Advertisement

Road Rail Vehicles: ಹಳಿಯಲ್ಲಿ ಸಿಲುಕಿದ ರೋಡ್‌ ಕಂ ರೈಲು

09:40 AM Oct 04, 2023 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಹಸಿರು ಮಾರ್ಗ ದಲ್ಲಿ ಮಂಗಳವಾರ ಬೆಳಗಿನಜಾವ ರೋಡ್‌ ಕಂ ರೈಲು ವಾಹನ (ಆರ್‌ಆರ್‌ವಿ)ವು ಪರೀಕ್ಷಾರ್ಥ ಕಾರ್ಯಾಚರಣೆ ವೇಳೆ ಹಳಿಯಲ್ಲಿ ಸಿಲುಕಿದ ಪರಿಣಾಮ ವಾಣಿಜ್ಯ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿ, ಪ್ರಯಾಣಿಕರು ಪರದಾಡಿದರು.

Advertisement

ಸಾಮಾನ್ಯವಾಗಿ ಮೆಟ್ರೊ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾದ ಸಂದರ್ಭದಲ್ಲಿ ಅದರ ದುರಸ್ತಿಗೆ ರೋಡ್‌ ಕಂ ರೈಲು ವಾಹನ ಬಳಕೆ ಮಾಡಲಾಗುತ್ತದೆ. ಈಚೆಗೆ ಜರ್ಮನ್‌ನಿಂದ ತರಲಾದ ಈ ವಾಹನದ ಪರೀಕ್ಷೆಯು ಪೀಣ್ಯ ಡಿಪೋದಿಂದ ನ್ಯಾಷನಲ್‌ ಕಾಲೇಜು ನಡುವೆ ನಡೆಸಲಾಗುತ್ತಿತ್ತು. ರಾಜಾಜಿನಗರ ನಿಲ್ದಾಣ ದಾಟುತ್ತಿದ್ದಂತೆ ಬರುವ ತಿರುವಿನಲ್ಲಿ ಆರ್‌ಆರ್‌ವಿ ಹಳಿಯಲ್ಲಿ ಜಾಮ್‌ (ಸಿಲುಕಿದೆ) ಆಗಿದೆ. ಇದರಿಂದ ಇಡೀ ಹಸಿರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಸಾವಿರಾರು ಪ್ರಯಾಣಿಕರ ಪರದಾಟ: ಬೆಳಗಿನ ಜಾವ 6ರಿಂದ ಮಧ್ಯಾಹ್ನ 3.40ರವರೆಗೆ ಉದ್ದೇಶಿತ ಮಾರ್ಗದ ಯಶವಂತಪುರ- ಮಂತ್ರಿಸ್ಕ್ವೇರ್‌ ನಡುವೆ ಯಾವುದೇ ರೈಲುಗಳು ಸಂಚರಿಸಲಿಲ್ಲ. ದಟ್ಟಣೆ ಅವಧಿಯಲ್ಲೇ ಮೆಟ್ರೋ ಕೈಕೊಟ್ಟಿದ್ದರಿಂದ ಸಾವಿರಾರು ಪ್ರಯಾಣಿಕರಿಗೆ ಇದರ ಬಿಸಿ ತಟ್ಟಿತು.

ನಿಗಮದ ವಿರುದ್ಧ ಆಕ್ರೋಶ: ಅತ್ತ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ದಿಂದ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಯಾವಾಗ ಪುನಾರಂಭಗೊಳ್ಳಲಿದೆ ಎಂಬುದರ ಮಾಹಿತಿಯೂ ಇರಲಿಲ್ಲ. ಈ ಮಧ್ಯೆ ನಿಲ್ದಾಣಗಳ ಕೌಂಟರ್‌ಗಳಲ್ಲಿ ಎಂದಿನಂತೆ ಟಿಕೆಟ್‌ ವಿತರ ಣೆಯೂ ಆಗುತ್ತಿತ್ತು. ನಿಗಮದ ಈ ಧೋರಣೆ ಯಿಂದ ಜನ ಅಕ್ಷರಶಃ ರೋಸಿಹೋದರು.

ಬಸ್‌, ಕ್ಯಾಬ್‌ ಮೊರೆ ಹೋದ ಪ್ರಯಾಣಿಕರು: ಯಶವಂತಪುರ- ಮಂತ್ರಿಸ್ಕ್ವೇರ್‌ ನಡುವೆ ಮಾತ್ರ ಸೇವೆ ಸ್ಥಗಿತಗೊಂಡಿದ್ದರೂ ಅದರ ಬಿಸಿ ಎಲ್ಲ ಮೆಟ್ರೋ ಪ್ರಯಾಣಿಕರಿಗೂ ತಟ್ಟಿತು. ನಾಗಸಂದ್ರದಿಂದ ಮೆಜೆಸ್ಟಿಕ್‌ಗೆ ಹೋಗುವವರು ಯಶವಂತಪುರದಲ್ಲಿ ಇಳಿದು, ಬಸ್‌ ಅಥವಾ ಆ್ಯಪ್‌ ಆಧಾರಿತ ಆಟೋ, ಕ್ಯಾಬ್‌ ಹಿಡಿದು ನಿಗದಿತ ಸ್ಥಳ ತಲುಪಿದರು. ಹತ್ತು ನಿಮಿಷದಲ್ಲಿ ತಲುಪುವ ಸ್ಥಳಕ್ಕೆ ಒಂದು ತಾಸು ಹಿಡಿಯಿತು. ಈ ಮಧ್ಯೆ ಸಕಾಲದಲ್ಲಿ ಬಸ್‌ ಅಥವಾ ಆಟೋಗಳು ಸಿಗದೆ, ಕೆಲವರಿಗೆ ಸಿಕ್ಕರೂ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಹೊರಬರುವಷ್ಟರಲ್ಲಿ ಸಾಕಾಯಿತು. ಹಾಗಾಗಿ, ನಿಗಮಕ್ಕೆ ಹಿಡಿಶಾಪ ಹಾಕುತ್ತಿರುವುದು ಕಂಡುಬಂತು. ಆರ್‌ಆರ್‌ವಿ ಅನ್ನು ಪರೀಕ್ಷಾರ್ಥ ಕಾರ್ಯಾ ಚರಣೆ ನಡೆಸುವಾಗ ವಾಹನದ ಹಿಂದಿನ ಚಕ್ರದ ಯಾಂತ್ರಿಕತೆ ವಿಫ‌ಲಗೊಂಡು ಹಳಿಯಲ್ಲಿ ಸಿಲುಕಿದೆ. ಇತರ ವಾಹನದ ನೆರವಿನಿಂದ ಸರಿಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಮಧ್ಯಾಹ್ನ ಕ್ರೇನ್‌ ಮೂಲಕ ಹಳಿಯಿಂದ ಇಡೀ ವಾಹನವನ್ನು ಮೇಲಕ್ಕೆತ್ತಿ ತೆರವುಗೊಳಿಸ ಲಾಯಿತು. ಈ ಇಡೀ ಕಾರ್ಯಾಚರಣೆ ಮುಗಿಯುವಷ್ಟರಲ್ಲಿ 3 ಗಂಟೆ ಆಗಿತ್ತು. 3.40ಕ್ಕೆ ರೈಲು ಸೇವೆಯನ್ನು ಎಂದಿನಂತೆ ಪುನಾರಂಭಗೊಳಿ ಸಲಾಗಿದೆ’ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

Advertisement

ಏನಿದು ರೋಡ್‌ ಕಂ ರೈಲ್‌ ವೇಹಿಕಲ್‌?: ಮೆಟ್ರೋ ರೈಲು ಹಳಿ ತಪ್ಪಿದಾಗ ಅಥವಾ ಯಾವುದೇ ತಾಂತ್ರಿಕ ದೋಷದಿಂದ ಮಾರ್ಗಮಧ್ಯೆ ಸ್ಥಗಿತಗೊಂಡಾಗ ಅದರ ನೆರವಿಗೆ ಧಾವಿಸುವ ವಾಹನ ರೋಡ್‌ ಕಂ ರೈಲ್‌ ವೇಹಿಕಲ್‌ (ಆರ್‌ ಆರ್‌ವಿ). ಇದರಲ್ಲಿ ಹಳಿ ತಪ್ಪಿದ ರೈಲಿನ ಚಕ್ರಗಳನ್ನು ಮರಳಿ ಹಳಿಗೆ ಎತ್ತಿಡಲು ಅಗತ್ಯವಿರುವ ಜ್ಯಾಕ್‌, ಪೂರಕ ಬೀಮ್‌ಗಳು, ರೈಲನ್ನು ಎಳೆದೊಯ್ಯಲು, ತ್ವರಿತ ರಿಪೇರಿಗೆ ಅಗತ್ಯ ಉಪಕರಣಗಳು ಇರುತ್ತವೆ. ರೈಲು ಇದ್ದಲ್ಲಿಗೇ ತೆರಳಿ ಇದನ್ನು ಕಾರ್ಯಾಚರಣೆಗೊಳಿಸಲಾಗುತ್ತದೆ. ಟಯರ್‌ಗಳು ಮತ್ತು ರೈಲಿನ ಚಕ್ರಗಳು ಎರಡನ್ನೂ ಇದು ಒಳಗೊಂಡಿರುತ್ತದೆ. ಹಳಿ ಮೇಲೆ ಇಳಿಸಿದಾಗ, ಟಯರ್‌ಗಳು ಮೇಲಕ್ಕೆ ಹೋಗುತ್ತವೆ. ಅದೇ ರೀತಿ, ರಸ್ತೆಗಿಳಿದಾಗ ಟಯರ್‌ಗಳು ಕೆಳಗೆ ಬರುತ್ತವೆ. ಈಗಾಗಲೇ ಇಂತಹ ಎರಡು ಆರ್‌ಆರ್‌ ವಿಗಳು ಪೀಣ್ಯ ಮತ್ತು ಬೈಯಪ್ಪನಹಳ್ಳಿಯಲ್ಲಿ ಇಡಲಾಗಿದೆ. ಈಚೆಗೆ ಜರ್ಮನ್‌ನಿಂದ ಹೊಸ ಆರ್‌ಆರ್‌ವಿ ಬಂದಿದ್ದು, ಇದರ ಪರೀಕ್ಷೆ ಮಂಗಳವಾರ ನಡೆದಿತ್ತು. ಸೋಮವಾರ ವಾಣಿಜ್ಯ ಸೇವೆ ಮುಗಿದ ನಂತರ ಈ ಪರೀಕ್ಷೆ ಆರಂಭವಾಗಿತ್ತು. ಬೆಳಗಿನಜಾವ 1.40ಕ್ಕೆ ಈ ವಾಹನ ಹಳಿಯಲ್ಲಿ ಸಿಲುಕಿತ್ತು ಎಂದು ನಿಗಮದ ಮೂಲಗಳು ತಿಳಿಸಿವೆ.

ಬಿಎಂಆರ್‌ಸಿಎಲ್‌ ವಿರುದ್ಧ ಆಕ್ರೋಶ: ಬಿಎಂಆರ್‌ಸಿಎಲ್‌ ಈ ಧೋರಣೆ ಹೊಸದಲ್ಲ; ತಾಂತ್ರಿಕ ದೋಷಗಳು ಅನಿರೀಕ್ಷಿತ ಇರಬಹುದು. ಆದರೆ, ಅದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ, ಬಿಎಂಟಿಸಿಯೊಂದಿಗೆ ಸಮನ್ವಯ ಸಾಧಿಸಿ, ಪ್ರಯಾಣಿಕರಿಗೆ ಸಾಧ್ಯವಾದಷ್ಟು ಸಮಸ್ಯೆ ಆಗದಂತೆ ನೋಡಿಕೊಳ್ಳಬಹುದು. ಇದಾವುದನ್ನೂ ಮಾಡುವುದಿಲ್ಲ. ಬೆಳಗ್ಗೆ 10ಕ್ಕೆ ಜಯನಗರದಲ್ಲಿ ಇರಬೇಕಿತ್ತು. ಈ ವ್ಯತ್ಯಯದಿಂದ ಒಂದು ತಾಸು ತಡವಾಗುತ್ತಿದೆ. ಏನು ಮಾಡುವುದು ಎಂದು ದಾಸರಹಳ್ಳಿ ನಿವಾಸಿ ಮೆಟ್ರೋ ಪ್ರಯಾಣಿಕ ಮನೋಜ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next