Advertisement

ನಾರ್ಕಳಿ ಸಂಪರ್ಕ ರಸ್ತೆ: ನಿತ್ಯ ಸಂಚಾರ ಸರ್ಕಸ್‌!

08:07 PM Aug 24, 2021 | Team Udayavani |

ಆಲೂರು: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹರ್ಕೂರು ಗ್ರಾಮದ ನಾರ್ಕಳಿ – ಹೋಯಿಗೇರಿ ಸಂಪರ್ಕ ರಸ್ತೆಯು ಸಂಪೂರ್ಣ ಕೆಸರುಮಯವಾಗಿದ್ದು, ಈ ಮಾರ್ಗದಲ್ಲಿ ವಾಹನ ಚಲಾಯಿಸುವುದು ಸವಾರರಿಗೆ ಒಂದು ರೀತಿಯ ಸರ್ಕಸ್‌ನಂತಾಗಿದೆ. ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ರಾಡಿಯೆದ್ದ ರಸ್ತೆಯಿಂದಾಗಿ ಪಾದಚಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ.

Advertisement

ಆಲೂರು ಗ್ರಾ.ಪಂ. ವ್ಯಾಪ್ತಿಯ ಹರ್ಕೂರು ಗ್ರಾಮದ ನಾರ್ಕಳಿ- ಹೋಯಿಗೇರಿ ರಸ್ತೆಯು ಸಂಪೂರ್ಣ ಕೆಸರುಮಯವಾಗಿದ್ದು, ವಾಹನ ಸಂಚಾರವೇ ಕಷ್ಟಕರವಾಗಿದೆ. ಈ ಮಣ್ಣಿನ  ರಸ್ತೆಯ ಅಭಿವೃದ್ಧಿಗೆ ಅನೇಕ ವರ್ಷಗಳಿಂದ ಗ್ರಾಮಸ್ಥರು ಬೇಡಿಕೆ ಇಡುತ್ತಿದ್ದರೂ, ಇನ್ನೂ ಅಭಿವೃದ್ಧಿಗೆ ಮಾತ್ರ ಕಾಲ ಕೂಡಿ ಬಂದಿಲ್ಲ.

3 ಕಿ.ಮೀ. ಮಣ್ಣಿನ ರಸ್ತೆ:

ನಾರ್ಕಳಿ, ಹೋಯಿಗೇರಿ ಇನ್ನಿತರ ಪ್ರದೇಶಗಳಿಂದ ಮುಖ್ಯ ಪೇಟೆಯಾದ ಆಲೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಈ ಭಾಗದಲ್ಲಿ ಸುಮಾರು 400ಕ್ಕೂ ಮಿಕ್ಕಿ ಮನೆಗಳಿವೆ. ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಸುಮಾರು 3 ಕಿ.ಮೀ. ಉದ್ದಕ್ಕೂ ಮಣ್ಣಿನ ರಸ್ತೆಯಾಗಿಯೇ ಇದ್ದು, ಅಲ್ಲಲ್ಲಿ ಕೆಸರುಮಯ ಆಗಿದ್ದಲ್ಲದೆ, ಕೆಲವೆಡೆ ರಸ್ತೆಯ ಮಣ್ಣು ಮಳೆಗೆ ಕೊಚ್ಚಿ ಹೋಗಿ, ಹೊಂಡ ಬಿದ್ದಿದ್ದು, ದ್ವಿಚಕ್ರ ಸವಾರರಂತೂ ಸರ್ಕಸ್‌ ಮಾಡಿಕೊಂಡೇ ಸಂಚರಿಸಬೇಕಾದ ಸ್ಥಿತಿಯಿದೆ.

ಪ್ರಮುಖ ಕೊಂಡಿ :

Advertisement

ನಾಡಿನ ಪ್ರಸಿದ್ಧ ದೇವಸ್ಥಾನವಿರುವ ಶ್ರೀ ಮಹಿಷಮರ್ದಿನಿ ದೇವರ ಸನ್ನಿಧಿಯನ್ನು ಸಂಪರ್ಕಿಸುವ  ರಸ್ತೆ ಇದಾಗಿದೆ. ಅಲ್ಲದೆ ಇಲ್ಲಿನ ರೈತರು ಅಕ್ಕಿ ಮಿಲ್‌ಗೆ ಹೋಗಬೇಕಾದರೂ ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ. ಹಕೂìರು, ನೂಜಾಡಿ – ಬ್ರಹ್ಮೇರಿ – ವಂಡ್ಸೆ, ಹಕ್ಲಾಡಿ, ಕುಂದಬಾರಂದಾಡಿಯಂತಹ ಪ್ರಮುಖ ಊರುಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯೂ ಇದಾಗಿದೆ.

ಇನ್ನಿತರ ಸಮಸ್ಯೆಗಳೇನು? :

  • ರಸ್ತೆ ಅವ್ಯವಸ್ಥೆಯಿಂದಾಗಿ ಇಲ್ಲಿನ ಗ್ರಾಮಸ್ಥರು ಪಡಿತರ ತರಲು ಅಥವಾ ಪೇಟೆಗೆ ಹೋಗಲು ಸಂಕಷ್ಟ ಅನುಭವಿಸುವಂತಾಗಿದೆ.
  • ಯಾರಿಗಾದರೂ ತುರ್ತಾಗಿ ಅನಾರೋಗ್ಯ ಉಂಟಾದರೆ ಈ ಕೆಸರುಮಯ ರಸ್ತೆಯಿಂದಾಗಿ ಸಂಚರಿಸುವುದೇ ದೊಡ್ಡ ಸಾಹಸವಾಗಿದೆ.
  • ಇನ್ನೀಗ ಶಾಲಾರಂಭವಾಗಲಿದ್ದು, ಇಲ್ಲೇ ಪಕ್ಕದಲ್ಲಿ ಶಾಲೆಯಿದ್ದು, ರಾಡಿಯೆದ್ದ ರಸ್ತೆಯಿಂದಾಗಿ ಮಕ್ಕಳು ನಡೆದುಕೊಂಡು ಹೋಗಲು ಸಹ ಸಮಸ್ಯೆಯಾಗಿದೆ.

ರಸ್ತೆ ಅಭಿವೃದ್ಧಿಯಾಗಲಿ:

ನರಕ ಸದೃಶ ಈ ರಸ್ತೆಯಿಂದಾಗಿ ಎಲ್ಲರಿಗೂ ತುಂಬಾ ಸಮಸ್ಯೆಯಾಗುತ್ತಿದೆ. ಮಕ್ಕಳ ಹಾಗೂ ವಾಹನಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ. 3-4 ಪ್ರಮುಖ ಊರುಗಳನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದರೂ, ಇನ್ನೂ ಯಾವುದೇ ಅಭಿವೃದ್ಧಿಯಾಗಿಲ್ಲ. ಪಂಚಾಯತ್‌ನವರು ಈ ಬಗ್ಗೆ  ಗಮನಹರಿಸಿಲ್ಲ. ಇನ್ನಾದರೂ ಈ ರಸ್ತೆಯ ಅಭಿವೃದ್ಧಿಯಾಗಲಿ. ಉದಯ ಶೆಟ್ಟಿ ಆಲೂರು, ಸ್ಥಳೀಯರು

4 ಲ. ರೂ. ಮಂಜೂರು:

ಈ ನಾರ್ಕಳಿ- ಹೋಯಿಗೆಯೇರಿ ರಸ್ತೆಯ ಅವ್ಯವಸ್ಥೆ ಬಗ್ಗೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಗ್ರಾಮಸಭೆಗಳಲ್ಲೂ ಈ ಬಗ್ಗೆ ಪ್ರಸ್ತಾವಿಸಲಾಗಿದೆ. ಪಂಚಾಯತ್‌ನಿಂದ ಈ ಹಿಂದೆಯೇ ಪ್ರಸ್ತಾವನೆ ಕಳುಹಿಸಿದ್ದು, ರಸ್ತೆ ಅಭಿವೃದ್ಧಿಗೆ ತಾ.ಪಂ.ನಿಂದ 4 ಲಕ್ಷ ರೂ. ಅನುದಾನ ಮಂಜೂರಾಗಿದೆ. ಮಳೆಗಾಲದ ಬಳಿಕ ಕಾಮಗಾರಿ ಆರಂಭವಾಗಬಹುದು.  – ಸುಶೀಲಾ, ಆಲೂರು ಗ್ರಾ.ಪಂ. ಪಿಡಿಒ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next