Advertisement

ನಂಬಿಕೆಯ ಕಂಬದ ಮೇಲೆ  ಸಂಬಂಧದ ಸೌಧ

03:36 PM Dec 08, 2017 | |

ಮೃಣ್ಮಯೀ ಸೀತೆ,
ಪ್ರಪಂಚದಲ್ಲಿ ಕವಿಯ ಮಾತನ್ನು ಮೀರಿದ ಮೊದಲ ಪಾತ್ರ ನೀನೇ ಇರಬೇಕು! ಲವಕುಶರೊಂದಿಗೆ ಸೀತಾರಾಮರು ನೂರ್ಕಾಲ ಬದುಕಬೇಕೆಂದು ಬಯಸಿ, ಕಾವ್ಯಕ್ಕೆ ಸುಖಾಂತ್ಯ ಬರೆಯಹೊರಟಿದ್ದ ಕವಿ ವಾಲ್ಮೀಕಿ ಮಹರ್ಷಿಯನ್ನೇ ದಿಕ್ಕು ತಪ್ಪಿಸಿದೆಯಲ್ಲಾ ತಾಯಿ ನೀನು! “”ಪುನರ್ಮಿಲನಕ್ಕಾಗಿ ರಾಮ ಕಾಯುತ್ತಿದ್ದಾನೆ, ಅವನನ್ನು ಸೇರು” ಎಂಬ ಅವರ ಮಾತನ್ನು ಪುರಸ್ಕರಿಸದೇ ಭೂಗರ್ಭದ ದಾರಿ ಹಿಡಿದೆ ನೀನು.

Advertisement

ಹೌದು, ಕವಿ ಕಾವ್ಯದ ಕೊನೆಯ ಹಂತದಲ್ಲಿ ಜೀವಿಸಿದ್ದು ಈ ಸೀತೆಯೊಂದಿಗೇ ತಾನೇ? ಅನುದಿನದ ಅವಳ ಮಾನಸಿಕ ಉಬ್ಬರವಿಳಿತ ಅವರಿಗೂ ತಟ್ಟುತ್ತಿತ್ತು. ಆಶ್ರಮದಲ್ಲಿ ಲವಕುಶರಿಗೆ ಮಾತ್ರವಲ್ಲ, ಅವರಮ್ಮನಾದ ಸೀತೆಯ ಹೊಸಹುಟ್ಟಿಗೂ ಸಾಕ್ಷಿಯಾಗಿದ್ದವರವರು. ರಾಮನೆಂಬ ಭ್ರಮೆಯನ್ನು ಕಳಚಿಕೊಳ್ಳುತ್ತ ತನ್ನ ಕಣ್ಣಿಂದ ಲೋಕ ಕಾಣ ಹೊರಟ ಸೀತೆಯ ಉಗಮವಾಗಿತ್ತಲ್ಲಿ. ಅಯೋಧ್ಯೆಯಿಂದ ವಿಮುಖವಾಗುತ್ತಿದ್ದ ಅವಳ ಮನದಿಂಗಿತ ಕವಿಗಲ್ಲದೇ ಮತಾöರಿಗೆ ತಿಳಿಯಬೇಕು? ಹಾಗಾಗಿ ಕವಿಗೆ ಸೋಲಾಯ್ತು. ಸೀತೆ, ರಾಮನ ಜೊತೆ ಮತ್ತೆ ಬದುಕುವುದನ್ನು ನಿರಾಕರಿಸಿಬಿಟ್ಟಳು.

ರಾಮನಿಲ್ಲದೆಯೇ ನೀನು ಎಂದಾದರೂ ಬದುಕಿದ್ದಿದೆಯೇ? ರಾಮ ವನವಾಸಕ್ಕೆ ಹೊರಟಾಗ ಹಠ ಹಿಡಿದು ಅವನ ಜೊತೆಯಾದ. ಅಶೋಕ ವನದಲ್ಲಿ ಅವನಿಲ್ಲದಿದ್ದರೇನು? ರಾಮಧ್ಯಾನ ನಿನ್ನ ಬದುಕಾಯ್ತು. ಅಗ್ನಿ ನಿನ್ನ ಸುಡುವಾಗಲೂ ರಾಮರಾಮ ನಿನ್ನ ಸಂಗಡವಿತ್ತು. ಕೊನೆಯಲ್ಲಿ ವಾಲ್ಮೀಕಿ ಋಷ್ಯಾಶ್ರಮದಲ್ಲಿ ನೀನಿದ್ದಾಗಲೂ ಲವಕುಶರ ನಾಲಿಗೆಯಲ್ಲಿ ನಲಿಯುತ್ತಿದ್ದ ರಾಮಗಾಥೆಯನ್ನು ಬಿಟ್ಟಿರದವಳು ನೀನು. ಅಂಥ ಸೀತೆ ನೀನು, ರಾಮನೇ ಕೈಬೀಸಿ, ಮಂಡಿಯೂರಿ ಕರೆದಾಗಲೂ, “ರಾಮನಲ್ಲಿ ನನಗೆ ಪ್ರೇಮವಿರುವುದೇ ಹೌದಾದರೆ ನನ್ನನ್ನು ನಿನ್ನ ಬಳಿ ಕರೆದುಕೋ’ ಎಂದು ತಾಯ ಒಡಲ ಮತ್ತೆ ಸೇರಿದೆಯಲ್ಲಾ, ನಂಬುವುದು ಸಾಧ್ಯವೇ?

ನಂಬಿಕೆ ಸಂಬಂಧವನ್ನು ಕಟ್ಟಬೇಕಾದ ಬಹುಮುಖ್ಯ ಕಂಬ. ಸೀತಾ ಪರಿತ್ಯಾಗದ ಹೊತ್ತಲ್ಲಿ ಮುರಿದು ಬಿದ್ದದ್ದು ಈ ಮಹಾ ಡಿಂಭವೇ. ಪ್ರಜೆಗಳಿಗೆ ರಾಮರಾಜ್ಯದ ಮೌಲ್ಯದ ಕುರಿತು; ರಾಜನಿಗೆ ರಾಣಿಯ ಕುರಿತು ನಂಬಿಕೆ ಕ್ಷೀಣವಾಯ್ತು. ಈ ಕಾರಣಕ್ಕೇ ರಾಮನಿಂದ ದೂರ ತಳ್ಳಲ್ಪಟ್ಟ ಸೀತೆಗೂ, ಗಂಡನ ಬಗೆಗಿನ ಒಲವು ಅಳಿಯದಿದ್ದರೂ ವಿಶ್ವಾಸ ಉಳಿಯಲಿಲ್ಲ. ಇನ್ನು ಸಂಬಂಧದ ಸೌಧ ಕಟ್ಟುವುದು ಸಾಧ್ಯವೆ? ಜಾನಕಿಯು, ರಾಮ ಮತ್ತು ಅಯೋಧ್ಯೆ, ಕಡೆಗೆ ಲವ-ಕುಶರಿಂದಲೂ ಬಿಡುಗಡೆ ಪಡೆದು ಬಿಟ್ಟಳು.

ಈ “ಸಂಬಂಧ’ಗಳು ಆಗ್ರಹಿಸುವ ಕಟ್ಟುಪಾಡುಗಳಿಗೆ, ಹೊಣೆಗಾರಿಕೆಗೆ ಹೆಣ್ಣುಗಳು ತೆರಬೇಕಾಗಿ ಬರುವ ಬೆಲೆಯೇನಾದರೂ ಸಾಮಾನ್ಯದ್ದೇ? ಸಂಬಂಧಿಕರ ಸುಖ ಸಂತೋಷಕ್ಕಾಗಿ, ಅವಳ ತ್ಯಾಗಮಯ ಬದುಕು ಅಗತ್ಯ ಮತ್ತು ಆತ್ಯಂತಿಕ ಎಂದು ಇಡೀ ಪ್ರಪಂಚವನ್ನು, ಮುಖ್ಯವಾಗಿ ಅವಳನ್ನು ನಂಬಿಸಲಾಗುತ್ತದೆ. ಈ ನಂಬಿಕೆಯ ಆಧಾರದ ಮೇಲೆ ನಿಂತಿರುವ “ಸಂಬಂಧ’ ಮುರಿಯದೇ ಭದ್ರವಾಗಿರಬೇಕಾದರೆ ಅವಳು ಇನ್ಯಾರಧ್ದೋ ಆಧಿಪತ್ಯದಡಿ ಅಧೀನಳಾಗಿಯೇ ಇರಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತದೆ. ಪ್ರೀತಿ, ವಿಶ್ವಾಸ, ಕೊಡುಕೊಳ್ಳುವಿಕೆಯ ಸರಕುಗಳಿಂದಲೇ ಕಟ್ಟಬೇಕಾಗಿರುವ ಈ ಸಂಬಂಧವೆಂಬ ಗೂಡನ್ನು, ಆಳ್ತನ, ಸುಳ್ಳು ಆದರ್ಶಗಳ ನೆಲೆಗಟ್ಟಲ್ಲಿ ಕಟ್ಟಲು ಹೊರಟರೆ ಅದು ಉಸಿರುಗಟ್ಟಿಸುವ ತಾವನ್ನಲ್ಲದೇ ಇನ್ನೇನನ್ನು ಕೊಟ್ಟಿàತು?

Advertisement

ಆದರೆ, ಇದರಿಂದೆಲ್ಲ ಹೊರಬರಬೇಕು ಎಂದು ಚಡಪಡಿಸುವ ಮನಸ್ಸುಗಳಿಗೆ ಈ ಗೂಡನ್ನೊಡೆಯುವುದು ಅನಿವಾರ್ಯವೆ? ನಮ್ಮ ಒಳಲೋಕದ ಬಂಧಗಳಿಂದ ಮುಕ್ತರಾಗುವುದು ನಮ್ಮ ಮೊದಲ ಆದ್ಯತೆಯಾಗಬೇಕು, ಎನ್ನುವುದು ನನ್ನ ಮತ. ನಮ್ಮ ಭಾವಕೋಶಕ್ಕೆ ಬೀಗ ಹಾಕಿ ಕೀಲಿಕೈಯನ್ನು ಗಂಡನಿಗೋ, ಮಕ್ಕಳಿಗೋ ಇನ್ಯಾರಿಗೋ ದಾಟಿಸಿ ನಮ್ಮ ಸಂಭ್ರಮದ ಕ್ಷಣಗಳನ್ನು ಅವರು ಸೃಷ್ಟಿಮಾಡಲಿ ಎಂದು ಕಾಯುತ್ತಿರುತ್ತೇವೆ. “ನಾನು’ ಎಂದರೆ ಏನು ಎಂಬುದನ್ನು ತಿಳಿಯದೆಯೇ ನನ್ನ ಸುಖ-ದುಃಖಕ್ಕೆ ಇನ್ನೊಬ್ಬರನ್ನು ದೂರುವ ಬದಲು, ನಮ್ಮ ಬದುಕಿಗೆ ನಾವೇ ಹೊಣೆ ಹೊತ್ತರೆ ಅದು “ಸ್ವ’ದ ಬಿಡುಗಡೆಯ ಮೊದಲ ಹೆಜ್ಜೆಯಲ್ಲವೇ? ನಾನೇ ಬಿಗಿದ ನನ್ನ ಭಾವ ತಂತಿಯನ್ನು ನಾನೇ ಮೀಟಬೇಕು. ಅದಕ್ಕಾಗಿ ಜೊತೆ ಬಯಸಬಹುದಲ್ಲದೇ ಬೇರೊಬ್ಬ ವೈಣಿಕನಿಗಾಗಿ ಕಾಯುತ್ತಲೇ ಇದ್ದರೆ ನನ್ನನ್ನು ನಾನು ಕಳೆದುಕೊಂಡಂತೆಯೇ. ನಾನು ಮತ್ತು ನನ್ನ ಗೂಡು ಎರಡೂ ಉಳಿಯಬೇಕು ಎಂದು ನನ್ನ ಮನಸ್ಸು ಬಯಸುತ್ತದೆ.

ನನ್ನ ಸ್ವಾತಂತ್ರ್ಯಕ್ಕಾಗಿ ಗೂಡಿನೊಳಗೆ ನಾನು ಹುಡುಕಾಡಿದರೆ, ಗೂಡನ್ನು ಮೀರಬೇಕೆಂಬುದು ನಿನ್ನ ಒಲವಾಗಿರಬಹುದು. ಸ್ವಾತಂತ್ರ್ಯದ ತಾವು ಪ್ರತಿಯೊಬ್ಬರದೂ ಬೇರೆ ಬೇರೆಯೇ ಆಗಿದೆ ಅಲ್ಲವೇ? ನನಗಿಲ್ಲಿ ನೆನಪಾಗುವವಳು ಗಂಗೆ. ಗಂಡ ಮತ್ತು ಅವನ ಬಾಂಧವರು ಅವಳನ್ನು ಅಗೌರವಿಸಿ ಅವಮಾನಿಸಿದಾಗ ಅದಕ್ಕವಳು ಪ್ರತಿಸ್ಪಂದಿಸಿದ್ದು ನೀರಾಗುವುದರ ಮೂಲಕ. ಹರಿಯುವ ನೀರು ಅಶುದ್ಧಿಯಾಗುವುದುಂಟೇ? ಹಾಗೆಂದು ಅದನ್ನು ಹಿಡಿದಿಡುವೆನೆಂದರೆ ಅದು ಸಾಧ್ಯವೇ? ಶಂತನು, ತನ್ನವಳೆಂದು ಬಿಗಿಹಿಡಿದಿದ್ದ ಗಂಗೆ ದ್ರವಿಸುತ್ತಲೇ ಚಲಿಸಿದಳು. ಶಾಶ್ವತವಾಗಿ ಅವನೊಳಗೊಂದು ಶೂನ್ಯ ಬಿಟ್ಟು ಹರಿದುಹೋದಳು. ತುದಿ ತಲುಪಲು ತನ್ನದೇ ದಾರಿ ಹುಡುಕುತ್ತಾ ಆ ಹಾದಿಯಲ್ಲಿ ಬಳಿಸಾರಿ ಬಂದ ಚರಾಚರಗಳನ್ನು ಸಂತೈಸುತ್ತಲೇ ಸ್ತ್ರೀಆಸ್ಮಿತೆ ಮತ್ತದರ ಘನತೆಯನ್ನು ಎತ್ತಿ ಹಿಡಿದಳು.

ತನ್ನ ಮೂಲಗುಣವಾದ ಹರಿಯುವಿಕೆಯನ್ನೇ ನೆಚ್ಚಿದ ಗಂಗೆಯಂತೆ, ತನ್ನ ಮೂಲವನ್ನರಸುತ್ತ ಮಣ್ಣೊಡಲ ಸೇರಿದಳೇ ಸೀತೆ?
ಬೃಹತ್‌ ಮರದ ಬೀಜವೊಂದನ್ನು ಅಡಗಿಸಿಟ್ಟಿದ್ದೇನೆಂಬ ಹಮ್ಮು ಎಷ್ಟು ಕಾಲ ಉಳಿದೀತು? ಅದು ಬೆಳೆದೇ ಬೆಳೆಯುತ್ತದೆ, ನೀವು ಕಟ್ಟಿದ ಸೌಧವನ್ನೊಡೆದು ಆಕಾಶಕ್ಕೆ ಬಾಚಿಕೊಳ್ಳುತ್ತದೆ, ಪಾತಾಳಕ್ಕಿಳಿಯುತ್ತದೆ.

ಬಾನಿಗೆ ಬೇಲಿ ಹಾಕುವುದು ಸಾಧ್ಯವೆ? ದಿಕ್ಕಿಗೊಂದು ಕೊನೆ ಎಳೆಯುತ್ತೇನೆಂಬುವುದು ಹುಂಬತನವಲ್ಲವೆ? ಮುಷ್ಟಿಯಲ್ಲಿ ಗಾಳಿ ಹಿಡಿದೀತೇ? ನೀರನ್ನು ಒಡ್ಡು ಎಷ್ಟು ಹೊತ್ತು ತಡೆದೀತು? ಒಡೆತನದ ಮರುಳು ಹರಿದು ಒಗೆತನದ ಜೀವಜಲ ಉಕ್ಕಬೇಕು. ಆಗಲೇ ಸ್ವಾತಂತ್ರ್ಯದ ಶ್ರಾವಣ ಹಸುರೊಡೆಯುತ್ತದೆ. ಹೋಗಿ ಬಾ ಸೀತೆ!

(ಅಂಕಣ ಮುಕ್ತಾಯ)

ಅಭಿಲಾಷಾ ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next