Advertisement

ಮನುಷ್ಯಗೆ ಅನ್ನ-ನೀರಂತೆ ಧರ್ಮವೂ ಅಷ್ಟೇ ಮುಖ್ಯ

02:26 PM Jul 21, 2017 | |

ದಾವಣಗೆರೆ: ಮನುಷ್ಯರು ಬದುಕಿ ಬಾಳಲು ಅನ್ನ, ನೀರು, ಗಾಳಿಯಂತೆ ಧರ್ಮವೂ ಅಷ್ಟೇ ಮುಖ್ಯ ಎಂದು ರಂಭಾಪುರಿ ಪೀಠದ
ಜಗದ್ಗುರು ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದ್ದಾರೆ.

Advertisement

ರೇಣುಕ ಮಂದಿರದಲ್ಲಿ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದ 3ನೇ ದಿನ
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸತ್ಯಾನ್ವೇಷಣೆಯ ಹಾದಿಯಲ್ಲಿ ನಡೆದಾಗ ಜೀವನ ಮೌಲ್ಯ ಸಮೃದ್ಧಿಗೊಳ್ಳಲು ಸಾಧ್ಯ ಎಂದರು. ಯಾವುದೇ ಕಾರಣಕ್ಕೂ ಸ್ವಾರ್ಥಕ್ಕಾಗಿ ಜೀವನದ ಆದರ್ಶ, ಮೌಲ್ಯಗಳನ್ನು ಬಲಿ ಕೊಡಬಾರದು. ಸುಖ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗಬಾರದು. ಪ್ರತಿ ಸಂದರ್ಭದಲ್ಲೂ ಸಮತೋಲನದಿದ ಬದುಕಿ ಬಾಳಬೇಕು. ಏಕೆಂದರೆ ಜೀವನದ ಮಹತ್ವವೇ ಇರುವುದು ಅಲ್ಲಿಯೇ. ಜೀವನ ಸುಖ-ದು:ಖಗಳ ಸಮಿಶ್ರಣ ಎಂದು ತಿಳಿಸಿದರು.

ಧರ್ಮ, ಅರ್ಥ, ಕಾಮ, ಮೋಕ್ಷ…ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದಿದ್ದರೆ ಜೀವನ ವ್ಯರ್ಥವಾಗುವುದು.
ಮನುಷ್ಯ ತಿಳಿದಿರುವುದಕ್ಕಿಂತ ತಿಳಿಯಬೇಕಾದುದು ಬಹಳಷ್ಟಿದೆ. ಧರ್ಮ ಜ್ಞಾನದ ತಂಗಾಳಿ ಜೀವನ ಉನ್ನತಿಗೆ ಸಹಕಾರಿ
ಎಂದು ತಿಳಿಸಿದರು. ಶಸ್ತ್ರ, ಪ್ರಭುತ್ವ ಮತ್ತು ಸಂಪತ್ತು ಅಜ್ಞಾನಿಯ ಕೈಯಲ್ಲಿದ್ದರೆ ಸರ್ವ ನಾಶ. ಆ ಎಲ್ಲವೂ ಸಜ್ಜನರಲ್ಲಿದ್ದರೆ ಜನರ ಕಲ್ಯಾಣ ಆಗುವುದು. ಸುಳ್ಳು ಹೇಳಲು ಅನೇಕ ದಾರಿಗಳಿವೆ. ಆದರೆ, ಸತ್ಯಕ್ಕೆ ಧರ್ಮಕ್ಕೆ ಒಂದೇ ದಾರಿ. ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕುವುದೇ ಮಾನವನ ಗುರಿಯಾಗಬೇಕು ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.

ಶಿವಗಂಗೆಯ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಾವಣಗೆರೆ ತಾಲೂಕಿನ ನಾಗರಸನಹಳ್ಳಿ
ಗ್ರಾಮದಲ್ಲಿ ನಿರ್ಮಾಣವಾಗಲಿರುವ ಶ್ರೀ ವೀರಭದ್ರೇಶ್ವರಸ್ವಾಮಿ ಕಲ್ಯಾಣ ಮಂಟಪಕ್ಕೆ 1 ಲಕ್ಷ ನೀಡಿರುವ ರಂಭಾಪುರಿ ಜಗದ್ಗುರು
ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರದ್ದು ಮಾತೃ ಹೃದಯ. ಕಲ್ಯಾಣ ಮಂಟಪದ ಉದ್ಘಾಟನೆಯೂ
ಜಗದ್ಗುರುಗಳಿಂದಲೇ ಆಗಬೇಕು ಎನ್ನುವುದು ಗ್ರಾಮಸ್ಥರ ಮಹದಾಸೆ. ಅದನ್ನು ಜಗದ್ಗುರುಗಳು ನೆರವೇರಿಸಿಕೊಡಬೇಕು ಎಂದು ಮನವಿ ಮಾಡಿದರು. ವಿಭೂತಿಪುರಮಠದ ಡಾ|ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಡುವ ಮಾತು ಕಮ್ಮಿ ಮಾಡಿ ಹೆಚ್ಚು ಕಾರ್ಯ ಮಾಡುವ ಪ್ರವೃತ್ತಿ ಬೆಳೆಯಲಿ. ವೀರಶೈವ ಧರ್ಮ ಕಾಯಕ ಜೀವನಕ್ಕೆ ಒತ್ತು ಕೊಟ್ಟಿದೆ ಎಂದರು. 

ಮಳಲಿ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಬೆಳಗುವ ದೀಪಕ್ಕೆ ಎಣ್ಣೆ ಎಷ್ಟು ಮುಖ್ಯವೋ ಮನುಷ್ಯನ ಉಜ್ವಲ
ಭವಿಷ್ಯಕ್ಕೆ ಆತ್ಮವಿಶ್ವಾಸ ಅಷ್ಟೇ ಮುಖ್ಯ. ಜಗದ್ಗುರು ರೇಣುಕಾಚಾರ್ಯರು ವಿಶ್ವ ಬಂಧುತ್ವದ ಆದರ್ಶ ಚಿಂತನಗಳನ್ನು ಯಾರೂ ಮರೆಯಬಾರದು ಎಂದು ಹೇಳಿದರು. ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಆರ್‌.ಜಿ. ಶ್ರೀನಿವಾಸಮೂರ್ತಿ ಗೆ ದೈವ
ಭಕ್ತ ಸಂಪನ್ನ… ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಪ್ರಾಚಾರ್ಯೆ ಪ್ರೊ. ಶಕುಂತಲ ಗುರುಸಿದ್ಧಯ್ಯ, ನಿವೃತ್ತ ಶಿಕ್ಷಕಿ ನೀಲಗುಂದ
ಜಯಮ್ಮ ಇತರರು ಇದ್ದರು. ಡಿ.ವಿ. ಆರಾಧ್ಯಮಠ ಸ್ವಾಗತಿಸಿದರು. ಎನ್‌. ಮಲ್ಲಯ್ಯ ನಿರೂಪಿಸಿದರು. ಶಿವಮೊಗ್ಗದ ಕೆ.ಆರ್‌. ಭೂಮಿಕಾ ಭರತನಾಟ್ಯ ಪ್ರದರ್ಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next