Advertisement

“ಏಪ್ರಿಲ್‌’ಗೆ ಮರುಜೀವ

12:43 PM Oct 04, 2019 | Lakshmi GovindaRaju |

ನಟಿ ರಚಿತಾರಾಮ್‌ ಅವರು ಈ ಹಿಂದೆ “ಏಪ್ರಿಲ್‌’ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದರು. ಆ ಚಿತ್ರಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಸಲಾಗಿತ್ತು. ಎಲ್ಲೆಡೆ ಆ ಚಿತ್ರದ ಕುರಿತು ಸುದ್ದಿಯೂ ಆಗಿತ್ತು. ಕಾಲಕ್ರಮೇಣ ಆ ಚಿತ್ರದ ಸುದ್ದಿ ತಟಸ್ಥವಾಗಿ, ಹಲವು ಕಾರಣಗಳಿಂದ ಚಿತ್ರ ಸೆಟ್ಟೇರಲಿಲ್ಲ. ಹಾಗಾಗಿ, ರಚಿತಾರಾಮ್‌ ಅವರು ಚಿತ್ರ ಸೆಟ್ಟೇರುವ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ “ಏಪ್ರಿಲ್‌’ ಚಿತ್ರದಿಂದ ಹೊರಬಂದಿರುವುದಾಗಿ ಹೇಳಿಕೆ ಕೊಟ್ಟಿದ್ದರು.

Advertisement

ಈಗ ಹೊಸ ವಿಷಯವೆಂದರೆ, ನಿಂತೇ ಹೋಗಿದ್ದ, ಇನ್ನು ಮುಂದೆ ಶುರುವಾಗುವುದೇ ಇಲ್ಲ ಅಂದುಕೊಂಡಿದ್ದ “ಏಪ್ರಿಲ್‌’ ಚಿತ್ರಕ್ಕೆ ಮತ್ತೆ ಜೀವ ಬಂದಿದೆ. ಹೌದು, ಡೇಟ್‌ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದಾಗಿ ನಾನು ಅಭಿನಯಿಸುವುದಿಲ್ಲ ಎಂದು ರಚಿತಾರಾಮ್‌ ಹೇಳಿದ್ದರು. ಆದರೆ, ಈಗ “ಏಪ್ರಿಲ್‌’ ಚಿತ್ರ ಪುನಃ ಶುರುವಾಗುವ ಸೂಚನೆ ಕೊಟ್ಟಿದೆ. ಆದರೆ, ಒಂದಷ್ಟು ಬದಲಾವಣೆಗಳೊಂದಿಗೆ ಚಿತ್ರ ಸೆಟ್ಟೇರಲಿದೆ. “ಏಪ್ರಿಲ್‌’ ಮಹಿಳಾ ಪ್ರಧಾನ ಚಿತ್ರ ಎಂದು ಹೇಳಲಾಗಿತ್ತು.

ಕಥೆ, ಚಿತ್ರಕಥೆ ಹಾಗು ನಿರೂಪಣೆ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಮಾಡಿಕೊಂಡ ಚಿತ್ರತಂಡ, ಈಗ ಚಿತ್ರಕ್ಕೆ ಚಿರಂಜೀವಿ ಸರ್ಜಾ ಅವರನ್ನು ನಾಯಕರನ್ನಾಗಿಸಿದೆ. ಇದು ಚಿತ್ರದ ಹೊಸ ಸುದ್ದಿ. ಇನ್ನು, “ಏಪ್ರಿಲ್‌’ ಚಿತ್ರ ಕಮರ್ಷಿಯಲ್‌ ಆಗಿದ್ದರೂ, ಹೊಡಿ, ಬಡಿ, ಕಡಿ ಅಂಶಗಳಿಂದ ದೂರ. ಇದೊಂದು ಥ್ರಿಲ್ಲರ್‌ ಎನಿಸುವ ವಿಷಯಗಳೊಂದಿಗೆ ಶುರುವಾಗಲಿದೆ. ಚಿತ್ರವನ್ನು ಸತ್ಯರಾಯಲ್‌ ನಿರ್ದೇಶನ ಮಾಡುತ್ತಿದ್ದಾರೆ. “8ಎಂಎಂ’ ಚಿತ್ರ ನಿರ್ಮಾಪಕರೇ “ಏಪ್ರಿಲ್‌’ ಚಿತ್ರವನ್ನೂ ನಿರ್ಮಾಣ ಮಾಡಲಿದ್ದಾರೆ.

ಇನ್ನು, ಚಿತ್ರಕ್ಕೆ ಸಚಿನ್‌ ಬಸ್ರೂರು ಸಂಗೀತವಿದೆ. ಅರ್ಜುನ್‌ ಶೆಟ್ಟಿ ಛಾಯಾಗ್ರಹಣ ಮಾಡಲಿದ್ದಾರೆ. ಪ್ರತೀಕ್‌ ಶೆಟ್ಟಿ ಸಂಕಲನವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ನಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಸದ್ಯಕ್ಕೆ ಚಿರಂಜೀವಿ ಸರ್ಜಾ ಒಂದಷ್ಟು ಚಿತ್ರಗಳಲ್ಲಿ ಬಿಝಿ. ಅತ್ತ, ರಚಿತಾರಾಮ್‌ ಕೂಡ ಚಿತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ. ಈ ನಡುವೆ, ರಚಿತಾ ಪುನಃ “ಏಪ್ರಿಲ್‌’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂಬುದೇ ಹೊಸ ಬದಲಾವಣೆಯ ಸುದ್ದಿ.

Advertisement

Udayavani is now on Telegram. Click here to join our channel and stay updated with the latest news.

Next