Advertisement

ವಿಶ್ವಜಿತ್‌ ಅತಿರಾತ್ರ ಸೋಮಯಾಗದ ಮುಂಬಯಿ ಸಮಿತಿಯ ಧಾರ್ಮಿಕ ಸಭೆ

08:26 PM Mar 24, 2019 | Team Udayavani |

ಮುಂಬಯಿ: ಜೀವನದಲ್ಲಿ ಧರ್ಮದ ನಡೆ ನಮ್ಮದಾಗಬೇಕು. ಧರ್ಮವನ್ನು ನಾವು ಅನುಸರಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಧರ್ಮವನ್ನು ನಾವು ಆಚರಿಸದಿದ್ದರೆ ಧರ್ಮಕ್ಕೆ ಏನೂ ಆಗುವುದಿಲ್ಲ. ಆದರೆ ಧರ್ಮವನ್ನು, ಸಂಸ್ಕೃತಿಯನ್ನು, ಸಂಸ್ಕಾರವನ್ನು ಬಿಟ್ಟು ಬಾಳುವವರಿಗೆ ಹಾನಿಯಾಗುತ್ತದೆ. ಹಾಗಾಗಿ ಧರ್ಮದ ನಡೆಯಲ್ಲಿ, ಧಾರ್ಮಿಕ ಪ್ರವೃತ್ತಿಯಿಂದ ಜೀವನ ನಡೆಸಿದರೆ ನಾವು ಸುರಕ್ಷಿತವಾಗಿರುತ್ತೇವೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು.

Advertisement

ಮುಲುಂಡ್‌ ಚೆಕ್‌ನಾಕಾದ ನವೋದಯ ಹೈಸ್ಕೂಲ್‌ ಸಭಾಗೃಹದಲ್ಲಿ ಇತ್ತೀಚೆಗೆ ನಡೆದ ವಿಶ್ವಜಿತ್‌ ಅತಿರಾತ್ರ ಸೋಮಯಾಗದ ಮುಂಬಯಿ ಸಮಿತಿ ಹಮ್ಮಿಕೊಂಡ ಧಾರ್ಮಿಕ ಸಭೆಯಲ್ಲಿ ಭಕ್ತರಿಗೆ ಪ್ರಸಾದ ವಿತರಿಸಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ಬದುಕು ಕ್ಷಣಿಕವಾದುದು. ಆ ಕ್ಷಣಿಕವಾದ ಬದುಕಿನಲ್ಲಿ ದೊಡ್ಡ ಪ್ರಯತ್ನದಿಂದ ನಾವೇನಾದರೂ ಕೂಡಿಟ್ಟರೆ ಅದರ ಶ್ರಮ ಸಾರ್ಥಕವಾಗುವುದು. ನಮ್ಮ ಒಳ್ಳೆಯ ಕೆಲಸ ಕಾರ್ಯಗಳು ಜೀವನದಲ್ಲಿ ನಮಗೆ ಆತ್ಮವಿಶ್ವಾಸವನ್ನು ಕೊಡುತ್ತದೆ. ನಮ್ಮ ಸಂಕಟವನ್ನು, ಭಯವನ್ನು ಮೆಟ್ಟಿ ನಿಲ್ಲಲಿಕ್ಕೆ ಸಾಧ್ಯವಾಗುತ್ತದೆ. ನಮ್ಮ ಮನಸ್ಸಿನಲ್ಲಿ ಭಗವಂತನ ಪ್ರೀತಿಯನ್ನಿಟ್ಟುಕೊಂಡು ನಾವು ಮೊದಲಾಗಿ ಮನಸ್ಸನ್ನು ನಮ್ಮ ಮಿತ್ರನನ್ನಾಗಿ ಮಾಡಬೇಕು. ಒಂದು ವೇಳೆ ಮನಸ್ಸು ಕೆಟ್ಟು ಹೋದರೆ ಅದಕ್ಕಿಂತ ದೊಡ್ಡ ಶತ್ರು ಬೇರೆ ಇಲ್ಲ. ದೇವರ ಅನುಗ್ರಹದಿಂದ ಆಶ್ರಮದಲ್ಲಿ ಯಾಗವು ಸಂಪೂರ್ಣವಾಗಿ ಯಶಸ್ವಿಯಾಗಿದೆ. ಲೋಕ ಕಲ್ಯಾಣಾರ್ಥವಾಗಿ ಈ ಯಾಗ ಆಗಬೇಕಿತ್ತು. ಅದನ್ನು ದೇವರು ನಮ್ಮಿಂದ ಯಶಸ್ವಿಯಾಗಿ ಮಾಡಿಸಿದ್ದಾರೆ. ಕಳೆದ 2 ವರ್ಷಗಳಿಂದ ಮಹಾಯಾಗಕ್ಕೆ ತಯಾರಿ ನಡೆಸಿದ್ದೆವು. ನಿಮ್ಮೆಲ್ಲರ ಭಕ್ತಿಯ, ಪ್ರೀತಿಯ ಬೆಂಬಲದಿಂದ ಯಾಗ ಕಾರ್ಯವು ಸಂಪನ್ನಗೊಂಡಿದೆ ಎಂದರು.

ವಿಶ್ವಜಿತ್‌ ಅತಿರಾತ್ರ ಮಹಾಯಾಗ ಮುಂಬಯಿ ಸಮಿತಿಯ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅವರು ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ತಿಳಿದೋ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುವುದು ಸಹಜ, ಇಂತಹ ಪಾಪಗಳು, ತಪ್ಪುಗಳು ನಮ್ಮ ಸಮಾಜದಲ್ಲಿ ದೇಶದಲ್ಲಿ ನಡೆಯುವುದನ್ನು ನಾವು ಕಾಣುತ್ತೇವೆ. ಇಂತಹ ಪಾಪಗಳ ಪರಿಹಾರಕ್ಕೆ ಕೊಂಡೆವೂರಿನಲ್ಲಿ ನಡೆದ ಮಹಾಯಾಗವೇ ಸಹಕಾರಿಯಾಗಬಹುದು. ನಮ್ಮ ದೇಶದ ಸಮಾಜದ ರಕ್ಷಣೆ ಮಾಡುವಂತಹ ಕಾರ್ಯ ಯಾಗದಿಂದ ಆಗಿದೆ. ಇದು ಒಂದು ಅಭೂತಪೂರ್ವವಾದ ಯಾಗವಾಗಿದೆ. ಇಂಥ ಯಾಗವನ್ನು ನಾನೆಂದೂ ಕಂಡಿರಲಿಲ್ಲ. ಈ ಯಾಗವನ್ನು ಕಣ್ಣಾರೆ ಕಂಡವರು, ಅದಕ್ಕೆ ಸಹಕರಿಸಿದವರೆಲ್ಲರೂ ಪಾವನರಾಗಿದ್ದಾರೆ. ಸಮಾಜೋದ್ಧಾರದ ಉದ್ಧೇಶದಿಂದ ಈ ಮಹಾಯಾಗವನ್ನು ಆಯೋಜಿಸಿದ ಕೀರ್ತಿ ಕೊಂಡೆವೂರು ಶ್ರೀಗಳಿಗೆ ಸಲ್ಲುತ್ತದೆ. ಭವಿಷ್ಯದಲ್ಲೂ ಸ್ವಾಮೀಜಿಯವರಿಂದ ನಡೆಯುವ ಎಲ್ಲಾ ಕಾರ್ಯಗಳಿಗೆ ನಾವು ಸಹಕರಿಸೋಣ ಎಂದರು.

ವಿಶ್ವಜಿತ್‌ ಅತಿರಾತ್ರಾ ಸೋಮಯಾಗದ ಮುಂಬಯಿ ಸಮಿತಿಯ ಗೌರವಾಧ್ಯಕ್ಷ ಮೇರ್ಕಳ ತ್ಯಾಂಪಣ್ಣ ಶೆಟ್ಟಿ ಅವರು ಮಾತನಾಡಿ, ಕುಂಬ್ಳೆ ಸೀಮೆಯು ಆಧ್ಯಾತ್ಮಿಕವಾಗಿ ಬಹಳ ಪವಿತ್ರವಾದದ್ದು. ಈ ಪರಿಸರದ ಒಡಿಯೂರು ಕೊಂಡೆವೂರು ನಾನು ಹುಟ್ಟಿ ಬೆಳೆದ ಊರು. ಅಂತಹ ಊರಿನಲ್ಲಿ ಧರ್ಮಕಾರ್ಯ ಅಭಿವೃದ್ಧಿ ಕಾರ್ಯ ಆಗುವುದಾದರೆ ನಮಗೆ ದೊಡ್ಡ ಗೌರವ. ಕೊಂಡೆವೂರು ನಮ್ಮೆಲ್ಲರ ಅಭಿಮಾನದ ಭಕ್ತಿಯ ಕ್ಷೇತ್ರವಾಗಿದೆ. ಅಲ್ಲಿನ ಮಹಿಮೆಗಳು, ಕಾರ್ಯಗಳು ತಿಳಿದವರಿಗೆ ಮಾತ್ರ ಗೊತ್ತು. ಸಮಾಜದ ಏಳ್ಗೆಗಾಗಿ ಕೊಂಡೆವೂರು ಸ್ವಾಮೀಜಿಯವರು ಹಲವಾರು ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅಪರೂಪದ ಯಾಗವನ್ನು ಆಶ್ರಮದಲ್ಲಿ ಆಯೋಜಿಸಿ ನಾವೆಲ್ಲ ಪುಣ್ಯ ಕಟ್ಟಿಕೊಳ್ಳೋಣ ಎಂದರು.

ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷ ಜಯ ಶೆಟ್ಟಿ ಇವರು ಮಾತನಾಡಿ, ಸ್ವಾಮೀಜಿಯವರು ಲೋಕಕಲ್ಯಾಣಾರ್ಥಕವಾಗಿ ಸಮಾಜದ ಉದ್ಧಾರಕ್ಕಾಗಿ ದೇಶದಲ್ಲಿನ ಅನಿಷ್ಠಗಳನ್ನು ದೂರೀಕರಿಸಲು ಜನರು ಸುಖ, ಸಂತೋಷದಿಂದ ಸೌಹಾರ್ಧತೆಯಿಂದ ಕೂಡಿ ಬಾಳುವ ಉದ್ಧೇಶದಿಂದ ಅತಿರಾತ್ರ ಸೋಮಯಾಗವನ್ನು ಮಾಡಿದ್ದಾರೆ. ನಮ್ಮಂತಹ ಭಕ್ತರೆಲ್ಲರೂ ಸೇರಿ ಅಳಿಲ ಸೇವೆಯನ್ನು ಸಲ್ಲಿಸಿ ಯಾಗದ ಯಶಸ್ಸಿಗೆ ಸಹಕರಿಸಿದ್ದೇವೆ. ಮುಂದೆಯೂ ಸ್ವಾಮೀಜಿಯವರ ಆಶ್ರಮದಲ್ಲಿ ಆಯೋಜಿಸಲಿರುವ ಪ್ರತಿಯೊಂದು ಸಮಾಜಪರ, ಧಾರ್ಮಿಕ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ ಎಂದರು.

Advertisement

ಥಾಣೆ ಕಿಸನ್‌ ನಗರದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ ಪೂಜಾರಿ ಅವರು ಮಾತನಾಡಿ, ಸೋಮಯಾಗವು ಚಾರಿತ್ರಿಕ ಧಾರ್ಮಿಕ ಕಾರ್ಯಕ್ರಮವಾಗಿತ್ತು,. ನಿಸರ್ಗದ ಸಮತೋಲನ ಕಾಪಾಡಿಕೊಂಡು ಬರಲು ಇಂತಹ ಯಾಗವು ಸಹಕಾರಿಯಾಗಬಹುದು. ಲೋಕಕಲ್ಯಾಣಾರ್ಥಕವಾಗಿ ಸ್ವಾಮೀಜಿ ಅವರು ಹಮ್ಮಿಕೊಳ್ಳುವ ಧರ್ಮ ಕಾರ್ಯದಲ್ಲಿ ನಾವೆಲ್ಲ ಭಾಗಿಯಾಗೋಣ ಎಂದರು.

ಗಣೇಶ್‌ಪುರಿಯ ಶ್ರೀ ನಿತ್ಯಾನಂದ ಕ್ಷೇತ್ರದ ಟ್ರಸ್ಟಿ ಗೀತಾ ಯಾಧವ್‌ ಮಾತನಾಡಿ, ದಕ್ಷಿಣ ಭಾರತವು ದೇವಭೂಮಿಯಾಗಿದೆ. ಅಂತಹ ದೇವಭೂಮಿಯ ಕೊಂಡೆವೂರಿನಲ್ಲಿ ಋಷಿ ಮುನಿ ಕಾಲದ ಮಹಾಯಜ್ಞ ನಡೆದಿರುವುದನ್ನು ಕಂಡಿರುವುದು ತನ್ನ ದೊಡ್ಡ ಸೌಭಾಗ್ಯ. ಹಿಂದೂ ಸಂಸ್ಕೃತಿಯನ್ನು ಧಾರ್ಮಿಕ, ಪರಂಪರೆಯನ್ನು ಸಂಪ್ರದಾಯವನ್ನು ಕಾಪಾಡಿಕೊಂಡು ಬರುವಂಥ ಕೆಲಸ ಕಾರ್ಯಗಳನ್ನು ಶ್ರೀಗಳು ಮಾಡುತ್ತಿದ್ದಾರೆ ಎಂದರು.

ಮುಂಬಯಿ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ಮಾತನಾಡಿ, ಕೊಂಡೆವೂರಿನಲ್ಲಿ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ ನಡೆದ ಮಹಾಯಾಗ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಈ ಯಾಗದ ಯಶಸ್ಸಿಗೆ ಮುಂಬಯಿ ಭಕ್ತರ ಕೊಡುಗೆಯೂ ಅಪಾರವಾಗಿದೆ. ಯಾಗದ ಸಂದರ್ಭದಲ್ಲಿ ಕೊಂಡೆವೂರಿನ ಆಶ್ರಮದ ಸೇವಾಕರ್ತರು ಲಕ್ಷಾಂತರ ಮಂದಿ ಭಕ್ತರಿಗೆ, ಅತಿಥಿ-ಗಣ್ಯರಿಗೆ ಅನುಕೂಲವಾಗುವಂತೆ ನೀಡಿದ ಸೇವೆಯು ಅಭಿನಂದನೀಯವಾಗಿದೆ ಎಂದುರು.

ಮುಂಬಯಿ ಸಮಿತಿಯ ಕೋಶಾಧಿಕಾರಿ ಅಶೋಕ್‌ ಎಂ. ಕೋಟ್ಯಾನ್‌ ದಂಪತಿ, ನಿತ್ಯಾನಂದ ಯೋಗಾಶ್ರಮದ ಮುಂಬಯಿ ಸಮಿತಿಯ ಅಧ್ಯಕ್ಷ ರಾಜೇಶ್‌ ರೈ, ಕಾರ್ಯದರ್ಶಿ ಹರೀಶ್‌ ಚೇವಾರ್‌, ವಿಶೇಷ ಸಹಕಾರ ನೀಡಿದ ನವೋ
ದಯ ಕನ್ನಡ ಸಂಘದ ಅಧ್ಯಕ್ಷ ಜಯ ಶೆಟ್ಟಿ, ಜಯ ರಾಮ ಪೂಜಾರಿ, ತೋನ್ಸೆ ನವೀನ್‌ ಶೆಟ್ಟಿ, ಸಂಜೀವ ಪೂಜಾರಿ ತೋನ್ಸೆ, ಉದ್ಯಮಿ ಗಣೇಶ್‌ ಪೂಜಾರಿ ದಂಪತಿ, ರಮೇಶ್‌ ಕೋಟ್ಯಾನ್‌, ಮನೋಜ್‌ ಕುಮಾರ್‌ ಹೆಗ್ಡೆ, ಸಂಧ್ಯಾ ಜಾಧವ್‌ ಹಾಗೂ ಮಹಿಳಾ ಸದಸ್ಯೆಯರನ್ನು ಸ್ವಾಮೀಜಿಯವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು, ನವೋದಯ ಕನ್ನಡ ಸಂಘದ ಹಾಗೂ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಾಮಾಜಿಕ, ಧಾರ್ಮಿಕ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next