Advertisement

ಗ್ರಾಮ ಸುಧಾರಣೆಗೆ ವಿವೇಕ ಪಥ ಸಂಕಲ್ಪ

09:33 AM Apr 04, 2022 | Team Udayavani |

ಕಲಬುರಗಿ: ಮಹಾರಾಷ್ಟ್ರದ ಅಣ್ಣಾ ಹಜಾರೆ ಹಾಗೂ ಪೋಪಟರಾವ್‌ ಪವಾರ ತಮ್ಮ ಗ್ರಾಮಗಳನ್ನು ಇಡೀ ದೇಶದಲ್ಲೇ ಮಾದರಿ ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸಲು ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿರುವುದೇ ಕಾರಣ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಈ ಇಬ್ಬರು ಸಾಮಾಜಿಕ ಕ್ರಾಂತಿಕಾರರ ಹಾದಿಯಲ್ಲಿ ಸಣ್ಣದಾದ ಪ್ರಯತ್ನ ಮಾಡಿದರೆ ಸ್ವಲ್ಪ ಮಟ್ಟಿನಲ್ಲಾದರೂ ಬದಲಾವಣೆ ತರಲು ಸಾಧ್ಯವಿದೆ ಎಂಬುದನ್ನು ಸಾಧಿಸಲು ಗದಗದ ಸಾಮಾಜಿಕ ಚಳವಳಿಗಾರ, ಮಾಜಿ ಶಾಸಕ ಡಿ.ಆರ್‌. ಪಾಟೀಲ ಮುಂದಾಗಿದ್ದಾರೆ.

Advertisement

ಈಗಾಗಲೇ ವಿವೇಕ ಪಥ ಸಂಘಟನೆ ಮೂಲಕ ಕೆಲ ಗ್ರಾಮಗಲ್ಲಿ ಗ್ರಾಮ ಸುಧಾರಣೆ ನಿಟ್ಟಿನಲ್ಲಿ ಸಮಾಜ ಸುಧಾರಕ ಪೋಪಟರಾವ್‌ ಪವಾರ ಮತ್ತಿತರರನ್ನು ಕರೆಯಿಸಿ ಜಾಗೃತಿ ಅಭಿಯಾನ ಹಾಗೂ ಪರಿವರ್ತನಾ ಶಿಬಿರದ ಮೂಲಕ ಹೆಜ್ಜೆ ಇಡಲಾಗಿದೆ. ಮೊದಲು ಗದಗ ಜಿಲ್ಲೆಯಲ್ಲಿ ಗ್ರಾಮಾಭಿವೃದ್ಧಿ ಅಭಿಯಾನ ಯಶಸ್ವಿಯಾದ ನಂತರ ರಾಜ್ಯದ ಇತರ ಭಾಗದಲ್ಲಿ ಕಾರ್ಯೋನ್ಮುಖಗೊಳಿಸಲು ಮುಂದಾಗಲಿದೆ. ಗದಗದಲ್ಲಿ ಈ ಅಭಿಯಾನ ಯಶಸ್ವಿಗೊಳಿಸಲು ನಾವು ಪ್ರಯತ್ನಿಸುತ್ತೇವೆ. ಅದೇ ರೀತಿ ಇತರ ಭಾಗದಲ್ಲೂ ಸಾಮಾಜಿಕ ಕಾರ್ಯಕರ್ತರು ಮುಂದಾದಲ್ಲಿ ತಮ್ಮ ಧ್ಯೇಯ ಹಾಗೂ ಪ್ರಯತ್ನ ಸಾರ್ಥವಾಗುತ್ತದೆ ಎನ್ನುತ್ತಾರೆ ಡಿ.ಆರ್‌. ಪಾಟೀಲ.

ಅಣ್ಣಾ ಹಜಾರೆ ತಮ್ಮ ರಾಣೇಗಾಂವ ಸಿದ್ಧಿ ಹಾಗೂ ಪೋಪಟರಾವ್‌ ಅವರು “ಹಿವರೇ ಬಜಾರ’ ಇಡೀ ವಿಶ್ವವೇ ನೋಡುವಂತೆ ಅಭಿವೃದ್ಧಿ ಹೊಂದಿದೆ. ಇದಕ್ಕೆ ಗ್ರಾಮಸ್ಥರಲ್ಲಿ ಕಾಯಕ ನಿಷ್ಠೆ, ಒಗ್ಗಟ್ಟು ಹಾಗೂ ರಾಜಕೀಯ ಎಳ್ಳು ಕಾಳಷ್ಟು ಇರದಿರುವುದೇ ಕಾರಣವಾಗಿದೆ. ಇದೇ ಮಾದರಿ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಗದಗ ತಾಲೂಕಿನ ಜಿಪಂ ಕ್ಷೇತ್ರಗಳಲ್ಲಿ ತಲಾ ಒಂದೊಂದು ಗ್ರಾಮ ಆಯ್ಕೆ ಮಾಡಿಕೊಂಡು ಗ್ರಾಮಸ್ಥರೆಲ್ಲರನ್ನು ಸೇರಿಸಿ ತಿಳಿವಳಿಕೆ ಮೂಡಿಸಿ ಮೊದಲನೆಯದಾಗಿ ವ್ಯಸನಮುಕ್ತಗೊಳಿಸಲು ಮುಂದಾಗಲಾಗುವುದು. ಗ್ರಾಮಸ್ಥರು ಒಗ್ಗಟ್ಟಾಗಿದರೆ ಏನೆಲ್ಲ ಸಾಧನೆ ಮಾಡಬಹುದು. ಮೊದಲು ನೀನು ಸುಧಾರಣೆಯಾಗು, ನಂತರ ಕುಟುಂಬ ಸುಧಾರಿಸಿ, ಬಳಿಕ ಗ್ರಾಮ ಸುಧಾರಣೆಗೆ ನಾಂದಿ ಹಾಡಬಹುದೆಂಬುದಾಗಿ ಮನವರಿಕೆ ಮಾಡಿಕೊಡುವುದು ತಮ್ಮ ಪಥದ ಪ್ರಥಮ ಧ್ಯೇಯವಾಗಿದೆ ಎಂದು ವಿವರಣೆ ನೀಡುತ್ತಾರೆ.

ಗ್ರಾಮ ಸುಧಾರಣೆ ಆಗಬೇಕೆಂದರೆ ಮೊದಲು ವ್ಯಸನಮುಕ್ತವಾಗಬೇಕು. ಸುಮ್ಮನೇ ಇಲ್ಲಸಲ್ಲದ್ದನ್ನು ಮುಂದೆ ಮಾಡಿಕೊಂಡು ವ್ಯಸನ ಅಳವಡಿಸಿಕೊಂಡು ಜೀವನ ಹಾಳಾಗಿಸಿಕೊಳ್ಳಬಾರದು. ಎಲ್ಲವೂ ಸರ್ಕಾರ ಮಾಡುತ್ತದೆ ಎಂದು ಕುಳಿತುಕೊಳ್ಳುವುದು ಸರಿಯಲ್ಲ. ಅಣ್ಣಾ ಹಜಾರೆ ಅವರ ರಾಣೇಗಾಂವ ಸಿದ್ಧಿ ಹಾಗೂ ಪೋಪಟರಾವ್‌ ಪವಾರ ಹಿವರೇ ಬಜಾರ ಒಂದೇ ದಿನದಲ್ಲಿ ಅಭಿವೃದ್ಧಿ ಹಾಗೂ ಎಲ್ಲ ವ್ಯವಹಾರಗಳಲ್ಲಿ ಸ್ವತಂತ್ರತೆ ಹೊಂದಿಲ್ಲ. ಇದಕ್ಕೆಲ್ಲ ತಪಸ್ಸು ಹಾಗೂ ಪ್ರಯತ್ನ ಕಾರಣವಾಗಿದೆ. ಇದೇ ಹಾದಿಯಲ್ಲಿ ಹೆಜ್ಜೆ ಇಡಲು ಉದ್ದೇಶಿಸಿ ಕಾರ್ಯೋನ್ಮುಖಗೊಳ್ಳಲಾಗಿದೆ ಎಂದು ಡಿ.ಆರ್‌. ಪಾಟೀಲ ತಿಳಿಸಿದ್ದಾರೆ.

ಯಾವುದಾರೂ ಸಾಮಾಜಿಕ ಕ್ರಾಂತಿ ನಿಟ್ಟಿನಲ್ಲಿ ಹೋರಾಟ ಮಾಡಲು ಮುಂದಾದರೆ ಆಯಾ ಗ್ರಾಮದಲ್ಲಿ ಎರಡು ಪಂಗಡಗಳಾಗುತ್ತವೆ. ಗ್ರಾಮಸ್ಥರ ಸಹಾಯವಿಲ್ಲದೇ ಪ್ರಮುಖ ಬದಲಾವಣೆ ತರಲು ಸಾಧ್ಯವಿಲ್ಲ. ಮೊದಲು ಒಗ್ಗಟ್ಟು ಮೂಡಿಸುವುದೇ ತಮ್ಮ ಧ್ಯೇಯ ಹಾಗೂ ಪ್ರಯತ್ನವಾಗಿದೆ. ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಈಗಾಗಲೇ ಹಲವು ಗ್ರಾಮಗಳನ್ನು ವ್ಯಸನಮುಕ್ತಗೊಳಿಸಿದ್ದಾರೆ. ಪೂಜ್ಯರ ಅಷ್ಠ ದಶಮಾನೋತ್ಸವ ಅಂಗವಾಗಿ ಕಳೆದ ಮಾರ್ಚ್‌ ಕೊನೆ ವಾರದಲ್ಲಿ ಚಾಲನೆ ನೀಡಲಾಗಿದೆ. ತಾವಂತೂ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದು, ಗ್ರಾಮಗಳಿಂದಲೇ ಬದಲಾವಣೆ ಹಾಗೂ ಅಭಿವೃದ್ಧಿ ಸಾಧ್ಯ ಎಂಬುದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾತ್ರ ನಮ್ಮದಾಗಿದೆ. ಈ ಕಾರ್ಯ ಯಶಸ್ವಿಗೊಳಿಸುವ ಮನಸ್ಸುಗಳು ಹೆಚ್ಚಾಗಲಿ ಎನ್ನುವ ಆಶಯವಿದೆ. -ಡಿ.ಆರ್‌. ಪಾಟೀಲ, ವಿವೇಕ ಪಥ ಸಂಘಟನೆ, ಗದಗ

Advertisement

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next