Advertisement

Hiriydaka-ಗುಡೆಯಂಗಡಿ ರಾಜ್ಯ ಹೆದ್ದಾರಿ: ತುಂಬ ಗುಂಡಿ!

03:39 PM Jul 30, 2024 | Team Udayavani |

ಹಿರಿಯಡಕ: ಉಡುಪಿ- ಬೈಲೂರು- ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಹಿರಿಯಡಕ- ಗುಡ್ಡೆಯಂಗಡಿ ನಡುವೆ ರಸ್ತೆಗಿಂತ ಗುಂಡಿಗಳೇ ಹೆಚ್ಚಾಗಿವೆ. ಹಿರಿಯಡಕದಿಂದ ಗುಡ್ಡೆಯಂಗಡಿವರೆಗೆ ಐದಾರು ಕಿಲೋಮೀಟರ್‌ ರಸ್ತೆಯಲ್ಲಿ ಬೃಹದಾಕಾರದಲ್ಲಿ ಗುಂಡಿಗಳು ಬಾಯ್ದೆರೆದುಕೊಂಡು ವಾಹನ ಸವಾರರಿಗೆ ಅಪಾಯಕಾರಿ ಯಾಗಿ ಪರಿಣಮಿಸಿದೆ.

Advertisement

ಕಾರ್ಕಳದಿಂದ ಮಣಿಪಾಲ, ಉಡುಪಿ ಕಡೆಗೆ ಮತ್ತು ಉಡುಪಿಯಿಂದ ಕಾರ್ಕಳ ಕಡೆಗೆ ದಿನ ನಿತ್ಯ ಸಾವಿರಾರು ವಾಹನಿಗರು ಈ ರಸ್ತೆಯನ್ನು ಬಳಸುತ್ತಿ ದ್ದಾರೆ. ಸಾಕಷ್ಟು ಮಂದಿ ಶಿಕ್ಷಣ, ಆರೋಗ್ಯ, ಸಂಬಂಧಿತ ಕಾರ್ಯಗಳಿಗಾಗಿ ನಿತ್ಯ ಸಂಚರಿಸುತ್ತಿರುತ್ತಾರೆ. ಅನೇಕರು ಬೆಳಗ್ಗೆ ಬಂದು ಸಂಜೆ ಹೋಗುವವರಿದ್ದಾರೆ. ಆದರೆ ಈ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿರುವುದು ಸಮಸ್ಯೆ ಸೃಷ್ಟಿಸಿದೆ.

ಇಲ್ಲಿ ಗುಂಡಿಗಳನ್ನು ತಪ್ಪಿಸಿಕೊಂಡು ಹೋಗಲು ಸವಾರರು ಹರಸಾಹಸ ಪಡುತ್ತಿದ್ದಾರೆ. ರಸ್ತೆ ಅವ್ಯವಸ್ಥೆ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಮನವಿ ಮಾಡಲಾಗಿದ್ದರೂ, ದುರಸ್ತಿ, ತೇಪೆ ಕಾರ್ಯಗಳನ್ನು ನಡೆಸಲಾಗುತ್ತಿದೆ. ವ್ಯವಸ್ಥಿತ ರಸ್ತೆ ನಿರ್ಮಾಣ ಕಾರ್ಯ ನಡೆದಿಲ್ಲ. ಕೂಡಲೇ ಗುಂಡಿಗಳನ್ನು ತಾತ್ಕಾಲಿಕ ನೆಲೆಯಲ್ಲಾದರೂ ಗುಂಡಿಗಳನ್ನು ಮುಚ್ಚಿ ಮತ್ತು ಮಳೆ ಅನಂತರ ವ್ಯವಸ್ಥಿತ ರಸ್ತೆ ನಿರ್ಮಾಣ ಮಾಡಲು ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಕ್ರಮ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಐದು ಕಿ.ಮೀ. ಯಮಯಾತನೆ

ಹಿರಿಯಡಕ ಕೋಟ್ನಕಟ್ಟೆ ಫ್ರೆಂಡ್ಸ್‌ ಸರ್ಕಲ್‌ನಿಂದ ರಸ್ತೆ ಆರಂಭಗೊಳ್ಳುತ್ತದೆ.

Advertisement

ಅಲ್ಲಿಂದ ಭಜನ ಕಟ್ಟೆ, ಮಂಜೊಟ್ಟಿ, ಕೊಂಡಾಡಿ ಶಾಲೆ, ಬೂಪಾಡಿಕಲ್ಲು, ಗುಡ್ಡೆಯಂಗಡಿವರೆಗೆ ರಸ್ತೆ ತೀರಾ ದುಃಸ್ಥಿತಿಯಲ್ಲಿದೆ.

ಗುಡ್ಡೆಯಂಗಡಿ ಕಾರ್ಕಳ ಲೋಕೋಪಯೋಗಿ ಇಲಾಖೆ ಉಪವಲಯ ವ್ಯಾಪ್ತಿಯಿಂದ ಕಾರ್ಕಳವರೆಗೆ ಹೊಸ ರಸ್ತೆ ನಿರ್ಮಾಣಗೊಂಡಿದೆ.

ಹಿರಿಯಡಕದಿಂದ ಗುಡ್ಡೆಯಂಗಡಿವರೆಗೆ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿಯೇ ಕಂಡಿಲ್ಲ.

ಹಲವು ಸವಾರರು ಬಿದ್ದಿದ್ದಾರೆ.

ಗುಂಡಿಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

ರಸ್ತೆ ದುರವಸ್ಥೆಯಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಘನ ಮತ್ತು ಲಘು ವಾಹನಗಳ ತಾಂತ್ರಿಕ ಸಮಸ್ಯೆ ಎದುರಿಸುತ್ತವೆ.

ಈ ರಸ್ತೆಯಲ್ಲಿ ಆ್ಯಂಬುಲೆನ್ಸ್‌ ಸಹ ಚಲಿಸಲು ಅಸಾಧ್ಯವಾಗಿದೆ.

ಟೆಂಡರ್‌ ಹಂತದಲ್ಲೇ ವರ್ಷಗಳು ಕಳೆದವು
ಪೇತ್ರಿ-ಹಿರಿಯಡಕ-ಗುಡ್ಡೆಯಂಗಡಿ 11ರಿಂದ 13 ಕಿ.ಮೀ. ವ್ಯಾಪ್ತಿ ಕಾರ್ಕಳ ಸಂಪರ್ಕ ರಸ್ತೆ ಅಭಿವೃದ್ಧಿಗೆ 3 ಕೋ.ರೂ. ಅನುದಾನ ಮಂಜೂರಾಗಿದೆ. ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಎಂದು ಪಿಡಬ್ಲ್ಯುಡಿ ಇಲಾಖೆ ಎರಡು ವರ್ಷಗಳ ಹಿಂದೆ ತಿಳಿಸಿತ್ತು. ಪ್ರಸ್ತುತ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ! ಹೀಗೆ ಹಲವು ವರ್ಷಗಳಿಂದ ಟೆಂಡರ್‌ ಪ್ರಕ್ರಿಯೆಯಲ್ಲೇ ಕಾಲ ಕಳೆಯು ವಂತಾಗಿದೆ!

ದುರಸ್ತಿಗೆ ಮಳೆ ಅಡ್ಡಿ
ಹಿರಿಯಡಕ-ಗುಡ್ಡೆಯಂಗಡಿ ವ್ಯಾಪ್ತಿ ದ್ವಿಪಥ ರಸ್ತೆ ಅಭಿವೃದ್ಧಿ ಕಾಮಗಾರಿ ರಾಜ್ಯ ಹೆದ್ದಾರಿ ನಿಗಮದಿಂದ ನಡೆಯಲಿದ್ದು, ಇದು ಟೆಂಡರ್‌ ಹಂತದಲ್ಲಿದೆ. ಪ್ರಸ್ತುತ ಸವಾರರಿಗೆ ಆಗುತ್ತಿರುವ ತೊಂದರೆ ಹಿನ್ನೆಲೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ರಸ್ತೆಗಳನ್ನು ಗುಂಡಿಗಳನ್ನು ಮುಚ್ಚಲು ಕ್ರಮ ತೆಗೆದುಕೊಂಡಿದ್ದೇವೆ. ಆಗಾಗ ಮಳೆಯಾಗುತ್ತಿರುವುದರಿಂದ ದುರಸ್ತಿಗೂ ಅಡ್ಡಿಯಾಗುತ್ತಿದೆ.

– ಸೋಮನಾಥ್‌, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next