Advertisement

ರೋಜಿಪುರದ ಕಲ್ಯಾಣಿಗೆ ಮರುಜೀವದ ವಿಶ್ವಾಸ

10:02 PM Jun 23, 2019 | Team Udayavani |

ದೊಡ್ಡಬಳ್ಳಾಪುರ: ನಗರದ ಕೋರ್ಟ್‌ ಸಮೀಪದ ರೋಜಿಪುರದಲ್ಲಿರುವ ನೂರಾರು ವರ್ಷಗಳ ಇತಿಹಾಸವಿರುವ ಕಲ್ಯಾಣಿಯನ್ನು ಜಿಲ್ಲಾಧಿಕಾರಿ ಸಿ.ಎಸ್‌. ಕರಿಗೌಡ ಮತ್ತು ಉಪವಿಭಾಗಾಧಿಕಾರಿ ಸಿ.ಮಂಜುನಾಥ್‌ ನೇತೃತ್ವದಲ್ಲಿ 150ಕ್ಕೆ ಹೆಚ್ಚು ಜನರು, ಅಧಿಕಾರಿಗಳು ಸೇರಿ ಸ್ವಚ್ಛಗೊಳಿಸಿದರು.

Advertisement

ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗದ ಭಯ: ಕಲ್ಯಾಣಿ ದಶಕಗಳಿಂದ ಬಳಕೆಯಾಗದೆ ಹೂಳು ತುಂಬಿ, ಗಿಡಗಂಟಿ, ಪೊದೆಗಳು ಬೆಳೆದಿದ್ದವು. ಅಲ್ಲದೆ ಕಲ್ಯಾಣಿಯಲ್ಲಿದ್ದ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭಯ ಮೂಡಿತ್ತು. ಅಲ್ಲದೆ ವಿಷಕಾರಿ ಹಾವುಗಳ ಆವಾಸ ಸ್ಥಾನವಾಗಿದ್ದರಿಂದ ಜನರಲ್ಲಿ ಸಂಚರಿಸಲು ನಿವಾಸಿಗಳಿಗೆ ಭಯವಾಗುತ್ತಿತ್ತು. ಹೀಗಾಗಿ ಅಲ್ಲಿನ ನಿವಾಸಿಗಳು ಮತ್ತು ಪರಿಸರಾಸಕ್ತರು ಸೇರಿ ಕಲ್ಯಾಣಿಯನ್ನು ಶ್ರಮದಾನದಿಂದ ಸ್ವಚ್ಛಗೊಳಿಸಿದರು.

ಸೂಕ್ತ ನಿರ್ವಹಣೆಯಿಲ್ಲದೆ ಪಾಳು: ಹಿಂದಿನ ಕಾಲದಲ್ಲಿ ಈ ಕಲ್ಯಾಣಿ ರೋಜಿಪುರದ ಎಲ್ಲಾ ನಿವಾಸಿಗಳ ದಿನ ಬಳಕೆ ಹಾಗೂ ದನಕರುಗಳಿಗೆ ಕುಡಿಯಲು ನೀರು ಒದಗಿಸುತ್ತಿತ್ತು. ಆದರೆ ನಗರ ಬೆಳೆದಂತೆ ಕಟ್ಟಡ ತ್ಯಾಜ್ಯ ಮತ್ತು ಕೊಳಕು ನೀರಿನಿಂದ ತುಂಬಿ ದುರ್ನಾತ ಬೀರುತ್ತಿತ್ತು. ಅಲ್ಲದೆ ಸುಂದರವಾದ ಕಲ್ಲು ಕಟ್ಟಡ ಹೊಂದಿದ್ದ ಕಲ್ಯಾಣಿ, ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬಿದ್ದಿತ್ತು. ಜನರು ತಮ್ಮ ಕಟ್ಟಡಗಳ ತ್ಯಾಜ್ಯವನ್ನು ಸುರಿಯುತ್ತಿದ್ದರು. ಹೀಗಾಗಿ ಪುರಸಭೆ ಕಲ್ಯಾಣಿ ಸುತ್ತಲೂ ತಂತಿ ಬೇಲಿ ಹಾಕಿದ್ದರೂ ವ್ಯರ್ಥವಾಗಿತ್ತು.

ಪರಿಸರ ಸಮ್ಮೇಳನದಲ್ಲಿ ಮನವಿ: ನಗರದಲ್ಲಿ ಇತ್ತೀಚೆಗಷ್ಟೇ ನಡೆದ ಪರಿಸರ ಸಮ್ಮೇಳನದಲ್ಲಿ ಕೋರ್ಟ್‌ ಸಮೀಪದ ಕಲ್ಯಾಣಿ ಸೇರಿದಂತೆ ನಗರದಲ್ಲಿನ ಐತಿಹಾಸಿಕ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲು ಸಮಾನ ಮನಸ್ಕರು ಒಂದೆಡೆ ಸೇರಬೇಕು ಎಂದು ಸ್ಥಳೀಯ ನಿವಾಸಿ ಕೆ. ಸುಲೋಚನಮ್ಮ, ವಕೀಲ ಲೋಕೇಶ್‌ಮನವಿ ಮಾಡಿದ್ದರು.

ಅಧಿಕಾರಿಗಳು, ಪರಿಸರಾಸಕ್ತರ ಸ್ಪಂದನೆ: ಸ್ಥಳೀಯರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಿ.ಎಸ್‌. ಕರೀಗೌಡ, ಉಪವಿಭಾಗಾಧಿಕಾರಿ ಸಿ. ಮಂಜುನಾಥ್‌ 4ನೇ ಶನಿವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಕಲ್ಯಾಣಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದರು. ಶ್ರಮದಾನದ ನಂತರ ಕಲ್ಯಾಣಿ ಸಮೀಪದಲ್ಲೇ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕರೀಗೌಡ,

Advertisement

ಒಂದು ಸಾವಿರ ಅಡಿಗಳಷ್ಟು ಆಳದವರೆಗೆ ಕೊಳವೆ ಬಾವಿ ಕೊರೆದರೂ ಸಹ ನೀರು ದೊರೆಯುವುದೇ ಕಷ್ಟ. ಆದರೆ ಇಲ್ಲಿನ ಕಲ್ಯಾಣಿಯಲ್ಲಿ ಸುಮಾರು 20 ಅಡಿಗಳ ಆಳದಲ್ಲಿಯೇ ನೀರು ಕಾಣಿಸುತ್ತಿವೆ. ಇಂತಹ ಮಹತ್ವದ ಐತಿಹಾಸಿಕ ಕಲ್ಯಾಣಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಹೊಣೆಗಾರಿಕೆ ನಗರಸಭೆ ಪೌರಕಾರ್ಮಿಕರದಷ್ಟೇ ಅಲ್ಲ. ಸ್ಥಳೀಯ ನಿವಾಸಿಗಳ ಪಾತ್ರ ದೊಡ್ಡದು ಎಂದರು.

ಸ್ಥಳೀಯ ಸಹಕಾರ ಮುಖ್ಯ: ಕಲ್ಯಾಣಿಯಲ್ಲಿನ ಪುರಾತನ ಕಲ್ಲುಕಟ್ಟಡ ಶಿಥಿಲಗೊಂಡು ಹಾಳಾಗಿದೆ. ಆದರೆ ಕಲ್ಲುಗಳು ಇದ್ದು, ಹಿಂದಿನ ಸ್ಥಿತಿಯಲ್ಲೇ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯರ ಸಹಕಾರ ಅಗತ್ಯವಿದೆ. ಜಿಲ್ಲೆಯಲ್ಲಿ ಜನರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿಯಂತೆ ಕಲ್ಯಾಣಿ ಅಭಿವೃದ್ಧಿಗೆ ಸ್ಥಳೀಯ ನಿವಾಸಿಗಳು ದೇಣಿಗೆ ನೀಡಿದರೆ ಮಾತ್ರ ಶೀಘ್ರವಾಗಿ ಅಭಿವೃದ್ಧಿ ಕೆಲಸ ನಡೆಯಲಿದೆ. ಸರ್ಕಾರದ ವತಿಯಿಂದಲೇ ಕೆಲಸ ಆಗಲಿ ಎಂದು ಕಾಯುತ್ತ ಕುಳಿತರೆ ಮತ್ತೆ ಕಲ್ಯಾಣಿ ಹೂಳಿನಿಂದ ತುಂಬಿಕೊಳ್ಳಲಿದೆ. 15 ದಿನಗಳಿಗೆ ಒಮ್ಮೆ ಒಂದು ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

2.10 ಲಕ್ಷ ರೂ. ದೇಣಿಗೆ ಸಂಗ್ರಹ: ಕಲ್ಯಾಣಿ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಕರೀಗೌಡ ಅವರು ವೈಯಕ್ತಿಕವಾಗಿ 10,000 ರೂ.ದೇಣಿಗೆ ನೀಡಿದರು. ಜಿಲ್ಲಾಧಿಕಾರಿ ಸೇವಮನೋಭಾವ ಮೆಚ್ಚಿದ ಸಭೆಯಲ್ಲಿ ಪಾಲ್ಗೊಂಡಿದ್ದವರು ತಮ್ಮ ಶಕ್ತಿಯನುಸಾರ ದೇಣಿಗೆ ನೀಡಿದರು. ಕೊನೆಯಲ್ಲಿ ಒಟ್ಟು 2.10 ಲಕ್ಷ ರೂ. ದೇಣಿಗೆ ಸಂಗ್ರಹವಾಯಿತು.

ಸ್ಥಳೀಯರಿಂದ ಸಂಗ್ರಹವಾದ ದೇಣಿಗೆ ಹಣವನ್ನು ನಗರಸಭೆ ಪೌರಾಯುಕ್ತರಿಗೆ ಹಸ್ತಾತಂತರಿಸಿ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸುವಂತೆ ತಿಳಿಸಲಾಯಿತು. ಅಲ್ಲದೆ ನಗರಸಭೆ ಪೌರಾಯುಕ್ತ ಆರ್‌. ಮಂಜುನಾಥ್‌, ಕಲ್ಯಾಣಿ ಅಭಿವೃದ್ಧಿಗೆ ನಗರಸಭೆಯಿಂದ 5 ಲಕ್ಷ ರೂ.ಗಳ ಟೆಂಡರ್‌ ಪ್ರಕ್ರಿಯೆ ಮುಕ್ತಾಯವಾಗಿದೆ. ಸದ್ಯದಲ್ಲೇ ನಗರಸಭೆಯಿಂದ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ರೋಜಿಪುರ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘ, ಕರುನಾಡ ಸೇನೆ, ರಾಜ್ಯ ರೈತ ಸಂಘದ ಕಾರ್ಯಕರ್ತರು, ವಕೀಲರು ಹಾಗೂ ನಗರಸಭೆ ಪೌರ ಕಾರ್ಮಿಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next