Advertisement

ಕೆಂಪುದೀಪ: ಅನುಷ್ಟಾನಕ್ಕೆ ರಾಜ್ಯ ಸರ್ಕಾರ ಸಿದ್ಧತೆ

03:45 AM Apr 21, 2017 | Team Udayavani |

ಬೆಂಗಳೂರು: ಅತಿಗಣ್ಯರ ವಾಹನಗಳ ಮೇಲೆ ಕೆಂಪುದೀಪ ಮತ್ತು ಸೈರನ್‌ಗಳ ಬಳಕೆ ರದ್ದತಿಗೆ ಕೇಂದ್ರ ಸರ್ಕಾರ ಮುಂದಾದ ಬೆನ್ನಲ್ಲೇ ಇತ್ತ ರಾಜ್ಯ ಸಾರಿಗೆ ಇಲಾಖೆಯು ಅದರ ಅನುಷ್ಠಾನಕ್ಕೆ ಸಿದ್ಧಗೊಳ್ಳುತ್ತಿದೆ.

Advertisement

ಅತಿಗಣ್ಯರ ವಾಹನಗಳ ಮೇಲೆ ಕೆಂಪುದೀಪ ನಿಷೇಧಕ್ಕೆ ಸಂಬಂಧಿಸಿದ ಆದೇಶಕ್ಕಾಗಿ ಕಾಯುತ್ತಿರುವ ಸಾರಿಗೆ ಇಲಾಖೆ, ಮೇ 1ರಿಂದ ಕೆಲ ದಿನಗಳು ಕಾಲಾವಕಾಶ ಕೊಟ್ಟು, ನಂತರದಿಂದ ಕೆಂಪುದೀಪ ವಾಹನಗಳ ವಿರುದ್ಧ ಕಾರ್ಯಾಚರಣೆಗಿಳಿಯಲಿದೆ. ಇದಕ್ಕಾಗಿ ಮಾನಸಿಕವಾಗಿ ಸಜ್ಜಾಗುತ್ತಿದೆ.

ರಾಜ್ಯದಲ್ಲಿ ರಾಜ್ಯಪಾಲ, ಮುಖ್ಯಮಂತ್ರಿ, ಸಭಾಪತಿ, ಸ್ಪೀಕರ್‌, ಎಲ್ಲ ಸಚಿವರು, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿಗಳ ವಾಹನಗಳಿಗೆ ಕೆಂಪುದೀಪ ಅಥವಾ ಸೈರನ್‌ ಬಳಕೆಗೆ ಅವಕಾಶ ಇದೆ.

2013ರಲ್ಲಿ ಸುಪ್ರೀಂ ಕೋರ್ಟ್‌ ಹೊರಡಿಸಿದ ಆದೇಶದ ಪ್ರಕಾರ ಗಣ್ಯರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಬರುವ ತಿಂಗಳಿಂದ ಇದನ್ನು ರದ್ದುಪಡಿಸಿದ ನಂತರವೂ ಕೆಂಪುದೀಪ ಹಾಕಿಕೊಂಡು ಓಡಾಡುವುದು ಮೋಟಾರು ವಾಹನ ಕಾಯ್ದೆ ವ್ಯಾಪ್ತಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಅಂತಹ ವಾಹನಗಳ ವಿರುದ್ಧ ಕಾರ್ಯಾಚರಣೆಗೆ ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಾಗಲಿದ್ದಾರೆ.

ಇನ್ನೂ ಆದೇಶ ಬಂದಿಲ್ಲ; ಅಧಿಕಾರಿ
ಆದರೆ, ಅತಿಗಣ್ಯರ ವಾಹನಗಳ ಮೇಲೆ ಕೆಂಪುದೀಪ ಬಳಕೆ ರದ್ದುಪಡಿಸಿದ ಸಂಬಂಧ ಇದುವರೆಗೆ ಕೇಂದ್ರದಿಂದ ಯಾವುದೇ ಆದೇಶ ಬಂದಿಲ್ಲ. ಕೇವಲ ಮಾಧ್ಯಮಗಳಿಂದ ಮಾತ್ರ ತಿಳಿದುಬಂದಿದೆ. ಕೇಂದ್ರದ ಸಾರಿಗೆ ಇಲಾಖೆ ಸಚಿವಾಲಯದಿಂದ ಆದೇಶ ಬಂದ ನಂತರ ಅದರ ಪ್ರಕಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜು ತಿಳಿಸಿದ್ದಾರೆ.

Advertisement

ಆದೇಶ ಬಂದ ನಂತರ ಎಲ್ಲ ಇಲಾಖೆಗಳಿಗೆ ಮಾಹಿತಿ ನೀಡಲಾಗುವುದು. ಆಮೇಲೆ ಕೆಂಪುದೀಪ ತೆರವಿಗೆ ಅತಿಗಣ್ಯರಿಗೆ ಕೆಲದಿನಗಳು ಕಾಲಾವಕಾಶ ನೀಡಲಾಗುವುದು. ಆದಾಗ್ಯೂ ಕಂಡುಬಂದರೆ, ವಾಹನಗಳನ್ನು ತಡೆದು ಮನವಿ ಮಾಡಲಾಗುವುದು. ನಂತರವೂ ನಿಯಮ ಪಾಲಿಸದಿದ್ದರೆ, ಅನಿವಾರ್ಯವಾಗಿ ತೆರವುಗೊಳಿಸಲಾಗುವುದು ಎಂದೂ ಬಸವರಾಜು ಸ್ಪಷ್ಟಪಡಿಸಿದರು.

ಅತಿಗಣ್ಯರ ವಾಹನಗಳಿಗೆ ಕೆಂಪುದೀಪ ಮತ್ತು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ಆ್ಯಂಬರ್‌ ದೀಪ (ಇತರೆ ಬಣ್ಣದ ದೀಪ)ಗಳ ಬಳಕೆಗೆ ಅವಕಾಶ ಇದೆ. ಆದೇಶ ಬಂದ ನಂತರ ಕೆಂಪುದೀಪ ಬಳಕೆಗೆ ಅವಕಾಶ ಇರುವುದಿಲ್ಲ. ಆದರೆ, ಇದುವರೆಗೆ ಯಾವುದೇ ಸೂಚನೆ ಅಥವಾ ಆದೇಶಗಳು ಬಂದಿಲ್ಲ ಎಂದು ಸಾರಿಗೆ ಆಯುಕ್ತ ದಯಾನಂದ ತಿಳಿಸಿದ್ದಾರೆ. ಈ ಮಧ್ಯೆ ನಗರವು ಸೇರಿದಂತೆ ಎಲ್ಲೆಡೆ ಕೆಂಪುದೀಪ ಹೊತ್ತ ವಾಹನಗಳ ಸಂಚಾರ ಎಂದಿನಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next