Advertisement

ಕೋವಿಡ್ ಸಂದರ್ಭ ಗ್ರಾಮೀಣ ಆರ್ಥಿಕತೆ : ಸಹಕಾರ ಸಂಘಗಳ ಪಾತ್ರ

10:54 AM May 25, 2021 | Team Udayavani |

ಕೊರೊನಾ ಎರಡನೇ ಅಲೆ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಅದೆಷ್ಟೋ ಮಂದಿಯ ಬದುಕನ್ನೇ ಕಸಿದುಕೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೆಲವಷ್ಟು ಸಂಘ-ಸಂಸ್ಥೆಗಳು, ವೈಯಕ್ತಿಕ ನೆಲೆಯಲ್ಲಿ ಹಲವಾರು ಮಂದಿ ಸಮಾಜ ಸೇವೆ ಮಾಡುತ್ತಾ ಜನರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗ್ರಾಮೀಣ ಭಾಗದ ಸಹಕಾರ ಸಂಘಗಳು ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸ್ವಲ್ಪಮಟ್ಟಿಗಾದರೂ ಜನರ ಕಣ್ಣೀರು ಒರೆಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಜನರ ಸಂಕಷ್ಟಕ್ಕೆ ಸಹಕಾರ ಸಂಘಗಳು ಎಷ್ಟರಮಟ್ಟಿಗೆ ಸಹಕಾರಿಯಾಗಿವೆ ಎನ್ನುವ ವಿಚಾರವನ್ನು ನಿಮ್ಮ ಮುಂದಿಡಲು ಈ ಬರೆಹ.

Advertisement

ಜನಸಾಮಾನ್ಯರೊಂದಿಗೆ ಸದಾ ಇರುವ ಸಂಸ್ಥೆಗಳಾಗಿ ಗುರುತಿಸಿಕೊಂಡ ಸಹಕಾರ ಸಂಘಗಳು ಕಳೆದ ವರ್ಷ ಕೊರೊನಾ ಸಂದರ್ಭ ಸಾಕಷ್ಟು ಸಮಾಜಮುಖೀ ಚಟುವಟಿಕೆಗಳನ್ನು ಮಾಡುವ ಮೂಲಕ ಜನರ ವಿಸ್ವಾಸಕ್ಕೆ ಪಾತ್ರವಾಗಿವೆ. ಹಾಗೆಯೇ ಈ ಬಾರಿ ಅಪ್ಪಳಿಸಿದ ಕೊರೊನಾ ಎರಡನೇ ಅಲೆಯ ಸಂದರ್ಭ ಸಹಕಾರ ಸಂಘಗಳು ತಮ್ಮಷ್ಟಕ್ಕೆ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿವೆ. ಪ್ರಸ್ತುತ ಲಾಕ್‌ಡೌನ್‌ ಇರುವುದರಿಂದ ಜನರಿಗೆ ಕೆಲಸ ಕಾರ್ಯಗಳಿಲ್ಲದೆ ಮನೆಯೊಳಗೆ ಕುಳಿತುಕೊಳ್ಳಬೇಕಾದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ನಿಗದಿಪಡಿಸಿ ವಿತರಿಸುತ್ತಿದ್ದ ಪಡಿತರವನ್ನೇ ನೆಚ್ಚಿಕೊಂಡವರಿದ್ದಾರೆ.

ಸಹಕಾರಿ ಸಂಘಗಳು ಜನರ ಅನುಕೂಲಕ್ಕಾಗಿ ಬೆಳಗ್ಗೆ 7ರಿಂದಲೇ ತಮ್ಮ ಕೇಂದ್ರ ಕಚೇರಿ ಮತ್ತು ಶಾಖೆಗಳಲ್ಲಿ ನಿರಂತರವಾಗಿ ಪಡಿತರ ವಿತರಣೆ ಮಾಡುತ್ತಿವೆ. ಪ್ರತೀ ಸಹಕಾರಿ ಸಂಘಗಳಡಿ ಸುಮಾರು 800ರಿಂದ 1,200 ಮಂದಿ ಸದಸ್ಯರಿದ್ದು, ಅವರಿಗೆ ಪ್ರತಿನಿತ್ಯ ಕ್ರಮಬದ್ಧವಾಗಿ ಸರಕಾರದ ಕಾನೂನು ಪಾಲಿಸಿಕೊಂಡು ಜನ‌ರಿಗೆ ತೊಂದರೆಯಾಗದ ರೀತಿಯಲ್ಲಿ ಸರಕಾರದಿಂದ ಬಂದ ಅಕ್ಕಿ, ಗೋಧಿ ಇತ್ಯಾದಿಗಳನ್ನು ವಿತರಣೆ ಮಾಡಲಾಗುತ್ತಿದೆ.

ಗ್ರಾಮೀಣ ಭಾಗದ ಜನತೆಗೆ ತೊಂದರೆ ಆಗಬಾರದೆನ್ನುವ ನೆಲೆಯಲ್ಲಿ ಬೆಳಗ್ಗೆ 8ರಿಂದಲೇ ಆರ್ಥಿಕ ಚಟುವಟಿಕೆಯನ್ನು ಆರಂಭಿಸಿ ಜನರಿಗೆ ಬೇಕಾದ ಸಾಲ ಸೌಲಭ್ಯ, ಆರ್ಥಿಕ ವ್ಯವಹಾರವನ್ನು ಮಾಡುತ್ತಿವೆ. ಕಡಿಮೆ ಬಡ್ಡಿದರದಲ್ಲಿ ಜನರಿಗೆ ಚಿನ್ನಾಭರಣಗಳ ಮೇಲಿನ ಸಾಲವನ್ನು ಸಹಕಾರ ಸಂಘಗಳು ಒದಗಿಸುತ್ತಿವೆ.

ರಿಕ್ಷಾ ಚಾಲಕರು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಸ್ಥರಿಗೆ ಸಾಲ ವಿತರಣೆ, ರೈತರು, ರೈತಾಪಿ ವರ್ಗದವರಿಗೆ ಮತ್ತಿತರರಿಗೆ ವೈಯಕ್ತಿಕ ಸಾಲಗಳನ್ನು ಅತೀ ಹೆಚ್ಚು ದಾಖಲೆಗಳನ್ನು ಪಡೆಯದೆ, ಕಡಿಮೆ ಅವಧಿಯಲ್ಲಿ ನೀಡುವ ಮೂಲಕ ಜನರ ಸಂಕಷ್ಟಕ್ಕೆ ಸಹಕಾರ ಸಂಘಗಳು ನೆರವಾಗುತ್ತಿವೆ.

Advertisement

ರೈತರಿಂದ ಖರೀದಿ
ಸಹಕಾರಿ ಸಂಘಗಳು ರೈತರಿಗೆ ತಮ್ಮ ಬೆಳೆ ಬೆಳೆಯಲು ಯಾವುದೇ ರೀತಿಯಲ್ಲೂ ತೊಂದರೆಯಾಗ ಬಾರದೆನ್ನುವ ದೆಸೆಯಲ್ಲಿ ರಸಗೊಬ್ಬರ, ಬಿತ್ತನೆಯ ಬೀಜ, ಮೈಲುತುತ್ತ ಇತ್ಯಾದಿ ಅವಶ್ಯಕ ವಸ್ತುಗಳನ್ನು ಒದಗಿಸುತ್ತಿವೆ.

ರೈತರು ಬೆಳೆದ ಪ್ರಮುಖ ಬೆಳೆಗಳಾದ ಅಡಿಕೆ, ಮೆಣಸಿನ ಕಾಳು, ಕೊಕ್ಕೊ, ರಬ್ಬರ್‌ ಇತ್ಯಾದಿಗಳನ್ನು ಖರೀದಿಸಲಾಗುತ್ತಿದೆ. ಸಾಧ್ಯವಾದಷ್ಟು ರೈತರಿಗೆ ಅವರು ಬೆಳೆ ಮಾರಾಟ ಮಾಡಿದ ದಿನವೇ ಅವರಿಗೆ ಹಣ ಪಾವತಿ ಮಾಡಲೂ ಪ್ರಯತ್ನಿಸಲಾಗುತ್ತಿದೆ. ಅಲ್ಲದೆ ಹಾಪ್‌ಕಾಮ್ಸ್‌ನಂತಹ ಸಂಸ್ಥೆಗಳು ಸ್ಥಳೀಯವಾಗಿ ಬೆಳೆದ ಬೆಳೆಗಳನ್ನು ಖರೀದಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುತ್ತಿವೆ.

ಸಾಲ ವಿತರಣೆ, ನೆರವು ಒದಗಣೆ
ರಾಜ್ಯ ಸರಕಾರವು ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲದ ಅವಧಿಯನ್ನು ಜೂನ್‌ 30ರ ವರೆಗೆ ಮುಂದುವರಿಸಿ ಸರಕಾರವೇ ಮುಂದೂಡಲ್ಪಟ್ಟ ಅವಧಿಯ ಬಡ್ಡಿಯನ್ನು ತುಂಬುವುದು ರೈತಾಪಿ ವರ್ಗಕ್ಕೆ ವರದಾನವಾಗಿದೆ ಎನ್ನಬಹುದು. ರೈತರು ಬಹುತೇಕ ಮೇ ತಿಂಗಳಲ್ಲಿ ಕೃಷಿ ಸಾಲ ಪಡೆಯುತ್ತಾರೆ. ಇದೀಗ ಜೂನ್‌ ತಿಂಗಳ ವರೆಗೆ ಸಾಲ ಮರುಪಾವತಿ ಅವಧಿಯನ್ನು ಮುಂದುವರಿಸಿರುವುದು ರೈತರಿಗೆ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡುಕೊಳ್ಳಲು ಸಹಕಾರಿಯಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌/ಪಿಎಲ್‌ಡಿ ಬ್ಯಾಂಕ್‌ ಮುಖಾಂತರ ನೀಡಿದ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲದ ಮರುಪಾವತಿ ಅವಧಿಯನ್ನು ಮುಂದೂಡಿರುವುದು ಸುಮಾರು 2 ಲಕ್ಷ ರೈತರಿಗೆ ಸುಮಾರು 14 ಕೋ.ರೂ.ಗಳಷ್ಟು ಮೊತ್ತವು ಕಷ್ಟದ ಸಮಯದಲ್ಲಿ ಜೀವದಾನವಾಗಿದೆ.

ತಾಲೂಕು ಆಸ್ಪತ್ರೆಗಳು, ಸ್ಥಳೀಯ ಅಂಗನವಾಡಿ ಗಳು ಹಾಗೂ ಅಪೇಕ್ಷಿತರ ಬೇಡಿಕೆಗನುಸಾರ ಸಹಕಾರ ಸಂಘಗಳು ಸಾಮಾಜಿಕ ಬದ್ಧತೆಯಡಿ ಆಕ್ಸಿಮೀಟರ್‌, ಮಾಸ್ಕ್, ಸ್ಯಾನಿಟೈಸರ್‌ಗಳ ಕೊಡುಗೆಗಳೊಂದಿಗೆ ಆಕ್ಸಿಜನ್‌ ಘಟಕ ನಿರ್ಮಾಣಕ್ಕೂ ನೆರವಾಗಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಡಲು ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ಸಹಕಾರ ಸಂಘಗಳು ಕೈಜೋಡಿಸಿ ಕೊರೊನಾ ಮಹಾಮಾರಿಯನ್ನು ದೂರೀಕರಿಸಲು ಶ್ರಮಿಸುತ್ತಿವೆ.

ಕೋವಿಡ್ ವಾರಿಯರ್ಸ್ ಗಳಾಗಿ ಪರಿಗಣಿಸಿ
ಅವಿಭಜಿತ ದ.ಕ. ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮನಾಗಿ ಸಹಕಾರಿ ಸಂಸ್ಥೆಗಳು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಸಹಕಾರಿ ಸಂಸ್ಥೆಯ ಸಿಬಂದಿಗಳು ಕೊರೊನಾ ವಾರಿಯರ್ ಮಾದರಿಯಲ್ಲಿ ತಮ್ಮ ಗ್ರಾಹಕರಿಗೆ ಬ್ಯಾಂಕಿಂಗ್‌ ಹಾಗೂ ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಹಕಾರಿ ಕ್ಷೇತ್ರದ ಸಿಬಂದಿಗಳ ಈ ಅಮೂಲ್ಯ ಸೇವೆಯನ್ನು ಪರಿಗಣಿಸಿ ಸರಕಾರ ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ ವಿತರಣೆ ಹಾಗೂ ಇತರ ಕೊರೊನಾ ವಾರಿಯರ್ಗಳ ಸೌಲಭ್ಯವನ್ನು ಸಿಬಂದಿಗಳಿಗೆ ವಿಸ್ತರಿಸಲಿ.
-ಯಶ್‌ಪಾಲ್‌ ಎ. ಸುವರ್ಣ, ನಿರ್ದೇಶಕರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌

Advertisement

Udayavani is now on Telegram. Click here to join our channel and stay updated with the latest news.

Next