Advertisement

ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಃಶಾಂತಿ: ಮಹೇಶ್‌ ಕೋಟ್ಯಾನ್‌

12:19 PM Jan 03, 2021 | Team Udayavani |

ಬೊಯಿಸರ್‌, ಜ. 2: ಹೃದಯ ವೈಶಾಲ್ಯವುಳ್ಳ ಮಹಾನ್‌ ಸಂತ, ಸಜ್ಜನರು ಕಾಲ್ನಡಿಗೆಯಿಂದ ನಾಡಿನೆಲ್ಲೆಡೆ ಸಂಚರಿಸಿ ಜನರಲ್ಲಿ ಪರಸ್ಪರ ಪ್ರೀತಿ ಹಾಗೂ ಮಾನವೀಯ ಮೌಲ್ಯಗಳ ಅರಿವನ್ನು ಮೂಡಿಸಿದರು. ಅವರಲ್ಲಿ ಅವಧೂತ ಸ್ವಾಮಿ ನಿತ್ಯಾನಂದ ಸ್ವಾಮೀಜಿಯವರು ಒಬ್ಬರಾಗಿದ್ದಾರೆ. ಅವರ ಈ ಮಂದಿರದಲ್ಲಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪಶ್ಚಿಮ ಕರಾವಳಿಯ ಪಾಲ್ಘರ್‌  ಜಿಲ್ಲೆಯ ವಿವಿಧ ಭಾಗಗಳಲ್ಲಿನ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯ. ಶ್ರೀ ನಿತ್ಯಾನಂದ ಸ್ವಾಮೀಜಿಯವರ ದಿವ್ಯ ಕೃಪೆಯಿಂದ ಹೊಸ ವರ್ಷದಲ್ಲಿ ಎಲ್ಲರಿಗೂ ಹೊಸ ಹುರುಪನ್ನು ತರಲಿ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಃಶಾಂತಿ ಲಭಿಸುತ್ತದೆ ಎಂದು ನಗರದ ನ್ಯಾಯವಾದಿ ಮಹೇಶ್‌ ಕೋಟ್ಯಾನ್‌ ತಿಳಿಸಿದರು.

Advertisement

ಡಿ. 27ರಂದು ಬೊಯಿಸರ್‌ ಸ್ವಾಮಿ ಶ್ರೀ ನಿತ್ಯಾನಂದ ಮಂದಿರದಲ್ಲಿ ನಡೆದ ಮಂದಿರದ ದಶವಾರ್ಷಿಕ ಪ್ರತಿಷ್ಠಾಪನ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಬೊಯಿಸರ್‌ ನಿತ್ಯಾನಂದ ಮಂದಿರ ದಲ್ಲಿ ವರ್ಷಪೂರ್ತಿ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಸಾಮಾಜಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ತುಳು, ಕನ್ನಡಿ ಗರು, ಭಕ್ತರು ಮಂದಿರದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.

ಸಮಾಜ ಸೇವಕ ಕೂಸಪ್ಪ ಬಪ್ಪನಾಡು ಮಾತನಾಡಿ, ಜಗತ್ತಿನ ಸಂಪೂರ್ಣ ಮಾನವ ಕುಲದ ಅಸ್ತಿತ್ವಕ್ಕೆ ಸವಾಲನ್ನೊಡ್ಡಿದ ಕೊರೊನಾ ಮಹಾಮಾರಿಯನ್ನು ಈ ವರ್ಷ ಎಲ್ಲರೂ ಎದುರಿಸಿದ್ದೇವೆ. ಭವಿಷ್ಯದ ದಿನಗಳು ಎಲ್ಲರಿಗೂ ಆರೋಗ್ಯ ಹಾಗೂ ಸಂತೋಷವನ್ನು ನೀಡುವಲ್ಲಿ ಸದ್ಗುರುವಿನ ಕೃಪಾಶೀರ್ವಾದ ಸದಾ ಇರಲಿ. ನಿತ್ಯಾನಂದ ಮಂದಿರದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಕಳೆದ ಹಲವಾರು ವರ್ಷಗಳಿಂದ ಬಲ್ಲವನಾಗಿದ್ದೇನೆ. ಇಲ್ಲಿನ ಸ್ಥಳೀಯ ತುಳು, ಕನ್ನಡಿಗರು ಮಂದಿರದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನ ನ್ಯಾಯವಾದಿ ಮಹೇಶ್‌ ಕೋಟ್ಯಾನ್‌, ಸಮಾಜ ಸೇವಕ ಕೂಸಪ್ಪ ಬಪ್ಪನಾಡು ಅವರನ್ನು ಶ್ರೀ ಸ್ವಾಮಿ ನಿತ್ಯಾನಂದ ಭಕ್ತಮಂಡಳಿ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಪ್ರಸಾದವನ್ನಿತ್ತು ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಿ, ಗೌರವಿಸಲಾಯಿತು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ, ಮಂಡಳಿಯ ಸದಸ್ಯರಿಂದ ಮತ್ತು ಭಕ್ತರಿಂದ ಭಜನೆ ಮತ್ತು ಭಕ್ತಿಗೀತೆಗಳ ಗಾಯನ ನಡೆಯಿತು. ಮಂದಿರದ ಭಜನ ಮಂಡಳಿ ಹಾಗೂ ಅತಿಥಿ ಕಲಾವಿದರು ಭಾಗವಹಿಸಿದ್ದರು. ಕಲಾವಿದ ಅಶೋಕ್‌ ಸಾಲ್ಯಾನ್‌ ಅವರು ತಬಲಾದಲ್ಲಿ ಸಾಥ್‌ ನೀಡಿದರು. ಅನಂತರ ಭಕ್ತ ಮಂಡಳಿ  ವತಿಯಿಂದ ಭಕ್ತಿಪ್ರಧಾನ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ, ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

Advertisement

ಈ ಸಂದರ್ಭದಲ್ಲಿ ಬೊಯಿಸರ್‌ ಶ್ರೀ ನಿತ್ಯಾನಂದ ಮಂದಿರದ ವಿಶ್ವಸ್ಥ ಮಂಡಳಿಯ ಸುಹಾಸಿನಿ ಡಿ. ನಾಯ್ಕ…, ಸತ್ಯಾ ಎಸ್‌. ಕೋಟ್ಯಾನ್‌, ಶ್ರೀನಿವಾಸ್‌ ಕೋಟ್ಯಾನ್‌, ಪಾಲ^ರ್‌ ತಾಲೂಕು ಹೊಟೇಲ್‌ ಅಸೋಸಿಯೇಶನ್‌ ಅಧ್ಯಕ್ಷ ರಘುರಾಮ್‌ ರೈ, ಗೌರವಾಧ್ಯಕ್ಷ ಕೆ. ಭುಜಂಗ ಶೆಟ್ಟಿ, ಉದ್ಯಮಿಗಳಾದ ತಾರಾನಾಥ್‌ ಅಡಪ, ರವೀಂದ್ರ ಶೆಟ್ಟಿ, ಭಾಸ್ಕರ್‌

ಶೆಟ್ಟಿ, ದಹಿಸರ್‌ ದಿನೇಶ್‌ ಅಮೀನ್‌, ಡಹಾಣು ಸಂತೋಷ್‌ ಶೆಟ್ಟಿ, ಬಿಕ್ರಿಗುತ್ತು ಜಗದೀಶ್‌ ಶೆಟ್ಟಿ, ಹೇಮಚಂದ್ರ  ಕೋಟ್ಯಾನ್‌ ಉಪಸ್ಥಿತರಿದ್ದರು.

ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಭಕ್ತ ಮಂಡಳಿ ಹಾಗೂ ಭಜನ ಮಂಡಳಿಯ ಸದಸ್ಯರು, ಪಾಲ್ಘರ್‌ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಪ್ರಸಾದ ಸ್ವೀಕರಿಸಿದರು. ಸಂಜೆ 6ರಿಂದ ಮಂದಿರದ ಪರಿಸರದಿಂದ ಸಮೀಪದ ಶ್ರೀ ದತ್ತಗುರು ಮಂದಿರದ ವರೆಗೆ ನಿತ್ಯಾನಂದ ಬಾಬಾ ಅವರ ಪಲ್ಲಕ್ಕಿ ಮೆರವಣಿಗೆಯು ಜರಗಿತು. ಪೂಜೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳನ್ನು ಪುರೋಹಿತ ಹರೀಶ್‌ ಶಾಂತಿ ಮತ್ತು ರಾಜೇಶ್‌ ಶಾಂತಿ ನೆರವೇರಿಸಿದರು.

ರಾತ್ರಿ 8ರಿಂದ ಮಹಾ ಮಂಗಳಾರತಿ ಯೊಂದಿಗೆ ಮಂದಿರದ ಹತ್ತನೇ ಪ್ರತಿಷ್ಠಾ ಮಹೋತ್ಸವವು ಸಂಪನ್ನಗೊಂಡಿತು. ರಮಾ ನಂದ ಪೂಜಾರಿ, ಅಣ್ಣು ದೇವಾಡಿಗ, ಸುರೇಶ್‌ ದೇವಾಡಿಗ, ದಿವಾಕರ್‌ ಅಡಪ, ಜಯಾ ಸಾಲ್ಯಾನ್‌ ಮೊದಲಾದವರು ಧಾರ್ಮಿಕ ಉತ್ಸವದ ಯಶಸ್ಸಿಗೆ ಸಹಕರಿಸಿದರು. ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 6ಕ್ಕೆ ಗಣಪತಿಹೋಮ, 7ರಿಂದ 8.30ರ ವರೆಗೆ ಪಂಚಾಮೃತ ಕಳಶಾಭಿಷೇಕ ಮತ್ತು ಆರತಿ ಜರಗಿತು. ಭಕ್ತರು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ನಿತ್ಯಾನಂದ ಸ್ವಾಮಿ ಅವರ ಅನುಗ್ರಹಕ್ಕೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next