Advertisement

ಮಕ್ಕಳ ಅಂತರಂಗದ ಪ್ರತಿಭೆಗೆ ಬೆಳಕಾದ ಭಾವಾಂತರಂಗ

06:00 AM Dec 07, 2018 | |

ಕಲಿಕೆ ಎಂದರೆ ಮಕ್ಕಳ ತಲೆಗೆ ಪುಸ್ತಕದ ಜ್ಞಾನದ ಜೊತೆಜೊತೆಗೆ ಅವರಲ್ಲಿ ನೈತಿಕ-ಆಧ್ಯಾತ್ಮಿಕ-ಸಾಂಸ್ಕೃತಿಕ ಮೌಲ್ಯಗಳನ್ನು ತುಂಬಿಸಿ ಅವರಲ್ಲಿನ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅದನ್ನು ಹೊರಹೊಮ್ಮಿಸಲು ಅಗತ್ಯವಿರುವ  ಸೂಕ್ತ ಅವಕಾಶಗಳನ್ನು ನಿರ್ಮಿಸಿ ಅವರಲ್ಲಿ ಕ್ರಿಯಾಶೀಲತೆ-ಸದ್ವಿಚಾರ-ಸೃಜನಶೀಲತೆಗಳನ್ನು ಮೂಡಿಸಿ ಸದೃಢ ಸಮಾಜವನ್ನು ಕಟ್ಟುವಂತಹ ಉತ್ತಮ ವ್ಯಕ್ತಿತ್ವವನ್ನು ಬೆಳೆಸಬೇಕು. ಆಗ ಮಾತ್ರ ಶಿಕ್ಷಣದ ಮೂಲ ಉದ್ದೇಶ ನಿಜವಾದ ಅರ್ಥದಲ್ಲಿ ಈಡೇರಲು ಸಾಧ್ಯ. ಇಂತಹ ಮಹಾನ್‌ ಉದ್ದೇಶದೊಂದಿಗೆ ಜನ್ಮತಾಳಿದ್ದು ಭಾವಾಂತರಂಗ.

Advertisement

ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯ ಶ್ರೀಸಿದ್ಧಿ ವಿನಾಯಕ ವಸತಿ ಶಾಲೆ ತನ್ನಲ್ಲಿನ ಶಿಸ್ತು ಮತ್ತು ಶೈಕ್ಷಣಿಕ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವಂತಾದ್ದು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಸದುದ್ದೇಶವನ್ನಿಟ್ಟುಕೊಂಡು ಕಳೆದ ಏಳು ವರುಷಗಳಿಂದ ಇಲ್ಲಿ ಭಾವಾಂತರಂಗ ಎನ್ನುವ ಒಂದು ದಿನದ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆ ದಿನ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಬೇರೆ ಬೇರೆ ವಲಯಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಅವರಿಂದ ವಿದ್ಯಾರ್ಥಿಗಳಿಗೆ ಕೌಶಲವೃದ್ಧಿ ತರಬೇತಿಯ ಮಾಹಿತಿಯನ್ನು ನೀಡುತ್ತಾ ಅನುಭವಗಳನ್ನು ಹಂಚಿಕೊಳ್ಳುತ್ತ ವಿದ್ಯಾರ್ಥಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರ ಜೊತೆಜೊತೆಗೆ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ವಿವಿಧ ರಂಗಗಳ ಪರಿಚಯವನ್ನು ಮಾಡಿಸಿ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಈ ಕಾರ್ಯಕ್ರಮದ ಸಾರ್ಥಕತೆ ಅಡಗಿದೆ.

ಈ ಬಾರಿಯೂ ಕೂಡ ಭಾವಾಂತರಂಗ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಪ್ರತಿಯೊಂದರಲ್ಲೂ  ಕ್ರಿಯಾಶೀಲತೆಯನ್ನು ತೋರಿಸುವ ಸಿದ್ಧಿವಿನಾಯಕ ಬಳಗ ಈ ಬಾರಿ ಗರಿರಹಿತ ನವಿಲಿನ ಪ್ರತಿಕೃತಿಗೆ ಅತಿಥಿಗಳಿಂದ ನವಿಲುಗರಿಗಳನ್ನು ಸಿಕ್ಕಿಸಿ ಉದ್ಘಾಟನೆಯನ್ನು ನೆರವೇರಿಸಿತ್ತು. 

ವಿದ್ಯಾರ್ಥಿಗಳನ್ನು ಬೇರೆ ಬೇರೆ ಗುಂಪುಗಳನ್ನಾಗಿ ವಿಂಗಡಿಸಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಬೇರೆ ಬೇರೆ ಕಾರ್ಯಾಗಾರಗಳಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಪ್ರತೀ ಕಾರ್ಯಾಗಾರದ ನಿರ್ವಹಣೆಗೆ ಇಬ್ಬರು ನಿರ್ವಾಹಕರನ್ನು ನೇಮಿಸಲಾಗಿತ್ತು. ಪ್ರತೀ ಕಾರ್ಯಾಗಾರಗಳಲ್ಲೂ  ಅಚ್ಚುಕಟ್ಟುತನ ಎದ್ದು ಕಾಣುತಿತ್ತು. ಮಕ್ಕಳ ಸ್ಫೂರ್ತಿಯುತವಾದ ಭಾಗವಹಿಸುವಿಕೆ ಶಿಸ್ತುಬದ್ಧತೆ ಕಾರ್ಯಕ್ರಮಕ್ಕೆ ಕಳೆ ತಂದಿತ್ತು. ಒಟ್ಟಿನಲ್ಲಿ ಆ ದಿನ ಮಕ್ಕಳು ಮನದಣಿಯೇ ನಲಿದರು, ಹಾಡಿದರು, ಬರೆದರು, ಕವನ ಬರೆದು ಓದಿದರು. ತಾವೇ ತರಕಾರಿ, ಪೇಪರ್‌, ರಟ್ಟು , ಮರ ಇತ್ಯಾದಿಗಳಿಂದ ಕಲಾಕೃತಿಗಳನ್ನು ತಯಾರಿಸಿ ಖುಷಿಪಟ್ಟರು. ಚಿತ್ರ ಬಿಡಿಸಿ ಸಂತೋಷಪಟ್ಟರು. ರಂಗೋಲಿ ಹುಡಿಯಲ್ಲಿ ಚಿತ್ತಾರವಿಟ್ಟರು. ಮೆಹಂದಿ ಹಚ್ಚಿ ಸಂಭ್ರಮಿಸಿದರು. ಪ್ರಶ್ನೆಗಳನ್ನು ಕೇಳಿ ಗೊಂದಲಗಳನ್ನು ಪರಿಹರಿಸಿಕೊಂಡರು, ವಿಧೇಯರಾಗಿ, ತುಂಟರಾಗಿ, ಚೂಟಿಯಾಗಿ, ಜಾಣರಾಗಿ ಸಂಪನ್ಮೂಲ ವ್ಯಕ್ತಿಗಳಿಗೂ ಸಂತೋಷವನ್ನು ನೀಡಿದರು.  

ಆರ್ಟ್‌ ಆಫ್ ಸೈನ್ಸ್‌ , ಲೇಖನ ಮತ್ತು ಬರವಣಿಗೆ, ನಮ್ಮ ನಡಿಗೆ ವಿಶ್ವಾಸದೆಡೆಗೆ, ಪೇಪರ್‌ ಆರ್ಟ್‌, ತರಕಾರಿ ಕಲೆ, ಸಾವಯವ ಕೃಷಿ, ಗ್ರೀಟಿಂಗ್‌ ಕಾರ್ಡ್‌ ತಯಾರಿಕೆ ನಮ್ಮ ನಡುವಿನ ಔಷಧೀಯ ಸಸ್ಯಗಳ, ಸೃಜನಾತ್ಮಕ ಕಲೆ, ಪತ್ರಿಕಾ ಲೇಖನ, ಗಾಳಿಪಟ ತಯಾರಿಕೆ, ರಂಗಕಲೆ, ವ್ಯಕ್ತಿತ್ವ ವಿಕಸನ, ಕಸದಿಂದ ರಸ, ರಂಗೋಲಿ, ಬೆಂಕಿ ಬಳಸದೆ ಅಡುಗೆ, ಚಿಣ್ಣರ ಕಲೆ, ಮರದ ಕೆತ್ತನೆ, ಭಾಷಣ ಕಲೆ, ಮೆಹಂದಿ, ಸೀಡಿಂಗ್‌ ಬಾಲ್‌, ಗೂಡುದೀಪ ತಯಾರಿಕೆ, ಕವನ ರಚನೆ, ಮೌಲ್ಡಿಂಗ್‌ ಕೆಲಸ, ಗ್ಲಾಸ್‌ ಪೇಂಟಿಂಗ್‌, ಕಥೆ ಮತ್ತು ರಸಪ್ರಶ್ನೆ, ಆಫ್ರಿಕನ್‌ ಪೇಪರ್‌ ಡಾಲ್‌ ಕುರಿತಂತೆ ವೈವಿಧ್ಯಮಯ ಕಾರ್ಯಾಗಾರಗಳು ನಡೆದವು.

Advertisement

ಭಾವಾಂತರಂಗ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸತ್ಕರಿಸುವ ರೀತಿ, ಸಂಯೋಜಕರ ನಡೆನುಡಿಗಳು, ಅಧ್ಯಾಪಕರಾದಿಯಾಗಿ ಸಮಸ್ತ ಬಳಗದ ನಡುವಿನ ಶಿಸ್ತುಬದ್ಧ ಸಮನ್ವಯತೆ ಸಹಕಾರ ಎಲ್ಲವೂ ಕೂಡ ಮಾದರಿಯಾಗಿ ಇರುವಂಥಾದ್ದು. ಪ್ರಾಂಶುಪಾಲರಾದ ಶರಣ್‌ ಕುಮಾರ  ಹೇಳುವಂತೆ, “ಮಕ್ಕಳನ್ನು ಈ ಹಂತದಲ್ಲಿ ತಿದ್ದುವುದು ರೂಪಿಸುವುದು ಬಹಳ ಸುಲಭ. ಒಳ್ಳೆಯದನ್ನು ಕೊಡುವ ರೀತಿಯಲ್ಲಿ ಕೊಟ್ಟರೆ ಮಕ್ಕಳು ಅದನ್ನು ತೆಗೆದುಕೊಳ್ಳುತ್ತಾರೆ. ಸುಂದರ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ. ಅದೇ ಭಾವಾಂತರಂಗದ ಆಶಯ ಕೂಡ’ ಒಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಒಡಮೂಡುವಂತಾದರೆ  ಶಿಕ್ಷಣ ವ್ಯವಸ್ಥೆ ಮಕ್ಕಳ ವ್ಯಕ್ತಿತ್ವ ಎರಡೂ ಸ್ವಲ್ಪ ಮಟ್ಟಿಗಾದರೂ ಪ್ರಗತಿಯಾಗುವುದರಲ್ಲಿ  ಸಂದೇಹವಿಲ್ಲ. 

ನರೇಂದ್ರ ಎಸ್‌. ಗಂಗೊಳ್ಳಿ
ವಾಣಿಜ್ಯಶಾಸ್ತ್ರ ಉಪನ್ಯಾಸಕರು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು, ಗಂಗೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next