Advertisement

ಕಲೆಯನ್ನು ಉಳಿಸಿ-ಬೆಳೆಸುವಲ್ಲಿ ಮಹಿಳಾ ಕಲಾವಿದರ ಪಾತ್ರ ಅಪಾರ: ಕಡಂದಲೆ

03:54 PM Jul 28, 2023 | Team Udayavani |

ವಿದ್ಯಾವಿಹಾರ್‌: ಜೀವನಕ್ಕೆ ಉತ್ತಮ ಸಂದೇಶದೊಂದಿಗೆ ಮನೋರಂಜನೆಯನ್ನು ನೀಡುವ ಕಲೆ ಯಕ್ಷಗಾನವಾಗಿದೆ. ಇಂದು ಮನೋರಂಜನೆಗಳಿಗೆ ಅದೆಷ್ಟೋ ಕಲೆಗಳಿದ್ದರೂ ಯಕ್ಷಗಾನವು ತನ್ನ ಪ್ರತಿಷ್ಠೆಯನ್ನು ಹೆಚ್ಚಿಸುತ್ತ ಬಂದಿದೆ.

Advertisement

ಮುಂಬಯಿ ಮಹಾನಗರದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ನಿರಂತರ ಯಕ್ಷಗಾನ ಕಲೆಯನ್ನು ಉಳಿಸಿ-ಬೆಳೆಸುವಲ್ಲಿ
ಶ್ರಮಿಸುತ್ತಿದ್ದಾರೆ. ಮುಂಬಯಿಗರು ಈ ಕಲೆಯನ್ನು ನಿರಂತರ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಶ್ರೀ ಗೀತಾಂಬಿಕ ದೇವಸ್ಥಾನ ಅಸಲ್ಪ ಘಾಟ್ಕೊಪರ್‌ ಇದರ ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ ಅವರು ನುಡಿದರು.

ವಿದ್ಯಾವಿಹಾರ್‌ ಶ್ರೀ ಅಂಬಿಕಾ ಆದಿನಾಥೇಶ್ವರ ಮಂದಿರದ ಸಭಾಂಗಣದಲ್ಲಿ ಅಜೆಕಾರು ಕಲಾಭಿಮಾನಿಗಳ ಬಳಗ ಮುಂಬಯಿ ಇದರ ಆಶ್ರಯದಲ್ಲಿ ಜು. 26ರಂದು ಅಪರಾಹ್ನ ನಡೆದ ಪ್ರಶಸ್ತಿ ವಿಜೇತ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ ಕಾಟಪಳ್ಳ ಸುರತ್ಕಲ್‌ ತಂಡದ ಐದನೇ ವರ್ಷದ ಮುಂಬಯಿ ಪ್ರವಾಸದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘವು ಗಂಡುಕಲೆಯಾದ ಯಕ್ಷಗಾನವನ್ನು ಅತ್ಯುತ್ತಮ ರೀತಿಯಲ್ಲಿ ಪ್ರದರ್ಶಿಸುವು ದರೊಂದಿಗೆ ಪ್ರಶಸ್ತಿಯನ್ನು ಪಡೆದಿದೆ ಎಂದು ತಿಳಿದು ಸಂತೋಷವಾಗುತ್ತಿದೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿ ಕೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಇದು ಉತ್ತಮವಾದ
ಬೆಳವಣಿಗೆ ಯಾಗಿದೆ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಇಂಥ ಮಹಿಳಾ ಕಲಾವಿದೆಯರ ಪಾತ್ರ ಅಪಾರವಾಗಿದೆ
ಎಂದು ನುಡಿದು ಶುಭಹಾರೈಸಿದರು.

ಪ್ರಾರಂಭದಲ್ಲಿ ಶ್ರೀ ಅಂಬಿಕಾ ಅದಿನಾಥೇಶ್ವರ ಮಂದಿರ ವಿದ್ಯಾ ವಿಹಾರ್‌ ಇಲ್ಲಿಯ ಪ್ರಧಾನ ಅರ್ಚಕ ಪೆರ್ಣಂಕಿಲ ಹರಿದಾಸ್‌
ಭಟ್‌ ಅವರು ದೀಪ ಪ್ರಜ್ವಲಿಸಿ ಯಕ್ಷಗಾನ ಸಂಘದ ಮುಂಬಯಿ ಪ್ರವಾಸವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ತಂಡದ ಕಲಾವಿದೆಯರಾದ ಶ್ರೀಮತಿ ಪೂರ್ಣಿಮಾ ಶಾಸ್ತ್ರೀ ಮತ್ತು ಕು| ವೈಷ್ಣವಿ ರಾವ್‌ ಪಡುಬಿದ್ರಿ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು. ಪೆರ್ಣಂಕಿಲ ಹರಿದಾಸ್‌ ಭಟ್‌ ಅವರು ಪ್ರಾರಂಭದಲ್ಲಿ ಕ್ಷೇತ್ರದ ದೇವ ರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಪ್ರಶಸ್ತಿ ವಿಜೇತ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ ಕಾಟಪಳ್ಳ ಸುರತ್ಕಲ್‌ ತಂಡದ ಐದನೇ ವರ್ಷದ ಮುಂಬಯಿ ಪ್ರವಾಸಕ್ಕೆ ಚಾಲನೆ ನೀಡಿದರು.

Advertisement

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರು ಮಾತನಾಡಿ, ಯಕ್ಷಗಾನ ಎಂಬುದು ಒಂದು ಪರಿಪೂರ್ಣವಾದ ಕಲೆಯಾಗಿದೆ. ಆದರೆ ಯಕ್ಷಗಾನ ತಂಡವನ್ನು ನಡೆಸುವುದೆಂದರೆ ಸುಲಭದ ಕೆಲಸವಲ್ಲ. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಯಕ್ಷಗಾನ ಮಂಡಳಿಯನ್ನು ನಡೆಸುತ್ತಿದೆ.

ಮಹಿಳೆಯರು ಯಕ್ಷಗಾನ ತಂಡವನ್ನು ಕಟ್ಟಿ ಬೆಳೆಸುತ್ತಿರುವುದು ಅಭಿನಂದನೀಯ. ಇಂಥಹ ತಂಡಗಳಿಗೆ ನಾವು ಸದಾ
ಪ್ರೋತ್ಸಾಹವನ್ನು ನೀಡಬೇಕು. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಕಾಲಸೇವೆಗೆ ನಾವು ಸದಾ ಬೆಂಬಲವನ್ನು ನೀಡಬೇಕು ಎಂದರು. ವೇದಿಕೆಯಲ್ಲಿ ಅತಿಥಿಗಳಾಗಿ ಹೊಟೇಲ್‌ ಉದ್ಯಮಿ ಸತೀಶ್‌ ಶೆಟ್ಟಿ ಅಜೆಕಾರು, ಶ್ರೀ ಅಂಬಿಕಾ ಆದಿನಾಥೇಶ್ವರ ಮಂದಿರ
ವಿದ್ಯಾವಿಹಾರ್‌ ಇದರ ವಿಶ್ವಸ್ಥರಾದ ಹರಿದಾಸ್‌ ಶೆಟ್ಟಿ, ಹೊಟೇಲ್‌ ಉದ್ಯಮಿ ಸುರೇಂದ್ರ ಶೆಟ್ಟಿ, ತಂಡದ ವ್ಯವಸ್ಥಾಪಕರಾದ ಮಾಧವ ಎಸ್‌. ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.

ಅಜೆಕಾರು ಕಲಾವಿದರ ಬಳಗ ಮುಂಬಯಿ ಇದರ ಸಂಚಾಲಕರಾದ ಬಾಲಕೃಷ್ಣ ಶೆಟ್ಟಿ ಅಜೆಕಾರು ಅವರು ಅತಿಥಿ-ಗಣ್ಯರನ್ನು
ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಘಟಕ ಕಣಂಜಾರು ಸುರೇಶ್‌ ಶೆಟ್ಟಿ ಅವರು ನಿರೂಪಿಸಿ ವಂದಿಸಿದರು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ ಕಾಟಪ್ಪಳ್ಳಿ ಸುರತ್ಕಲ್‌ ತಂಡದ ಕಲಾವಿದೆಯರಿಂದ ಅಷ್ಟಾಕ್ಷರೀ ಮಂತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.

ಯಕ್ಷಗಾನ ಕಲೆ ಎಂಬುದು ಅತ್ಯಂತ ಶ್ರೇಷ್ಠವಾದ ಕಲೆಯಾಗಿದ್ದು, ನಮಗೆ ಪೌರಾಣಿಕ ಕಥೆಗಳ ಜ್ಞಾನವನ್ನು ಹೆಚ್ಚಿಸುವಲ್ಲಿ
ಯಕ್ಷಗಾನದ ಪಾತ್ರ ತುಂಬಾಯಿದೆ. ಶ್ರೀ ಕ್ಷೇತ್ರದಲ್ಲಿ ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಶ್ರೀದೇವಿಗೆ ಯಕ್ಷಗಾನ ಸೇವೆ ನಡೆಯುತ್ತಿದೆ. ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿಯು ಯಕ್ಷಗಾನ ಕಲೆಯನ್ನು ಉಳಿಸಿ-ಬೆಳೆಸಲು ಮಾಡುತ್ತಿರುವ ಕಾರ್ಯ ಅಭಿನಂದನೀಯವಾಗಿದೆ. ಯಕ್ಷಗಾನ ತಂಡಗಳಿಗೆ ಕ್ಷೇತ್ರದ ಪ್ರೋತ್ಸಾಹ ಸದಾಯಿದೆ. ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ತಂಡವು ಮುಂಬಯಿಯ ವಿವಿಧೆಡೆಗಳಲ್ಲಿ ಯಕ್ಷಗಾನ
ಪ್ರದರ್ಶನ ನೀಡಲಿದ್ದು, ಎಲ್ಲ ಪ್ರದರ್ಶನಗಳು ಯಶಸ್ವಿಯಾಗಿ ನಡೆಯಲಿ.
-ಪೆರ್ಣಂಕಿಲ ಹರಿದಾಸ್‌ ಭಟ್‌, ಪ್ರಧಾನ ಅರ್ಚಕ, ಶ್ರೀ ಅಂಬಿಕಾ
ಅದಿನಾಥೇಶ್ವರ ಮಂದಿರ ವಿದ್ಯಾವಿಹಾರ್‌

*ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next