Advertisement

ದೊಡ್ಡ ಬ್ಯಾಲದಕೆರೆ ಜನರ ಸಮಸ್ಯೆಗೆ ಸ್ಪಂದನೆ

03:21 PM Apr 17, 2022 | Team Udayavani |

ಚಿತ್ರದುರ್ಗ: ಹೊಸದುರ್ಗ ತಾಲೂಕಿನ ದೊಡ್ಡಬ್ಯಾಲದಕೆರೆ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಲ್ಲಿ ಗ್ರಾಮದ ಬಹುಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯಿತು. 106 ಅರ್ಜಿಗಳನ್ನು ಸ್ಥಳದಲ್ಲಿಯೇ ಸ್ವೀಕರಿಸಿ 29 ಅರ್ಜಿಗಳಿಗೆ ಪರಿಹಾರ ಒದಗಿಸಲಾಯಿತು.

Advertisement

ಗ್ರಾಮಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಆಗಮಿಸುತ್ತಲೇ ಪೂರ್ಣಕುಂಭದ ಸ್ವಾಗತ ನೀಡಲಾಯಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಮಹಿಳೆಯರು ಆರತಿ ಎತ್ತಿ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳನ್ನು ಗ್ರಾಮಕ್ಕೆ ಬರ ಮಾಡಿಕೊಂಡರು. ಜನರ ಪ್ರೀತಿ ಆದರಗಳಿಗೆ ಜಿಲ್ಲಾಧಿಕಾರಿ ಮನಸೋತರು.

ಸೀಮಂತ-ಅನ್ನಪ್ರಶಾನ

ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಗ್ರಾಮದ ಗರ್ಭಿಣಿ ಪರಿಮಳ ಅವರಿಗೆ ಉಡಿ ತುಂಬುದರ ಮೂಲಕ ಸೀಮಂತ ಕಾರ್ಯನಿರ್ವಹಿಸಿದರು. ಶಿಶು ಮಹಮದ್‌ ಹುಸೇನ್‌ ಗೆ ಅನ್ನಪ್ರಶಾನ ಮಾಡಿದರು.

ಗ್ರಾಮ ಹಿರಿಯ ಪ್ರಾಥಮಿಕ ಶಾಲೆಗೆ ಆಟದ ಮೈದಾನ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಿಸಲು ಜಾಗದ ತೊಂದರೆ ಬಹುದಿನಗಳಿಂದಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಯಪ್ಪ ಸಮಸ್ಯೆ ಪರಿಹರಿಸಲು ತಹಶೀಲ್ದಾರ್‌ ಹಾಗೂ ತಾಪಂ ಇಒ ಅವರಲ್ಲಿ ಕೋರಿಕೊಂಡರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ 100×50 ಅಡಿ ವಿಸ್ತೀರ್ಣ ಸರ್ಕಾರಿ ಜಾಗವನ್ನು ಶಾಲಾ ಹೆಸರಿಗೆ ನೋಂದಾಯಿಸಿ, ಹಕ್ಕುಪತ್ರ ಕಾರ್ಯಕ್ರಮದಲ್ಲಿ ನೀಡಲಾಯಿತು. ನಾಲ್ಕು ಕಟ್ಟಡಗಳನ್ನು ನಿರ್ಮಿಸುವುದಾಗಿ ಹಾಗೂ ಮನರೇಗಾದಡಿ ಶಾಲಾ ಕಾಂಪೌಡ್‌, ಶೌಚಾಲಯ ನಿರ್ಮಿಸುವುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದರು.

Advertisement

24 ಜನರಿಗೆ ಪಿಂಚಣಿ ಆದೇಶ

ಗ್ರಾಮ ವಾಸ್ತವ್ಯದ ಅಂಗವಾಗಿ ಗ್ರಾಮದಲ್ಲಿ ಸರ್ವೇ ಕಾರ್ಯಕೈಗೊಂಡು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯಲು ಅರ್ಹರಾದ 24 ಜನರಿನ್ನು ಗುರುತಿಸಲಾಗಿತ್ತು. ಅವರಿಂದ ಅಗತ್ಯ ದಾಖಲೆ ಪಡೆದುಕೊಂಡು ಪಿಂಚಣಿ ಮಂಜೂರು ಮಾಡಿ ಆದೇಶ ಪತ್ರ ವಿತರಿಸಲಾಯಿತು

ವೈದ್ಯಾಧಿಕಾರಿ ನೇಮಕ್ಕೆ ಕ್ರಮ

ದೊಡ್ಡ ಬ್ಯಾಲದಕೆರೆ ಸಮೀಪದ ಜಿ. ಎನ್. ಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಾನಿಕ ವೈದ್ಯರು ಹಾಗೂ ಕೆ.ಕೆ.ಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡುವಂತೆ ತಾಲೂಕು ವೈದ್ಯಾಧಿಕಾರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಡಿ. ಎಚ್.ಓ ಅವರೊಂದಿಗೆ ಮಾತನಾಡಿ ವೈದ್ಯರನ್ನು ನೇಮಿಸುವ ಭರವಸೆ ನೀಡಿದರು.

ದೊಡ್ಡಬ್ಯಾಲದಕೆರೆ ಕ್ರಾಸ್‌ಗೆ ಕೋರಿಕೆ ಬಸ್‌ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಒಕ್ಕೊರಲಿನಿಂದ ಮನವಿ ಮಾಡಿದರು. ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಹೊಸದುರ್ಗ ಬಸ್‌ ಡಿಪೋ ವ್ಯವಸ್ಥಾಪಕರಿಗೆ ಸಮಸ್ಯೆ ಇತ್ಯರ್ಥಕ್ಕೆ ಸೂಚನೆ ನೀಡಿದರು. ಹಾಸನ ಹಾಗೂ ಮೈಸೂರು ವ್ಯವಸ್ಥಾಪಕರಿಗೆ ಪತ್ರ ಬರೆದು, ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಕೋರಿಕೆ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವುದಾಗಿ ಹೊಸದುರ್ಗ ಬಸ್‌ ಡಿಪೋ ವ್ಯವಸ್ಥಾಪಕರು ತಿಳಿಸಿದರು.

ಇದೇ ವೇಳೆ ಗ್ರಾಮದಲ್ಲಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯ 5 ಲಕ್ಷ ಅನುದಾನದಡಿ ನಿರ್ಮಿಸಲಾಗಿರುವ ನೂತನ ಅಂಗನವಾಡಿ ಕೇಂದ್ರವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು. ಗ್ರಾಮವಾಸ್ತವ್ಯದ ಅಂಗವಾಗಿ ಜಿಲ್ಲಾಧಿಕಾರಿಗಳು ಅಂಗನವಾಡಿ ಕೇಂದ್ರದಲ್ಲಿ ಉಳಿದುಕೊಂಡರು.

ತಹಶೀಲ್ದಾರ್‌ ಮಲ್ಲಿಕಾರ್ಜುನ್‌, ತಾಪಂ ಇಒ ವಿಶ್ವನಾಥ್‌, ಗ್ರಾಪಂ ಅಧ್ಯಕ್ಷೆ ಕರಿಯಮ್ಮ, ವಿಕಲಚೇತನರ ಕಲ್ಯಾಣಾಧಿಕಾರಿ ವೈಶಾಲಿ ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next