Advertisement

ಧರಿಸುವ ದಿರಿಸಿನಲ್ಲಿ ಸಂಯಮ

10:08 AM Mar 14, 2020 | mahesh |

ತಿರುಪತಿ ದೇವಸ್ಥಾನದಲ್ಲಿ, ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಹಾಗೂ ಇತರ ಕೆಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ತೆರಳುವಾಗ ಅಲ್ಲಿಯ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೆಕಾಗಿದೆ. ಇದೇ ವಸ್ತ್ರ ಸಂಹಿತೆಯನ್ನು ಕರ್ನಾಟಕದ ಕೆಲವು ದೇವಾಲಯಗಳಲ್ಲೂ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ. ದೇವಾಲಯಗಳಲ್ಲಿ ವಸ್ತ್ರಸಂಹಿತೆ ಪಾಲಿಸುವುದು ಒಳ್ಳೆಯ ವಿಚಾರವೆ. ಆದರೆ, ಅದನ್ನು ನಿಯಮವಾಗಿ ಜಾರಿಗೊಳಿಸಬೇಕಾಗಿ ಬಂದ ಅನಿವಾರ್ಯತೆ ಸೃಷ್ಟಿಯಾಗಿರುವ ಬಗ್ಗೆ ಬೇಸರವಾಗುತ್ತದೆ.

Advertisement

ಹಿಂದೆಲ್ಲ ಶಾಲೆಗಳಲ್ಲಿ ವಾರಕ್ಕೆರಡು ದಿನ ಮಾತ್ರ ಸಮವಸ್ತ್ರ ಧರಿಸಬೇಕಾಗಿತ್ತು. ಕೆಲವು ಖಾಸಗಿ ಶಾಲೆಗಳಲ್ಲಿ ವಾರದ ಐದು ದಿನ ಸಮವಸ್ತ್ರ , ಶನಿವಾರ ಬಣ್ಣದ ಬಟ್ಟೆ ಧರಿಸಬಹುದಿತ್ತು. ಉಳ್ಳವರ ಮಕ್ಕಳು ತರಹೇವಾರಿ ಬಟ್ಟೆ ಧರಿಸಿ ಶಾಲೆಗೆ ಬಂದರೆ ಇತರ ಮಕ್ಕಳು ಕೀಳರಿಮೆಯಿಂದ ಬಳಲಬಾರದು. ಹಾಗಾಗಿ, ಎಲ್ಲ ಮಕ್ಕಳು ಸಮಾನರೆಂದು ಪರಿಗಣಿಸುವ ಉದ್ದೇಶದಿಂದ ವಸ್ತ್ರಸಂಹಿತೆಯನ್ನು ಜಾರಿಮಾಡಲಾಗುತ್ತದೆ.

ಹಿಂದೆಲ್ಲ ಕಾಲೇಜಿಗೆ ಹೋಗುವಾಗ ಸಮವಸ್ತ್ರ ಧರಿಸಬೇಕೆಂಬ ನಿಯಮವೇ ಇರಲಿಲ್ಲ. ಯಾವುದೇ ನಿಯಮವಿಲ್ಲದಿದ್ದರೂ ಯಾರಿಂದಲೂ ವಿರೋಧ ಬಾರದಂತೆ ಮೈತುಂಬ ಬಟ್ಟೆ ಧರಿಸಿಯೇ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದರು.
ನಂತರ ಸಮಾಜವು ಆಧುನೀಕರಣಕ್ಕೆ ತೆರೆದುಕೊಂಡು ಅನೇಕ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿದವು. ಜನರ ವಸ್ತ್ರ ವಿನ್ಯಾಸದ ಅಭಿರುಚಿಯೂ ಬದಲಾಯಿತು. ಯುವ ಸಮುದಾಯವು ಇದರತ್ತ ಹೆಚ್ಚು ಆಕರ್ಷಿತಗೊಂಡಿತು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಈ ತರಹೇವಾರಿ ವೇಷಭೂಷಣಗಳನ್ನು ನೋಡಿ, ತರಗತಿಗಳಿಗೆ ನೊಟೀಸು ಬರಲಾರಂಭಿಸಿದವು. ಆದರೆ, ಈ ಎಲ್ಲ ನೊಟೀಸ್‌ಗಳಿಂದ ನಿಯಂತ್ರಣ ಸಾಧ್ಯವಾಗದೇ ಇದ್ದಾಗ ಕಾಲೇಜುಗಳಲ್ಲೂ ಸಮವಸ್ತ್ರ ಜಾರಿಯಾಯಿತು. ಸಮವಸ್ತ್ರಗಳನ್ನೂ ತರತರದ ವಿನ್ಯಾಸಗಳಲ್ಲಿ ಹೊಲಿಸಿ ಧರಿಸಲಾರಂಭಿಸಿದರು. ಇದರ ಮುಂದುವರಿದ ಭಾಗವಾಗಿ ಸಮವಸ್ತ್ರವನ್ನು ಇಂತಹುದೇ ಮಾದರಿಯಲ್ಲಿ ಹೊಲಿಯಬೇಕು ಎಂದು ನಿಯಮ ತರಬೇಕಾಯಿತು.

ವಿದ್ಯಾರ್ಜನೆಗೆ ಹೋಗುವಾಗ ತಾವು ಧರಿಸುವ ಬಟ್ಟೆ ಹೇಗಿರಬೇಕು ಎಂದು ತಿಳಿಯದ ಈ ಯುವಜನಾಂಗವು ಶಿಕ್ಷಣವನ್ನು ಪಡೆಯುವ ಉದ್ದೇಶವಾದರೂ ಏನಿರಬಹುದು ಎಂಬ ಪ್ರಶ್ನೆ ಕಾಡುತ್ತದೆ. ಈಗಲೂ ಸಮವಸ್ತ್ರ ಧರಿಸಿ, ಸಿಂಗರಿಸಿಕೊಂಡು ಹೋಗುವ ಕಾಲೇಜು ಹುಡುಗ-ಹುಡುಗಿಯರು, ಚಿತ್ರವಿಚಿತ್ರವಾಗಿ ಕೂದಲು ಕತ್ತರಿಸಿ, ಕೈಗೆ-ಕುತ್ತಿಗೆಗೆ ದಾರಗಳನ್ನು ಬಿಗಿದುಕೊಂಡು ಹುಡುಗರು ಕಾಣಸಿಗುತ್ತಾರೆ. ಕಾಲೇಜು ಜೀವನದ ಉದ್ದೇಶ ಕಲಿಕೆ ಮಾತ್ರವಿದ್ದಾಗ, ಇಂತಹ ಆಕರ್ಷಣೆಗಳು ಖಂಡಿತಾ ಎದುರಾಗುವುದಿಲ್ಲ. ಸೌಜನ್ಯತೆಯ ಎಲ್ಲೆ ಮೀರದಂತೆ ನಮ್ಮ ವಸ್ತ್ರವಿನ್ಯಾಸ ಇದ್ದರೆ ಚೆನ್ನ. ಮಾತೇ ಇದೆಯಲ್ಲ, “Be Roman when you are in Rome’ ಅಂತ.

ಮದುವೆ ಮುಂತಾದ ಸಮಾರಂಭಗಳಿಗೆ ಹೋಗುವಾಗ, ಸಾಮಾನ್ಯವಾಗಿ ಸಾಂಪ್ರದಾಯಿಕವಾದ ವಸ್ತ್ರ ಧರಿಸುವುದು ವಾಡಿಕೆ. ಸಂಜೆ ವೇಳೆ ಬೀಚ್‌ನಲ್ಲಿ ಅಡ್ಡಾಡಲು ಹೋಗುವಾಗ ಸಡಿಲವಾದ, ಉಡುಪು ಧರಿಸುವುದು ಸಾಮಾನ್ಯ. ಮನೆಯಲ್ಲಿರುವಾಗ, ಹೆಚ್ಚು ಜರತಾರಿ ಅಂಚುಗಳಿಲ್ಲದ, ಕೆಲಸ ಮಾಡಲು ಅನುಕೂಲವಾಗುವ ಹಾಗೆ ಹತ್ತಿಯ ಬಟ್ಟೆಗಳನ್ನು ಧರಿಸುವುದು ಸರಿ ತಾನೆ? ಕಚೇರಿ ಕೆಲಸಗಳಿಗೆ ಹೋಗುವಾಗ “ಫಾರ್ಮಲ್ಸ್‌’ ಧರಿಸಿಯೇ ಬರಬೇಕು ಎಂಬ ನಿರೀಕ್ಷೆ ಇರುತ್ತದೆ. ಹಾಗಿದ್ದರೆ, ದೇವಸ್ಥಾನಗಳಿಗೆ ಹೋಗುವಾಗ, ನಿರ್ದಿಷ್ಟ ಉಡುಪು ಧರಿಸುವುದು ಅಪೇಕ್ಷಿತ ಅಲ್ಲವೆ.

Advertisement

ದೇವಸ್ಥಾನಗಳೆಂದರೆ ಪವಿತ್ರ ಪೂಜಾಸ್ಥಳಗಳು. ಅಲ್ಲಿಯ ವಾತಾವರಣ, ಇತರ ಪ್ರದೇಶಗಳ ವಾತಾವರಣಕ್ಕಿಂತ ಭಿನ್ನವಾಗಿರುತ್ತದೆ. ಭಕ್ತಿಯಿಂದ ದೇವಸ್ಥಾನಕ್ಕೆ ಬರುವವರಿಗೆ ಸಾಂಪ್ರದಾಯಿಕ ಉಡುಪುಗಳೇ ಸುಂದರವಾಗಿ ಕಾಣಿಸುತ್ತವೆ. ಈ ಇಂಗಿತಜ್ಞತೆ ಇಲ್ಲದೇ ಭಕ್ತರು ದೇವಸ್ಥಾನಕ್ಕೆ ಬಂದಾಗ, ಸಮಸ್ಯೆಗಳು ಸೃಷ್ಟಿಯಾಗುತ್ತವೆ. ವಸ್ತ್ರ ಸಂಹಿತೆ ಜಾರಿ ಮಾಡುವುದು ಅನಿವಾರ್ಯವಾಗುತ್ತದೆ.

ಮೊನ್ನೆ ಶಾಲೆಯೊಂದರಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಆರೋಗ್ಯಕರ ಜೀವನ ಪದ್ಧತಿಯ ಬಗ್ಗೆ ವಿಚಾರಧಾರೆಯನ್ನು ಏರ್ಪಡಿಸಿದ್ದರು. ಅಲ್ಲಿ ಆ ವ್ಯಕ್ತಿ ಮಕ್ಕಳಿಗೆ ಪ್ರತಿದಿನ ಮೇಕಪ್‌, ಲಿಪ್‌ಸ್ಟಿಕ್‌ ಬಳಸುವುದರಿಂದ ಚರ್ಮಕ್ಕಾಗುವ ಹಾನಿಯ ಬಗ್ಗೆ ವಿವರಿಸುತ್ತಿದ್ದರು. ಈ ರೀತಿಯ ಕಾಳಜಿಯ ಅರಿವು ಶಿಕ್ಷಕ ವರ್ಗಕ್ಕೂ ಇದ್ದಾಗ, ಮಕ್ಕಳಿಗೆ ಅದನ್ನು ತಿಳಿ ಹೇಳುವುದು ಸುಲಭವಾಗುತ್ತದೆ. ಇತ್ತೀಚೆಗೆ ಪ್ರತಿಯೊಂದು ನಿಯಮಗಳನ್ನು ಜಾರಿ ಮಾಡುವಾಗಲೂ, ಜನರು “ನಮ್ಮಿಷ್ಟ, ಹೇಳುವುದಕ್ಕೆ ನೀವು ಯಾರು’ ಎಂಬ ಪ್ರಶ್ನೆಯ ಬಾಣವನ್ನು ಎಸೆದುಬಿಡುತ್ತಾರೆ. ಆದರೆ, ವೈಯಕ್ತಿಕ ಜೀವನವು ಸಾಮಾಜಿಕ ಜೀವನದ ಆಧಾರದಲ್ಲಿಯೇ ಸಾಗುತ್ತದೆ. “ನನ್ನ ಮಗು, ನನ್ನ ಇಷ್ಟ’ ಎಂಬ ಕಾರಣಕ್ಕೆ , ಮಕ್ಕಳು ಕಳ್ಳತನ ಮಾಡಿದಾಗ ತಿದ್ದದೇ ಇರುವುದು ಸಾಧ್ಯವೇ? ಹಾಗಾಗಿ, ವೈಯಕ್ತಿಕ ವಿಚಾರಗಳು ಒಟ್ಟು ಸಾಮಾಜಿಕ ಏಳಿಗೆಯ ದೃಷ್ಟಿಯಿಂದಲೂ ಮುಖ್ಯವಾಗುತ್ತವೆ. ಅವುಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕಾರಿಯಾಗಿರುತ್ತವೆ.

ಆದ್ದರಿಂದ ವಿರೋಧಕ್ಕಾಗಿಯೇ ವಿರೋಧ ಮಾಡುವುದರಿಂದ ಯಾರಿಗೂ ಏನೂ ಪ್ರಯೋಜನ ಆಗದು. ಎಲ್ಲದರಿಂದಲೂ ಒಳ್ಳೆಯ ಅಂಶಗಳನ್ನು ಸ್ವೀಕರಿಸುವ ಸಕಾರಾತ್ಮಕ ಮನೋಭಾವ ಇರಲಿ.

ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ
ಹಿತವಿರಲಿ ವಚನದಲಿ ಋತವ ಬಿಡದಿರಲಿ
ಮಿತವಿರಲಿ ಮನಸೀನುದ್ವೇಗದಲಿ ಭೋಗದಲಿ
ಅತಿಬೇಡವೆಲ್ಲಿಯೂ -ಮಂಕುತಿಮ್ಮ
ಎಂಬ ಡಿ.ವಿ.ಜಿ.ಯವರ ಕಗ್ಗದ ಸಾಲುಗಳು ಜೀವನದ ದಾರಿದೀಪವಾಗಲಿ.

ಶಾಂತಲಾ ಎನ್‌. ಹೆಗ್ಡೆ

Advertisement

Udayavani is now on Telegram. Click here to join our channel and stay updated with the latest news.

Next