Advertisement

ಚುನಾವಣಾ ರಾಜಕೀಯದಿಂದ ನಿವೃತ್ತಿ: ಜಿ.ಟಿ.ದೇವೇಗೌಡ

10:52 PM Aug 04, 2019 | Lakshmi GovindaRaj |

ಮೈಸೂರು: “ಚುನಾವಣಾ ರಾಜಕೀಯ ಸಾಕಾಗಿದೆ. ಮುಂಬರುವ ಯಾವುದೇ ಚುನಾ ವಣೆಯಲ್ಲೂ ನಾನು ಸ್ಪರ್ಧಿವುದಿಲ್ಲ’ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, “ನಾನು ಯಾರ ಹಂಗಿನಲ್ಲೂ ಬದುಕಿಲ್ಲ. ನನಗ್ಯಾರೂ ರಾಜಕೀಯ ಗುರುಗಳಿಲ್ಲ. 2018ರ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ನಿಂದ ಒಂದು ರೂ.ಹಣ ಪಡೆದಿಲ್ಲ.

Advertisement

ಕಾರ್ಯಕರ್ತರ ಹಣದಿಂದ ಎಲ್ಲವನ್ನೂ ಮಾಡಿದ್ದೇನೆ. ಈ ಹಿಂದೆ ಮುಂದಿನ ಚುನಾವಣೆಯಲ್ಲಿ ಹರೀಶ್‌ ಗೌಡನೇ ಅಭ್ಯರ್ಥಿ ಅಂದಿದ್ರು, ಆಗಲಿಲ್ಲ. ಎಂಎಲ್‌ಸಿ ಮಾಡುತ್ತೇವೆ ಅಂದರು, ಯಾವುದೂ ಆಗಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನನಗಿಷ್ಟವಾದ ಖಾತೆ ಸಿಗಲಿಲ್ಲ. 2006ರಲ್ಲಿ ನನಗೆ ಆರು ತಿಂಗಳು ಮಂತ್ರಿ ಮಾಡಿದ್ದರು. ಈಗ 12 ತಿಂಗಳು ಮಂತ್ರಿ ಮಾಡಿದ್ದರು. ಬೇಡವೆಂದು ದೂರ ಉಳಿದರೂ ಉನ್ನತ ಶಿಕ್ಷಣ ಖಾತೆಯನ್ನು ನೀಡಿದ್ದರು. ಇಂತಹ ರಾಜಕಾರಣದಿಂದ ನಾನು ನೊಂದಿದ್ದೇನೆ.

ಇನ್ನು ಚುನಾವಣಾ ರಾಜಕಾರಣ ಸಾಕು ಎನಿಸಿದೆ’ ಎಂದು ಜೆಡಿಎಸ್‌ ವರಿಷ್ಠರ ವಿರುದ್ಧ ಅಸಮಾಧಾನ ಹೊರ ಹಾಕಿದರು. “ಇದು ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೂ ಹೇಳಿಕೊಂಡು ಬಂದಿದ್ದೇನೆ. ಎಚ್‌ಡಿಡಿ ಹಾಗೂ ಎಚ್‌ಡಿಕೆ ಅವರನ್ನು ದೇವರೆಂದು ಭಾವಿಸಿ ಇದುವರೆಗೂ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದೇನೆ’ ಎಂದರು.

ಸ್ಪರ್ಧೆ ಮಗನಿಗೆ ಬಿಟ್ಟ ವಿಚಾರ: ವಿಶ್ವನಾಥ್‌ ಅನರ್ಹತೆಯಿಂದ ಎದುರಾಗುತ್ತಿರುವ ಹುಣಸೂರು ಉಪ ಚುನಾವಣೆಯಲ್ಲಿ ಮಗ ಹರೀಶ್‌ ಗೌಡರನ್ನು ಸ್ಪರ್ಧೆಗೆ ಇಳಿಸುವ ಸಂಬಂಧ ಪ್ರತಿಕ್ರಿಯಿಸಿ, “ಹರೀಶ್‌ ಗೌಡ ತನ್ನ ಸ್ವಂತ ಶಕ್ತಿಯಿಂದ ಇಲ್ಲಿವರೆಗೆ ಬೆಳೆದಿದ್ದಾನೆ. ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸುವುದು, ಬಿಡುವುದು ಅವನ ವೈಯಕ್ತಿಕ ವಿಚಾರ. ಅವನ ಬೆಳವಣಿಗೆಗೆ ನಾನಾಗಲಿ, ಕುಮಾರಸ್ವಾಮಿಯಾಗಲಿ ಸಹಾಯ ಮಾಡಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next