Advertisement

ಬೇಯದ ಅಕ್ಕಿ ಬೆಲೆ

01:15 PM Jul 30, 2018 | Harsha Rao |

ಗಮನಿಸಿದ್ದೀರಾ? ಕಳೆದ ಎರಡು, ಮೂರು ವರ್ಷಗಳಿಂದ ಅಕ್ಕಿಯ ಬೆಲೆಯಲ್ಲಿ ಭಾರೀ ಅನ್ನುವಂಥೆ ಏರಿಕೆ ಆಗಿಲ್ಲ. ಇದರಿಂದ ಗ್ರಾಹಕ ಖುಷಿಯಾಗಿದ್ದಾನೆ. ವರ್ಷದಿಂದ ವರ್ಷಕ್ಕೆ ಭತ್ತಕ್ಕೆ ಹೆಚ್ಚು ಬೆಲೆ ಸಿಗಲಿಲ್ಲವೆಂದು ರೈತನೊಂದಿದ್ದಾನೆ. ಮಧ್ಯವರ್ತಿಗಳು ಮಾತ್ರ ಸಂತೋಷದಿಂದ ಇದ್ದಾರೆ. ನಾವೆಲ್ಲಾ ನಿತ್ಯದ ಆಹಾರಕ್ಕೆ ತಪ್ಪದೇ ಬಳಸುವ ಅಕ್ಕಿಯ ಬೆಲೆ ಮಾರುಕಟ್ಟೆಯಲ್ಲಿ ಇಂತಿಷ್ಟೇ ಇರಬೇಕೆಂದು ನಿರ್ಧರಿಸುವುದು ಯಾರು? ಬೆಲೆ ಏರಿಳಿಕೆಯಿಂದ ಯಾರಿಗೆ ಲಾಭ? ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

Advertisement

ಅಂಗಡಿಗಳಲ್ಲಿ ಅಕ್ಕಿಯ ಬೆಲೆ ಕೈ ಕಟ್ಟಿ ನಿಂತುಬಿಟ್ಟಿದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಶೇ. 3-4ರಷ್ಟು ಏರಿಕೆಯಾಗಿದ್ದರೆ ಅದೇ ಪುಣ್ಯ. ಹಾಗಾಗಿ, ಗ್ರಾಹಕ ಫ‌ುಲ್‌ ಖುಷ್‌;  ರೈತರು ಫ‌ುಲ್‌ ಠುಸ್‌; ಮಧ್ಯವರ್ತಿಗಳು ಮಾತ್ರ ದಿಲ್‌ಖುಷ್‌.  ಹೀಗಾದರೆ ಭತ್ತ ಬೆಳೆಯುವ ರೈತನ ಕತೆ ಹೇಗೆ? ಆವತ್ತಿಗೂ, ಇವತ್ತಿಗೂ ಭತ್ತ ಬೆಳೆದ ರೈತ ಹಾಗೇ ಇದ್ದಾನೆ.  ಉತ್ಪಾದನಾ ವೆಚ್ಚಕ್ಕೂ, ಮಾರುಕಟ್ಟೆಯ ಬೆಲೆಗೂ ಅಜಗಜಾಂತರ ಇದ್ದೇ ಇದೆ.  ಅಕ್ಕಿಯ ಬೆಲೆ ಗಗನಕ್ಕೆ ಏರಿದಾಗಲೂ ಇವರಿಗೆ ಹೇಳಿಕೊಳ್ಳುವಂಥ  ಲಾಭ ಆಗಲಿಲ್ಲ. ಇಳಿದಾಗ ಕೊರಗುವುದೇನೂ ಕಡಿಮೆಯಾಗಿಲ್ಲ. 

ಈಗ ನಿಸ್ತಂತು.
 2007-08ರಲ್ಲಿ ಇದೇ ಅಕ್ಕಿಯ ಬೆಲೆ ಸುಡುತಲಿತ್ತು.  2013ರಲ್ಲಿ ಬೆಲೆ ಎಂಬುದು ಕೆಂಡವಾಯಿತು. ಆ ದಿನಗಳಲ್ಲಿ ಹೆಚ್ಚಾ ಕಮ್ಮಿ ಶೇ. 40ರಷ್ಟು ಅಕ್ಕಿಯ ಬೆಲೆ ಏರಿಕೆಯಾಗಿದ್ದೂ ಇದೆ. 2014ರ ಕೊನೆಯಲ್ಲಿ ಕೆ.ಜಿ ಮೇಲೆ 4-5 ರೂ. ಬಿದ್ದು ಹೋಯಿತು. ಇವತ್ತಿಗೂ ಭತ್ತದ ಬೆಲೆ 2013ರಲ್ಲಿ ಏರಿದಂತೆಯೇ ಏರುತ್ತದೆ ಅನ್ನೋ ಆಸೆ ರೈತರ ಕಣ್ಣಲ್ಲಿ ಇನ್ನೂ ಕರಗಿಲ್ಲ. ಆ ಆಸೆ ಈಡೇರುವುದು ಕಷ್ಟವೇನೋ; ಈ ಬಾರಿ ಜೂನ್‌ನಿಂದಲೇ ಮಳೆ ಶುರುವಾಗಿದೆ. ಭತ್ತದ ಶಕ್ತಿ ಕೇಂದ್ರವಾಗಿರುವ ರಾಯಚೂರು, ದಾವಣಗೆರೆ ಸುತ್ತಮುತ್ತ ನದಿಗಳು ಉಕ್ಕಿ ಹರಿಯುತ್ತಿವೆ. ಮಂಡ್ಯ, ಮೈಸೂರಿನ ಕಡೆ ಹೇಳದೇ ಕೇಳದೆ ನಾಲೆಯಲ್ಲಿ ನೀರು ಓಡಾಡುತ್ತಿದೆ. ಹಾಸನ-ಸಕಲೇಶಪುರದಲ್ಲಿ ವರುಣ ಒಲಿದಿದ್ದಾಗಿದೆ. ಹೀಗಾಗಿ ಎಲ್ಲೆಡೆ ಭತ್ತದ ನಾಟಿಗಳು ನಡೆಯುತ್ತಿವೆ. ಈ ಬಾರಿ ವರ್ಷಕ್ಕೆ ಎರಡು ಬೆಳೆ ತೆಗೆದೇ ತೆಗೆಯುತ್ತೀವಿ ಎಂದು ರೈತಾಪಿ ಜನರು ಅನ್ನೋ ಶಪಥ  ಮಾಡಿದ್ದಾಗಿದೆ.  

ಹಾಗಾದರೆ, ಅಕ್ಕಿ ಬೆಲೆ ಕುಸಿಯುತ್ತಾ?
ಈ ಅಕ್ಕಿಯ ಬೆಲೆ ಏರಿಳಿತಕ್ಕೆ ಕಾರಣ ಯಾರು? ಎಲ್ಲಕ್ಕೂ ನಿಖರ ಉತ್ತರ ಹೇಳುವುದು ಕಷ್ಟ.  ಏಕೆಂದರೆ, ಅಕ್ಕಿಯದು ನಮ್ಮ ತೆಂಗಿಗಿದ್ದಂತೆ ಅನಿಯಂತ್ರಿತ ಮಾರುಕಟ್ಟೆ. ಬೆಲೆ ಏರಿಳಿತಕ್ಕೆ ಉತ್ಪಾದಕರೋ, ಮಾರಾಟಗಾರರೋ, ಅಕ್ಕಿ ಮಿಲ್ಲುಗಳ್ಳೋ, ಮಧ್ಯವರ್ತಿಗಳ್ಳೋ? ಯಾರು ಕಾರಣ ಅಂದರೆ ಒಬ್ಬರ ಕಡೆಗೇ ಕೈ ತೋರಲು ಆಗುವುದಿಲ್ಲ. ಅದಕ್ಕೆಲ್ಲಾ ಪಾಲಿಶ್‌x ಉತ್ತರ ಅಂದರೆ- ಅನಿಯಂತ್ರಿತ ಮಾರುಕಟ್ಟೆ. ಕರ್ನಾಟಕದಲ್ಲಿ ಹೆಚ್ಚಾ ಕಡಿಮೆ 1500ಕ್ಕೂ ಹೆಚ್ಚು ರೈಸ್‌ ಮಿಲ್‌ಗ‌ಳಿವೆ. ತುಂಗ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲೇ ಅಂದಾಜು 200ಕ್ಕೂ ಹೆಚ್ಚು ಮಿಲ್‌ ಗಳಿವೆ. ಇಡೀ ರಾಜ್ಯದ ಅಕ್ಕಿ ಮಾರುಕಟ್ಟೆ ಇವುಗಳ ಅಂಗೈಯಲ್ಲೇ ಇರುವುದು. ಇನ್ನೊಂದಷ್ಟು ಎಪಿಎಂಸಿಗಳಲ್ಲಿ. ಅಕ್ಕಿಯ ಬೆಲೆ ಏರುಪೇರಿಗೆ ಇಂಥವರೇ ಕಾರಣ ಎಂದು ಬೊಟ್ಟು ಮಾಡಿ ತೋರಿಸುವುದಕ್ಕೆ ಆಗದಷ್ಟು ಎಲ್ಲರದೂ ಇದರಲ್ಲಿ ಸಮಪಾಲು ಇದೆ. ಇದಕ್ಕೆ ಸರ್ಕಾರವೂ ಹೊರತಾಗಿಲ್ಲ. ಅಂದರೆ, ಅಕ್ಕಿ ಬೆಲೆ ಏರಿಳಿಕೆಯ ಹಿಂದೆ ಲಾಬಿಗಳು ಬೇಯುತ್ತಿವೆ. 
ಈಗಿನ ಮಳೆ ಅಬ್ಬರ ನೋಡಿದರೆ,  ಡಿಸೆಂಬರ್‌ ಹೊತ್ತಿಗೆ ಒಳ್ಳೆ ಭತ್ತದ ಬೆಳೆ ಕೈಗೆ ಸಿಗಬಹುದು. ಮಳೆ ಮುಂದುವರಿದರೆ ಬೆಳೆ ಕೈಕೊಟ್ಟು, ಸಪ್ಲೆ„ ಕಡಿಮೆಯಾಗಿ ಅಕ್ಕಿಯ ಬೆಲೆ ಏರುಪೇರಾಗಬಹುದು. 

ಜಿಎಸ್‌ಟಿ ಎಫೆಕ್ಟ್
ಅಕ್ಕಿ ಉತ್ಪಾದನೆಯಲ್ಲಿ ಕರ್ನಾಟಕಕ್ಕೆ ಆಂಧ್ರಪ್ರದೇಶ ಪ್ರತಿಸ್ಪರ್ಧಿ. ಅಲ್ಲಿ ಕೂಡ ಎಥೇತ್ಛವಾಗಿ ಭತ್ತದ  ಬೆಳೆಗಾರರಿದ್ದಾರೆ. ಅವರೆಲ್ಲಾ ರಾಯಚೂರು, ಸಿಂಧಗಿ ಮುಂತಾದ ಕಡೆಗೆ ಬಂದು ಮಾರಾಟ ಮಾಡುತ್ತಾರೆ. ಆಂಧ್ರಪ್ರದೇಶದಿಂದ ಶೇ. 25ರಷ್ಟು ಅಕ್ಕಿ ನಮ್ಮ ಮಾರುಕಟ್ಟೆ ಬರುತ್ತಿದೆ.  ಈ ಮೊದಲು ಹೀಗೆ ಮಾರಾಟ ಮಾಡಬೇಕಾದರೆ ಶೇ. 5ರಷ್ಟು ತೆರಿಗೆ ಕಟ್ಟಬೇಕಿತ್ತು.  ಜಿಎಸ್‌ಟಿ  ಜಾರಿಯಾದ ನಂತರ ತೆರಿಗೆಯ ಬರೆ ಇಲ್ಲ. ಹೀಗಾಗಿ, ಕೇವಲ ಆಂಧ್ರ ಮಾತ್ರವಲ್ಲ, ದೇಶದ ಯಾವುದೇ ಭಾಗದಿಂದ ಬೇಕಾದರೂ ಅಕ್ಕಿಯನ್ನು ತಂದು ಎಲ್ಲಿ ಬೇಕಾದರೂ ಮಾರಬಹುದು. ಹೀಗಾಗಿ ಅಕ್ಕಿಯ ಆಂತರಿಕ ಸುರಿಕೆ ಹೆಚ್ಚಾಗಿರುವುದು ಬೆಲೆಯುಬ್ಬರ ಆಗದೇ ಇರಲು ಕಾರಣ ಇರಬಹುದು. 

Advertisement

  ರಾಯಚೂರು ಸುತ್ತಮುತ್ತ ಎಚ್‌ಎಂಟಿ, ಸೋನಾ ಮಸೂರಿ, ಶ್ರೀರಾಮ ಗೋಲ್ಡ್‌,  ಐಆರ್‌ 64 ಹೀಗೆ ನಾನಾ ನಮೂನೆಯ ಅಕ್ಕಿಗಳಿವೆ. ಇಲ್ಲಿ ತುಂಗಾ ಮೇಲ್ದಂಡೆಯಿಂದ ಶೇ. 50ರಷ್ಟು, ಕೆಳದಂಡೆಯಿಂದ ಶೇ.50ರಷ್ಟು ಭತ್ತ ಸಿಗುತ್ತಿದೆ.  ಕಳೆದ ಮಾರ್ಚ್‌-ಏಪ್ರಿಲ್‌ನಿಂದ ಅಕ್ಕಿಯ ರೇಟು ಇಲ್ಲಿಯೂ ಏರಿಯೇ ಇಲ್ಲ. ಅದಕ್ಕೂ ಮೊದಲು ಟನ್‌ಗೆ 200 ರೂ. ಏರಿದ್ದರೆ ಅದೇ ಅದೃಷ್ಟ. 

  ರಾಯಚೂರಿನ ಸುತ್ತಮುತ್ತ ಮಾರುಕಟ್ಟೆಗೆ ಭತ್ತದ ಒಳಸುರಿ ಹೆಚ್ಚಿದೆ. ಹೀಗಾಗಿ, ದೊಡ್ಡ ರೈತರು ಭತ್ತವನ್ನು ಸ್ಟಾಕ್‌ ಮಾಡಿದರೂ ಬೆಲೆಯಲ್ಲಿ  ಏರಿಕೆಯಾಗುತ್ತಿಲ್ಲ. ಸ್ಟಾಕ್‌ ಮಾಡಿದ ಹಳೆ ಭತ್ತಕ್ಕೂ ಒಳ್ಳೆಯ ಬೆಲೆ ಸಿಗುತ್ತಿದೆ. ಇವತ್ತು ಮಾರುಕಟ್ಟೆಯಲ್ಲಿ ಒಂದು ವರ್ಷದ ಹಳೆ ಸೋನಾಮಸೂರಿ, 2 ವರ್ಷದ ಸೋನಾಮಸೂರಿಗೆ ಹೆಚ್ಚುಕಮ್ಮಿ 60-70ರೂ. ಬೆಲೆ ಇದೆ. ರೈತರಿಗೆ ಕೆ.ಜಿಗೆ 40ರೂನಿಂದ. 50 ರೂ. ತನಕ ಬೆಲೆ ಸಿಗುತ್ತಿದೆ. 

 “ವರ್ಷದ ಹಿಂದೆ ಮಾರಿಬಿಟ್ಟಿದ್ದರೆ ಇದೇ ಅಕ್ಕಿ ಟನ್‌ಗೆ 30-35ಸಾವಿರ ರೂ. ಸಿಗುತ್ತಿತ್ತು ಅಷ್ಟೇ.  ಅದನ್ನು ವರ್ಷ ಬಿಟ್ಟು ಮಾರಿದ್ದರಿಂದ 50ಸಾವಿರ ರೂ. ಗ್ಯಾರಂಟಿ. ಹೀಗಾಗಿ ಆರ್ಥಿಕ ಶಕ್ತಿವಂತ ರೈತರು ಇದನ್ನು ಕೋಲ್ಡ್‌ ಸ್ಟೋರೇಜ್‌ ಮಾಡಿ, ಮಾರುತ್ತಾರೆ. ಇದರ ಜೊತೆಗೆ ಭತ್ತವನ್ನು ಸರ್ಕಾರಿ ಗೋಡೌನ್‌ಗಳಲ್ಲಿ ಇಟ್ಟು, ಮಾರುಕಟ್ಟೆ ಮೊತ್ತದ ಮೇಲೆ ಬ್ಯಾಂಕುಗಳಿಂದ ಶೇ.60-70ರಷ್ಟು ಸಾಲ ಪಡೆಯುವ ರೈತರ ಐಡಿಯಾ ಕೂಡ ಇಲ್ಲಿ ಫ‌ಲಿಸಿದೆ. ಒಂದು ವರ್ಷಕಾದರೆ ಶೇ. 30-40ರಷ್ಟು ಬೆಲೆ ಏರುವುದರಿಂದ ಶೇ. 9ರಷ್ಟು ಬ್ಯಾಂಕ್‌ ಬಡ್ಡಿ ಏನೂ ಹೊರೆಯಲ್ಲ ಎನ್ನುತ್ತಾರೆ ರಾಯಚೂರು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಮರಂತಿಪ್ಪಣ್ಣ. 

ಆಹಾರ ತಜ್ಞ ಡಾ. ರಘು ಹೀಗೊಂದು ಕಾರಣ ಕೊಡುತ್ತಾರೆ-  ಈ ಹಿಂದೆ ನಮ್ಮಲ್ಲಿ ಒಬ್ಬ ವ್ಯಕ್ತಿ, ದಿನಕ್ಕೆ 540ಗ್ರಾಂ. ಅಕ್ಕಿ ತಿನ್ನುತ್ತಿದ್ದ.  ಈಗ ಅದು 420ಗ್ರಾಂ.ಗೆ ಇಳಿದಿದೆ. ಅಂದರೆ ನಾವು ಅಕ್ಕಿಯನ್ನು ಬಳಸುವುದನ್ನೇ ಕಡಿಮೆ ಮಾಡುತ್ತಿದ್ದೇವೆ. ಇದಕ್ಕೆ ಕಾರಣ ಡಯಟ್‌. ಇದು ದೊಡ್ಡ ಕ್ರಾಂತಿಯನ್ನು ಮಾಡಿದೆ. ಅಕ್ಕಿಯ ಬಳಕೆ ಕಡಿಮೆಯಾದ್ದರಿಂದ ಬೆಲೆಯೂ ಇಳಿದಿರಬಹುದು ಎನ್ನುತ್ತಾರೆ ಅವರು. 

 ಬೆಲೆ ಯಾರು ನಿಗದಿ ಮಾಡ್ತಾರೆ?
 ನಮ್ಮಲ್ಲಿ ವರ್ಷಕ್ಕೆ 2ಮಿಲಿಯನ್‌ ಟನ್‌ ಅಕ್ಕಿ ಉತ್ಪಾದನೆ ಆಗುತ್ತಿದೆ. ಇದರಲ್ಲಿ ಶೇ. 5ರಷ್ಟು ಮಾತ್ರ ದೇಸಿ ಅಕ್ಕಿಯ ಉತ್ಪಾದನೆ. ಇವತ್ತು ಮಾರುಕಟ್ಟೆಯಲ್ಲಿ ಹೆಚ್ಚಾಕಮ್ಮಿ 20ಕ್ಕೂ ಹೆಚ್ಚು ವಿಧದ ದೇಸಿ ಅಕ್ಕಿಗಳಿವೆ. ಆದರೆ ರಾಜಮುಡಿ, ರತ್ನಚೂಡಿ,  ಕಪ್ಪು ಅಕ್ಕಿ, ಕೆಂಪು ಅಕ್ಕಿ, ನವರ, ಹೆಚ್‌ಎಂಟಿ…ಇವು ಜನಪ್ರಿಯ ತಳಿಯ ಅಕ್ಕಿಗಳು. ನಮ್ಮಲ್ಲಿ  ರಾಜಮುಡಿಯನ್ನು, ಹಾಸನ, ಹೊಳೆನರಸೀಪುರ, ಪಿರಿಯಾಪಟ್ಟಣ, ಕೆಂಪು ಅಕ್ಕಿಯನ್ನು ಸಾಗರ, ಶಿವಮೊಗ್ಗದಲ್ಲಿ,  ಕಪ್ಪು ಅಕ್ಕಿ- ಕೆ.ಆರ್‌ಪೇಟೆ ಹಾಸನ.  ನವರ ಉತ್ತರ ಕರ್ನಾಟಕದಲ್ಲಿ ಬೆಳೆಯುತ್ತಿದ್ದಾರೆ. ಹಾಗೆ ನೋಡಿದರೆ, ರೈತರಿಗೆ ದೇಸಿ ಅಕ್ಕಿಯಿಂದ ಲಾಭ ಹೆಚ್ಚು ಅನ್ನೋ ಮಾತೂ ಇದೆ. ಇದು ಹೇಗೆ? ಅಂದರೆ, ” ರೈತರು ಎಷ್ಟು ಚೀಲ ಬೆಳೆದಿದ್ದೀವಿ ಅನ್ನೋದು ಮುಖ್ಯ ಅಲ್ಲ, ಎಷ್ಟು ಖರ್ಚು ಮಾಡಿ, ಎಷ್ಟು ಲಾಭ ಮಾಡಿದ್ದೀವಿ ಅನ್ನೋದನ್ನು ನೋಡಬೇಕು. ರಾಸಾಯನಿಕ ಹಾಕಿ 10 ಚೀಲ ಭತ್ತ ತೆಗೆದು ಐದು ಸಾವಿರ ಕಳೆದುಕೊಳ್ಳುವುದಕ್ಕಿಂತ, ಸಾವಯವದಲ್ಲಿ 7 ಚೀಲ ಭತ್ತವನ್ನು ಮಾರಿ ನಾಲ್ಕು ಸಾವಿರ ಲಾಭ ಮಾಡುವುದು ಸರಿಯಾದ ದಾರಿ ಅನಿಸುತ್ತದೆ ಎನ್ನುತ್ತಾರೆ ಸಹಜ ಆರ್ಗಾÂನಿಕ್ಸ್‌ ಸೋಮೇಶ್‌. 

ಓಪನ್‌ ಮಾರ್ಕೆಟ್‌ ಇಲ್ಲ
  ಸಾವಯವ ಅಕ್ಕಿಗೆ ಓಪನ್‌ ಮಾರ್ಕೆಟ್‌ ಇಲ್ಲ. ಹೀಗಾಗಿ, ಇಂತಿಷ್ಟೇ ಬೆಲೆ ಅಂತ, ಇವರೇ ನಿಗದಿ ಮಾಡುತ್ತಾರೆ ಅಂತ ಹೇಳಲೂ ಬರುವುದಿಲ್ಲ. ಹಾಸನದ ಅಕ್ಕಿ ಮಿಲ್‌ನಲ್ಲಿ ರಾಜಮುಡಿ ಕಡಿಮೆ ಬಂದರೆ ಉತ್ಪಾದನೆ ಕಡಿಮೆ ಆಗಿದೆ ಅಂತ ಬೆಲೆ ಏರಬಹುದು. ಇದನ್ನು ಮಿಲ್‌ನವರೇ ಏರಿಸಬಹುದು ಅಥವಾ ಅಕ್ಕಿಯನ್ನು ಕೊಳ್ಳುವಾಗ ಡೀಲರೇÅ ಏರಿಸಬಹುದು. ಒಟ್ಟಾರೆ, ಗ್ರಾಹಕರ ತಟ್ಟೆಯಲ್ಲಿ ಅನ್ನ ಆಗುವ ಹೊತ್ತಿಗೆ ಬೆಲೆ ಏರಿರುತ್ತದೆ.   ಕಳೆದ ಒಂದು ವರ್ಷದಿಂದ ಸಾವಯವ ಅಕ್ಕಿಯ ಬೆಲೆಯೂ ಕೂಡ ಕಂಡಾಪಟ್ಟೆ ಏರಿಲ್ಲ. 

 ಇಲ್ಲಿ ಆಗಿರುವ ಸಮಸ್ಯೆ ಏನೆಂದರೆ, ಪ್ರತಿ ವರ್ಷ ಸಾವಯವ ಭತ್ತ ಬೆಳೆಯುವ ರೈತರ ಸಂಖ್ಯೆ ಶೇ. 4-5ರಷ್ಟು ಏರುತ್ತಿದ್ದರೆ, ಅದನ್ನು ಮಾರಾಟ ಮಾಡುವವರು ಶೇ. 50ರಷ್ಟು ಹೆಚ್ಚಾಗಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಯಾವುದು ಸಾವಯವ, ಯಾವುದು ಸಾವಯವ ಅಲ್ಲ ಅನ್ನೋದು ತಿಳಿಯದೆ ಗ್ರಾಹಕರು ಕಕ್ಕಾಬಿಕ್ಕಿಯಾಗಿದ್ದಾರೆ. 

 ಉದಾಹರಣೆಗೆ- ಶಿರಸಿ, ಸಾಗರದ ಕಡೆಯಿಂದ ಅಕ್ಕಿಯನ್ನು 25ರೂ.ಗೆ ಕೊಂಡು, ಬೆಂಗಳೂರಲ್ಲಿ ಅದನ್ನು 40ರೂಗೆ ಮಾರುವವರೂ ಇದ್ದಾರೆ.  ಸಾಗಾಣಿಕೆ ಖರ್ಚು ಎಲ್ಲ ತೆಗೆದರೆ ಕೆ.ಜಿಗೆ 3ರೂ. ಆಗಬಹುದು. ಉಳಿದ 12ರೂ. ನಿವ್ವಳ ಲಾಭ. ಅಂದರೆ, ತಿಂಗಳಾನುಗಟ್ಟಲೆ ಬೆಳೆಯುವ ರೈತನಿಗೆ ಕೆ.ಜಿ ಅಕ್ಕಿಗೆ 12ರೂ. ಲಾಭ ಸಿಗುತ್ತದೆಯೇ ಅನ್ನೋದು ಇನ್ನೂ ಯಕ್ಷ ಪ್ರಶ್ನೆಯೇ ಆಗಿದೆ.   ರಾಸಾಯನಿಕ ಸಿಂಪಡಿಸಿ ಬೆಳೆಯುವ ರೈತನ ಪಾಡು ಭಿನ್ನವಾಗೇನೂ ಇಲ್ಲ. ರಾಯಚೂರು ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಬೆಲೆ ಕ್ವಿಂಟಾಲ್‌ಗೆ ಮೂರು ಸಾವಿರ ಇದ್ದರೆ, ಬೆಂಗಳೂರಲ್ಲಿ ಅದು 4, 500ರೂ. ಆಗಿರುತ್ತದೆ.  ಅಂದರೆ ಕೆ.ಜಿ ಅಕ್ಕಿಯ ಮೇಲೆ ಸುಮಾರು 15ರೂ. ಮಾರ್ಜಿನ್‌ ಸಿಕ್ಕಹಾಗಾಯಿತು. 

ಹೀಗೆ, ಅಕ್ಕಿಯ ಬೆಲೆಯನ್ನು ಇಂಥವರೇ ನಿಗದಿ ಮಾಡುತ್ತಾರೆ ಅಂತ ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ಒಂದು ಸತ್ಯ ಏನೆಂದರೆ, ಮಿಲ್ಲುಗಳಿಗೆ ಬರುವ ಭತ್ತದ ಪ್ರಮಾಣ, ಬರ, ಸರ್ಕಾರ ಘೋಷಿಸುವ ಬೆಂಬಲ ಬೆಲೆ ಇವೆಲ್ಲವೂ ಪರೋಕ್ಷವಾಗಿ ಅಕ್ಕಿ ಬೆಲೆಯ ಸೂತ್ರವನ್ನು ಹಿಡಿದುಕೊಂಡಿದೆ.

ಲೆವಿ ಹೀಗೆ
ಮಿಲ್‌ಗ‌ಳು ಲೆವಿ ಅಕ್ಕಿ ಕೊಡಬೇಕು. ಲೆವಿ ಅಂದರೆ ಪಡಿತರ ಕೊಡುವ ಅಕ್ಕಿ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಇದಕ್ಕಾಗಿಯೇ ಫ‌ಂಡ್‌ ಕೊಡುತ್ತದೆ. ಇದರ ಆಧಾರದ ಮೇಲೆ ರಾಜ್ಯ ಸರ್ಕಾರ ಯಾವ್ಯಾವ ಜಿಲ್ಲೆಗೆ ಎಷ್ಟೆಷ್ಟು ಕೊಡಬೇಕು  ಎಂದು ಆದೇಶ ಮಾಡುತ್ತದೆ. ಕಳೆದ ಸಾರಿ ದಾವಣಗೆರೆ ಜಿಲ್ಲೆಗೆ ಸುಮಾರು 45ಸಾವಿರ ಮೆಟ್ರಿಕ್‌ ಟನ್‌ ಇತ್ತು. ಲೆವಿ ನಿಗಧಿ ಮಾಡುವುದು ಒಂದು ವರ್ಷ ದಲ್ಲಿ ಒಟ್ಟಾರೆ ಅಕ್ಕಿ ಅರೆಯುವ 33.33ಶೇ. ಅಥವಾ ಕರೆಂಟ್‌ ಬಿಲ್‌ ಆಧಾರದ ಮೇಲೆ ಯಾವುದು ಜಾಸ್ತಿ ಇರುತ್ತೋ ಅದರ  ಆಧಾರದ ಮೇಲೆ ಲೇವಿ ಅಕ್ಕಿ ಕೊಡಬೇಕು. ಉಳಿದದ್ದನ್ನು ಓಪನ್‌ ಮಾರ್ಕೆಟ್‌ ಮಾರುತ್ತಾರೆ.

ಅರೆಯೋ ಲೆಕ್ಕ
ಒಂದು ಮಿಲ್‌ಗೆ 3 ಸಾವಿರ ಕ್ವಿಂಟಾಲ್‌ ಅಕ್ಕಿ ಮತ್ತು ಭತ್ತ ಸ್ಟಾಕ್‌ ಮಾಡುವ ಅವಕಾಶವಿದೆ. ಸಟಾಕಿ ಮಿಷನ್‌ನಲ್ಲಿ ಒಂದು ಗಂಟೆಗೆ 75 ಕೆ.ಜಿ ತೂಕದ 130 ಚೀಲದ ಭತ್ತ ಅರೆಯಬಹುದು. ಈ ರೀತಿ ಅರೆದರೆ 58 ಕೆ.ಜಿ ವರೆಗೂ ಒಳ್ಳೆ ಅಕ್ಕಿ ಸಿಗುತ್ತದೆ. ಶೇ. 10-12ರಷ್ಟು ಎಣ್ಣೆ ತೆಗೆಯಲು ಪಾಲೀಷ್‌ ತವಡು ಸಿಗುತ್ತದೆ. ನಂತರ ಶೇ. 3-4ರಷ್ಟು ಕೋಳಿಗೆ ಹಾಕುವ ಮುಗಳಕ್ಕಿ , ಶೇ. 10ರಷ್ಟು ನುಚ್ಚು ಅಕ್ಕಿ ಸಿಗುತ್ತದೆ. ನವೆಂಬರ್‌ ಡಿಸೆಂಬರ್‌ ನಿಂದ ಭತ್ತ ಅರೆಯುವ ಕಾರ್ಯಕ್ರಮ ಶುರು.

ನಾವೇ ನಂ.1
  ಭಾರತ ವರ್ಷಕ್ಕೆ ನಮ್ಮ ದೇಶ 280ಮಿಲಿಯನ್‌ ಆಹಾರ ಪದಾರ್ಥಗಳ ಉತ್ಪಾದನೆ ಮಾಡುತ್ತಿದೆ. ಇದರಲ್ಲಿ 100 ಮಿಲಿಯನ್‌ ಟನ್‌ ಅಕ್ಕಿ, ನೂರು ಮಿಲಿಯನ್‌ ಟನ್‌ ಗೋಧಿ ಸೇರಿದೆ.  ಮೂರು ನಾಲ್ಕು ವರ್ಷಗಳ ಹಿಂದೆ ಥೈಲಾಂಡ್‌, ಪ್ರಪಂಚದ ನಂ. 1 ಅಕ್ಕಿ ರಫ್ತು ಮಾಡುವ ದೇಶವಾಗಿತ್ತು. ಈಗ ಭಾರತ ಆ ಸ್ಥಾನದಲ್ಲಿ ನಿಂತಿದೆ. ಕರ್ನಾಟಕದಲ್ಲಿ ಆಹಾರ ಉತ್ಪಾದನೆ 12 ಮಿಲಿಯನ್‌ ಟನ್‌ ಇದೆ. ಈ ಭಾರಿ 13 ಮಿಲಿಯನ್‌ ಟನ್‌ ಆಗಬಹುದು. ಇದರಲ್ಲಿ ಭತ್ತ 3.5 ಮಿಲಿಯನ್‌ ಟನ್‌. ಇದರಲ್ಲಿ ಶೇ.60ರಷ್ಟು ಅಂದರೆ 210 ಮಿಲಿಯನ್‌ ಟನ್‌ ಅಕ್ಕಿ ಉತ್ಪಾದನೆ ಆಗುತ್ತಿದೆ. ಆದರೆ 2012-13ಕ್ಕೆ ಹೋಲಿಸಿದರೆ ಉತ್ಪಾದನೆಯಲ್ಲಿ ಬಹಳಷ್ಟು ಸುಧಾರಿಸಿದ್ದೇವೆ. 

– ಕಟ್ಟೆ ಗುರುರಾಜ್

Advertisement

Udayavani is now on Telegram. Click here to join our channel and stay updated with the latest news.

Next