Advertisement

ರಿಯಲ್‌ ಹೀರೋ ವೀರಪ್ಪ : ವೃತ್ತಿ, ರೈಲ್ವೆ ಸಹಾಯಕ ಪ್ರವೃತ್ತಿ ಶಿಕ್ಷಕ!

01:08 PM Jan 12, 2021 | Team Udayavani |

ಬಹುತೇಕರು ಸರ್ಕಾರಿ ನೌಕರಿಗೆ ಸೇರಿದ ಮೇಲೆ ನಮ್ಮ ‘ಲೈಫ್ ಸೆಟ್ಲ’ ಆಯ್ತು ಎಂದು ನಿಟ್ಟುಸಿರು ಬಿಡುತ್ತಾರೆ. ಆನಂತರದಲ್ಲಿ
ಅವರುಂಟು, ಅವರ ಸಂಸಾರ- ನೌಕರಿ ಉಂಟು. ಅಷ್ಟೇ ಅವರ ಪ್ರಪಂಚ ಆಗಿಬಿಡುತ್ತದೆ. ಈ ವೃತ್ತಿ ಬದುಕಿನಾಚೆ ನಮಗೆ ಇನ್ನೊಂದು ಸಾಮಾಜಿಕ ಜವಾಬ್ದಾರಿ ಇದೆ ಎಂದು ಯೋಚಿಸುವವರು ಅಪರೂಪ. ವಾಸ್ತವ ಹೀಗಿರುವಾಗ, ವೃತ್ತಿಯಿಂದ
‘ರೈಲ್ವೆ ಸಿಗ್ನಲ್‌ ಮ್ಯಾನ್‌’ ಆಗಿರುವ ವೀರಪ್ಪ ತಾಳದವರ, ಪ್ರವೃತ್ತಿಯಿಂದ ‘ಸ್ಕೂಲ್‌ ಮಾಸ್ತರ್‌’ ಆಗಿಯೂ ಕೆಲಸ ಮಾಡುತ್ತಿದ್ದಾರೆ.

Advertisement

ವೀರಪ್ಪ, ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ಲ ಗ್ರಾಮದವರು. ಬಾಗಲಕೋಟೆಯಲ್ಲಿ ರೈಲ್ವೆ ಇಲಾಖೆಯ
ಸಹಾಯಕ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುವ ಅವರು, ನಾನೊಬ್ಬನೇ ಚನ್ನಾಗಿ ಜೀವನ ನಡೆಸಿದರೆ ಸಾಲದು, ನನ್ನಂತೆ
ಇತರರೂ ನೆಮ್ಮದಿಯ ಬದುಕು ನಡೆಸಬೇಕು ಎನ್ನುತ್ತಾರೆ. ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಸದಾಶಯದಿಂದ ಹೊಸ
ಯೋಜನೆಯೊಂದನ್ನು ರೂಪಿಸಿದ್ದಾರೆ. ಅದುವೇ ಹಳ್ಳಿ ರಂಗಶಾಲೆ ಎಲ್ಲವೂ ಉಚಿತ!

ಇದನ್ನೂ ಓದಿ:ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಡೋಸ್ ಲಸಿಕೆ: ಸಚಿವ ಡಾ.ಕೆ.ಸುಧಾಕರ್

“ಊರಿನ ಎಲ್ಲಾ ಮಕ್ಕಳೂ ಅಕ್ಷರ ಕಲಿಯಬೇಕು. ಶಾಲೆಯಲ್ಲಿ ಓದಿದರೂ ಅದೆಷ್ಟೋ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ
ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಒಂದು ವೇದಿಕೆ ಒದಗಿಸಬೇಕೆಂಬ ಆಸೆಯಿತ್ತು. ಹೀಗಾಗಿ, ಅಕ್ಷರ ಕಲಿಕೆಯ ಜೊತೆಗೆ ಸಾಮಾನ್ಯ ಜ್ಞಾನ, ಕಥೆ, ಕವನ, ಚಿತ್ರಕಲೆ, ಹಾಡು, ಜಾನಪದ ಕಲೆ…

Advertisement

ಮುಂತಾದ ವಿಭಾಗದಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಹಳ್ಳಿ ರಂಗ ಶಾಲೆಯಲ್ಲಿ ಉಚಿತವಾಗಿ ತರಬೇತಿ ನೀಡುತ್ತಿರುವೆ’ ಎನ್ನುತ್ತಾರೆ ವೀರಪ್ಪ. ವೀರಪ್ಪ ಅವರ ರೈಲ್ವೆ ಇಲಾಖೆಯ ಕೆಲಸ ಸಂಜೆ 7ಗಂಟೆಗೆ ಮುಗಿಯುತ್ತದೆ. ಆನಂತರ ರಾತ್ರಿ 9 ಗಂಟೆಯವರೆಗೆ ಮಕ್ಕಳಿಗೆ ಪಾಠ ಮಾಡುತ್ತಾರೆ. ಈ ಕಾರ್ಯದಲ್ಲಿ ವೀರಪ್ಪ ಅವರಿಗೆ ಗೆಳೆಯರೂ ಸಾಥ್‌ ಕೊಡುತ್ತಿದ್ದಾರೆ. ವೀರಪ್ಪ ಅವರು “ಹಳ್ಳಿ ರಂಗಶಾಲೆ’ ನಡೆಸುತ್ತಿರುವುದು ತಮ್ಮ ಮನೆಯ ಕೋಣೆಯಲ್ಲಿ. ಮಕ್ಕಳಿಗೆ ಸಾಮಾನ್ಯ ಜ್ಞಾನ, ಬೇಸಿಕ್‌ ಕಲಿಕೆಯ ಜೊತೆಗೆ ಹಾಡು, ಭಾಷಣ,
ನೃತ್ಯ, ಕವಾಯತ್‌ ಕಲಿಸುತ್ತಾರೆ. ವೀರಪ್ಪ ಅವರು ಕವಿ, ಬರಹಗಾರ ಮತ್ತು ಛಾಯಾಗ್ರಹಕ ಕೂಡ ಹೌದು. ಹೀಗಾಗಿ ಮಕ್ಕಳಿಂದ ಕವಿತೆಗಳನ್ನು ಓದಿಸುತ್ತಾರೆ. ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಾರೆ., ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಮಾಹಿತಿ ನೀಡುತ್ತಾರೆ. ಹೀಗೆ ಮಾಡುವುದರಿಂದ, ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಕ್ಕಳಿಗೆ ಅನುಕೂಲ ಆಗುತ್ತದೆ ಎಂಬುದು ಅವರ ಮಾತು.

ಎಲ್ಲಾ ಮಕ್ಕಳಿಗೂ ಸಮವಸ್ತ್ರ “ಹಳ್ಳಿ ರಂಗಶಾಲೆ’ಯಲ್ಲಿ ಎಲ್ಲಾ ಮಕ್ಕಳಿಗೂ ಪ್ರತ್ಯೇಕ ಸಮವಸ್ತ್ರ ಇವೆ. ಒಂದಷ್ಟು ಹಣವನ್ನು
ದಾನಿಗಳು ನೀಡಿದ್ದಾರೆ. ಉಳಿದ ಹಣವನ್ನು ವೀರಪ್ಪ ಆವರೇ ಹಾಕಿ ಸಮವಸ್ತ್ರ ಖರೀದಿಸಿ ಅವನ್ನು ಹಳ್ಳಿ ರಂಗಶಾಲೆಯ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಕರ್ನಾಟಕ ರಾಜೋತ್ಸವ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ  ಆಚರಿಸುತ್ತಾರೆ. ಹಳ್ಳಿ ರಂಗಶಾಲೆಯ ಚಟುವಟಿಕೆ ಗದಗ ಜಿಲ್ಲಾದ್ಯಂತ ಮನೆ ಮಾತಾಗಿದೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಕೂಡ ಮನೆ ಮನೆಗೆ ತೆರಳಿ ಹೋಮ್‌ ವರ್ಕ್‌ ಕೊಟ್ಟು ಮಕ್ಕಳ ಕಲಿಕೆಗೆ
ಬ್ರೇಕ್‌ ಬೀಳದಂತೆ ನೋಡಿಕೊಂಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ನಗರಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಳ್ಳಿಯಲ್ಲಿಯೇ ತರಬೇತಿ ದೊರಕುವಂತೆ ಮಾಡುವುದು ಅವರ ಮುಂದಿನ ಗುರಿಯಂತೆ. ಸೇವೆಯೇ ಜೀವನ ಎಂದು ನಂಬಿರುವ ಇಂಥವರ ಸಂಖ್ಯೆ ಹೆಚ್ಚಲಿ.

– ಬಾಲಾಜಿ ಕುಂಬಾರ, ಚಟ್ನಾಳ

 

Advertisement

Udayavani is now on Telegram. Click here to join our channel and stay updated with the latest news.

Next