Advertisement

ಉತ್ತಮ ಬಾಂಧವ್ಯದಿಂದ ಬದುಕಿನಲ್ಲಿ ನೆಮ್ಮದಿ

01:56 PM Oct 29, 2018 | |

ಬದುಕಿನಲ್ಲಿ ನೆಮ್ಮದಿಗಾಗಿ ಸಾಮಾಜಿಕ ಹಾಗೂ ಕೌಟುಂಬಿಕವಾಗಿ ಉತ್ತಮ ಬಾಂಧವ್ಯ ಅಗತ್ಯ. ನೆಮ್ಮದಿ ಇದ್ದರೆ ಮನಸ್ಸು ಉಲ್ಲಾಸದಿಂದ್ದು, ಯೋಜಿತ ಕೆಲಸ- ಕಾರ್ಯಗಳೆಲ್ಲ ಸರಾಗವಾಗಿ ನಡೆಯುತ್ತದೆ ಮಾತ್ರವಲ್ಲ ಜೀವನದಲ್ಲಿ ಯಶಸ್ಸು ಸಾಧಿಸಲು ಇದು ಪ್ರೇರಣೆಯಾಗುವುದು. ಪರಸ್ಪರ ಗೌರವ, ಪ್ರಾಮಾಣಿಕತೆ, ಬೆಂಬಲ, ಒಬ್ಬರನ್ನೊಬ್ಬರು ಗುರುತಿಸಿಕೊಳ್ಳುವಿಕೆ, ಒಳ್ಳೆಯ ಸಂವಹನ, ಪ್ರೀತಿ, ಹೊಂದಾಣಿಕೆ ಇವೇ ಮೊದಲಾದ ಮೌಲ್ಯಗಳನ್ನು ವ್ಯಕ್ತಿಗತವಾಗಿ ಅಳವಡಿಸಿಕೊಳ್ಳುವುದರಿಂದ ಬಾಂಧವ್ಯ ವೃದ್ಧಿಸುವುದು. ಕರುಣೆ ಮತ್ತು ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳುವುದು. ಮನಸ್ಸನ್ನು ಸ್ವನಿಯಂತ್ರಣದಲ್ಲಿಟ್ಟು ಕೊಳ್ಳುವುದು ಬಾಂಧವ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ.

Advertisement

ಶಾಂತ ಚಿತ್ತರಾಗಿ
ಇಂದಿನ ಆಧುನಿಕ ಯುಗದಲ್ಲಿ ಹೆಚ್ಚಿನ ಮಂದಿ ಹಣ ಗಳಿಸುವ ಆಸೆಯಿಂದಾಗಿ ನೆಮ್ಮದಿ ಕಳೆದುಕೊಂಡು ಒತ್ತಡದಿಂದ ಬದುಕು ಸಾಗಿಸುತ್ತಿದ್ದಾರೆ. ಇದರಿಂದ ದ್ವೇಷ, ಅಸೂಯೆ, ಕಚ್ಚಾಟಗಳು ಹೆಚ್ಚಾಗಿವೆ. ಮಾನವೀಯ ಸಂಬಂಧಗಳು ಮರೆಯಾಗುತ್ತಿವೆ. ಕುಟುಂಬಗಳಲ್ಲೂ ಪ್ರೀತಿ, ಸಹಬಾಳ್ವೆ, ಸಾಮರಸ್ಯ, ಪರ ಸ್ಪರ ನಂಬಿಕೆ ಇಲ್ಲವಾಗಿವೆ. ಹೀಗಾಗಿ ಪ್ರತಿ ಮನೆ ಗಳಲ್ಲೂ ಜಗಳ ಸಾಮಾನ್ಯವಾಗಿ ಬಿಟ್ಟಿವೆ. ಸಮಸ್ಯೆ ಇಲ್ಲದೆ ಬದುಕನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ವೈಯಕ್ತಿಕ ಅಥವಾ ಔದ್ಯೋಗಿಕರಂಗ ಇರಬಹುದು. ಸಮಸ್ಯೆ ತಪ್ಪಿದಲ್ಲ. ಆದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇದೆ ಎಂಬ ಸತ್ಯವನ್ನು ನಾವು ತಿಳಿದಿರಬೇಕು. ಹಾಗೇ ಶಾಂತ ಚಿತ್ತದಿಂದ ಅವುಗಳನ್ನು ಪರಿಹರಿಸುವತ್ತ ಚಿಂತನೆ ನಡೆಸಬೇಕು.

ಆಧುನಿಕ ಜಗತ್ತಿನಲ್ಲಿ ಎಲ್ಲವೂ ಕ್ಷಣಕ್ಷಣಕ್ಕೂ ಬದಲಾವಣೆಯಾಗುತ್ತಿರುತ್ತವೆ. ಹಾಗಾಗಿ ಯಾರಿಗೂ  ನೆಮ್ಮದಿ ಎಂಬುದು ಸುಲಭದಲ್ಲಿ ಲಭಿಸುವುದಿಲ್ಲ. ವಿಶ್ವದ ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗದಷ್ಟು ಮಂದಿ ಇಂದು ನೆಮ್ಮದಿಯಿಲ್ಲದೆ ಒದ್ದಾಡುತ್ತಿದ್ದಾರೆ. ಮನುಷ್ಯ ತನಗೆ ಸಂಬಂಧಿಸಿದ ವಸ್ತು, ಸಂಬಂಧ, ಉದ್ಯೋಗಗಳನ್ನು ಬದಲಿಸಿಕೊಳ್ಳಲು ಬಯಸುತ್ತಾನೆ. ಆದರೆ ತನ್ನ ಮನಃಸ್ಥಿತಿಯನ್ನು ಬದಲಿಸಿಕೊಳ್ಳುವುದಿಲ್ಲ. ಹಾಗಾಗಿಯೇ ಬದುಕಿನಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ.

ಶಿಸ್ತು, ನಿಯಮ ಪಾಲಿಸಿ
ನೀತಿ, ನಿಯಮ, ಶಿಸ್ತು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಧೃತಿಗೆಡದೆ ದೃಢವಾಗಿದ್ದು, ಸಮಸ್ಯೆ ಬಗ್ಗೆ ಚೆನ್ನಾಗಿ ಅರಿತು ಸಮಾಧಾನಕರವಾಗಿ, ಶಾಂತಿಯುತವಾಗಿ ಅದನ್ನು ಪರಿಹರಿಸಿಕೊಳ್ಳಬಹುದು. ಹಾಗೆ ಅತಿಯಾದ ಆಸೆ, ಕ್ರೌಯ, ದುಷ್ಟ ಮನಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯ. ಹಾಗಾದಲ್ಲಿ ನೆಮ್ಮದಿ ಎಂಬುದು ತನ್ನಿಂದತಾನಾಗಿಯೇ ಲಭಿಸುತ್ತದೆ.

ಅತ್ಯಾವಶ್ಯಕ ಅಂಶಗಳು
ಸಂತೋಷ, ನೆಮ್ಮದಿ, ತೃಪ್ತಿ, ಸಮಾಧಾನಗಳು ಮನುಷ್ಯ ಜೀವನದಲ್ಲಿರಬೇಕಾದ ಅತ್ಯಾವಶ್ಯಕ ಅಂಶಗಳು. ಸಂಪೂರ್ಣವಾಗಿ ತೃಪ್ತಿ, ನೆಮ್ಮದಿಯ ಬದುಕು ಸಾಧ್ಯವಿಲ್ಲವಾದರೂ ಇರುವುದರಲ್ಲಿ ಸ್ವಲ್ಪ ಸಮಾಧಾನ ಪಟ್ಟುಕೊಳ್ಳುವ ಗುಣ ಬೆಳೆಸಿಕೊಳ್ಳುವುದು ಅಗತ್ಯ.

Advertisement

ಬದುಕು ಎಂಬುದು ಕ್ಷಣಿಕ ಎಂಬಂತೆ ಬದುಕಬೇಕು. ಇಲ್ಲಿ ಹಣ, ಐಶ್ವರ್ಯಕ್ಕಿಂತ ಮುಖ್ಯವಾದದ್ದು ಮಾನವೀಯತೆ. ಇದರಿಂದ ಜನರ ಪ್ರೀತಿಯ ಜತೆಗೆ ಸಾಕಷ್ಟು ಮಂದಿಯ ಆಶೀರ್ವಾದವನ್ನು ಪಡೆಯಲು ಸಾಧ್ಯವಿದೆ. ಕೈತುಂಬಾ ಸಂಬಳ ಇದ್ದರೂ ಎಷ್ಟೇ ಸಾಧನೆಗೈದರೂ ಮನಸ್ಸಿನಲ್ಲಿ ಮರೆಯಲಾಗದ ದುಃಖ ಇದ್ದರೆ, ಸಮಾಧಾನ, ತೃಪ್ತಿ, ಸಂತೋಷ, ನೆಮ್ಮದಿ ಇರುವುದಿಲ್ಲ. ಎಲ್ಲರೂ ಕೂಡಿ ಬಾಳುವ, ಸಂತೋಷವನ್ನು ಅನುಭವಿಸುವ ಅವ್ಯಕ್ತ ಭಾವವನ್ನು ಅಳವಡಿಕೊಳ್ಳುವುದರಿಂದ ಅವು ನಮ್ಮನ್ನು ನಿರಂತರ ಹಸನ್ಮುಖೀಗಳನ್ನಾಗಿಸುತ್ತದೆ ಹಾಗೂ ನೆಮ್ಮದಿಯನ್ನು ಒದಗಿಸುತ್ತದೆ.

ದುರಾಸೆ ನೆಮ್ಮದಿಯ ಶತ್ರು
ದುರಾಸೆ ನೆಮ್ಮದಿಯ ಬಹುದೊಡ್ಡ ಶತ್ರು. ಅದನ್ನು ಅಷ್ಟು ಸುಲಭವಾಗಿ ಹತ್ತಿಕ್ಕಿಕೊಳ್ಳುವುದು ಸಾಧ್ಯವಿಲ್ಲ. ಇದಕ್ಕಾಗಿಯೇ ಕವಿ ಅಡಿಗರು ‘ಇದ್ದುದನ್ನು ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ’ ಎಂದಿದ್ದಾರೆ. ದುರಾಸೆ ತುಂಬಿಕೊಂಡಿರುವ ಮನಸ್ಸು ಬಂಜರು ಭೂಮಿ ಇದ್ದಂತೆ; ಅಲ್ಲಿ ನೆಮ್ಮದಿಯ ಹಸುರು ಬೆಳೆಯುವುದಿಲ್ಲ. ಮನುಷ್ಯ ಯಾವುದೇ ಸಂಶೋಧನೆ ನಡೆಸಿ ಅತ್ಯಾಧುನಿಕ ಸೌಲಭ್ಯಗಳನ್ನು ಕಂಡು ಹಿಡಿದರೂ ಅವುಗಳು ಆತನಿಗೆ ಕೆಲವು ದಿನಗಳ ಕಾಲ ನೆಮ್ಮದಿಯನ್ನು ನೀಡಬಲ್ಲವು. ಬಳಿಕ ಆತನಿಗೆ ಇದಕ್ಕಿಂತಲೂ ಮಿಗಿಲಾದದು ಬೇಕೆನಿಸುತ್ತದೆ. ಕೋಟಿ ಗಟ್ಟಲೆ ಹಣವಿದ್ದರೂ ಇನ್ನೂ ಬೇಕು ಎನ್ನುವ ಮನುಷ್ಯನ ದುರಾಸೆಯ ಭಾವದಿಂದ ಇಂದು ಆತ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಆದ್ದರಿಂದ ಕಷ್ಟ – ಸುಖ ಏನೇ ಬರಲಿ ನೆಮ್ಮದಿಯಿಂದ ಬದುಕುವಂತಾಗಬೇಕು.

 ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next