Advertisement

ರಕ್ಷಣಾತಂತ್ರಗಳಿಗೆ ಪ್ರತಿತಂತ್ರಗಳು!

06:10 PM Oct 17, 2019 | mahesh |

ಮಕ್ಕಳ ಮನೋವಿಜ್ಞಾನದ ಅರಿವಿರದವರು, ಮಕ್ಕಳ ಮನಸ್ಸನ್ನು ಅರಿಯದವರು ಒಬ್ಬ ಉತ್ತಮ ಶಿಕ್ಷಕನಾಗಲು ಸಾಧ್ಯವಿಲ್ಲ. ಪಾಠ ಬೋಧನೆಯ ಮೂಲಕ ತನ್ನ ಜ್ಞಾನವನ್ನು ಮಗುವಿಗೆ ವರ್ಗಾಯಿಸಿದ ತಕ್ಷಣ ಒಬ್ಬ ನಿಜಾರ್ಥದ ಶಿಕ್ಷಕನಾಗಲಾರ. ಶಿಕ್ಷಣ ಕೂಡ ಒಂದು ಶಾಸ್ತ್ರ ಅಥವಾ ವಿಜ್ಞಾನ. ಶೈಕ್ಷಣಿಕ ಮನೋವಿಜ್ಞಾನ ಶಿಕ್ಷಣ ಶಾಸ್ತ್ರದ ಅವಿಭಾಜ್ಯ ಅಂಗ. ಇವೆರಡನ್ನು ಸಮನ್ವಯಿಸಿಕೊಂಡು ಮಕ್ಕಳೊಂದಿಗೆ ಬೆರೆಯುವವನಷ್ಟೇ ಉತ್ತಮ ಶಿಕ್ಷಕನಾಗಬಲ್ಲ. ಒಂದೊಂದು ಪ್ರಾಯದಲ್ಲಿ ಮಗುವಿನಲ್ಲಾಗುವ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಬೌದ್ಧಿಕ ಬೆಳವಣಿಗೆಯ ಸಮಗ್ರ ಮಾಹಿತಿ ತಿಳಿದುಕೊಂಡರಷ್ಟೇ ಅವರಿಗೆ ಅರ್ಥವಾಗುವ ಹಾಗೂ ಇಷ್ಟವಾಗುವ ರೀತಿಯಲ್ಲಿ ಪಾಠ ಮಾಡಲು ಸಾಧ್ಯ. ಶಿಕ್ಷಕ ತರಬೇತಿಯಲ್ಲಿ ನಾವು ಕಲಿತ ಮನೋವಿಜ್ಞಾನ ಹಲವು ಸಂದರ್ಭಗಳಲ್ಲಿ ಆಪದಾºಂಧವನಂತೆ ನಮ್ಮ ಸಹಾಯಕ್ಕೆ ನಿಲ್ಲುವುದುಂಟು, ಸಮಸ್ಯಾ ಪರಿಹಾರಕ್ಕೆ ಸಹಕರಿಸುವುದುಂಟು, ಒಂದು ಮಗುವಿನ ಮುರುಟಿ ಹೋಗಬಹುದಾದ ಬಾಲ್ಯವನ್ನೂ, ಶಿಕ್ಷಣವನ್ನೂ ಇದರ ಸಹಾಯದಿಂದ ಪುನರುಜ್ಜೀವಿಸಬಹುದು.

Advertisement

ನಮ್ಮ ಶಾಲೆಯಲ್ಲಿ ಒಬ್ಬಳು ಹುಡುಗಿ ಆಗಾಗ ಫಿಟ್ಸ್ ಬಂದವಳಂತೆ ಸ್ಮತಿ ತಪ್ಪಿ ಬೀಳುತ್ತಿದ್ದಳು. ಉತ್ತಮ ಓಟಗಾರ್ತಿಯಾದ ಅವಳು ಹೀಗೆ ಬೀಳುವ ಮೊದಲು ವಿಕಾರವಾಗಿ ಕಿರುಚಿಕೊಳ್ಳುತ್ತಿದ್ದಳು. ಆದರೆ ಫಿಟ್ಸ…ನ ಇತರ ಯಾವ ಲಕ್ಷಣಗಳೂ ಅವಳಿಗಿರಲಿಲ್ಲ. ಕಲಿಕೆಯಲ್ಲಿ ಹಿಂದುಳಿದಿದ್ದ ಅವಳು ಹತ್ತನೆಯ ತರಗತಿಗೆ ಬಂದಾಗ ಇಂತಹ ವರ್ತನೆಯನ್ನು ಹೆಚ್ಚುಹೆಚ್ಚಾಗಿ ತೋರಿಸತೊಡಗಿದಳು. ಅನಕ್ಷರಸ್ಥರಾದ ಅವಳ ಮನೆಯವರು ನಮ್ಮ ಮಾತುಗಳಿಗೆ ಸ್ಪಂದಿಸದೆ ಅವಳ ವರ್ತನೆಯನ್ನು ಸಮರ್ಥಿಸತೊಡಗಿ, ಅತಿ ಎಚ್ಚ ರ ವ ಹಿ ಸ ತೊ ಡ ಗಿದರು. ಅವಳು ಅದನ್ನು ಬಂಡವಾಳ ಮಾಡಿಕೊಂಡು ಶಾಲೆ ತಪ್ಪಿಸತೊಡಗಿದಳು. ಹತ್ತನೆಯ ತರಗತಿಯ ವಾರ್ಷಿಕ ಪರೀಕ್ಷೆ ಸಮೀಪಿಸಿದಾಗ ಶಾಲೆಗೆ ಬರುವುದನ್ನು ಪೂರ್ಣವಾಗಿ ನಿಲ್ಲಿಸಿದಳು. ಅವಳದ್ದು ನಿಜ ರೋಗವಲ್ಲ, ಅವಳಿಗೆ ಅರಿವಿದ್ದೋ ಇಲ್ಲದೆಯೋ ಮಾಡುವ ನಾಟಕ, ಅದಕ್ಕೆ ನಾವು ಹೇಳಿದಂತೆ ಕೇಳಿ ಅಥವಾ ಡಾಕ್ಟರ್‌ ಬಳಿ ಕರೆದುಕೊಂಡು ಹೋಗಿ ಎಂದರೂ ಮನೆಯವರು ಸ್ಪಂದಿಸಲಿಲ್ಲ. ಅವಳ ವಿಷಯದಲ್ಲಿ ನಾವು ಸೋಲೊಪ್ಪಿಕೊಳ್ಳಬೇಕಾಯ್ತು. ಅದೇ ಸಮಯದಲ್ಲಿ ಶಾಲೆಯಲ್ಲಿ ಇದೊಂದು ಸಮೂಹ ಸನ್ನಿಯಾಗುವ ಲಕ್ಷಣಗಳು ಗೋಚರಿಸಿದವು. ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದ ಇನ್ನೊಬ್ಬಳು ಹುಡುಗಿ ಏಕಾಏಕಿ ತರಗತಿಯಲ್ಲಿ ಕಿರುಚಿ ದಾಂಧಲೆ ಮಾಡತೊಡಗಿದಳು. “ನಾನು ನಾಗಿನಿ’ ಎನ್ನುತ್ತ ಕೂಗಿ ವಿಚಿತ್ರ ವರ್ತನೆ ತೋರತೊಡಗಿದಳು. ನಾವು ಅವಳನ್ನು ಶಿಕ್ಷಕರ ಕೊಠಡಿಗೆ ಕರೆತಂದೆವು. ಅನುನಯದಲ್ಲಿ ಮಾತನಾಡಿಸಿದೆವು. ಅವಳು ತಾನು ಇನ್ನಾರೋ ಎಂಬ ರೀತಿಯಲ್ಲಿ ಮಾತನಾಡಿದರೆ ನಾವು ನಿಜವಾದ ಅವಳ ಹೆಸರಿØಡಿದು ಕರೆದು ಅವಳಲ್ಲಿ ಮಾತನಾಡುತ್ತಿದ್ದೆವು. ನಮ್ಮ ಮಾತಿನ ದಾಟಿ ಗದರುವಿಕೆಯ ಕಡೆಗೂ, ಸಾಂತ್ವನದ ಕಡೆಗೂ ಆಗಾಗ ಬದಲಾಗುತಿತ್ತು. ಆದರೆ ನಾವು ಅವಳ ನಾಟಕವನ್ನು ನಂಬಲೇ ಇಲ್ಲ ಎಂಬಂತೆ ದೃಢವಾಗಿದ್ದೆವು. ನಮ್ಮಿಂದ ಅವಳಿಗೆ ಅನುಕೂಲಕರವಾದ ಸ್ಪಂದನೆ ದೊರೆಯದಿದ್ದಾಗ ಅವಳ ಸ್ಕ್ರಿಫ್ಟ್, ಸ್ಟೋರಿ ಲೈನ್‌ ಎಲ್ಲವೂ ತುಂಡರಿಸಲ್ಪಟ್ಟು ತಬ್ಬಿಬ್ಟಾದಳು. ಸ್ವಲ್ಪ ಹೊತ್ತಿನಲ್ಲಿ ಸರಿ ಹೋದಳು. ಆದರೆ ಪುನಃ ಕೆಲವು ಸಲ ಅವಳು ನಾಟಕ ಪುನರಾರಂಭಿಸುವ ಪ್ರಯತ್ನ ಮಾಡಿದಳು. ಅವಳ ಹೆತ್ತವರು ವಿದ್ಯಾವಂತರಲ್ಲದಿದ್ದರೂ ನಮ್ಮ ಮಾತುಗಳಿಗೆ ಸ್ಪಂದಿಸಿದರು. ಅದೃಷ್ಟವಶಾತ್‌ ಅದೇ ವಾರ ನಮ್ಮ ಶಾಲೆಗೆ ಒಬ್ಬರು ಮನೋರೋಗ ತಜ್ಞರು ಒಂದು ಕಾರ್ಯಕ್ರಮಕ್ಕಾಗಿ ಬರುವವರಿದ್ದರು. ಅಗತ್ಯ ಇರುವ ಕೆಲವು ಮಕ್ಕಳಿಗೆ ಅವರಿಂದ ಕೌನ್ಸೆಲಿಂಗ್‌ ಕೊಡಿಸಿದೆವು. ಇವಳನ್ನೂ ಡಾಕ್ಟರ್‌ ಬಳಿ ಕಳಿಸಿದೆವು. ಡಾಕ್ಟರಿಗೆ ಅವಳ ವರ್ತನೆಯ ಬಗ್ಗೆಯೂ ತಿಳಿಸಿದೆವು. ಸದ್ಯ ಕೆಲವು ದಿನಗಳಲ್ಲೇ ಅವಳು ಔಷಧಿಯಿಲ್ಲದೇ ಸಂಪೂರ್ಣ ಗುಣಮುಖಳಾದಳು.

ಇನ್ನೂ ಒಂದಿಬ್ಬರು ಸುಮ್ಮನೆ ಕೂಗಾಡುವುದು, ಹೆದರಿಕೆ ಅನ್ನುವುದು ನಡೆದಾಗ ನಾವು ಶಿಕ್ಷಕರೇ ಕರೆದು ಸರಿಯಾಗಿ ಗದರಿಸಿದೆವು. ಬುದ್ಧಿಮಾತು ಹೇಳಿದೆವು. ಆ ಸಮಸ್ಯೆಗಳೂ ಬಗೆಹರಿದವು. ಇತ್ತೀಚೆಗೆ ಒಬ್ಬಳು ಹುಡುಗಿ “ನಾನೆಲ್ಲಿದ್ದೇನೆ? ಇವರೆಲ್ಲ ಯಾರು? ನನಗಿವರು ಯಾರೂ ಗೊತ್ತಿಲ್ಲ…’ ಎಂದೆಲ್ಲಾ ಬೊಬ್ಬೆ ಹಾಕತೊಡಗಿದಳು. ಅವಳಿಗೂ ಆಗಾಗ ಸ್ಮತಿ ತಪ್ಪಿ ಬೀಳುವ ಅಭ್ಯಾಸ (ರೋಗವಲ್ಲ, ಅಭ್ಯಾಸ) ಇತ್ತು. ಮೊದಮೊದಲು ಅವಳು ಸ್ಮತಿ ತಪ್ಪಿ ಬೀಳುವಾಗ ನಾವದನ್ನು ನಿಜವೆಂದೇ ನಂಬಿದ್ದೆವು. ನಂತರ ನಮಗೆ ಯಾಕೋ ಸಂದೇಹ ಬಂತು. ನೋಟ್ಸ… ಬರೆದು ತೋರಿಸಲಿಕ್ಕಿದ್ದಾಗ, ಪ್ರಾಜೆಕ್ಟ್ ಸಬಿಟ್‌ ಮಾಡಲಿಕ್ಕಿದ್ದಾಗ ಅವಳಲ್ಲಿ ಇಂತಹ ಲಕ್ಷಣಗಳು ಕಂಡು ಬರುತ್ತಿದೆ ಎಂದು ನಮಗೆ ತಿಳಿಯಿತು. ತನಗೆ ಯಾರೂ ಪರಿಚಯ ಇಲ್ಲ, ಇವರೆಲ್ಲ ನನಗೆ ಗೊತ್ತಿಲ್ಲ ಎಂದೆಲ್ಲ ಕೂಗಾಡತೊಡಗಿದಳು. ಅವಳ ಕ್ಲಾಸ್‌ ಟೀಚರಾದ ಶಿಕ್ಷಕಿ ಅವಳು ದರದರನೇ ಅವಳನ್ನು ತರಗತಿಗೆ ಕರೆದೊಯ್ದು ಅವಳ ಹತ್ತಿರ ಕುಳಿತುಕೊಳ್ಳುವ ಹುಡುಗಿಯನ್ನು ತೋರಿಸಿ, “ಇವಳು ಯಾರು, ಬೇಗ ಹೇಳು’ ಎಂದರು. ಅವಳು ನಾಟಕ ಮುಂದುವರಿಸಿದಳು. ಶಿಕ್ಷಕಿ ಬಿಡಲಿಲ್ಲ. ಅವಳಲ್ಲಿ ಕೇಳುತ್ತಲೇ ಇದ್ದರು. ಕೊನೆಗೆ ಸೋತ ಅವಳು ಆ ಹುಡುಗಿಯ ಹೆಸರು ಹೇಳಿದಳು. ಉಳಿದ ಸಹಪಾಠಿಗಳ ಹೆಸರುಗಳನ್ನೂ ಹೇಳಿದಳು. ಶಾಲೆ ಆರಂಭವಾದ ತಿಂಗಳಲ್ಲಿ ಹಲವು ಬಾರಿ ಬೀಳುತ್ತಿದ್ದವಳು ಈಗ ಮೂರುನಾಲ್ಕು ತಿಂಗಳುಗಳಿಂದ ಯಾವುದೇ ಸಮಸ್ಯೆಯಿಲ್ಲದೆ ಇದ್ದಾಳೆ. ಈ ಯಾವ ಪ್ರಕರಣಗಳಲ್ಲೂ ಪೆಟ್ಟಿನ ರೂಪದ ಶಿಕ್ಷೆಯನ್ನು ಬಳಸಿಲ್ಲ. ಬಾಯಿಮಾತಿನ ಗದರುವಿಕೆ ಅದಕ್ಕಿಂತ ಹೆಚ್ಚಾದ ಪ್ರೀತಿಪೂರ್ವಕ ಮಾತುಗಳ ಮೂಲಕ ನಾವು ನಮ್ಮ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿದೆವು ಎನ್ನಲು ಹೆಮ್ಮೆಯೆನಿಸುತ್ತದೆ. ಇಲ್ಲೂ ಶಿಕ್ಷಕರ ಪರಸ್ಪರ ಹೊಂದಾಣಿಕೆ ಹಾಗೂ ಬೆಂಬಲದ ಪಾತ್ರವೂ ಬಹಳವಿತ್ತು.

ಮಕ್ಕಳನ್ನು ಹತ್ತಿರದಿಂದ ಬಲ್ಲ ನಮಗೆ ಅವರದ್ದು ನಿಜ ಸಮಸ್ಯೆಯಲ್ಲ , ನಾಟಕ ಅನ್ನುವುದು ಸುಲಭದಲ್ಲಿ ತಿಳಿಯುತ್ತದೆ. ಹದಿಹರೆಯದ ಭಾವೋದ್ವೇಗಕ್ಕೆ ಒಳಗಾದಾಗ, ಪ್ರಾಥಮಿಕ ಶಾಲೆಯ ಪರೀಕ್ಷಾ ರಹಿತ ಪದ್ಧತಿಯಿಂದ, ಸ್ವತಂತ್ರ ಜೀವನದಿಂದ ಪ್ರೌಢಶಾಲೆಯ ಕಲಿಯಲೇಬೇಕಾದ ಅನಿವಾರ್ಯತೆಗೆ ಬದಲಾದಾಗ ಹಲವು ಒಗ್ಗಿಕೊಳ್ಳುವಿಕೆಯ ಸಮಸ್ಯೆಗಳು ತಲೆದೋರುತ್ತವೆ. ಆಗ ಆ ಸಂದರ್ಭಗಳಿಂದ ತಪ್ಪಿಸಿಕೊಳ್ಳಲೆಂದು ಮಕ್ಕಳು ಇಂತಹ ರಕ್ಷಣಾ ತಂತ್ರಗಳನ್ನು ಅನುಸರಿಸತೊಡಗುತ್ತಾರೆ. ಅವರನ್ನು ನಿಭಾಯಿಸಲು ಅಧ್ಯಾಪಕ-ಅಧ್ಯಾಪಕಿಯರಿಗೆ ಅಪಾರ ತಾಳ್ಮೆ ಬೇಕಾಗುತ್ತದೆ.

ಜೆಸ್ಸಿ ಪಿ. ವಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next