Advertisement

ಖುಷಿ ಎಂದರೆ ಖುಷಿಯೇ !

03:45 AM Mar 31, 2017 | |

ಅದೊಂದು ದಿನ ಕಾಲೇಜು ಮುಗಿಸಿಕೊಂಡು ಮನೆಗೆ ವಾಪಸು ಬರುವಾಗ ಮುದ್ದಾದ ಬೆಕ್ಕಿನಮರಿಯೊಂದು ರಸ್ತೆಯ ಬದಿಯಲ್ಲಿ ಕಣ್ಣಿಗೆ ಬಿತ್ತು. ನನಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು . ಬೆಕ್ಕಿನ ಮರಿಯನ್ನು ನೋಡಿದ ಮರುಕ್ಷಣವೇ ಎತ್ತಿಕೊಂಡು ಮುದ್ದಾಡಲು ಆರಂಭಿಸಿದೆ. ಬಿಟ್ಟು ಬರಲೂ ಮನಸ್ಸು ಒಪ್ಪಲಿಲ್ಲ ಜೊತೆಯಲ್ಲಿಯೇ ಮನೆಗೆ ಕರೆದುಕೊಂಡು ಬಂದೆ. ತಂದ ಬೆಕ್ಕಿನಮರಿ ಇಷ್ಟವಾಗದೆ ಅಪ್ಪ-ಅಮ್ಮ ಬೈತಾರೆ ಅಂತ ಒಂದು ಕಡೆ ಭಯ. ಹೇಗೋ ಧೈರ್ಯ ಮಾಡಿ ಒಳಗೆ ಕರೆದುಕೊಂಡು ಹೋಗಿಬಿಟ್ಟೆ.

Advertisement

ಬೆಕ್ಕಿನಮರಿ ನೋಡಿದ ಕ್ಷಣವೇ ಅಪ್ಪ ಅಮ್ಮನ ಮುಖದಲ್ಲಿ ಮಂದಹಾಸ. “ಎಲ್ಲಿ ಸಿಕ್ಕಿತು’ ಎಂದು ಅಪ್ಪ ಕೇಳಿದಾಗ, ರಸ್ತೆಯಲ್ಲಿ ಸಿಕ್ಕಿದ ವಿಚಾರ ತಿಳಿಸಿದೆ. “ನಿಮ್ಮಗೆ ಇಷ್ಟವಿಲ್ಲ ಎಂದರೇ ಬಿಟ್ಟು ಬರುವೆ’ ಎಂದಾಗ ಅಪ್ಪ‌ “ಬೆಕ್ಕಿನಮರಿಯನ್ನು ಬಿಟ್ಟು ಬರುವುದು ಬೇಡ ನಾವೇ ಸಾಕೋಣ’ ಎಂದರು.ಆಗ ನನ್ನ ಸಂತೋಷಕ್ಕೆ ಪರಿವೇ ಇಲ್ಲದಂತೆ ಮನಸ್ಸಿನಲ್ಲಿ ಆನಂದವೋ ಆನಂದ. ಎಲ್ಲರ ಮೊಗದಲ್ಲಿ ಸಂತೋಷ ತರಿಸಿದ ಬೆಕ್ಕಿನಮರಿಗೆ “ಖುಷಿ’ ಎಂದು ನಾಮಕರಣ ಮಾಡಿದೆವು. ಮನೆಸದಸ್ಯರಲ್ಲಿ ಖುಷಿಯೂ ಒಒºಳಾದಳು. ಅವಳ ಕೊರಳಿಗೆ ಗಂಟೆಯನ್ನು ಕಟ್ಟಿ ಓಡಾಡುವುದನ್ನು  ನೋಡುತ್ತ ದಿನ ಕಳೆಯುತ್ತಿದ್ದೆವು.

ಕಾಲೇಜು ಮುಗಿಸಿಕೊಂಡು ಗೆಳತಿಯರೊಂದಿಗೆ ವಾಲಿಬಾಲ್‌ ಶೆಟಲ್‌ ಆಟವಾಡುತ್ತಿದ್ದ ನಾನು ಎಲ್ಲವನ್ನು ಬಿಟ್ಟು “ಖುಷಿ’ಯೊಂದಿಗೆ ಸಮಯವನ್ನು ಕಳೆಯಲೂ ಆರಂಭಿಸಿದೆ. ಎಲ್ಲಿಗೆ ಹೋಗುವುದಿದ್ದರೂ ಜೊತೆಯಲ್ಲಿ “ಖುಷಿ’ ಬೇಕು.  ಅವಳನ್ನು ಬಿಟ್ಟರೆ ಬೇರೇನೂ ಬೇಡ ಎನ್ನುವಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದೆ. ಅವಳು ಕೂಡ ಕಾಲೇಜಿನಿಂದ ಮನೆಗೆ ಬಂದರೆ ಸಾಕು ಓಡಿ ಬಂದು  ಸ್ಪರ್ಶಿಸಿ ಹೋಗುತ್ತಿದ್ದಳು. ಬೆಳಿಗ್ಗೆ ಅವ‌ಳ ಗಂಟೆಯ ಸದ್ದನ್ನು ಕೇಳಿಯೇ ಏಳುತ್ತಿದ್ದೆ. ದಿನನಿತ್ಯ ಅವಳ ಮುಖವನ್ನು ನೋಡುತ್ತಿದ್ದೆ. ನಮ್ಮ ಪಾಲಿನ ಅದೃಷ್ಟ ದೇವತೆಯೇ ಆಗಿಬಿಡುತ್ತಿದ್ದಳು.

ದಿನಗಳು ಕಳೆದಂತೆ “ಖುಷಿ’ ಸಿಕ್ಕಿ ಒಂದು ವರ್ಷವಾಯಿತು. “ಖುಷಿ’ ಸಿಕ್ಕ ದಿನವನ್ನು ಹುಟ್ಟುಹಬ್ಬವಾಗಿ ಆಚರಿಸಿ ನಾವೆಲ್ಲ ಸಂಭ್ರಮಿಸಿದೆವು. “ಖುಷಿ’ಯ ಬಗ್ಗೆ ಹೊಸ ಕಲ್ಪನೆಯನ್ನೇ ಕಟ್ಟಿಕೊಂಡೆ. “ಖುಷಿ’ ಎಂದರೆ ಮನೆಯಲ್ಲಿ ಎಲ್ಲರಿಗೂ ಮಗುವಿನ ಹಾಗೆ. ಅವಳನ್ನು ಜೋಪಾನ ಮಾಡುವುದೇ ಒಂದು ಖುಷಿ.

ಯಾವ ಸಮಯದಲ್ಲಿ “ಖುಷಿ’ ಎಂದು ಹೆಸರಿಟೊ ಗೊತ್ತಿಲ್ಲ ಅಂದಿನಿಂದ ಮನೆಯಲ್ಲಿ ಸಂತೋಷಕ್ಕೆ ಪರಿವೇ ಇಲ್ಲ. ಯಾರಾದರೂ  ಸಂಬಂಧಿಕರು ಮನೆಗೆ ಬಂದರೆ ಸಾಕು, ಖುಷಿಯನ್ನು ಎತ್ತಿ ಮದ್ದಾಡಿ ಹೋಗದವರೇ ಇಲ್ಲ. ಎಲ್ಲರನ್ನು ಆಕರ್ಷಿಸುತ್ತಿದ್ದ  ಗುಣ ಅವಳದ್ದು. ಯಾರು ಮಾತನಾಡಿಸಿದರೂ “ಖುಷಿಯನ್ನು ಸಾಕುತ್ತೇವೆ, ನಮಗೆ ಕೊಟ್ಟುಬಿಡಿ’ ಎಂದು ಹೇಳುತ್ತಿದ್ದರು. ಕೇಳಿದವರ ಹತ್ತಿರ ಜಗಳ ಮಾಡಿಯೇ ಕಳುಹಿಸುತ್ತಿದ್ದೆ.

Advertisement

ಹೀಗಿರುವಾಗಲೇ ಅನಿರೀಕ್ಷಿತವಾಗಿ “ಖುಷಿ’ಯನ್ನು ಬಿಟ್ಟು ಎರಡು ದಿನಗಳು ಕಾಲೇಜಿನಿಂದ ಪ್ರವಾಸಕ್ಕೆಂದು ಹೋಗುವ ಸಂದರ್ಭ ಒದಗಿ ಬಂತು. “ಖುಷಿಯನ್ನು ಬಿಟ್ಟು  ಹೋಗುವುದಿಲ್ಲ’ ಎಂದು ಹೇಳಿದೆ, ಅಮ್ಮ “ನಾವು ಚೆನ್ನಾಗಿ ನೋಡಿ ಕೊಳ್ಳುತ್ತೇವೆ’ ಎಂದು ಧೈರ್ಯ ತುಂಬಿ ಕಳುಹಿಸಿಬಿಟ್ಟರು. “ಸರಿ’ ಎಂದು ಖುಷಿಯನ್ನು ಮುದ್ದಾಡಿ ಹೊರಟೆ. ಅದೇ ಕೊನೆಯ ಭೇಟಿ. ಅವಳು ಇನ್ನು ಜೊತೆ ಇರುವುದಿಲ್ಲ ಎಂಬ ಕಲ್ಪನೆ ಕೂಡ ಇರಲಿಲ್ಲ. ಅಂದು ಖುಷಿ ಮನೆಬಿಟ್ಟು ನಡೆದವಳು ಮತ್ತೆ ಮರಳಿ ಬರಲೇ ಇಲ್ಲ.

ನನ್ನ ಬಿಟ್ಟು “ಖುಷಿ’ ಹೋಗಿದ್ದಾಳೆ ಎಂಬ ಯಾವುದೇ ಅರಿವು ಇಲ್ಲದೆ ಮನೆಗೆ ಬಂದೆ. ಬಾಗಿಲ ಬಳಿಗೆ ಹುಡುಕಿ ಕೊಂಡು ಓಡಿಬಂದು ನೋಡುತ್ತಿದ್ದ “ಖುಷಿ’ ಬರಲೇ ಇಲ್ಲ. ಮಲಗಿಕೊಂಡಿರಬೇಕು ಎಂದು ನಾನೇ ಹುಡುಕತೊಡಗಿದೆ.  ಎಷ್ಟೇ ಹುಡುಕಿದರೂ “ಖುಷಿ’ ಕಣ್ಣಿಗೆ ಕಾಣಲೇ ಇಲ್ಲ.  ಯಾವ ಅನುಬಂಧವೋ ಗೊತ್ತಿಲ್ಲ. “ಖುಷಿ’ ಎಂಬ ಪುಟ್ಟ ಜೀವಿ ನಮ್ಮ ಬದುಕಿನೊಳಗೆ ಬಂದು, ನಮ್ಮ ಬದುಕಿನ ಒಂದು ಭಾಗವೇ ಆಗಿ, ನಮ್ಮನ್ನೆಲ್ಲ ಖುಷಿಯಾಗಿರಿಸಿ ಇದ್ದಕ್ಕಿದ್ದಂತೆಯೇ ಎದ್ದು ಹೋಗಿದೆ. ಅದು ಪ್ರಾಣಿಯೇ ಆದರೂ ಅದಕ್ಕೂ ಒಂದು ಜೀವಂತಿಕೆ ಇದ್ದೇ ಇದೆಯಲ್ಲ ! ಮನಸ್ಸು ಎಂಬುದು ಪ್ರಾಣಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ, ಅದು “ಖುಷಿ’ ನಮ್ಮೊಂದಿಗೆ ಇದ್ದ ದಿನಗಳನ್ನು ನೆನಪಿಸಿಕೊಂಡರೆ, ಪ್ರಾಣಿಗೂ ಸ್ಪಂದಿಸುವ ಗುಣವಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. 

ಮನೆಯಲ್ಲಿ ಅವಳ ಪೋಟೋವನ್ನು ನೋಡಿದಾಗ ಮತ್ತೆ “ಖುಷಿ’ಯ ಚಿತ್ರ ಕಣ್ಣ ಮುಂದೆ ಮೂಡಲಾರಂಭಿಸುತ್ತದೆ. ಎಲ್ಲಿ ಹೋದರೂ ಅಡ್ಡಿಯಿಲ್ಲ ಖುಷಿ, ಅಲ್ಲಿ ಸುಖವಾಗಿರು ಎಂದಷ್ಟೇ ಹಾರೈಸುವೆ.
     
– ಸುಶ್ಮಿತಾಗೌಡ
ದ್ವಿತೀಯ ಎಮ್‌ಸಿಜೆ,
ಎಸ್‌.ಡಿ.ಎಂ ಕಾಲೇಜು, ಉಜಿರೆ.

Advertisement

Udayavani is now on Telegram. Click here to join our channel and stay updated with the latest news.

Next