Advertisement

ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

06:53 PM Oct 19, 2021 | Team Udayavani |

ಕಲಬುರಗಿ: ಭೂಕಂಪನ‌ ಪೀಡಿತ ಗ್ರಾಮಗಳಲ್ಲಿ ಮನೆ ಮುಂದೆ ಶೆಡ್ ನಿರ್ಮಾಣ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು
ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

Advertisement

ಮಂಗಳವಾರ ಚಿಂಚೋಳಿ ತಾಲೂಕಿನ ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಭೇಟಿ‌ ನೀಡಿದ ಅವರು ಶಾಲಾ ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ‌ ಮಾತನಾಡಿದರು.

ಗಡಿಕೇಶ್ವರ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಭೂಮಿ ಕಂಪಿಸುತ್ತಿರುವ ಕಾರಣ ಗ್ರಾಮದಲ್ಲಿ ಭೂಕಂಪದ ತೀವ್ರತೆ ಅರಿಯಲು ಹೈದ್ರಬಾದಿನ‌ ಎನ್.ಜಿ.ಆರ್.ಐ. ವಿಜ್ಞಾನಿಗಳ ತಂಡ ಸಿಸ್ಮೋಮೀಟರ್ ಯಂತ್ರ ಅಳವಡಿಸಿದ್ದಾರೆ. ಮುಂದಿನ 1 ತಿಂಗಳ ಕಾಲ ವಿಜ್ಞಾನಿಗಳು ಈ ಯಂತ್ರದ ಮೂಲಕ ದಾಖಲಾಗುವ ಪ್ರತಿಯೊಂದು ಮಾಹಿತಿಯನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವೈಜ್ಞಾನಿಕವಾಗಿ ವರದಿ ಸಲ್ಲಿಸಲಿದ್ದು, ತದನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

ಹೈದ್ರಾಬಾದಿನ ಭೂ ವಿಜ್ಞಾನಿಗಳ ಪ್ರಾಥಮಿಕ ವರದಿ ಪ್ರಕಾರ ಇದು ಸಣ್ಣ ಪ್ರಮಾಣದ ಭೂಕಂಪವಾಗಿದ್ದು, ಹೆದರುವ ಅವಶ್ಯಕತೆವಿಲ್ಲ. ಕಳೆದ 2-3 ವರ್ಷದಿಂದ ಹೆಚ್ಚಿನ ಮಳೆಯಾಗಿದೆ. ಜೊತೆಗೆ ಸುಣ್ಣದ ಕಲ್ಲಿನಿಂದ ಕೂಡಿರುವ ಪ್ರದೇಶ ಇದಾಗಿದ್ದರಿಂದ ಭೂಮಿಯೊಳಗೆ ರಸಾಯನಿಕ ಕ್ರಿಯೆಗಳ ಚಲನವಲನದಿಂದ ಶಬ್ದ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ ಎಂದಿದ್ದಾರೆ. ಹೀಗಾಗಿ ಸಾರ್ವಜನಿಕರು ಭಯಪಡುವ ಅವಶ್ಯಕತೆವಿಲ್ಲ. ಸರ್ಕಾರ‌ ನಿಮ್ಮೊಂದಿಗಿದೆ ಧೈರ್ಯದಿಂದಿರಿ ಎಂದು ಗ್ರಾಮಸ್ಥರಿಗೆ ಅತ್ಮ ಸ್ಥೈರ್ಯ ತುಂಬಿದರು.

ಇದನ್ನೂ ಓದಿ: ಉಳ್ಳಾಲ: ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

Advertisement

ಭೂಕಂಪನದಿಂದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಲ್ಲಿ 50 ಸಾವಿರ ರೂ. ಪರಿಹಾರ ನೀಡಲಾಗುವುದು. ಗ್ರಾಮದಲ್ಲಿ ಸರ್ವೆ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಯಾವುದಕ್ಕೂ ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕು. ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರ‌ ನಿಮಗಾಗಿ ಕಾಳಜಿ ಕೇಂದ್ರ ತೆರೆದಿದೆ. ಹಿಂದೆ ಗಂಜಿ ಕೇಂದ್ರ ಎಂದು ಕರೆಯಲಾಗುತ್ತಿತ್ತು. ನಮ್ಮ ಸರ್ಕಾರ ಗೌರವಯುತವಾಗಿ ಕಾಳಜಿ ಕೇಂದ್ರ ಎಂದು ಮರುನಾಮಕರಣಗೊಳಿಸಿ ಕಷ್ಟದ ಕಾಲದಲ್ಲಿ ನಿಮ್ಮ ಕಾಳಜಿ ವಹಿಸುತ್ತಿದ್ದೇವೆ. ಕಿವಿ ಮತ್ತು ಕಣ್ಣಿರುವ ಸರ್ಕಾರ ನಮ್ಮದಾಗಿದೆ ಎಂದರು.

ಕಾಳಜಿ ಕೇಂದಲ್ಲಿ ಗುಣಮಟ್ಟದ ಅಹಾರ ಪೂರೈಕೆಗೆ ಸೂಚಿಸಲಾಗಿದೆ. ಇದಕ್ಕೆಂದೆ‌ ಮೆನು ಸಹ ನೀಡಲಾಗಿದೆ. ಅವಶ್ಯಬಿದ್ದರೆ ಇನ್ನಿತರ ಗ್ರಾಮದಲ್ಲಿಯೂ ಕಾಳಜಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚಿಸಿದ್ದಾನೆ. ಹಣದ ಕೊರತೆಯಿಲ್ಲ. ವಿಪತ್ತು ನಿರ್ವಹಣಾ ಅನುದಾನದಡಿ ಎಲ್ಲವು ಭರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದಕ್ಕೂ ಮುನ್ನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಕಳೆದ‌ 10 ವರ್ಷದಿಂದ ಗ್ರಾಮದಲ್ಲಿ ಭೂಕಂಪನದ ಸದ್ದು ಕೇಳಿಸುತ್ತಿದೆ. ಆದರೆ ಕಳೆದ 10-12 ದಿನದಿಂದ‌ ಶಬ್ದದ ತೀವ್ರತೆ ಹೆಚ್ಚಾದ ಕಾರಣ ಜನ ಭಯಭೀತರಾಗಿದ್ದಾರೆ. 3 ದಿನದ ಹಿಂದೆಯೆ ತಾವು ಮತ್ತು ಸಂಸದ ಡಾ.ಉಮೇಶ ಜಾಧವ ಅವರು ಸಧಿಕಾರಿಗಳೊಂದಿಗೆ ರಾತ್ರಿ ವಾಸ್ತವ್ಯ ಜನರಲ್ಲಿ‌ ಧೈರ್ಯ ತುಂಬಿದ್ದೇವೆ. ಆಡಳಿತ‌ ಯಂತ್ರ 24 ಗಂಟೆ ಇಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು

ಇಲ್ಲಿನ‌ ಜನರ ಅಪೇಕ್ಷೆಯಂತೆ ಮನೆ ಮುಂದೆ ಶೆಡ್ ನಿರ್ಮಿಸಬೇಕು ಮತ್ತು ಕಚ್ಚಾ ಮನೆಗಳನ್ನು ಸರ್ಕಾರದಿಂದಲೆ‌ ಪಕ್ಕಾ ಮನೆ ನಿರ್ಮಿಸಿ‌ಕೊಡಬೇಕು ಎಂದು ಸಚಿವರಲ್ಲಿ ಗ್ರಾಮಸ್ಥರ ಪರವಾಗಿ ಬೇಡಿಕೆ ಇಟ್ಟರು.

ರಾಷ್ಟ್ರೀಯ ಭೂಭೌತ ವಿಜ್ಞಾನ ಸಂಶೋಧನಾ ಸಂಸ್ಥೆಯ‌ ಭೂ ವಿಜ್ಞಾನಿ ಡಾ.ಶಶಿಧರ ಮಾತನಾಡಿ, ರಾಜ್ಯ ಸರ್ಕಾರದ ಕೋರಿಕೆಯಂತೆ ಗ್ರಾಮಕ್ಕೆ ಭೇಟಿ‌ ನೀಡಿ ಇಲ್ಲಿ ಭೂಕಂಪ ಅಳೆಯುವ ಮಾಪಕ ಯಂತ್ರ ಅಳವಡಿಸಿದೆ. ಇದು ಸುತ್ತಮುತ್ತಲಿನ 5 ರಿಂದ 10 ಕಿ.ಮಿ. ವ್ಯಾಪ್ತಿಯಲ್ಲಾಗುವ ಭೂಕಂಪನದ ಮಾಹಿತಿ ಹೈದ್ರಾಬಾದ್ ಎನ್.ಜಿ.ಆರ್.ವೈ ಸಂಸ್ಥೆಗೆ ತಕ್ಷಣವೇ ರವಾನಿಸಲಿದೆ ಎಂದರು.

ಗಡಿಕೇಶ್ವರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಆಗುತ್ತಿರುವ ಭೂಕಂಪನಗಳು ತೀರಾ ಸಣ್ಣ‌ಪ್ರಮಾಣದಾಗಿದ್ದು, ಇದರಿಂದ ಯಾವುದೇ ಹಾನಿಯಾಗುವುದಿಲ್ಲ. ಇಂತಹ ಸಣ್ಣ ಪ್ರಮಾಣದ ಭೂಕಂಪಗಳು ವಿಶ್ವದಾದ್ಯಂತ ಪ್ರತಿನಿತ್ಯ ನಡೆಯುತ್ತವೆ. ಇದಕ್ಕೆ ಗ್ರಾಮಸ್ಥರು ಹೆದರುವ ಅವಶ್ಯತೆಯಿಲ್ಲ ಎಂದು ಅಭಯ ನೀಡಿದರು.

ಸುಣ್ಣದ ಕಲ್ಲಿನ ಪ್ರದೇಶ ಇದಾಗಿದ್ದು, ಇತ್ತೀಚೆಗೆ ಹೆಚ್ಚಿನ‌ ಮಳೆಯೂ ಆಗಿರುವ ಕಾರಣ ಸುಣ್ಣದ ಕಲ್ಲು ಮತ್ತು ನೀರಿನ ಮಿಶ್ರಣದ ಫಲವಾಗಿ ಭೂಮಿಯೊಳಗಿನಿಂದ ಇಂತಹ ಶಬ್ದಗಳು ಬರುವುದು ಸಹಜ.
ಇಲ್ಲಿ ಸ್ಥಾಪಿಸಿರುವ ಸಿಸ್ಮೋಮೀಟರ್ ನಿಂದ ದಾಖಲಾಗುವ ಪ್ರತಿಯೊಂದು ಮಾಹಿತಿ ಕುರಿತು ಮುಂದಿನ‌ 1 ತಿಂಗಳ ಕಾಲ ಅಧ್ಯಯನ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಡಾ.ಶಶಿಧರ ಅವರು ಪ್ರಾತ್ಯಕ್ಷಿಕೆ‌ ಮೂಲಕ ವಿವರಿಸಿದರು

ಇದನ್ನೂ ಓದಿ: ಕೋವಿಡ್: ರಾಜ್ಯದಲ್ಲಿಂದು 310 ಹೊಸ ಪ್ರಕರಣ ಪತ್ತೆ | 347 ಸೋಂಕಿತರು ಗುಣಮುಖ 

50 ಸಾವಿರ ರೂ. ಪರಿಹಾರ ವಿತರಣೆ: 

ಗ್ರಾಮದಲ್ಲಿ ಭೂಕಂಪನದಿಂದ ಮನೆಯಲ್ಲಿ ಬಿರುಕು ಕಂಡ ಹಿನ್ನೆಲೆಯಲ್ಲಿ 4 ಜನ ಫಲಾನುಭವಿಗಳಿಗೆ ತಲಾ 50 ಸಾವಿರ ರೂ. ಪರಿಹಾರ ಚೆಕ್ ಸಚಿವ ಆರ್. ಅಶೋಕ ನೀಡಿದರು.

ಸಂಸದ ಡಾ.ಉಮೇಶ ಜಾಧವ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ ರಾಜನ್ ಅವರು ಸಹ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಂ.ಎಲ್‌.ಸಿ. ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಕಲಬುರಗಿ ಸಹಾಯಕ ಆಯುಕ್ತೆ ಮೋನಾ ರೂಟ್, ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಮಲ್ಲಿಕಾರ್ಜುನ ಜೇರಟಗಿ, ಕೃಷ್ಣಾ ಅಗ್ನಿಹೋತ್ರಿ, ಚಿಂಚೋಳಿ ತಹಶೀಲ್ದಾರ ಅಂಜುಮ್ ತಬಸ್ಸುಮ್, ಕಾಳಗಿ ತಹಶೀಲ್ದಾರ ನಾಗನಾಥ ತರಗೆ, ತಾಲೂಕ ಪಂಚಾಯತ ಇ.ಓ ಅನೀಲ ರಾಠೋಡ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸೇಡಂ ಸಹಾಯಕ ಆಯುಕ್ತೆ ಅಶ್ವಿಜಾ ಬಿ. ಸ್ವಾಗತಿಸಿದರು.

ಸಚಿವರಿಂದ ಗ್ರಾಮದಲ್ಲಿ ಸಂಚಾರ: 

ನಂತರ ಸಚಿವ ಅರ.ಅಶೋಕ‌ ಅವರು ಗಡಿಕೇಶ್ವರ ಗ್ರಾಮದ ವಿವಿಧ ಓಣಿಗಳಿಗೆ ಭೇಟಿ ನೀಡಿ ಭೂಕಂಪನದಿಂದ‌‌ ಬಿರುಕು ಕಂಡ ಮನೆಗಳನ್ನು ವೀಕ್ಷಿಸಿದರು. ಗ್ರಾಮಸ್ಥರೊಂದಿಗೆ ಮಾತನಾಡಿ ಅವರ ಕುಂದುಕೊರತೆ ಆಲಿಸಿದರು. ಸ್ಥಳೀಯ ಗ್ರಾಮಸ್ಥರು ಕಾಳಜಿ‌ ಕೇಂದ್ರದಲ್ಲಿ ನೀಡಲಾಗುತ್ತಿರುವ ಊಟದ ಬಗ್ಗೆ ತೃಪ್ತಿ ವ್ಯಕ್ತಪಡಿಸುತ್ತಾ ಮನೆ ಮುಂದೆ ಶೆಡ್ ನಿರ್ಮಿಸಬೇಕು ಎಂದು ಸಚಿವರಲ್ಲಿ‌ ಮನವಿ ಮಾಡಿಕೊಂಡರು. ಶೆಡ್ ನಿರ್ಮಿಸುವುದಾಗಿ ಸಚಿವರು ಭರವಸೆ ನೀಡಿದರು.

ನಂತರ ಸಚಿವರು ಕಾಳಗಿ ತಾಲೂಕಿನ ಹೊಸಳ್ಳಿ (ಹೆಚ್) ಮತ್ತು ಕೊರವಿ (ರಾಮನಗರ ತಾಂಡಾ)ಗೆ ಭೇಟಿ ನೀಡಿ ಗ್ರಾಮಸ್ಥರ ಕುಂದುಕೊರತೆ ಆಲಿಸಿದರು. ಲೊಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ತಾತ್ಕಾಲಿಕ ಶೆಡ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next