Advertisement

ದಾಖಲಾತಿಯಲ್ಲಿ ದಾಖಲೆ; ಮೂಲ ಸೌಕರ್ಯದ ಚಿಂತೆ 

08:03 PM Sep 13, 2021 | Team Udayavani |

ಸರಕಾರಿ ಶಾಲೆಯ ದಾಖಲಾತಿ ಹೆಚ್ಚಳವಾಗುತ್ತಿರುವುದು ಸಂತಸದ ವಿಚಾರವಾದರೂ ಮೂಲ ಸೌಕರ್ಯಗಳ ಕೊರತೆ ಚಿಂತೆಗೆ ಕಾರಣವಾಗಿದೆ. ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಉದಯವಾಣಿ ಸುದಿನವು  “ಮಕ್ಕಳು ಬರುವರು ಶಾಲೆಗೆ – ಸೌಲಭ್ಯ ಕಲ್ಪಿಸಿ’ಅಭಿಯಾನದ ಮೂಲಕ ಬೆಳಕು ಚೆಲ್ಲಲಿದೆ. 

Advertisement

ಉಪ್ಪುಂದ:  ಉಪ್ಪುಂದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ 152 ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಮಕ್ಕಳ ದಾಖಲಾತಿ ಹೆಚ್ಚಳವಾದಂತೆ ಅಲ್ಲಿನ ಮೂಲ ಸೌಕರ್ಯಗಳ ವೃದ್ಧಿಗೆ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಪ್ರಮುಖ ಆದ್ಯತೆ ನೀಡಬೇಕಿದೆ.

ದಾಖಲೆಯ ದಾಖಲಾತಿ:

ಉಪ್ಪುಂದ ಕರಾವಳಿ ತೀರದಲ್ಲಿ ಜನ್ಮತಳೆದ ಮೊತ್ತ ಮೊದಲ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆ ಹೊಂದಿದ ಉಪ್ಪುಂದ ಮಾದರಿ ಹಿ.ಪ್ರಾ. ಶಾಲೆಗೀಗ 137 ವರ್ಷ.

ಈ ಬಾರಿ ಒಂದನೇ ತರಗತಿಗೆ 108 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಇದು ಬೈಂದೂರು ತಾಲೂಕಿನಲ್ಲಿ ಗರಿಷ್ಠ ದಾಖಲೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಒಂದನೇ ತರಗತಿಯಲ್ಲಿ ಎ, ಬಿ, ಸಿ, ಡಿಯಂತೆ 4 ವಿಭಾಗಗಳಿದ್ದು, 1 ಕನ್ನಡ ಮಾಧ್ಯಮ, 3 ಆಂಗ್ಲ ಮಾಧ್ಯಮ ವಿಭಾಗಗಳಿವೆ. ಎರಡನೇ ತರಗತಿಯಲ್ಲಿ 91 ಮಕ್ಕಳಿದ್ದು, 3 ವಿಭಾಗಗಳಿವೆ. ಎ-ಕನ್ನಡ, ಬಿ, ಸಿ, ಆಂಗ್ಲ ಮಾಧ್ಯಮವಾಗಿದೆ. 3ನೇ ತರಗತಿಯಲ್ಲಿ 77 ವಿದ್ಯಾಥಿಗಳಿದ್ದು ಎ-ಕನ್ನಡ ಹಾಗೂ ಬಿ, ಸಿ, ಆಂಗ್ಲ ಮಾಧ್ಯಮದಲ್ಲಿ ತರಗತಿ ಒಳಗೊಂಡಿದೆ. 4ನೇ ತರಗತಿಯಲ್ಲಿ 49, 5ನೇ ತರಗತಿಯಲ್ಲಿ 47, 6ನೇ ತರಗತಿಯಲ್ಲಿ 42, 7ನೇ ತರಗತಿಯಲ್ಲಿ 59 ವಿದ್ಯಾರ್ಥಿಗಳು ಇದ್ದು ಒಟ್ಟು 473 ವಿದ್ಯಾರ್ಥಿಗಳು ಶಿಕ್ಷಣದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಶಿಕ್ಷಕರ ಕೊರತೆ:

ಶಿಕ್ಷಣ ಇಲಾಖೆಯ ನಿರ್ದೇಶನದ ಪ್ರಕಾರ ಇಲ್ಲಿ ಪ್ರಸ್ತುತ ಇರುವ 473 ವಿದ್ಯಾರ್ಥಿಗಳಿಗೆ 15 ಶಿಕ್ಷಕರು ಇರಲೇ ಬೇಕು. ಆದರೆ ಶಾಲೆಯಲ್ಲಿ  10 ಶಿಕ್ಷಕರಷ್ಟೇ ಇದ್ದಾರೆ. ಇದರಲ್ಲಿ ಇಬ್ಬರು ಶಿಕ್ಷಕರು ರಜೆಯ ಮೇಲೆ ತೆರಳಿದರೆ. 8 ಶಿಕ್ಷಕರು ಆನ್‌ ಲೈನ್‌ ತರಗತಿಗಳ ಜತೆಗೆ ಭೌತಿಕ ತರಗತಿಗಳನ್ನು ಹೊಂದಾಣಿಕೆಯ ರೀತಿಯಲ್ಲಿ ನಿರ್ವಹಿಸಬೇಕಾದ ಅನಿವಾರ್ಯವಿದೆ.

ಶಾಲೆಯ ಸ್ಥಿತಿಗತಿ:

ಶಾಲೆಯಲ್ಲಿ ಒಟ್ಟು 12 ಕೊಠಡಿಗಳನ್ನು ಒಳಗೊಂಡಿದ್ದು, 6 ಕೊಠಡಿಗಳು 100 ವರ್ಷಕ್ಕಿಂತ ಹಳೆಯದಾಗಿದ್ದು ಗೋಡೆಗಳು ಬಿರುಕು ಬಿಟ್ಟಿವೆ. ಕಿಟಿಕಿ, ಅಲ್ಲಲ್ಲಿ ಮಳೆಯ ನೀರು ಸೋರುತ್ತಿವೆ. ಬಾಗಿಲುಗಳು ಶಿಥಿಲಾವ್ಯವಸ್ಥೆಯಲ್ಲಿದೆ. ಶಾಸಕ  ಬಿ.ಎಂ. ಸುಕುಮಾರ್‌ ಶೆಟ್ಟಿ ಅವರ ಅನುದಾನದಿಂದ ಒಂದು ಕೋಣೆಯ ಕಟ್ಟಡ ನಿರ್ಮಾಣ ಹಂತದಲ್ಲಿ ಇದೆ. ಶಾಲೆಯ ಹಳೆ ವಿದ್ಯಾರ್ಥಿಗಳ ಮತ್ತು ದಾನಿಗಳ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಸುಮಾರು 35 ಲಕ್ಷ ರೂ. ವೆಚ್ಚ‌ದಲ್ಲಿ 4 ಕೊಠಡಿಗಳ ಕಾಮಗಾರಿ ಭರದಿಂದ ಸಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇನ್ನೂ 7 ತರಗತಿಗಳ ಕೊಠಡಿ ಅಗತ್ಯವಿದೆ.

ಮೂಲಸೌಕರ್ಯದ ಅಗತ್ಯ :

ಶಾಲೆಯಲ್ಲಿ 4 ಶೌಚಾಲಯಗಳಿದ್ದು 2 ಶಿಥಿಲಾವ್ಯವಸ್ಥೆಯಿಂದ ಕೂಡಿದೆ. ಇನ್ನೆರಡು ಮಕ್ಕಳ ಸ್ನೇಹಿಯಾಗಿಲ್ಲ, ಇದನ್ನು ಪರಿವರ್ತಿಸುವ ಕೆಲಸ ಆಗಬೇಕಿದೆ. ಅಲ್ಲ ದೆ 40 ಡೆಸ್ಕ್, 40 ಬೆಂಚ್‌ಗಳ ಕೊರತೆಯೂ ಉಂಟಾಗಿದೆ. ಕೈತೊಳೆಯುವ ಘಟಕದ ಅಳವಡಿಕೆ ಕಾಮಗಾರಿ ನಡೆಯಬೇಕಿದೆ. ಪ್ರಯೋಗಾಲಯ, ಗ್ರಂಥಾಲಯ ಬೇಕಿದೆ. ಅತೀ ಹೆಚ್ಚು ಮಕ್ಕಳನ್ನು ಹೊಂದಿರುವುದರಿಂದ ಒಬ್ಬರು ಆಯಾ( ಪರಿಚಾರಕಿ) ಅಗತ್ಯವಿದೆ ಎನ್ನುತ್ತಾರೆ ಎಸ್‌ಡಿಎಂಸಿಯವರು.

ಶಿಕ್ಷಕರ ಕೊರತೆ:

ಪ್ರತೀ ವರ್ಷ ಶಾಲೆಯಲ್ಲಿ ಹೊಸ ಮಕ್ಕಳ ದಾಖಲಾತಿಯಲ್ಲಿ ಗಣನೀಯವಾಗಿ ಅಧಿಕಗೊಳ್ಳುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ, ಶಿಕ್ಷಕರ ಕೊರತೆ ಉಂಟಾಗಿದೆ. ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.-ವೆಂಕಪ್ಪ ಉಪ್ಪಾರ್‌, ಮುಖ್ಯ ಶಿಕ್ಷಕರು

ಸರಕಾರ ಗಮನಹರಿಸಲಿ:

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇರುವ ಕೊಠಡಿಗಳು ಸೋರುತ್ತಿವೆ. 6 ಕೊಠಡಿ ಹಾಗೂ 5ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಕೊರೊನಾ ಕಾರಣದಿಂದಾಗಿ ದಾನಿಗಳಿಂದಲೂ ಹೆಚ್ಚು ಆರ್ಥಿಕ ಸಹಾಯಧನ ನಿರೀಕ್ಷೆ ಮಾಡುವಂತ್ತಿಲ್ಲ, ಸರಕಾರ ಈ ಕುರಿತು ಗಮನಹರಿಸಬೇಕಿದೆ.-ರಾಧಾಕೃಷ್ಣ ಮಲ್ಯ, ಎಸ್‌ಡಿಎಂಸಿ ಅಧ್ಯಕ್ಷರು

-ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next