ್ಯಾ-ಉಕ್ರೇನ್‌ ಯುದ್ಧ, ಪಾಶ್ಚಾತ್ಯ ದೇಶಗಳು ಮತ್ತು ಚೀನ ನಡುವಿನ ಭೌಗೋ ಳಿಕ-ರಾಜಕೀಯ ವೈಮನಸ್ಸಿನ ಬಳಿಕ ಎಲ್ಲವೂ ಡೋಲಾಯಮಾನವಾಗಿದೆ. ಈ ಹೊಸ ವಿಶ್ವ ಕ್ರಮವನ್ನು ಮುನ್ನಡೆಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ. ಸಾಂವಿಧಾನಿಕ ಮೌಲ್ಯಗಳಿರುವ ಶಾಂತಿಯುತ ಹಾಗೂ ಅತೀದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವು ಜಾಗತಿಕ ಮಟ್ಟದಲ್ಲಿ ದೊಡ್ಡಮಟ್ಟದ ಗೌರವವನ್ನು ಹೊಂದಿದೆ. ಎರಡು ಅಥವಾ ಹೆಚ್ಚಿನ ಶಕ್ತಿಗಳು ಸಂಘರ್ಷದಲ್ಲಿ ತೊಡಗಿದಾಗ, ಎರಡರಲ್ಲಿ ಒಂದು ಪಕ್ಷ ವಹಿಸುವಂತೆ ಇತರ ದೇಶಗಳ ಮೇಲೆ ಒತ್ತಡ ಬರುವುದು ಸಹಜ. ಅಂತಹ ಒತ್ತಡವನ್ನು ರಷ್ಯಾ-ಉಕ್ರೇನ್‌ ಯುದ್ಧದ ವೇಳೆ ಭಾರತವೂ ಎದುರಿಸಿದೆ. ಆದರೆ ಈ ಒತ್ತಡದ ಮಧ್ಯೆಯೂ ನಮ್ಮ ಸಾರ್ವಭೌಮತೆ ಹಾಗೂ ಆರ್ಥಿಕ ಹಿತಾಸಕ್ತಿಗೆ ಪ್ರಥಮ ಆದ್ಯತೆ ನೀಡುವ ಭಾರತದ ನಿರ್ಧಾರವು ಸರಿಯಾದುದೇ ಆಗಿದೆ ಎಂದಿದ್ದಾರೆ ಸಿಂಗ್‌.

ಭಾರತ-ಚೀನ ಬಾಂಧವ್ಯದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಂಗ್‌, “ಸಂಕೀರ್ಣ ರಾಜತಾಂತ್ರಿಕ ವಿಚಾರಗಳನ್ನು ಹೇಗೆ ನಿಭಾಯಿಸಬೇಕು ಎಂದು ಪ್ರಧಾನಮಂತ್ರಿಗಳಿಗೆ ನಾನು ಸಲಹೆ ನೀಡುವುದು ಸರಿಯಲ್ಲ. ಚೀನ ಅಧ್ಯಕ್ಷ ಜಿನ್‌ಪಿಂಗ್‌ ಅವರು ಜಿ20 ಸಭೆಗೆ ಗೈರಾಗಿದ್ದು ದುರದೃಷ್ಟಕರ. ಭಾರತದ ಪ್ರಾದೇಶಿಕ ಮತ್ತು ಸಾರ್ವಭೌಮ ಸಮಗ್ರತೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಾಗೂ ದ್ವಿಪಕ್ಷೀಯ ಸಂಘರ್ಷವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿಯವರು ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ನಂಬಿದ್ದೇನೆ’ ಎಂದಿದ್ದಾರೆ.
ಬದಲಾಗುತ್ತಿರುವ ವಿಶ್ವ ಕ್ರಮದಲ್ಲಿ ಭಾರತವು ವಿಶಿಷ್ಟವಾದ ಆರ್ಥಿಕ ಅವಕಾಶವನ್ನು ಹೊಂದಿದೆ. ದೊಡ್ಡ ಮಾರುಕಟ್ಟೆ, ಅಗಾಧವಾದ ಮಾನವ ಮತ್ತು ನೈಸರ್ಗಿಕ ಸಂಪನ್ಮೂಲ ಹೊಂದಿರುವ ಶಾಂತಿಯುತ ಪ್ರಜಾಸತ್ತೆಯಾಗಿ ರುವ ಭಾರತವು, ಉತ್ಪಾದನೆ ಹಾಗೂ ಸೇವಾ ವಲಯ ದಲ್ಲಿನ ಸುಧಾರಣೆಗಳ ಮೂಲಕ ಮುಂದಿನ ದಶಕಗಳಲ್ಲಿ ಆರ್ಥಿಕ ಪವರ್‌ಹೌಸ್‌ ಆಗಿ ಬೆಳೆಯಲಿದೆ ಎಂಬ ವಿಶ್ವಾಸ ನನಗಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದ ಬಗ್ಗೆ ಆಶಾವಾದ
ದೇಶಕ್ಕಿರುವ ಸವಾಲುಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಂಗ್‌ “ನನಗೆ ಭಾರತದ ಭವಿಷ್ಯದ ಬಗ್ಗೆ ಚಿಂತೆಯಾಗುತ್ತಿಲ್ಲ, ಅದರ ಬಗ್ಗೆ ಆಶಾವಾದ ಹೊಂದಿದ್ದೇನೆ. ಆದರೆ ಈ ಆಶಾವಾದವು ಭಾರತ ಸಾಮರಸ್ಯದ ಸಮಾಜವಾಗಿ ಉಳಿಯುವುದರ ಮೇಲೆ ಅವಲಂಬಿತವಾಗಿದೆ. ಏಕೆಂದರೆ ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಸಾಮರಸ್ಯವೇ ಅಡಿಪಾಯ. ವೈವಿಧ್ಯತೆಯನ್ನು ಸಂಭ್ರಮಿಸುವುದು ಭಾರತದ ಸಹಜ ಪ್ರವೃತ್ತಿಯಾಗಿದ್ದು, ಅದನ್ನು ಸಂರಕ್ಷಿಸಬೇಕಾದ್ದು ಎಲ್ಲರ ಕರ್ತವ್ಯವಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next