ಮುದ್ದೇಬಿಹಾಳ: ಮೆಡಿಕಲ್ಗೆ ಅರ್ಹತೆಗಳಿಸಿಕೊಡುವ ನೀಟ್ ಪರೀಕ್ಷೆ ಫಲಿತಾಂಶದಲ್ಲಿ ಆಕ್ಸ್ಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರ, ರಾಜ್ಯಮಟ್ಟದ ರ್ಯಾಂಕ್ ಗಳಿಸುವ ವಿಶ್ವಾಸ ಇದೆ ಎಂದು ಶ್ರೀ ದತ್ತಾತ್ರೇಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು.
ತಾಲೂಕಿನ ನಾಗರಬೆಟ್ಟದ ಗುಡ್ಡದ ಪಕ್ಕದಲ್ಲಿರುವ ಆಕ್ಸ್ಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಪಿಯುಸಿ, ನೀಟ್ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದಕ್ಕೆ ನಮ್ಮ ಭಾಗದ ಗ್ರಾಮೀಣ ವಿದ್ಯಾರ್ಥಿಗಳು ಮೆಡಿಕಲ್, ಎಂಜಿನಿಯರಿಂಗ್ ಪದವಿಯಲ್ಲಿ ರ್ಯಾಂಕ್ ಗಳಿಸಿಕೊಳ್ಳುವ ಸಾಮರ್ಥ್ಯ ಹೊಂದಿತ್ತಿರುವುದು ಉತ್ತಮ ಬೆಳವಣಿಗೆ. ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ ಎಂದರು. ಬಿದರಕುಂದಿ ಆರ್ಎಂಎಸ್ಎ ಶಾಲೆ ಶಿಕ್ಷಕ ಬಸವರಾಜ ಹಂಚಲಿ ಮಾತನಾಡಿ, ನಾಗರಬೆಟ್ಟದ ಆಕ್ಸ್ಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜು ಉ.ಕ ಭಾಗದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೆಮ್ಮೆರವಾಗಿ ಬೆಳೆಯುತ್ತಿರುವುದು ಶ್ಲಾಘನೀಯ ಎಂದರು.
ಫೌಂಡೇಶನ್ ಫಾರ್ ಎಕ್ಸಲೆನ್ಸ್ ಸಂಚಾಲಕ ಸಂಗಮೇಶ ಹೂಗಾರ, ಎಂಜಿವಿಸಿ ಕಾಲೇಜಿನ ಉಪನ್ಯಾಸಕ ಡಾ| ಪ್ರಕಾಶ ನರಗುಂದ ಮಾತನಾಡಿ, ಅನಿವಾಸಿ ಭಾರತೀಯರು ಅತ್ಯಂತ ಕಡು ಬಡತನದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಶೈಕ್ಷಣಿಕವಾಗಿ ಆರ್ಥಿಕ ನೆರವು ಒದಗಿಸುವ ಕಾರ್ಯ ಮಾಡುತ್ತಿದ್ದಾರೆ. ಇವರಿಂದ ನೆರವು ಪಡೆದುಕೊಳ್ಳುವ ವಿದ್ಯಾರ್ಥಿಗಳು ಬಡವರಿಗೆ ತಮ್ಮ ಸೇವೆ ಮುಡಿಪಾಗಿಡಬೇಕು ಎಂದರು.
ಇದೇ ಸಂದರ್ಭದಲ್ಲಿ ನೀಟ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಹಾಗೂ ಪ್ರಸಕ್ತ ಸಾಲಿನ ಪಿಯುಸಿಯಲ್ಲಿ ಶೇ.90ಕ್ಕೂ ಅ ಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ವೇಳೆ ಗುತ್ತಿಗೆದಾರ ಸಿದ್ದಣ್ಣ ಆಲಕೊಪ್ಪರ, ಸಂಸ್ಥೆ ನಿರ್ದೇಶಕ ಅಮಿತಗೌಡ ಪಾಟೀಲ, ಉಪನ್ಯಾಸಕ ಇಸ್ಮಾಯಿಲ್ ಮನಿಯಾರ, ಸಂಗಯ್ಯ ಸಿಂಧಗಿಮಠ, ಮುತ್ತು ಹಾಲಣ್ಣವರ, ಮಹಾಂತೇಶ ಬಿರಾದಾರ, ರಾಜಶೇಖರ ಹಿರೇಮಠ, ಹಣಮಂತ ಗುರಿಕಾರ ಇತರರು ಇದ್ದರು.
ಪಿ.ಎಸ್. ಹೂಗಾರ ಸ್ವಾಗತಿಸಿದರು. ಗುರುರಾಜ ಕನ್ನೂರ ನಿರೂಪಿಸಿದರು. ಪ್ರಾಂಶುಪಾಲ ರೇವಣಸಿದ್ದಪ್ಪ ಚಲವಾದಿ ಮುರಾಳ ವಂದಿಸಿದರು.