Advertisement

ಶಾಲಾ ಮಕ್ಕಳಿಂದ ರಸ್ತೆ ದುರಸ್ತಿ: ನ್ಯಾಯಾಧೀಶರ ಭೇಟಿ: ದುರಸ್ತಿಗೆ ಸೂಚನೆ

01:39 AM Oct 26, 2021 | Team Udayavani |

ಬೆಳ್ಳಾರೆ: ಬೆಳ್ಳಾರೆ ಗ್ರಾಮದ ಮೂಡಾಯಿ ತೋಟ ಸ‌ಂಪರ್ಕ ರಸ್ತೆಯ ಮಂಡೇಪುವಿನಲ್ಲಿ ಕೆಸರು ತುಂಬಿ ಸಂಚಾರ ಕಷ್ಟವಾಗಿರುವ ಹಿನ್ನೆಲೆಯಲ್ಲಿ 2ನೇ ತರಗತಿ ವಿದ್ಯಾರ್ಥಿಗಳಿಬ್ಬರು ಶಾಲಾರಂಭದ ಕಾರಣ ಸ್ವತಃ ಹಾರೆ ಹಿಡಿದು ದುರಸ್ತಿ ನಡೆಸಿದ ಸ್ಥಳಕ್ಕೆ ಸೋಮವಾರ ಸುಳ್ಯದ ಹಿರಿಯ ಸಿವಿಲ್‌ ನ್ಯಾಯಾಲಯ ನ್ಯಾಯಾಧೀಶ ಸೋಮಶೇಖರ್‌ ಅವರು ಎಪಿಪಿ ಮತ್ತು ಬೆಳ್ಳಾರೆ ಎಸ್‌ಐ ಜತೆಗೆ ಭೇಟಿ ನೀಡಿದರು.

Advertisement

ರಸ್ತೆಯಲ್ಲಿ ನಿಂತಿದ್ದ ಕೆಸರು ನೀರನ್ನು ವಿದ್ಯಾರ್ಥಿಗಳಿಬ್ಬರು ಬಿಡಿಸಿ ಬಿಡುತ್ತಿರುವ ದೃಶ್ಯ ವೈರಲ್‌ ಆಗಿತ್ತು.

ಸ್ಥಳ ಪರಿಶೀಲನೆ ನಡೆಸಿದ ಅವರು ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಪೋಷಕ ರಿಂದ ಮಾಹಿತಿ ಕೇಳಿದಾಗ, ಇದು ನಮ್ಮದೇ ರಸ್ತೆಯಾಗಿರುವುದರಿಂದ ಪಂಚಾಯತ್‌ಗೆ ಮನವಿ ನೀಡಿದ್ದರೂ ಅವರು ಮಾಡದಿರುವ ಕಾರಣ ನಾವು ಶ್ರಮದಾನ ಮಾಡಿದೆವು. ಆಗ ಮಕ್ಕಳೂ ಭಾಗಿಯಾಗಿದ್ದಾರೆ ಎಂದರು.

ಬಳಿಕ ಗ್ರಾ.ಪಂ.ಗೆ ಭೇಟಿ ನೀಡಿದ ನ್ಯಾಯಾಧೀಶರು ಅಧ್ಯಕ್ಷರು ಮತ್ತು ಪಿಡಿಒ ಅವರನ್ನು ಪ್ರಶ್ನಿಸಿ ರಸ್ತೆ ದುರಸ್ತಿಪಡಿಸದಿದ್ದರೆ ಕೇಸು ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಬೆಳ್ಳಾರೆ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಂದ ಕೆಲಸ ಮಾಡಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

Advertisement

ಮಕ್ಕಳಿಗೆ ಹಾರೆ ನೀಡಿ ಕೆಲಸ ಮಾಡಿಸಿದ ಪೋಷಕರ ಮೇಲೆ, ರಸ್ತೆ ದುರಸ್ತಿ ಮಾಡಿಸದ ಪಂಚಾಯತ್‌ ಸದಸ್ಯ, ಅಧ್ಯಕ್ಷ ಮತ್ತು ಪಿಡಿಒ ಮೇಲೆ ಹಾಗೂ ಮಕ್ಕಳ ಬಗ್ಗೆ ನಿಗಾ ವಹಿಸದ ಶಾಲಾ ಶಿಕ್ಷಕರ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿದರು. ಬಳಿಕ ಎಸ್‌ಐ ಆಂಜನೇಯ ರೆಡ್ಡಿ ಅವರು ಪ್ರಕರಣ ದಾಖಲಿಸುವ ಬದಲು ರಸ್ತೆ ದುರಸ್ತಿ ಮಾಡೋಣ ಎಂದಾಗ ನ್ಯಾಯಾಧೀಶರು ಒಪ್ಪಿ ದುರಸ್ತಿಯ ಬಳಿಕ ವರದಿ ನೀಡುವಂತೆ ಸೂಚಿಸಿದರು.

ಗ್ರಾ.ಪಂ. ಸ್ಪಂದನೆ
ಮಕ್ಕಳು ರಸ್ತೆ ದುರಸ್ತಿಗೆ ಮುಂದಾದ ಬೆನ್ನಲ್ಲೇ ಬೆಳ್ಳಾರೆ ಗ್ರಾ.ಪಂ. ಸ್ಪಂದಿಸಿದೆ. ಈ ಬಗ್ಗೆ ಉದಯವಾಣಿ ಸೋಮವಾರ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಜಿ.ಪಂ. ಸಿಇಒ ತಾ.ಪಂ. ಇಒಗೆ ತತ್‌ಕ್ಷಣ ಸ್ಪಂದಿಸುವಂತೆ ಸೂಚನೆ ನೀಡಿದ್ದರು. ಇಒ ಭವಾನಿಶಂಕರ ಅವರು ಬೆಳ್ಳಾರೆ ಪಿಡಿಒ ಅವರನ್ನು ಸಂಪರ್ಕಿಸಿ ನಿರ್ದೆಶನ ನೀಡಿದ ಮೇರೆಗೆ ಪಿಡಿಒ ಅನುಷಾ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next