Advertisement

ಯುವಕರಂತೆ ಕೆಲಸ ಗಿಟ್ಟಿಸಿಕೊಂಡ ನಿವೃತ್ತರು

12:38 PM Mar 27, 2017 | Team Udayavani |

ಬೆಂಗಳೂರು: ಅಲ್ಲಿ ಬಂದವರೆಲ್ಲಾ ಜೀವನದ ಅಂತಿಮ ಘಟ್ಟದತ್ತ ಹೆಜ್ಜೆ ಹಾಕುತ್ತಿದ್ದವರು. ವೃದ್ಧಾಪ್ಯದಲ್ಲೂ ತಮ್ಮ ಜೀವನ ನಿರ್ವಹಣೆಯ ಜವಾಬ್ದಾರಿಯನ್ನು ತಾವೇ ನೋಡಿಕೊಳ್ಳೋಣ ಎಂದು ಯುವಕರಂತೆ ಬಗಲಲ್ಲಿ ಫೈಲ್‌ ಹಿಡಿದು ಟೇಬಲ್‌ನಿಂದ ಟೇಬಲ್‌ಗೆ ಓಡುತ್ತಿದ್ದರು.

Advertisement

ಆ ಪೈಕಿ ಕೆಲವರಿಗೆ ಉದ್ಯೋಗ ಸಿಕ್ಕ ಖುಷಿ, ಇನ್ನು ಕೆಲವರ ಮುಖದಲ್ಲಿ ನಿರಾಸೆಯ ಗೆರೆಗಳು… ಇದು ನಗರದ ಅರಮನೆ ಮೈದಾನದಲ್ಲಿ ಭಾನುವಾರ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಉದ್ಯೋಗ ಮೇಳದಲ್ಲಿ ಕಂಡುಬಂದ ದೃಶ್ಯ. 

30-40 ವರ್ಷಗಳ ಕಾಲ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ದುಡಿದು ಮುಪ್ಪಾಗಿದ್ದರೂ, ಜೀವನದ ಎರಡನೇ ಇನ್ನಿಂಗ್ಸ್‌ ಆರಂಭಿಸುವ ಉತ್ಸಾಹದೊಂದಿಗೆ ಬಾಗಲಕೋಟೆ, ಧಾರವಾಡ, ಹಾವೇರಿ, ತುಮಕೂರು, ಹಾಸನ ಸೇರಿದಂತೆ ವಿವಿಧೆಡೆಯಿಂದ ಬೆಳಿಗ್ಗೆಯೇ ನಗರಕ್ಕೆ ಬಂದಿದ್ದರು. ಸರದಿಯಲ್ಲಿ ನಿಂತು ಕಂಪೆನಿಗಳಿಗೆ ಯುಕ್ತ ಮಾಹಿತಿ (ಬಯೋಡೆಟಾ) ಸಲ್ಲಿಸಿ, ಸ್ಥಳದಲ್ಲೇ ಚುಟುಕು ಸಂದರ್ಶನ ಎದುರಿಸಿದರು. ಸಂದರ್ಶನ ತೆಗೆದುಕೊಳ್ಳುವವರು ಮಾತ್ರ ಯುವಕರಾಗಿದ್ದರು!

ಹೀಗೆ ಉದ್ಯೋಗ ಅರಸಿ ಬಂದವರೆಲ್ಲರೂ ಆರ್ಥಿಕ ಸಂಕಷ್ಟದಲ್ಲಿರುವವರೇನಲ್ಲ. ಮಕ್ಕಳು ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದರೂ ಕೈಯೊಡ್ಡುವುದು ಬೇಡ ಎಂಬ ಸ್ವಾಭಿಮಾನ, ಮನೆಯಲ್ಲಿ ಖಾಲಿ ಕುಳಿತುಕೊಳ್ಳುವುದು ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ ಎಂಬ ಆತಂಕ, ನಿವೃತ್ತಿ ಜೀವನದ ಹೊತ್ತು ಕಳೆಯಲು, ಕಾಯಿಲೆಗಳ ಚಿಕಿತ್ಸೆಗಾಗುವ ಖರ್ಚು ಸರಿದೂಗಿಸುವ ಲೆಕ್ಕಾಚಾರಗಳು ಇದರ ಹಿಂದಿದ್ದುದು ಕಂಡುಬಂತು. 

ಮಾರ್ಕೆಟಿಂಗ್‌ ಕೆಲಸಗಳೇ ಜಾಸ್ತಿ ಎಂಬ ಬೇಸರ: ಕೆಲವರು ಸ್ವತಃ ತಾವೇ ಉದ್ಯೋಗ ನಿರಾಕರಿಸಿದರೆ, ಇನ್ನು ಹಲವರಿಗೆ ಮುಂದಿನ ದಿನಗಳಲ್ಲಿ ಕರೆ ಮಾಡುವುದಾಗಿ ಕಂಪೆನಿಗಳು ಹೇಳಿಕಳಿಸುತ್ತಿದ್ದವು. ಮೇಳಕ್ಕೆ ಆಗಮಿಸಿದ್ದ ಉದ್ಯೋಗಾಕಾಂಕ್ಷಿ ಕೆಎಸ್‌ಐಐಡಿಸಿ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ರೇವಣ್ಣ  ಅವರನ್ನು “ಉದಯವಾಣಿ’ ಮಾತಿಗೆಳೆದಾಗ, “ವಿಮಾ ಏಜೆನ್ಸಿಗಳು, ಮಾರ್ಕೆಟಿಂಗ್‌ ಕಂಪೆನಿಗಳು ಹೆಚ್ಚಾಗಿವೆ. ಇನುÒರನ್ಸ್‌ ಕಂಪೆನಿಗೆ ಸದಸ್ಯರಾಗಲು 9 ಸಾವಿರ ರೂ. ಪಾವತಿಸಬೇಕಂತೆ.

Advertisement

ನಂತರ ವಿಮೆದಾರರನ್ನು ಪರಿಚಯಿಸಿದಂತೆ ನಮಗೆ ಕಮೀಷನ್‌ ನೀಡುತ್ತಾರಂತೆ. ನಿವೃತ್ತಿ ಜೀವನದಲ್ಲಿ ಈ ಓಡಾಟ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು. “ನನಗೆ ಶೀಘ್ರಲಿಪಿ, ಟೈಪಿಂಗ್‌ ಎಲ್ಲಾ ಬರುತ್ತದೆ. ನಮ್ಮಲ್ಲಿರುವ ಅನುಭವವನ್ನು ಬಳಸಿಕೊಂಡು, ತರಬೇತಿ ಮತ್ತಿತರ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂದುಕೊಂಡಿದ್ದೆವು. ಆದರೆ, ಮೇಳದಲ್ಲಿ ವ್ಯವಸ್ಥೆಯೇ ಬೇರೆ ಇದೆ. ಆದಾಗ್ಯೂ ಕ್ಲರ್ಕ್‌ ಹುದ್ದೆಗೆ ಕರ್ನಾಟಕ ಸಣ್ಣ ಕೈಗಾರಿಕಾ ಸಂಸ್ಥೆ (ಕಾಸಿಯಾ)ಯಲ್ಲಿ ಅರ್ಜಿ ಸಲ್ಲಿಸಿದ್ದೇನೆ. ಕರೆ ಮಾಡುವುದಾಗಿ ಹೇಳಿದ್ದಾರೆ’ ಎಂದು ರೇವಣ್ಣ ತಿಳಿಸಿದರು. 

ಈಗ ಕೆಲಸಕ್ಕೆ ಟೈಂ ಸಿಕ್ಕಿತು: ಕೆಂಗೇರಿ ಉಪನಗರದಿಂದ ಬಂದಿದ್ದ ಗೀತಾ ಅವರು ಪದವೀಧರೆ. ಆದರೆ, ಸಂಸಾರದ ಜಂಜಾಟದಲ್ಲಿ ನೌಕರಿ ಮಾಡಲು ಸಾಧ್ಯವಾಗಿರಲಿಲ್ಲ. “ಈಗ ನನ್ನ ಮೇಲಿದ್ದ ಎಲ್ಲ ಜವಾಬ್ದಾರಿಗಳು ಪೂರ್ಣಗೊಂಡಿವೆ. ಹಾಗಾಗಿ, ಇನ್ಮುಂದೆಯಾದರೂ ಕೆಲಸ ಮಾಡಬೇಕು ಎನಿಸಿತು. ಆದ್ದರಿಂದ ಸರ್ಕಾರೇತರ ಸಂಸ್ಥೆಯೊಂದಕ್ಕೆ ಶಿಕ್ಷಕಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ’ ಎಂದರು. 

ಎಚ್‌ಎಂಟಿಯಲ್ಲಿ ವಾಚ್‌ ಮೆಕಾನಿಕ್‌ ಆಗಿದ್ದ ಆರ್‌.ಟಿ. ನಗರದ ಕೆ.ಎನ್‌. ಸವಿತಾ ಅವರ ಮಕ್ಕಳು ಎಂಜಿನಿಯರಿಂಗ್‌ ಕಲಿಯುತ್ತಿದ್ದಾರೆ. ಆದರೆ, ಎಚ್‌ಎಂಟಿ ಕಂಪೆನಿ ವರ್ಷದ ಹಿಂದೆಯೇ ಸ್ಥಗಿತಗೊಂಡಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಈಗ ಬರುತ್ತಿರುವ ಆದಾಯ ಸಾಕಾಗುತ್ತಿಲ್ಲ. ಅಲ್ಲದೆ, ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಕೆಲಸ ಮಾಡಲೇಬೇಕು. ಈ ಎರಡೂ ಕಾರಣಕ್ಕಾಗಿ ಉದ್ಯೋಗ ಮೇಳಕ್ಕೆ ಬಂದಿರುವುದಾಗಿ ತಿಳಿಸಿದರು. 

ಉದ್ಯೋಗಾಕಾಂಕ್ಷಿಗಳ ನೆರವಿಗಾಗಿ ಹತ್ತಕ್ಕೂ ಹೆಚ್ಚು ಹೆಲ್ಪ್ ಡೆಸ್ಕ್ಗಳನ್ನು ತೆರೆಯಲಾಗಿತ್ತು. ಅಲ್ಲಿ ಅರ್ಜಿ ಸೇರಿದಂತೆ ಪೂರಕ ದಾಖಲೆಗಳನ್ನು ಸಲ್ಲಿಸುವುದರ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. 120ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಅಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇತ್ತು. ಬೆಳಿಗ್ಗೆ 11.30ರ ಹೊತ್ತಿಗಾಗಲೇ 3,700 ಜನ ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ ಸುಮಾರು ಎಂಟು ಜನರಿಗೆ ಸ್ಥಳದಲ್ಲೇ ಕೆಲಸಕ್ಕೆ ಆಹ್ವಾನ ಪತ್ರ ದೊರಕಿದೆ ಎಂದು ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು. 

ಉದ್ಯೋಗ ಗಿಟ್ಟಿಸಿಕೊಂಡವರ ಮಾತು: ಮನೆಯಲ್ಲೇನೂ ಕೊರತೆ ಇಲ್ಲ. ಒಬ್ಬ ಮಗ ಎಂಜಿನಿಯರ್‌, ಮತ್ತೂಬ್ಬ ಸ್ವಂತ ಲಾರಿಗಳನ್ನು ನಿರ್ವಹಣೆ ಮಾಡುಧಿತ್ತಾನೆ. ಆದರೆ, ಪ್ರತಿಯೊಂದಕ್ಕೂ ಮಕ್ಕಳ ಮುಂದೆ ಕೈಚಾಚುವುದು ಮನಸ್ಸಿಗೆ ಕಸಿವಿಸಿ ಅನಿಸುತ್ತಿತ್ತು. ಆದ್ದರಿಂದ ಮೇಳಕ್ಕೆ ಬಂದೆ. ಕೆಲಸವೂ ಸಿಕ್ಕಿತು… ಇದು ಮೇಳದಲ್ಲಿ ಸ್ಥಳದಲ್ಲೇ ಉದ್ಯೋಗ ಗಿಟ್ಟಿಸಿಕೊಂಡ ನಗರದ ವಸಂತಪುರ ನಿವಾಸಿ ಎಲ್‌. ಹುಚ್ಚೇಗೌಡ ಅವರ ಮಾತುಗಳಿವು. 

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಸಾಂಖೀಕ ವಿಭಾಗದಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಐದಾರು ವರ್ಷಗಳ ಹಿಂದೆಯೇ ನಿವೃತ್ತಿ ಹೊಂದಿದ್ದೇನೆ. ಆದರೆ, ನನಗೆ ಮತ್ತು ನನ್ನ ಪತ್ನಿಗೆ ಮಧುಮೇಹ. ಇದರ ಚಿಕಿತ್ಸಾ ವೆಚ್ಚವೇ ತಿಂಗಳಿಗೆ 6 ಸಾವಿರ ರೂ. ಆಗುತ್ತದೆ. ಮಾಸಿಕ 1,600 ರೂ. ಪಿಂಚಣಿ ಬರುತ್ತದೆ. ಮಕ್ಕಳೇ ಹಣ ಕೊಡುತ್ತಾರೆ. ಆದರೆ, ಎಷ್ಟೂ ಅಂತಾ ಕೇಳುವುದು ಎಂದು ಹುಚ್ಚೇಗೌಡ ಕೇಳಿದರು.  ಇದೇ ವೇಳೆ ಸ್ಥಳದಲ್ಲೇ ಉದ್ಯೋಗ ಗಿಟ್ಟಿಸಿಕೊಂಡ ಮನೋಹರ್‌, ಗಜಾನನ ಹೆಗಡೆ, ಎಚ್‌. ಲೋಕೇಶ್‌, ರಮೇಶ್‌ರಾವ್‌, ಕೆ.ಎಸ್‌. ಚನ್ನಪ್ಪ, ನಾರಾಯಣ ರೆಡ್ಡಿ, ವಿಜಯಕುಮಾರ್‌, ಅವರನ್ನು ಅಭಿನಂದಿಸಲಾಯಿತು. 

ಪ್ರತಿ ಜಿಲ್ಲೆಗೂ ಬೇಕಿಂತ ಮೇಳ
ಬೆಂಗಳೂರು:
ಹಿರಿಯ ನಾಗರಿಕರ ಉದ್ಯೋಗ ಮೇಳ ಒಂದು ವಿಶಿಷ್ಟ ಪ್ರಯತ್ನ. ಪ್ರತಿ ಜಿಲ್ಲೆಗಳಲ್ಲೂ ಈ ಮೇಳವನ್ನು ನಡೆಸಬೇಕು ಎಂದು ಕಾಂಗ್ರೆಸ್‌ ವರಿಷ್ಠ ಗುಲಾಂನಬಿ ಆಜಾದ್‌ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮಕ್ಕೆ ಸಲಹೆ ನೀಡಿದರು. 

ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, “ಸೇವೆಯಲ್ಲಿದ್ದಾಗ ಭ್ರಷ್ಟಾಚಾರ ಮಾಡಿದ್ದರೆ, ಅಂತಹವರಿಗೆ ನಿವೃತ್ತಿ ನಂತರ ದುಡಿಯುವ ಅವಶ್ಯಕತೆ ಇರುವುದಿಲ್ಲ. ಆದರೆ, ವೃತ್ತಿ ಜೀವನದಲ್ಲಿ ಪ್ರಾಮಾಣಿಕವಾಗಿ ದುಡಿದವರಿಗೆ ಕೊನೆಯ ಘಟ್ಟದಲ್ಲಿ ಉದ್ಯೋಗದ ಹಣದ ಅವಶ್ಯಕತೆ ಸಹಜವಾಗಿ ಇರುತ್ತದೆ. ಆದ್ದರಿಂದ ಈ ವಿಶಿಷ್ಟ ಮೇಳವನ್ನು ಜಿಲ್ಲಾ ಮಟ್ಟಕ್ಕೂ ವಿಸ್ತರಿಸಬೇಕು. ಆ ಮೂಲಕ ಎಲ್ಲರಿಗೂ ಇದರ ಸದುಪಯೋಗ ಪಡೆಯುವಂತಾಗಬೇಕು,” ಎಂದರು. 

ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ದೇಶದ ಜನರ ಜೀವನಾವಧಿ 42 ವರ್ಷ ಇತ್ತು. ಆದರೆ, ಇಂದು 69ರಿಂದ 70 ವರ್ಷ ಆಗಿದೆ. ಆದರೆ, ಬಹುತೇಕ ರಾಜ್ಯಗಳಲ್ಲಿ ನಿವೃತ್ತಿ ಅವಧಿ 55ರಿಂದ 56 ವರ್ಷ ಇದೆ. ಕೆಲವೇ ರಾಜ್ಯಗಳಲ್ಲಿ ನಿವೃತ್ತಿ ಅವಧಿ 60 ವರ್ಷ ನಿಗದಿಯಾಗಿದೆ. ನಿವೃತ್ತಿ ನಂತರ ಹತ್ತುಹಲವು ರೀತಿಯ ಸಮಸ್ಯೆಗಳನ್ನು ಹಿರಿಯ ನಾಗರಿಕರು ಎದುರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಂತಹವರಿಗಾಗಿ ಉದ್ಯೋಗ ಮೇಳ ವಿನೂತನ ಪ್ರಯತ್ನ ಎಂದು ಹೇಳಿದರು. 

ಕಾಂಗ್ರೆಸ್‌ ಹಿರಿಯ ಮುಖಂಡ ಆಸ್ಕರ್‌ ಫ‌ರ್ನಾಂಡೀಸ್‌ ಮಾತನಾಡಿ, ಹಿರಿಯ ನಾಗರಿಕರ ಅನುಭವವನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡು, ಅವರ ಸೇವೆಯನ್ನು ವಿವಿಧ ಕ್ಷೇತ್ರಗಳಿಗೆ ಬಳಸಿಕೊಳ್ಳಲು ಮುಂದಾಗಿರುವುದು ಶ್ಲಾಘನೀಯ ಎಂದರು. ಸಚಿವೆ ಉಮಾಶ್ರೀ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ನಿಗಮದ ಅಧ್ಯಕ್ಷ ಮುರಳೀಧರ್‌ ಹಾಲಪ್ಪ, ನೈಂಟಿಗೇಲ್‌ ಮೆಡಿಕಲ್‌ ಟ್ರಸ್ಟ್‌ ಸಂಸ್ಥಾಪಕಿ ಡಾ.ರಾಧಾ ಮೂರ್ತಿ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next