Advertisement

ವಸತಿ ನೋಡಲ್‌ ಅಧಿಕಾರಿಗಳಿಗೆ 40 ತಿಂಗಳಿನಿಂದ ವೇತನ ಸಿಕ್ಕಿಲ್ಲ !

08:10 PM Oct 11, 2019 | mahesh |

ಪುತ್ತೂರು: ಒಂದೆಡೆ ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕುಟುಂಬಗಳಿಗೆ ಸೂರು ಒದಗಿಸುವ ಪ್ರಕ್ರಿಯೆ ವಿಳಂಬವಾಗುತ್ತಿದ್ದರೆ, ಇನ್ನೊಂದೆಡೆ ಸರ್ವರಿಗೂ ಸೂರು ಸಿಗಬೇಕು ಎಂಬ ಉದ್ದೇಶದಿಂದ ನೇಮಕ ಆಗಿರುವ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ವಸತಿ ನೋಡಲ್‌ ಅಧಿಕಾರಿಗಳಿಗೆ 40 ತಿಂಗಳಿಂದ ವೇತನವೇ ಸಿಕ್ಕಿಲ್ಲ! ಈ ಎರಡು ಸಮಸ್ಯೆಗಳಿಗೆ ತತ್‌ಕ್ಷಣ ಪರಿಹಾರ ಒದಗಿಸಬೇಕಿರುವ ಸರಕಾರ ಮಾತ್ರ ವಿಳಂಬ ಧೋರಣೆ ಅನುಸರಿಸುತ್ತಿದೆ.

Advertisement

206 ವಸತಿ ಅಧಿಕಾರಿಗಳು
2010-11ನೇ ಸಾಲಿನಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮವು ಎಲ್ಲ ತಾ.ಪಂ.ಗಳಲ್ಲಿ ವಸತಿ ನೋಡಲ್‌ ಅಧಿಕಾರಿಗಳನ್ನು ಗುತ್ತಿಗೆ ಪದ್ಧತಿಯಡಿ ನಿಯಕ್ತಿಗೊಳಿಸಲು ನಿರ್ಧರಿಸಿತ್ತು. ಅದರ ಅನ್ವಯ ಲಿಖೀತ ಪರೀಕ್ಷೆ, ಮೌಖೀಕ ಸಂದರ್ಶನ ನಡೆಸಿ ಅರ್ಹರನ್ನು ಆಯ್ಕೆ ಮಾಡಿತ್ತು. ರಾಜ್ಯದ 176 ತಾಲೂಕು ಮತ್ತು 30 ಜಿಲ್ಲಾ ಕೇಂದ್ರಗಳಲ್ಲಿ ಒಟ್ಟು 206 ವಸತಿ ನೋಡಲ್‌ ಅಧಿಕಾರಿಗಳು 8 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಯಾ ತಾಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ ಓರ್ವ ಅಧಿಕಾರಿ ಇದ್ದು, 196 ಮಂದಿ ಕರ್ತವ್ಯದಲ್ಲಿದ್ದಾರೆ.

ಹೊರಗುತ್ತಿಗೆ ವಿರುದ್ಧ ದಾವೆ
2015ರಲ್ಲಿ ನಿಗಮವು ವಸತಿ ನೋಡಲ್‌ ಅಧಿಕಾರಿಗಳ ಗುತ್ತಿಗೆ ಆಧಾರಿತ ಪದ್ಧತಿ ಬದಲಾಯಿಸಿ ಹೊರಗುತ್ತಿಗೆ ಮೂಲಕ ಸೇವೆ ಪಡೆಯಲು ಸೂಚಿಸಿತ್ತು. 2 ವರ್ಷ ಗುತ್ತಿಗೆ ಅವಧಿ ಪೂರೈಸಿದವರನ್ನು ಖಾಯಂ ಮಾಡಬೇಕು ಎಂಬ ಬೇಡಿಕೆಗೂ ಪೂರ್ಣ ನ್ಯಾಯ ಸಿಗಲಿಲ್ಲ. ಇದರ ವಿರುದ್ಧ 2015ರಲ್ಲಿ ಸಿಬಂದಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 2016 ಮೇ ತಿಂಗಳ ಅನಂತರ ಸಿಬಂದಿಗೆ ನಿಗಮವು ವೇತನ ಪಾವತಿ ಸ್ಥಗಿತಗೊಳಿಸಿತ್ತು. ನಿಗಮದ ವತಿಯಿಂದ ಹೈಕೋರ್ಟ್‌ ನಲ್ಲಿ ಹಾಜರಾದ ಅಧಿಕಾರಿ ನ್ಯಾಯಾಲಯ ಅಂತಿಮ ತೀರ್ಮಾನ ಕೈಗೊಂಡರೆ ಪೂರ್ಣ ವೇತನ ನೀಡುವ ಭರವಸೆ ನೀಡಿದ್ದರು.

ವೇತನ ಇಲ್ಲವಾದರೂ ಹೆಚ್ಚಿನ ಸಿಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಉಚ್ಚ ನ್ಯಾಯಾಲಯ ವಸತಿ ನೋಡಲ್‌ ಅಧಿಕಾರಿಗಳನ್ನು ಯೋಜನೆ ಇರುವ ತನಕ ಮುಂದುವರಿಸಬೇಕು ಎಂಬ ಮಧ್ಯಾಂತರ ಆದೇಶ ನೀಡಿರುವುದು ಸಮಧಾನ ತಂದರೂ ಬಾಕಿ ವೇತನ ಪಾವತಿ ಮಾತ್ರ ಇನ್ನೂ ಆಗಿಲ್ಲ.

ಗೋಳು ಕೇಳುವವರಿಲ್ಲ
ವೇತನ ಪಾವತಿ ಆಗದ ಕಾರಣ ಬಹುತೇಕ ಸಿಬಂದಿಯ ಜೀವನ ಸಂಕಷ್ಟದಲ್ಲಿದೆ. ಈ ಅಧಿಕಾರಿಗಳ ಅಗತ್ಯ ಮತ್ತು ಅನಿವಾರ್ಯತೆಯ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಜಿ.ಪಂ.
ಸಿಇಒ, ಜಿಲ್ಲಾಧಿಕಾರಿಗಳು ನಿಗಮಕ್ಕೆ ಪತ್ರ ಬರೆದಿದ್ದರೂ ನಿಗಮ ಅದಕ್ಕೆ ಸ್ಪಂದಿಸಿಲ್ಲ. ರಾಜ್ಯದ ನಾನಾ ಕಡೆ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಸೂರು ಒದಗಿಸುವ ಪ್ರಕ್ರಿಯೆಗೆ ವೇಗಸಿಗಬೇಕಿದ್ದು, ಈ ಸಿಬಂದಿಯ ಸೇವೆ ಅತ್ಯಗತ್ಯ.

Advertisement

ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು
ನಿಯಮಾನುಸಾರ ನೇಮಕಗೊಂಡ ತಾಲೂಕು ವಸತಿ ನೋಡೆಲ್‌ ಅಧಿಕಾರಿಗಳನ್ನು ಯಥಾಸ್ಥಿತಿ ಮುಂದುವರಿಸಿಕೊಂಡು, ವೇತನ ಬಿಡುಗಡೆ ಮಾಡಲು ಕಳೆದ ತಿಂಗಳು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಆದರೂ ವೇತನ ಬಂದಿಲ್ಲ. ಇದರ ಪ್ರಕ್ರಿಯೆ ವಸತಿ ಇಲಾಖೆ ಕಾರ್ಯದರ್ಶಿಯ ಹಂತದಲ್ಲಿದೆ ಎಂಬ ಉತ್ತರವಷ್ಟೇ ಸಿಕ್ಕಿದೆ ಎನ್ನುತ್ತಾರೆ ಕೆಲವು ಸಿಬಂದಿ.

ವಸತಿ ನೋಡಲ್‌ ಅಧಿಕಾರಿಗಳು ಟಾರ್ಗೆಟ್‌
ಗ್ರಾ.ಪಂ., ತಾ.ಪಂ., ಜಿ.ಪಂ.ನಲ್ಲಿ ನಡೆಯುವ ಸಭೆಗಳಲ್ಲಿ ವಸತಿ ಯೋಜನೆಗಳ ಪ್ರಗತಿ ಬಗ್ಗೆ ಜನಪ್ರತಿನಿಧಿಗಳು, ಮೇಲಧಿಕಾರಿಗಳು, ಸಾರ್ವಜನಿಕರು ವಸತಿ ನೋಡಲ್‌ ಅಧಿಕಾರಿಗಳನ್ನೇ ಪ್ರಶ್ನಿಸುತ್ತಾರೆ. ಆದರೆ ಸಿಬಂದಿ ವೇತನವಿಲ್ಲದೆ ದುಡಿಯಬೇಕಾದ ಸ್ಥಿತಿ ಬಗ್ಗೆ ಸಭೆಗಳಲ್ಲಿ ಯಾರೂ ಚಕಾರ ಎತ್ತುತ್ತಿಲ್ಲ.

ವೇತನ ಪಾವತಿಗೆ ತತ್‌ಕ್ಷಣ ಕ್ರಮ
ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಬುಧವಾರ ಚರ್ಚೆ ಮಾಡಿದ್ದೇನೆ. ಎರಡು ದಿನಗಳಲ್ಲಿ ಪೂರ್ಣ ಮಾಹಿತಿ ಸಂಗ್ರಹಿಸಿ, ಪ್ರಕ್ರಿಯೆಗೆ ವೇಗ ನೀಡಿ ತತ್‌ಕ್ಷಣ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next