ಮಂಗಳೂರು ತಾಲೂಕಿನ ಪ್ರಮುಖ ಧಾರ್ಮಿಕ- ಪ್ರವಾಸೀ ನಿಸರ್ಗ ತಾಣಗಳಲ್ಲೊಂದು ಸೋಮೇಶ್ವರ. ಒಂದು ಪಕ್ಕದಲ್ಲಿ ರಾಣಿ ಅಬ್ಬಕ್ಕನ ಅರಮನೆ ಇದ್ದ ಉಳ್ಳಾಲ. ಇನ್ನೊಂದು ಪಕ್ಕದಲ್ಲಿ ಕೇರಳ ರಾಜ್ಯದ ಗಡಿ ತಲಪಾಡಿ. ಸಹಸ್ರಮಾನಗಳ ಪುರಾಣ ಇತಿಹಾಸದ ಶ್ರೀ ಸೋಮನಾಥ ದೇವಸ್ಥಾನ ಇಲ್ಲಿದೆ. ಆದ್ದರಿಂದ ಸೋಮೇಶ್ವರ. ಈ ದೇವಸ್ಥಾನ ಅರಬೀ ಸಮುದ್ರದ ತಟದಲ್ಲಿದೆ. ದೇವಸ್ಥಾನದ ಹಿಂಬದಿಯಲ್ಲಿ ಸಮುದ್ರ ಕಿನಾರೆಯಲ್ಲಿದೇ ಅತ್ಯಾಕರ್ಷಕವಾದ ನಿಸರ್ಗ ನಿರ್ಮಿತ ಶಿಲಾ ಸಮೂಹ ರುದ್ರಪಾದೆ. ರುದ್ರ ಅಂದರೆ ಭಗವಾನ್ ಶಿವ. ಪಾದೆ ಅಂದರೆ ತುಳುವಿನಲ್ಲಿ ಬಂಡೆ. ಹಾಗಾಗಿ ರುದ್ರಪಾದೆ. ಇಲ್ಲಿನವರೇ ಆದ ಪ್ರಸಿದ್ಧ ಸಾಹಿತಿ ಡಾ| ಅಮೃತ ಸೋಮೇಶ್ವರ ಅವರು ತಮ್ಮ ಅನೇಕ ಬರಹಗಳಲ್ಲಿ ರುದ್ರಪಾದೆ ಎಂದು ಉಲ್ಲೇಖಿಸಿದ್ದಾರೆ.
ಇದಿಷ್ಟು ರುದ್ರಪಾದೆಯ ಪೀಠಿಕಾ ವೃತ್ತಾಂತ. ಆದರೆ ಉಭಯ ಜಿಲ್ಲೆಗಳ ಕರಾವಳಿಯ ಉದ್ದಕ್ಕೂ ಅಲ್ಲಲ್ಲಿ ಕಡಲ ಕಿನಾರೆಯಲ್ಲಿ ಬಹುಬಗೆಯ ಕಥಾನಕಗಳನ್ನು ಸಾರುವ ಇಂತಹ ನಿಸರ್ಗದತ್ತ ಶಿಲಾ ಕೌತುಕಗಳಿವೆ. ಸುರತ್ಕಲ್, ಮೂಲ್ಕಿ, ಪಡುಬಿದ್ರಿ, ಕಾಪು, ಮಲ್ಪೆಯ ತೋನ್ಸೆÕಪಾರ್, ಸೈಂಟ್ ಮೇರೀಸ್ ದ್ವೀಪ ಇತ್ಯಾದಿ. ಉತ್ತರ ಕನ್ನಡ ಗಡಿಯ ಮರವಂತೆಯಂತೂ ಒಂದೆಡೆ ಸಮುದ್ರ ಒಂದೆಡೆ ನದಿ ನಡುವೆ ಹೆದ್ದಾರಿ. ಹೀಗೆ ಕಡಲ ತೀರದ ಯಾನ ಅಂದರೆ, ಅದು ನಮ್ಮ ಸಂಸ್ಕೃತಿ, ಪರಂಪರೆ, ಜನಜೀವನ, ಅದರ ಜತೆ ಅಂತರ್ಗತಗೊಂಡಿರುವ ಸಂಪ್ರದಾಯದ ಅನಾವರಣ. ಈ ಕಾರಣಕ್ಕೆ ಒಟ್ಟು ಕಡಲ ತೀರಯಾನದಲ್ಲಿರುವ ಈ ಕೌತುಕಗಳ ಒಂದು ದೃಷ್ಟಾಂತವಾಗಿ ಮಂಗಳೂರಿನ ಸೋಮೇಶ್ವರದ (ಮಲೆನಾಡಿನ ಸೋಮೇಶ್ವರ ಸಹಿತ ಕರ್ನಾಟಕದಲ್ಲಿ ಅನೇಕ ಸೋಮೇಶ್ವರಗಳಿವೆ) ರುದ್ರಪಾದೆಯನ್ನು ಇಲ್ಲಿ ಸಾಂಕೇತಿಸಲಾಗಿದೆ. ಈ ಮೂಲಕ ಎಲ್ಲ ಕೌತುಕಗಳ ಕೀಲಿಕೈಯಾಗಿಯೂ ಬಳಸಬಹುದು.
ಈ ರುದ್ರಪಾದೆಯಲ್ಲಿ ಕುಳಿತು ಕೇವಲ ಸಮುದ್ರ ತೆರೆಗಳ ಆವರ್ತ ನಗಳ ಬೆರಗನ್ನಷ್ಟೇ ಗಮನಿಸುವುದಲ್ಲ; ಅದರೊಳಗೆ ಭಾವನಾತ್ಮಕ ಅಂತರ್ಗತ ಸಾಧಿಸಬೇಕು. ಈ ಹಾದಿಯಲ್ಲಿ ಸಾಗಿ ಸಾಧಿಸಿದ ಅನೇಕ ಬರಹಗಾರರು, ಕವಿಗಳು, ಚಿಂತಕರು, ಚಿತ್ರ ರಚನಾಕಾರರು, ಕಲಾವಿದರು ನಮ್ಮ ಕರಾವಳಿಯಲ್ಲಿದ್ದಾರೆ.
ಹಗಲಿನ ವೇಳೆ ಸಮುದ್ರದ ನೀರಿನ ರಭಸದ ವೇಗಕ್ಕೆ ಅನುಗುಣವಾಗಿ ಬದಲಾಗುವ ಪರಿಸರ. ಗಾಳಿ ಹೆಚ್ಚಾದಾಗ ತೆರೆಗಳ ಮತ್ತಷ್ಟು ರಭಸ, ಸಂಜೆಯ ಸೂರ್ಯಾಸ್ತಕ್ಕೆ ಹೊಂಬಣ್ಣದ ಓಕುಳಿ, ಬೆಳದಿಂಗಳ ರಾತ್ರಿಯಲಿ ಬೆಳೊ°ರೆಯಂತೆ ಅಪ್ಪಳಿಸುವ ತೆರೆಗಳು, ಹುಣ್ಣಿಮೆಯ ಕಡಲ ಅಬ್ಬರಕ್ಕೆ ರುದ್ರಪಾದೆಗೆ ದಪ್ಪನೆಯ ಕ್ಷೀರಾಭಿಷೇಕ, ಸಹಜ ಬಿರುಸಿನ ತೆರೆಗಳು ಬಂಡೆಗೆ ಅಪ್ಪಳಿಸಿ ಮೇಲೆ ಜಿಗಿದು ಮತ್ತೆ ಪುಷ್ಪವೃಷ್ಟಿಯಾದಂತಹ ಪರಿ. ಈ ದೃಶ್ಯಾವಳಿಯೇ ಇಲ್ಲಿನ ಭಾವನಾತ್ಮಕ ಬಂಧ.
ಹಾಗೆಂದು, ಪ್ರವಾಸಿಗರು ಇಲ್ಲಿ ನೀರಿಗೆ ಇಳಿಯುವ ಅಪಾಯಕ್ಕೆ ಮುಂದಾಗಬಾರದು. ಮೇಲುನೋಟಕ್ಕೆ ನೀರು ಸರಳಮಟ್ಟದಲ್ಲಿ ಇರುವಂತೆ ಕಂಡರೂ, ತಟ್ಟನೆ ಬಡಿಯುವ ತೆರೆ ನಿರ್ದಾಕ್ಷಿಣ್ಯವಾಗಿ ವರ್ತಿಸಬಹುದು. ಇಲ್ಲಿ ನೀರ ಕೆಳಗಡೆ ಅಥವಾ ಒಳಗಡೆ ಕಲ್ಲು ಇರುವುದರಿಂದ ಅಪಾಯಕಾರಿ.
Related Articles
ಈಜಲು ಗೊತ್ತು ಎಂಬ ಭಂಡ ಧೈರ್ಯದವರೂ ಇದ್ದಾರೆ. ಆದರೆ ನದಿಯಲ್ಲಿ ಈಜುವುದಕ್ಕೂ ಸಮುದ್ರದಲ್ಲಿ ಈಜುವುದಕ್ಕೂ ಅಜಗಜಾಂತರ ಎಂಬುದನ್ನು ಅವರು ತಿಳಿದಿರುವುದಿಲ್ಲ. ಸೋಮೇಶ್ವರದ ಈ ರುದ್ರ ಪಾದೆಯು ಒಂದು ರೀತಿಯಲ್ಲಿ ಇಲ್ಲಿನ ರಕ್ಷಣ ಕವಚವೂ ಹೌದು. (ಕಾಪುವಿನ ಈಗಿನ ದೀಪಸ್ತಂಭದ ಪಕ್ಕದಲ್ಲಿನ ಬೃಹತ್ ಬಂಡೆಯನ್ನು ಆಗಿನ ಅರ ಸರು ರಕ್ಷಣ ಕೋಟೆಯನ್ನಾಗಿ ಮಾಡಿಕೊಂಡಿದ್ದರು.)
ಉಳ್ಳಾಲ ರಾಣಿ ಅಬ್ಬಕ್ಕದೇವಿಯು ಶ್ರೀ ಸೋಮನಾಥ ದೇವರ ಅನನ್ಯ ಭಕ್ತೆಯಾಗಿದ್ದರು. ಆಕೆ ಪ್ರತೀದಿನ ದೇವಳದ ಒಂದು ಭಾಗ ದಲ್ಲಿ ತನ್ನ ಆಪ್ತರ ಜತೆ ಸಮಾಲೋಚನೆ ನಡೆಸುತ್ತಿದ್ದರು. ಆಗ ರುದ್ರ ಪಾದೆಯ ಮೂಲಕ ಸೂರ್ಯಾಸ್ತದ ವೀಕ್ಷಣೆ ಮಾಡುತ್ತಿದ್ದರೆಂದು ವಿದೇಶೀ ಪ್ರವಾಸಿಗರು ದಾಖಲಿಸಿದ್ದಾರೆ. ಹೀಗೆ ರುದ್ರಪಾದೆಯ ಒಂದೊಂದು ವೃತ್ತಾಂತವನ್ನು ಬಗೆಯುತ್ತಾ ಹೋದಂತೆ, ಒಂದೊಂದು ಕಥಾನಕಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ಕರಾವಳಿಯ ಬಹುತೇಕ ಶಿಲಾಕೌತುಕಗಳಲ್ಲಿಯೂ ಈ ಪಾರಂಪರಿಕ ಸಂಪತ್ತು ತುಂಬಿದೆ.
ರುದ್ರಪಾದೆಯ ಸಮಕಾಲೀನ ವೃತ್ತಾಂತವೂ ಇಲ್ಲಿ ಪ್ರಸ್ತುತ ವಾಗಬಹುದು. ಕನ್ನಡ, ತುಳು, ಕೊಂಕಣಿ ಸಹಿತ ಬಹುಭಾಷಾ ಚಲನಚಿತ್ರಗಳು ಇಲ್ಲಿನ ರುದ್ರ ರಮಣೀಯ ಹಿನ್ನೆಲೆಯಲ್ಲಿ ಚಿತ್ರೀಕರಣವಾಗಿವೆ. ಡಾ| ರಾಜ್ ಈ ಸೌಂದರ್ಯವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. 80ರ ದಶಕದ ಆರಂಭದಲ್ಲಿ “ಅಪೂರ್ವ ಸಂಗಮ’ ಚಿತ್ರೀಕರಣಕ್ಕೆ ಅವರು ಇಲ್ಲಿಗೆ ಬಂದಿದ್ದಾಗ ಬಂಡೆಯನ್ನು ಸೀಳಿ ಬರುವ ಗಾಳಿಯ ಸದ್ದು ಕೂಡ ಅದ್ಭುತ ಅಂದಿದ್ದರು.
ಇಂದಿಗೂ ಅನೇಕ ಧಾರ್ಮಿಕ ಸಂದರ್ಭಗಳಲ್ಲಿ ಈ ಕಡಲ ಬದಿ ಯಲ್ಲಿ ಆಚರಣೆಗಳು ನಡೆಯುತ್ತವೆ. ಶ್ರೀ ಕ್ಷೇತ್ರಕ್ಕೆ ಅಪಾರ ಸಂಖ್ಯೆಯ ಭಕ್ತಾಭಿಮಾನಿಗಳು ಇದ್ದಾರೆ. ರುದ್ರಪಾದೆಯು ಒಟ್ಟು ಪರಿಸರಕ್ಕೆ ಅನನ್ಯವಾದ ಗಾಂಭೀರ್ಯಯುತ ಸೌಂದರ್ಯವನ್ನು ನೀಡಿದೆ.
ನಮ್ಮೆಲ್ಲರ ವಿವಿಧ ವಾಸ್ತವ್ಯ ಪ್ರದೇಶಗಳಲ್ಲಿಯೂ ಇಂತಹ ಕೌತುಕಗಳಿರಬಹುದು. ಇಲ್ಲಿನ ಶ್ರೀ ಕ್ಷೇತ್ರದ ಎಡಬದಿಯಲ್ಲಿ ಅಂದರೆ ರುದ್ರಪಾದೆಯ ಈಚೆಗಿನ ಪ್ರದೇಶದಲ್ಲಿ ಕಾಲ್ದಾರಿಯ ಪಕ್ಕ ಸರೋವರದ ರೂಪದ ಬೃಹತ್ ಕೊಳವಿದೆ. ಪಾಂಡವರು ವನವಾಸದ ಸಂದರ್ಭದಲ್ಲಿ ಇಲ್ಲಿಗೆ ಬಂದಾಗ ಶ್ರೀ ದೇವರ ಪೂಜೆಗೆ ಮುನ್ನ ಮಜ್ಜನಕ್ಕೆ ಸಿಹಿನೀರು ಬೇಕೆಂದಾಗ, ಭೀಮ ತನ್ನ ಗದೆಯ ಮೂಲಕ ಈ ಸರೋವರ ನಿರ್ಮಿಸಿದನೆಂದು ಐತಿಹ್ಯ. ರುದ್ರಪಾದೆಯ ಆಚೆ ಉಪ್ಪು ನೀರು- ಈಚೆ ಸಿಹಿನೀರು!
ಅಂದಹಾಗೆ: ರಾಣಿ ಅಬ್ಬಕ್ಕನ ಮೂಲ – ಮೂಡುಬಿದಿರೆಯ ಚೌಟ ಅರಸು ಮನೆತನದವರು ಶ್ರೀ ಸೋಮನಾಥನ ಆರಾಧಕರು. ಇಲ್ಲಿಂದ ಪೂಜೆಯ ಬಳಿಕ ತೀರ್ಥ ಪ್ರಸಾದವನ್ನು ಕುದುರೆಯ ಮೂಲಕ ಮೂಡುಬಿದಿರೆಗೆ ತರಲಾಗುತ್ತಿತ್ತು. ಅದು ವಿಳಂಬವಾಗುತ್ತಿತ್ತು. ಮುಂದೆ ಚೌಟ ಅರಸರು ಮೂಡುಬಿದಿರೆ ಪಕ್ಕದ ಪುತ್ತಿಗೆಯಲ್ಲಿ ಶ್ರೀ ಸೋಮನಾಥ ದೇವಸ್ಥಾನ ನಿರ್ಮಿಸಲು ಇದೂ ಒಂದು ಕಾರಣ.
-ಮನೋಹರ ಪ್ರಸಾದ್