Advertisement

ಅನರ್ಹರಿಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬನ್ನಿ ಎಂದು ಆಹ್ವಾನ ನೀಡಿರಲಿಲ್ಲ: ಸೋಮಣ್ಣ

08:32 PM Nov 04, 2019 | Sriram |

ಬೆಳಗಾವಿ: ಅನರ್ಹ ಶಾಸಕರಿಗೆ ನಾವೇನು ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿಲ್ಲ. ನಾವಾಗಲಿ ಅಥವಾ ಅವರಾಗಲಿ ಅರ್ಜಿ ಹಾಕಿರಲಿಲ್ಲ. ಅವರೆಲ್ಲ ಸಿದ್ದರಾಮಯ್ಯ ಫೋಟೊ ಹಿಡಿದುಕೊಂಡೇ ಗೆದ್ದು ಬಂದವರು. ಅವರ ರಾಜೀನಾಮೆಗೆ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ವಸತಿ ಸಚಿವ ಸೋಮಣ್ಣ ಆರೋಪಿಸಿದರು.

Advertisement

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಯಾರನ್ನೂ ರಾಜೀನಾಮೆ ಕೊಟ್ಟು ಬನ್ನಿ ಎಂದು ಕರೆದಿರಲಿಲ್ಲ. ಸಿದ್ದರಾಮಯ್ಯ ಅವರಿಂದ ಬೇಸತ್ತು ಅನರ್ಹರು ರಾಜೀನಾಮೆ ನೀಡಿದ್ದಾರೆ. ಅವರು ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿನ ಅವ್ಯವಸ್ಥೆ, ಅಲ್ಲಿ ತಮಗೆ ಗೌರವ ಸಿಗದ್ದಕ್ಕೆ ಬೇಸತ್ತು ಅವರೆಲ್ಲ ರಾಜೀನಾಮೆ ನೀಡಿದ್ದರು ಎಂದರು.

ರಾಜೀನಾಮೆ ನೀಡಿರುವ 17 ಜನ ಶಾಸಕರಲ್ಲಿ 14 ಜನರು ಸಿದ್ದರಾಮಯ್ಯ ಫೋಟೋ ಹಾಕಿಕೊಂಡು ಗೆದ್ದು ಬಂದವರು. ನಾವು ಯಾರನ್ನೂ ಕರೆದಿರಲಿಲ್ಲ. ಅವರು ಅತೃಪ್ತರಾಗಲು ಸಿದ್ದರಾಮಯ್ಯ ಕಾರಣ ಎಂದು ಪದೇ ಪದೇ ಹೇಳಬೇಕಿಲ್ಲ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ತೃಪ್ತಿಪಡಿಸಲು ಸಿದ್ದರಾಮಯ್ಯ ಈ ಕೆಲಸ ಮಾಡಿದ್ದಾರೆ. ಅವರು ತೋಡಿದ ಗುಂಡಿಗೆ ಅವರೇ ಬಿದ್ದಿದ್ದಾರೆ ಎಂದರು.

ಕಾಂಗ್ರೆಸ್‌ ನಾಯಕರು ಯಾವಾಗಲೂ ಶೋ ರಾಜಕಾರಣ ಮಾಡುತ್ತಾ ಬಂದವರು. ಈಗ ಯಾವುದೊ ಆಡಿಯೋ, ವಿಡಿಯೋ ವಿವಾದ ಹುಟ್ಟು ಹಾಕಿದ್ದಾರೆ. ಸಿಎಂ ಹೇಳಿರುವ ಧಾಟಿಯೇ ಬೇರೆ. 17 ಶಾಸಕರು ರಾಜೀನಾಮೆ ನೀಡದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದಿದ್ದಾರೆ. ಹೀಗಾಗಿ ರಾಜ್ಯದ ಜನರ ಮನಸ್ಸಿನಿಂದ ಯಡಿಯೂರಪ್ಪ ಅವರನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಸಿದ್ದರಾಮಯ್ಯಗೆ ಬರಗಾಲ ಹಾಗೂ ಅತಿವೃಷ್ಟಿಗಿರುವ ವ್ಯತ್ಯಾಸ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next