Advertisement

ಜಯನಗರ ಮತದಾನಕ್ಕೆ ಸಕಲ ಸಿದ್ಧತೆ

11:31 AM Jun 08, 2018 | Team Udayavani |

ಬೆಂಗಳೂರು: ಜಯನಗರ ವಿಧಾನಸಭೆ  ಕ್ಷೇತ್ರದಲ್ಲಿ ಜೂ.11ರಂದು ಮತದಾನ ನಡೆಯಲಿದ್ದು, ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಾಂತಿಯುತ, ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಬದ್ಧವಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಬಿಬಿಎಂಪಿ ಆಯುಕ್ತ ಮಹೇಶ್ವರರಾವ್‌ ತಿಳಿಸಿದ್ದಾರೆ.

Advertisement

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯೂ ಆಗಿದ್ದ ಹಾಲಿ ಶಾಸಕ ಬಿ.ಎನ್‌. ವಿಜಯಕುಮಾರ್‌ ಅವರ ಹಠಾತ್‌ ನಿಧನದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. ಈಗ ಜೂ.11ರಂದು ಮತದಾನ ನಡೆಯಲಿದೆ.

ಚುನಾವಣಾ ಸಿದ್ಧತೆಗಳ ಕುರಿತು ಮಾಹಿತಿ ನೀಡಲು ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿದ ಅವರು, ಜೂ.11ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ಕ್ಷೇತ್ರದ 7 ವಾರ್ಡುಗಳಲ್ಲಿ ಒಟ್ಟು 216 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ಇದರಲ್ಲಿ ಪೈಕಿ 5 ಪಿಂಕ್‌ (ಸಖೀ) ಮತಗಟ್ಟೆಗಳಿದ್ದು, ಅವುಗಳಿಗೆ ಮಹಿಳಾ ಸಿಬ್ಬಂದಿಗಳನ್ನು ಮಾತ್ರ ನಿಯೋಜಿಸಲಾಗಿದೆ.

ಜೂ.13ರಂದು ಬೆಳಗ್ಗೆ 8 ಗಂಟೆಯಿಂದ ಜಯನಗರ 4ನೇ ಬ್ಲಾಕ್‌ನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ 1,02,668 ಪುರುಷರು ಹಾಗೂ 1,00,500 ಮಹಿಳೆಯರು ಸೇರಿ ಒಟ್ಟು 2,03,184 ಮತದಾರರಿದ್ದಾರೆ. ಒಟ್ಟು 19 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಿಂದ ತಲಾ ಒಬ್ಬರು ಅಭ್ಯರ್ಥಿಗಳು,

ಇತರೆ ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳಿಂದ ಏಳು ಜನ ಮತ್ತು 9 ಪಕ್ಷೇತರರು ಸ್ಪರ್ಧಿಸಿದ್ದಾರೆ. ಮತದಾನದ ದಿನದಂದು 1,400 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 31 ಬಿಎಂಟಿಸಿ ಬಸ್‌, 7 ಮಿನಿ ಬಸ್‌, 2 ಟಾಟಾ ಸುಮೋ, 10 ಟೆಂಪೋ ಟ್ರಾವೆಲರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

Advertisement

ಜೂ.9ರ ಸಂಜೆ 6ಕ್ಕೆ ಚುನಾವಣಾ ಪ್ರಚಾರ ಕೊನೆಗೊಳ್ಳಲಿದ್ದು, ಯಾವುದೇ ಸಾರ್ವಜನಿಕ ಸಭೆ, 5 ಜನಕ್ಕಿಂತ ಹೆಚ್ಚು ಜನರು ಗುಂಪಾಗಿ ನಿಲ್ಲುವಂತಿಲ್ಲ. ಮನೆ ಮನೆ ಪ್ರಚಾರ ನಡೆಸಬಹುದು. ಕ್ಷೇತ್ರದ ಮತದಾರರನ್ನು ಹೊರತುಪಡಿಸಿ ಇತರರು ಕ್ಷೇತ್ರ ಬಿಟ್ಟು ಹೊರಡಬೇಕು. ಜೂ.9ರ ಸಂಜೆ 5ರಿಂದ ಜೂ.11ರ ಮಧ್ಯರಾತ್ರಿ 12ರವರೆಗೆ ಮತ್ತು ಮತ ಎಣಿಕೆ ದಿನವಾದ ಜೂ.13ರ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಮಧ್ಯಮಾರಾಟ ನಿಷೇಧಿಸಲಾಗಿದೆ.

216 ಮತಗಟ್ಟೆಗಳಿಗೂ ಅಗತ್ಯ ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳು ಪೂರ್ವವಾಗಿ ಲಭ್ಯವಿದ್ದು, ಎಲ್ಲವುಗಳನ್ನು ಸಿದ್ಧಪಡಿಸಲಾಗಿದೆ. 50 ಮತಗಟ್ಟೆಗಳಿಗೆ ವೆಬ್‌ಕಾಸ್ಟಿಕಂಗ್‌ ಸೌಲಭ್ಯ ಒದಗಿಸಲಾಗಿದೆ. 15 ಮತದಾನ ಸ್ಥಳಗಳಲ್ಲಿ ವೀಡಿಯೋಗ್ರಫಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು. 

ಬಿಗಿ ಬಂದೋಬಸ್ತ್: ಶಾಂತಿಯುತ ಮತದಾನ ಮತ್ತು ಸುಸೂತ್ರ ಮತ ಎಣಿಕೆ ಕಾರ್ಯಕ್ಕೆ ಸೂಕ್ತ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕ್ಷೇತ್ರದ ವಿವಿಧ ಸ್ಥಳಗಳಲ್ಲಿ 10 ಚೆಕ್‌ಪೋಸ್ಟ್‌ಗಳಿದ್ದು, 30 ತಂಡಗಳಲ್ಲಿ ಹಾಗೂ 23 ಫ್ಲೈಯಿಂಗ್‌ ಸ್ಕ್ವಾಡ್‌ ತಂಡಗಳು, 4 ವಿಡಿಯೋ ಕಣ್ಗಾವಲು ತಂಡಗಳು ದಿನದ 24 ಗಂಟೆ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಇರುವ ಕಡೆ ಪೊಲೀಸರು ಚುನಾವಣಾ ಸಿಬ್ಬಂದಿಗೆ ಸಹಕಾರ ನೀಡುತ್ತಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕ್ಷೇತ್ರದಲ್ಲಿ ನಗದು ಸೇರಿ ಒಟ್ಟು 30.82 ಲಕ್ಷ ರೂ. ಜಪ್ತಿ ಮಾಡಿ, 14 ಎಫ್ಐಆರ್‌ ದಾಖಲಿಸಲಾಗಿದೆ. ಮತದಾರರಿಗೆ ಆಸೆ, ಆಮಿಷ, ಹಣ ಹಂಚಿಕೆಯಂತಹ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಭದ್ರತೆಗಾಗಿ ವಿಶೇಷ ಭದ್ರತಾ ತುಕಡಿಗಳ ಜತೆಗೆ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಂದು ಇದೇ ವೇಳೆ ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ತಿಳಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next