Advertisement

ಆರ್‌ಟಿಐ ದುರ್ಬಲ ಯತ್ನ ಸಲ್ಲ

01:29 PM May 28, 2018 | Team Udayavani |

ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಲ್ಲಿಲ್ಲ ಎಂದಿರುವ ಚುನಾವಣಾ ಆಯೋಗದ ಹೇಳಿಕೆ ಎರಡು ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಗಳ ನಡುವಿನ ವೈರುದ್ಧéವನ್ನು ಬಯಲುಗೊಳಿಸಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಬಿಎಸ್‌ಪಿ, ಎನ್‌ಸಿಪಿ, ಸಿಪಿಐ, ಸಿಪಿಎಂ ಮತ್ತು ಸಮಾಜವಾದಿ ಪಾರ್ಟಿ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಬರುತ್ತವೆ ಎಂದು 2013ರಲ್ಲೇ ಕೇಂದ್ರ ಮಾಹಿತಿ ಹಕ್ಕು ಆಯುಕ್ತರ ಪೂರ್ಣ ಪೀಠವೊಂದು ತೀರ್ಪಿತ್ತಿದೆ. ಆದರೆ ಪುಣೆಯ ಆರ್‌ಟಿಐ ಕಾರ್ಯಕರ್ತರೊಬ್ಬರು ಈ ಆರು ರಾಷ್ಟ್ರೀಯ ಪಕ್ಷಗಳಿಗೆ ಇಲೆಕ್ಟ್ರಾಲ್‌ ಬಾಂಡ್‌ ಮೂಲಕ ಬಂದಿರುವ ದೇಣಿಗೆಯ ಮಾಹಿತಿ ಕೇಳಿ ಸಲ್ಲಿಸಿದ ಅರ್ಜಿಗೆ ನೀಡಿದ ಉತ್ತರದಲ್ಲಿ ಚುನಾವಣಾ ಆಯೋಗ ಮಾಹಿತಿ ಹಕ್ಕು ಆಯುಕ್ತರ ಆದೇಶಕ್ಕೆ ತದ್ವಿರುದ್ಧವಾಗಿ ರಾಜಕೀಯ ಪಕ್ಷಗಳು ತನ್ನ ವ್ಯಾಪ್ತಿಗೊಳಪಡುವುದಿಲ್ಲ ಎಂಬ ಉತ್ತರ ನೀಡಿದೆ. ಕೇಂದ್ರದ ಎರಡು ಸಾಂವಿಧಾನಿಕ ಸಂಸ್ಥೆಗಳ ನಡುವೆ ಈ ವೈರುದ್ಧé ಹೇಗೆ ಉಂಟಾಯಿತು ಎನ್ನುವುದೇ ಚರ್ಚೆಯಾಗಬೇಕಾದ ವಿಷಯ. 

Advertisement

ಕೇಂದ್ರ ಮಾಹಿತಿ ಆಯೋಗ ಆರು ರಾಜಕೀಯ ಪಕ್ಷಗಳನ್ನು ಸಾರ್ವಜನಿಕ ಸಂಸ್ಥೆಗಳು ಎಂದು ಘೋಷಿಸಿರುವಾಗ ಚುನಾವಣಾ ಆಯೋಗ ಇದಕ್ಕೆ ತದ್ವಿರುದ್ಧವಾದ ನಿರ್ಧಾರ ಕೈಗೊಳ್ಳುವುದು ಸಾಧ್ಯವಿಲ್ಲ.ಮಾಹಿತಿ ಆಯೋಗದ ಆದೇಶವನ್ನು ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ ರದ್ದುಪಡಿಸಿದ್ದರೆ ಚುನಾವಣಾ ಆಯೋಗದ ನಿಲುವನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ಮಾಹಿತಿ ಆಯೋಗದ ಆದೇಶವನ್ನು ಪ್ರಶ್ನಿಸಿ ಯಾವ ಪಕ್ಷವೂ ನ್ಯಾಯಾಲಯದ ಮೆಟ್ಟಿಲು ಏರದೇ ಇರುವುದರಿಂದ ಚುನಾವಣಾ ಆಯೋಗ ಮಾಹಿತಿ ನೀಡಲು ನಿರಾಕರಿಸಿರುವುದು ಸರಿಯಾದ ಕ್ರಮವಲ್ಲ. ಮಾಹಿತಿ ಆಯೋಗ ರಾಷ್ಟ್ರಮಟ್ಟದ ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಬರುತ್ತವೆ ಎಂದು ತೀರ್ಪಿತ್ತಿದ್ದರೂ ಪಕ್ಷಗಳಿಗೆ ಮಾತ್ರ ಈ ಕಾಯಿದೆ ವ್ಯಾಪ್ತಿಗೆ ಬರಲು ಇಷ್ಟವಿಲ್ಲ. ಹಾಗೆಂದು ಇದರರ್ಥ ಮಾಹಿತಿ ಆಯೋಗದ ಆದೇಶ ಊರ್ಜಿತದಲ್ಲಿಲ್ಲ ಎಂದಾಗುವುದಿಲ್ಲ. ಹೀಗಾಗಿ ಈ ಪ್ರಶ್ನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತನ್ನ ವ್ಯಾಪ್ತಿ ಮೀರಿ ಹೋಗಿದೆ ಎನ್ನುವ ಆರೋಪ ತನಿಖೆಗೆ ಅರ್ಹ. ಯಾವ ಪಕ್ಷವೂ ತನ್ನ ದೇಣಿಗೆಯ ಪೂರ್ಣ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸುವುದಿಲ್ಲ. ಪಕ್ಷಗಳು ಮಾಹಿತಿ ಆಯೋಗದ ಆದೇಶವನ್ನು ಪಾಲಿಸದಿರುವುದನ್ನು ಪ್ರಶ್ನಿಸಿ ಹಲವು ಆರ್‌ಟಿಐ ಕಾರ್ಯಕರ್ತರು ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇದು ವಾಸ್ತವ ಸ್ಥಿತಿ. 

ರಾಜಕೀಯ ಪಕ್ಷಗಳಿಗೆ ಆರ್‌ಟಿಐ ವ್ಯಾಪ್ತಿಗೊಳಪಡಲು ಏಕೆ ಇಷ್ಟವಿಲ್ಲ ಎನ್ನುವುದು ಗುಟ್ಟಿನ ವಿಚಾರವೇನಲ್ಲ. ಇವುಗಳಿಗೆ ಬರುವ ಪ್ರತಿ ದೇಣಿಗೆ ಸ್ವ ಇಚ್ಚೆಯಿಂದ ಕೂಡಿರುವುದಿಲ್ಲ. ಸಾಮಾನ್ಯವಾಗಿ ಕಾರ್ಪೋರೇಟ್‌ ಸಂಸ್ಥೆಗಳು ಮತ್ತು ದೊಡ್ಡ ದೊಡ್ಡ ವ್ಯಾಪಾರ ಸಂಸ್ಥೆಗಳು ಏನಾದರೊಂದು ಗೂಢ ಉದ್ದೇಶವಿಟ್ಟುಕೊಂಡೇ ದೇಣಿಗೆಯನ್ನು ನೀಡುತ್ತವೆ. ಇದಕ್ಕೆ ಪರವಾಗಿ ತಮ್ಮ ಪರವಾದ ನೀತಿ ರೂಪಣೆ ಅಥವಾ ಕಾನೂನುಗಳ ತಿದ್ದುಪಡಿಯನ್ನು ನಿರೀಕ್ಷಿಸುತ್ತಿವೆ. ಹೀಗಾಗಿಯೇ ಭ್ರಷ್ಟಾಚಾರದ ಮೂಲವಿರುವುದು ರಾಜಕೀಯ ಪಕ್ಷಗಳ ಆದಾಯದ ನಿಗೂಢ ಮೂಲಗಳಲ್ಲಿ ಎನ್ನುವುದು. ಪ್ರಸ್ತುತ ರೂ. 20,000ಕ್ಕಿಂತ ಮೇಲ್ಪಟ್ಟ ದೇಣಿಗೆಯ ಲೆಕ್ಕವನ್ನು ಕೊಡಬೇಕೆಂಬ ನಿಯಮವಿದ್ದರೂ ಪಕ್ಷಗಳು ಚಿಕ್ಕ ಮೊತ್ತಗಳಲ್ಲೇ ದೇಣಿಗೆಯನ್ನು ಸ್ವೀಕರಿಸಿ ಈ ನಿಯಮವನ್ನು ಗಾಳಿಗೆ ತೂರುತ್ತಿವೆ.

ರಾಜಕೀಯ ಪಕ್ಷಗಳು ಜನರನ್ನು ಪ್ರತಿನಿಧಿಸುತ್ತಿದ್ದರೂ, ಜನರಿಗಾಗಿಯೇ ದುಡಿಯುತ್ತಿದ್ದರೂ ಜನರೆದುರು ತಮ್ಮ ಆದಾಯ ಮೂಲವನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿರುವುದು ಸೋಜಿಗದ ವಿಷಯ. ಈ ಕಾರಣಕ್ಕಾಗಿಯೇ ಅವುಗಳು ತಮ್ಮನ್ನು ಸಾರ್ವಜನಿಕ ಸಂಸ್ಥೆಗಳು ಗುರುತಿಸಿಕೊಳ್ಳಲು ಒಪ್ಪಿಕೊಳ್ಳುತ್ತಿಲ್ಲ. 

ಮಾಹಿತಿ ಹಕ್ಕು ಕಾಯಿದೆ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಲು ಜನರಿಗೆ ಸಿಕ್ಕಿರುವ ಪ್ರಬಲ ಅಸ್ತ್ರ. 2002ರಲ್ಲಿ ಅಂದಿನ ಎನ್‌ಡಿಎ ಸರಕಾರ ತಂದಿದ್ದ ಮಾಹಿತಿ ಸ್ವಾತಂತ್ರ್ಯ ಕಾಯಿದೆಗಿಂತಲೂ ಹಲವು ವಿಚಾರಗಳಲ್ಲಿ ಮಾಹಿತಿ ಹಕ್ಕು ಕಾಯಿದೆ ಹೆಚ್ಚು ಪ್ರಬಲವಾಗಿದೆ. ಆದರೆ ಈ ಕಾಯಿದೆಯನ್ನು ಆಡಳಿತ ವ್ಯವಸ್ಥೆಯೇ ಅವಕಾಶ ಸಿಕ್ಕಿದಾಗಲೆಲ್ಲ ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದು ವಿಷಾದಕರ. ಪ್ರಸ್ತುತ ಚುನಾವಣಾ ಆಯೋಗ ರಾಜಕೀಯ ಪಕ್ಷಗಳನ್ನು ತನ್ನ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಕೂಡಾ ಇದೇ ರೀತಿಯ ಒಂದು ಪ್ರಯತ್ನ ಎಂದು ಭಾವಿಸಬೇಕಾಗುತ್ತದೆ. ಪ್ರಜಾತಂತ್ರ ಮೌಲ್ಯಗಳಿಗೆ ಬದ್ಧವಾಗಿರುವ ಯಾವುದೇ ಸರಕಾರ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವುದು ಅಗತ್ಯ. ಪಾರದರ್ಶಕತೆಯಲ್ಲೇ ಪ್ರಜಾತಂತ್ರದ ಸೊಬಗಿರುವುದು. ಹೀಗಾಗಿ ಸರಕಾರ ಮಾಹಿತಿ ಹಕ್ಕು ಕಾಯಿದೆಯನ್ನು ಇನ್ನಷ್ಟು ಬಲಪಡಿಸುವುದು ಸರಕಾರದ ಉದ್ದೇಶವಾಗಿರಬೇಕೇ ಹೊರತು ದುರ್ಬಲಗೊಳಿಸುವುದಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next