Advertisement

ದೇಶದ ಹಿತಚಿಂತನೆಯೇ ಮುಖ್ಯ, ಮತಧರ್ಮ, ನಾಮಾಂಕಿತಗಳಲ್ಲ: ಅಣ್ಣಾಮಲೈ

11:23 PM Jan 26, 2020 | Sriram |

ಮೂಡುಬಿದಿರೆ: ಸ್ವಂತ ಹೆಸರು, ಮತಧರ್ಮಗಳಿಗಿಂತ ದೇಶದ ಹಿತ ಚಿಂತನೆ ಮುಖ್ಯ. ಈ ದೇಶದಿಂದ ಬಹಳಷ್ಟನ್ನು ಪಡೆದ ನಾವು ಪ್ರತಿಯಾಗಿ ದೇಶಕ್ಕೆ ಏನು ಕೊಡುಗೆ ಕೊಡಬಲ್ಲೆವು ಎಂದು ಚಿಂತಿಸಬೇಕಾಗಿದೆ ಎಂದು ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಹೇಳಿದರು.

Advertisement

ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಆಶ್ರಯದಲ್ಲಿ 71ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜರೋಹಣ ನೆರವೇರಿಸಿ ಅವರು ಮಾತನಾಡಿದರು.

40 ಕೋಟಿ ಹಸಿದ ಹೊಟ್ಟೆಗಳು
ಅಬ್ದುಲ್‌ ಕಲಾಂ ಕಂಡ 2020 ಕನಸು ನನಸಾಗಿಲ್ಲ. 130 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ 40 ಕೋಟಿ ಮಂದಿ ಹಸಿದ ಹೊಟ್ಟೆಯಲ್ಲೇ ಇದ್ದಾರೆ. ಹದಿಮೂರುವರೆ ಲಕ್ಷ ಯೋಧರು ದೇಶದ ಗಡಿರಕ್ಷಣೆ ಮಾಡುತ್ತಿದ್ದಾರೆ. ಇದರೊಂದಿಗೆ ನಮ್ಮ ದೇಹದ ಆರೋಗ್ಯ ರಕ್ಷಣೆ ಕಾಪಾಡಿಕೊಳ್ಳಲು ಸರಕಾರ ವ್ಯವಸ್ಥೆ ಮಾಡಿದೆ. ಆದರೆ, ದೇಶ ಚೆನ್ನಾಗಿರಲು ನಾವೇನು ಮಾಡಿದ್ದೇವೆ ಎಂಬುದನ್ನು ಚಿಂತಿಸಬೇಕಾಗಿದೆ. ದೇಶದ ಅಶಾಂತಿ , ಗೊಂದಲ ನಿವಾರಣೆಗೆ ಹಣ, ಸಮಯ, ಜ್ಞಾನ ವಿನಿಯೋಗಿಸಲು, ಹೆಣ್ಮಕ್ಕಳ ಮಾನ, ಪ್ರಾಣ ರಕ್ಷಣೆ ಮಾಡಲು ನಾವು ಮುಂದೆ ಬರಬೇಕಾಗಿದೆ ಎಂದು ಅವರು ಹೇಳಿದರು.

ಪುಟ್ಟ ಪುಟ್ಟ ಸೇವೆ ಎಂಬುದೇ ಕರ್ತವ್ಯ
ದೇಶ ಕಟ್ಟುವ, ದೇಶವಾಸಿಗಳನ್ನು ಚಾರಿತ್ರ್ಯವಂತರನ್ನಾಗಿಸುವ, ಮೌಲ್ಯಗಳನ್ನು ಬಿತ್ತಿ ಬೆಳೆಸುವ ಸಂಘಸಂಸ್ಥೆಗಳು ನಮಗಿಂದು ಬೇಕಾಗಿವೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಆಳ್ವಾಸ್‌ ಒಂದು ಆದರ್ಶ ವಿದ್ಯಾಲಯವಾಗಿ ರೂಪಿತವಾಗಿದೆ.

ಆಳ್ವಾಸ್‌ ಶಿಕ್ಷಣಾಲಯ ಕೇವಲ ಶಿಕ್ಷಣಕ್ಕೆ ಸೀಮಿತವಾಗಿಲ್ಲ, ಉತ್ತಮ ನಡತೆ, ಮೌಲ್ಯಗಳೊಂದಿಗೆ ದೇಶ ಕಟ್ಟುವ ಕಾರ್ಯವನ್ನೂ ಮಾಡುತ್ತಿದೆ, ಅದರ ಒಂದು ಸ್ವರೂಪವೇ ಇಂದಿನ ಗಣರಾಜ್ಯೋತ್ಸವ ಎಂದು ವಿಶೇಷವಾಗಿ ಉಲ್ಲೇಖೀಸಿದರು.

Advertisement

ಅತಿಥಿಗಳನ್ನು ಕೆಡೆಟ್‌ ಕ್ಯಾಪ್ಟನ್‌ ಚಂದನ ಎಸ್‌., ಪಿಟಿ ಆಫೀಸರ್‌ಗಳಾದ ಕೀರ್ತನಾ ಶೆಟ್ಟಿ, ಶರಣ್ಯ ಎಂ.ಎನ್‌, ಸೇಜಲ್‌ ಅವರು ವೇದಿಕೆಗೆ ಕರೆತಂದರು. ಪೆರೇಡ್‌ ಕಮಾಂಡರ್‌ ಸೀನಿಯರ್‌ ಅಂಡರ್‌ ಆಫೀಸರ್‌ ಮುತ್ತಮ್ಮ ವರದಿ ನೀಡಿದರು. ಗಾರ್ಡ್‌ ಕಮಾಂಡರ್‌ ಜೂನಿಯರ್‌ ಅಂಡರ್‌ ಆಫೀಸರ್‌ ಮನೋಜ್‌ ನೇತƒತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.

ಆಕರ್ಷಕ ಪಥಸಂಚಲನ
2400 ಕೆಡೆಟ್‌ಗಳು
ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗಿನ ವಿವಿಧ ಕಾಲೇಜುಗಳ ಭೂಸೇನೆ, ನೌಕಾದಳ ಮತ್ತು ವಾಯುದಳ ಇವುಗಳ 2,400 ಎನ್‌ಸಿಸಿ ಕೆಡೆಟ್‌ಗಳು, ಎನ್‌ಸಿಸಿ ಬೆಟಾಲಿಯನ್‌ಗಳ ಕ್ಯಾಪ್ಟನ್‌ಗಳು, 400 ರೋವರ್‌- ರೇಂಜರ್‌ ಹಾಗೂ ಸ್ಕೌಟ್ಸ್‌- ಗೆ„ಡ್ಸ್‌ ವಿದ್ಯಾರ್ಥಿಗಳು, 1,300 ಎನ್‌ಎಸ್‌ ಎಸ್‌ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ಸುಮಾರು 20 ನಿಮಿಷಗಳ ಕಾಲ ನಡೆಯಿತು.

30,000 ಮಂದಿ ಸಾಕ್ಷಿ
ಆಳ್ವಾಸ್‌ನ ಸಿಬಂದಿ, ವಿದ್ಯಾರ್ಥಿಗಳು ಸೇರಿ 25,000, ಪಾಲಕರು, ಸಾರ್ವಜನಿಕರು 5000 ಹೀಗೆ 30,000 ಮಂದಿ ಆಳ್ವಾಸ್‌ನ ಆಕರ್ಷಕ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡರು.

ಎನ್‌ಸಿಸಿ ಗ್ರೂಪ್‌ ಕಮಾಂಡರ್‌ ಕರ್ನಲ್‌ ಎ.ಕೆ. ಶರ್ಮ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾದ ಕರ್ನಲ್‌ ಮನೋಜ್‌ ವಿ.ಯು., ಗ್ರೂಪ್‌ ಕ್ಯಾಪ್ಟನ್‌ ಆರ್‌. ಶ್ರೀನಿವಾಸನ್‌, ಕಮಾಂಡರ್‌ ವಿಪುಲ್‌ ಗುಪ್ತ, ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಟ್ರಸ್ಟಿಗಳಾದ ವಿವೇಕ್‌ ಆಳ್ವ ಮತ್ತು ಡಾ| ವಿನಯ್‌ ಆಳ್ವ ಉಪಸ್ಥಿತರಿದ್ದರು.

ಎಲ್ಲೆಲ್ಲೂ ತ್ರಿವರ್ಣ
ವಿದ್ಯಾಗಿರಿ ಸನಿಹ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ವೇದಿಕೆಯಲ್ಲಿ ನಡೆದ ಈ ಸಮಾರಂಭದಲ್ಲಿ “ಕೋಟಿಕಂಠೊ ಸೆ’ ಏಕತಾ ಹಾಡಿಗೆ ಸಹಸ್ರ ಸಹಸ್ರ ವಿದ್ಯಾರ್ಥಿಗಳು ತ್ರಿವರ್ಣಧ್ವಜಗಳನ್ನು ಲಯಬದ್ಧವಾಗಿ ಹೊಯ್ದಾಡಿಸಿದಾಗ ಸಮುದ್ರದಲೆಗಳಂತೆ ತ್ರಿವರ್ಣ ರಂಜಿಸಿತು. ತ್ರಿವರ್ಣದ ಟಿ-ಶರ್ಟ್‌ಧಾರಿ ವಿದ್ಯಾರ್ಥಿಗಳು ಸಭೆಯ ನಡುವೆ “ಇಂಡಿಯಾ’ಆಂಗ್ಲ ಅಕ್ಷರ ಮೂಡಿಸಿದ್ದರು. ತ್ರಿವರ್ಣದ ಭಾರೀ ಗಾತ್ರದ ಸ್ತಂಭಗಳು ಅಲ್ಲಲ್ಲಿ ವಿರಾಜಮಾನವಾಗಿದ್ದವು. ತ್ರಿವರ್ಣದ ಕೊಡೆಗಳು, ಬಾನಂಗಳಕ್ಕೆ ಚಿಮ್ಮಿಸಿದ ತ್ರಿವರ್ಣದ ಬೆಲೂನ್‌ಗಳು, ವೇದಿಕೆಯ ಹಿಂಭಾಗ, ಮುಂಭಾಗ, ಗ್ಯಾಲರಿಗಳ ಸುತ್ತಮುತ್ತ ತ್ರಿವರ್ಣ ಸಂಯೋಜನೆಯಲ್ಲಿ ವಿದ್ಯಾರ್ಥಿ ಸಮೂಹ ಕಣ್ಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next