Advertisement

ವಿಜಯಪುರ ರೈಲು ಮರು ಆರಂಭಕ್ಕೆ ಮೀನ-ಮೇಷ

01:52 AM Sep 29, 2021 | Team Udayavani |

ಮಂಗಳೂರು: ಕರಾವಳಿ ಹಾಗೂ ಉತ್ತರ ಕರ್ನಾಟಕದ ನಡುವಣ ಕೊಂಡಿಯಾಗಿದ್ದ ಮಂಗಳೂರು ಜಂಕ್ಷನ್‌-ವಿಜಯಪುರ (ಬಿಜಾಪುರ) ರೈಲು ಸಂಚಾರ ಸ್ಥಗಿತಗೊಂಡು ಒಂದೂವರೆ ವರ್ಷವಾಗುತ್ತಿದ್ದು, ಮರು ಆರಂಭ ಬೇಡಿಕೆಗೆ ನೈಋತ್ಯ ರೈಲ್ವೇಯಿಂದ ಸ್ಪಂದನೆಯೇ ಇಲ್ಲ.

Advertisement

ಕೊರೊನಾ ಹಿನ್ನೆಲೆಯಲ್ಲಿ 2020ರ ಮಾರ್ಚ್‌ 23ರಂದು ಈ ರೈಲನ್ನು ಸ್ಥಗಿತಗೊಳಿಸಲಾಗಿತ್ತು. ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದ್ದ ಹೆಚ್ಚಿನ ರೈಲುಗಳನ್ನು ಆ ವರ್ಷದ ಕೊನೆಯ ಭಾಗದಲ್ಲಿ ವಿಶೇಷ ರೈಲುಗಳಾಗಿ ಇಲಾಖೆ ಓಡಿಸಲಾರಂಭಿಸಿತ್ತು. ಆದರೆ ಈ ರೈಲು ಆರಂಭಗೊಳ್ಳಲೇ ಇಲ್ಲ.

ಕರಾವಳಿ ಹಾಗೂ ಉತ್ತರ ಕರ್ನಾಟಕದ ಜನರ ಬಹು ಬೇಡಿಕೆಯ ಹಿನ್ನೆಲೆಯಲ್ಲಿ 2019ರ ನವೆಂಬರ್‌ನಲ್ಲಿ ರೈಲ್ವೇ ಸಹಾಯಕ ಸಚಿವರಾಗಿದ್ದ ಸುರೇಶ್‌ ಅಂಗಡಿ ಅವರ ಪ್ರಯತ್ನದಿಂದ ಮಂಗಳೂರು-ವಿಜಯಪುರ ರೈಲು ಆರಂಭಗೊಂಡಿತ್ತು. ಸಾಮಾನ್ಯದರ್ಜೆಯ ಬೋಗಿಗಳು ಭರ್ತಿಯಾಗಿ ಸಂಚರಿಸುತ್ತಿದ್ದ ಕಾರಣ ಸಂಖ್ಯೆ ಹೆಚ್ಚಿಸುವಂತೆಯೂ ಬೇಡಿಕೆ ವ್ಯಕ್ತವಾಗಿತ್ತು.

ಇದನ್ನೂ ಓದಿ:ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗೆ ಹಲ್ಲೆಗೈದು 4.20 ಲ.ರೂ. ಸುಲಿಗೆ

ರೈಲಿನ ಆವಶ್ಯಕತೆ
ಇದು ಮಂಗಳೂರಿನಿಂದ ಉತ್ತರ ಕರ್ನಾಟಕವನ್ನು ನೇರ ಸಂಪರ್ಕಿಸುವ ಏಕೈಕ ರೈಲು. ಬಾಗಲಕೋಟೆ, ಗದಗ, ಹಾವೇರಿ, ಬ್ಯಾಡಗಿ, ಹರಿಹರ, ದಾವಣಗೆರೆ, ಹಾಸನ, ಸಕಲೇಶಪುರ ಮುಂತಾದ ಪ್ರಮುಖ ನಗರಗಳ ಮೂಲಕ ಇದು ಹಾದುಹೋಗುತ್ತಿದೆ. ಉತ್ತರ ಕರ್ನಾಟಕದಿಂದ ಕರಾವಳಿ ಭಾಗಕ್ಕೆ ಶಿಕ್ಷಣ, ವಾಣಿಜ್ಯವ್ಯವಹಾರ, ಉದ್ಯೋಗ, ಯಾತ್ರೆ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಗಣನೀಯ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇಲ್ಲಿನ ನಿರ್ಮಾಣ ಕಾಮಗಾರಿಗಳಲ್ಲಿ ಆ ಭಾಗದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನಿರ್ಮಾಣ ಕಾಮಗಾರಿಗಳು ಚೇತರಿಕೆಯಾಗಿದ್ದು, ಕಾರ್ಮಿಕರ ಸಂಚಾರಕ್ಕೆ ಅತ್ಯುಪಯುಕ್ತವಾಗಿದ್ದ ರೈಲೊಂದು ಈಗ ಇಲ್ಲವಾಗಿದೆ.

Advertisement

ದೊರೆಯದ ಸ್ಪಂದನೆ
ಮಂಗಳೂರು ಜಂಕ್ಷನ್‌-ವಿಜಯಪುರ ರೈಲನ್ನು ಶೀಘ್ರ ಮರು ಆರಂಭಿಸಬೇಕು ಹಾಗೂ ಬೆಳಗ್ಗೆ 9.30ಕ್ಕೆ ಮಂಗಳೂರಿಗೆ ಆಗಮಿಸಿ ಸಂಜೆ 5.30ಕ್ಕೆ ನಿರ್ಗಮಿಸುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಅವರಿಗೆ ಮನವಿ ಮಾಡಿದ್ದಾರೆ. ರೈಲ್ವೇ ಬಳಕೆದಾರರ ಸಂಘಟನೆಗಳೂ ಆಗ್ರಹಿಸಿವೆ.

ನಿರ್ಧಾರವಾಗಿಲ್ಲ
ಮಂಗಳೂರು ಜಂಕ್ಷನ್‌- ವಿಜಯಪುರ (ಬಿಜಾಪುರ) ರೈಲಿನ ಸಂಚಾರ ಮರು ಆರಂಭ ಬಗ್ಗೆ ಪ್ರಸ್ತುತ ನೈಋತ್ಯ ರೈಲ್ವೇಯಿಂದ ಯಾವುದೇ ನಿರ್ಧಾರವಾಗಿಲ್ಲ.
– ಸಂಜೀವ ಕಿಶೋರ್‌, ಮಹಾಪ್ರಬಂಧಕರು, ನೈಋತ್ಯ ರೈಲ್ವೇ

 

Advertisement

Udayavani is now on Telegram. Click here to join our channel and stay updated with the latest news.

Next