Advertisement

ರಕ್ಷಿತಾ ವಿರುದ್ಧ ಸಿಟ್ಟಾದ ರವಿಚಂದ್ರನ್ ಅಭಿಮಾನಿಗಳು

11:51 AM Oct 23, 2018 | |

ನಟಿ ರಕ್ಷಿತಾ ಪ್ರೇಮ್‌ ವಿರುದ್ಧ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿಮಾನಿಗಳು ಗರಂ ಆಗಿದ್ದಾರೆ. ಅದಕ್ಕೆ ಕಾರಣ ರಕ್ಷಿತಾ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಹಾಕಿಕೊಂಡ ಪತ್ರ. “ದಿ ವಿಲನ್‌’ ಚಿತ್ರದ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಉತ್ತರವಾಗಿ ಪ್ರೇಮ್‌ ಅಭಿಮಾನಿಯೊಬ್ಬರು ಸಾಕಷ್ಟು ಸಿನಿಮಾಗಳನ್ನು ಉದಾಹರಿಸಿ ದೀರ್ಘ‌ ಪತ್ರವೊಂದನ್ನು ಬರೆದಿದ್ದರು. ಅದನ್ನು ರಕ್ಷಿತಾ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದರು.

Advertisement

ಈ ಪತ್ರದಲ್ಲಿ, “ಹಳೆಯ “ಪ್ರೇಮಲೋಕ’  ಇತ್ತೀಚಿನ “ಟಗರು’ ಸಿನಿಮಾಗಳಲ್ಲೂ ಕಥೆ ಇರಲಿಲ್ಲ, ಜನ ನೋಡಲಿಲ್ವಾ? 25 ವಾರ ಓಡಲಿಲ್ಲವಾ. ಕತೆಯಿಲ್ಲದೆ ಓಡಿರೋ ನೂರಾರು ಸಿನಿಮಾ ಉದಾಹರಣೆ ಇಲ್ವಾ’ ಎಂದು ಆ ಪತ್ರದಲ್ಲಿ ಹೇಳಲಾಗಿತ್ತು. ಇದು ರವಿಚಂದ್ರನ್‌ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಹಾಗಾಗಿ, ಫೇಸ್‌ಬುಕ್‌ನಲ್ಲಿ ವಿ.ರವಿಚಂದ್ರನ್‌ ಫ್ಯಾನ್‌ ಪೇಜ್‌ನಿಂದ, ರಕ್ಷಿತಾ ಅವರಿಗೆ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

“ಪ್ರೇಮಲೋಕ’ ಸಿನಿಮಾ ಬಗ್ಗೆ ಮಾತನಾಡಲು ಯೋಗ್ಯತೆ ಇರಬೇಕು. ಕನ್ನಡ ಚಿತ್ರರಂಗದ ದಿಕ್ಕನ್ನು  ಬದಲಿಸಿದ ಸಿನಿಮಾ “ಪ್ರೇಮಲೋಕ’. “ಪ್ರೇಮಲೋಕ’ ಸಿನಿಮಾದ ಕಥೆ ಅರ್ಥವಾಗದಿದ್ದರೆ ಮತ್ತೂಮ್ಮೆ ನೋಡಿ ತಿಳಿದುಕೊಳ್ಳಿ. ಆದರೆ “ಪ್ರೇಮಲೋಕ’ದಲ್ಲಿ ಕಥೆ ಇಲ್ಲವೆಂದು ಹೇಳಬೇಡಿ. ಒಂದು ವರ್ಷ ಓಡಿದ ದಾಖಲೆ ಹಾಗೂ ಭಾರತೀಯ ಚಿತ್ರರಂಗ ಕನ್ನಡದ ಸಿನಿಮಾಗಳ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅದು ನಮ್ಮ “ಪ್ರೇಮಲೋಕ” ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಜೊತೆಗೆ ಪ್ರೇಮ್‌ ಕುರಿತು “ಕನ್ನಡ ಚಿತ್ರರಂಗದ ಶೋಮ್ಯಾನ್‌ ನೀವು’ ಎಂದು ಹೇಳಿರುವುದು ಕೂಡಾ ರವಿಚಂದ್ರನ್‌ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಇದಕ್ಕೂ ರವಿಚಂದ್ರನ್‌ ಅಭಿಮಾನಿಗಳು ಉತ್ತರ ನೀಡಿದ್ದಾರೆ. “ಕನ್ನಡ ಚಲನಚಿತ್ರ ರಂಗಕ್ಕೆ ಒಬ್ಬರೇ ಶೋ ಮ್ಯಾನ್‌. ಅದು ಕರುನಾಡ ಕಲಾ ರತ್ನ ಕ್ರೇಜಿಸ್ಟಾರ್‌ ವಿ. ರವಿಚಂದ್ರನ್‌ ಅವರು.

ಶೋ ಮ್ಯಾನ್‌ ಈ ಬಿರುದನ್ನು ಕರುನಾಡ ಜನತೆ ಹಾಗೂ ಚಂದನವನದಲ್ಲಿ ಕೆಲಸ ಮಾಡುವ ಎಲ್ಲರೂ ಮೆಚ್ಚಿ ಕ್ರೇಜಿಸ್ಟಾರ್‌ಗೆ ನೀಡಿದ್ದು. ಆದರೆ ಈ ಬಿರುದನ್ನು ತಾವಾಗಿ ತಾವೆ ಇಟ್ಟುಕೊಂಡಾಗಲು ಕನಸುಗಾರನ ಅಭಿಮಾನಿಗಳು ಏನು ಮಾತಾಡಲಿಲ್ಲ. ಕಾರಣ ನಮಗೆ ಅಣ್ಣ ಹೇಳಿ ಕೊಟ್ಟಿರುವುದು ಪ್ರೀತಿಸುವುದನ್ನ ಮಾತ್ರ …’ ಎಂದು ಫೇಸ್‌ಬುಕ್‌ನಲ್ಲಿ ವಿ.ರವಿಚಂದ್ರನ್‌ ಅಭಿಮಾನಿಗಳು ದೀರ್ಘ‌ ಪತ್ರ ಬರೆದಿದ್ದಾರೆ.

Advertisement

ರಕ್ಷಿತಾ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಪತ್ರ

Advertisement

Udayavani is now on Telegram. Click here to join our channel and stay updated with the latest news.

Next