Advertisement

ration; ಅಕ್ಕಿಗೆ ನೀಡಲಾಗುತ್ತಿರುವ ಕಮಿಷನ್‌ ಏರಿಕೆ

12:45 AM Mar 01, 2024 | Vishnudas Patil |

ಬೆಂಗಳೂರು: ಪಡಿತರ ವಿತರಕರಿಗೆ ಪ್ರತಿ ಕೆಜಿ ಅಕ್ಕಿಗೆ ನೀಡಲಾಗುತ್ತಿರುವ ಕಮಿಷನ್‌ ಮೊತ್ತ
ವನ್ನು ಒಂದೂವರೆ ರೂಪಾಯಿಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

Advertisement

ಅರಮನೆ ಮೈದಾನದಲ್ಲಿ ಗುರುವಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಆಯೋಜಿಸಿದ್ದ ಅನ್ನಭಾಗ್ಯ ದಶಮಾನೋತ್ಸವ ಹಾಗೂ ರಾಜ್ಯ ಸರಕಾರಿ ಪಡಿತರ ವಿತರಕರ ಸಮಾವೇಶದಲ್ಲಿ ಅವರು ಮಾತನಾಡಿದರು.

ಈವರೆಗೆ ಪ್ರತಿ ಕೆಜಿಗೆ 1.24 ರೂ. ಕಮಿಷನ್‌ ಇತ್ತು. ಪಡಿತರ ವಿತರಕರ ಸಂಕಷ್ಟಗಳ ಅರಿವು ನನಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಎಚ್‌.ಮುನಿಯಪ್ಪ ಕೂಡ ಕಮಿಷನ್‌ ಹೆಚ್ಚಿಸುವಂತೆ ಮನವಿ ಮಾಡಿದ್ದರು. ಇದೆಲ್ಲವನ್ನೂ ಪರಿಗಣಿಸಿ ಕಮಿಷನ್‌ ಅನ್ನು 1.50 ರೂ.ಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದರು.
ಬಿಜೆಪಿ ಕಾಂಗ್ರೆಸ್‌ ಮುಕ್ತ ಭಾರತ ಎನ್ನುತ್ತದೆ. ಆದರೆ ನಾವು ಹಸಿವು ಮುಕ್ತ ಕರ್ನಾಟಕ ನಿರ್ಮಿಸಲು ಹೊರಟಿದ್ದೇವೆ. ನಾವು ರಾಜ್ಯದ ಬಡವರು, ದಲಿತರು, ಹಿಂದುಳಿದವರು, ಕಾರ್ಮಿಕರು ಮತ್ತು ರೈತರ ಪರವಾದ ನಿಲುವು ಮತ್ತು ಕಾರ್ಯಕ್ರಮ ಗಳನ್ನು ಹೊಂದಿದ್ದೇವೆ ಎಂದು ಸಿಎಂ ಹೇಳಿದರು.

ಆಹಾರ ಭದ್ರತಾ ಕಾಯ್ದೆಯನ್ನು ಬಿಜೆಪಿ ವಿರೋಧಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಆಹಾರ ಭದ್ರತೆ ಮತ್ತು ನರೇಗಾ ಕಾರ್ಯಕ್ರಮಗಳನ್ನು ವಿರೋಧಿಸಿದ್ದರು. ಅನ್ನಭಾಗ್ಯ ಯೋಜನೆ ಬಗ್ಗೆ ಕುಹಕದ ಮಾತುಗಳನ್ನು ಬಿಜೆಪಿ ನಾಯಕರು ಆಡಿದ್ದರು. ಅಂತಹ ಬಿಜೆಪಿ ಅಧಿಕಾರಕ್ಕೆ ಬಂದದ್ದು ದುರಂತ ಎಂದು ಹೇಳಿದರು.

ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಮನಮೋಹನ್‌ ಸಿಂಗ್‌ ಆಹಾರ ಭದ್ರತಾ ಹಕ್ಕಿನಡಿ ಅಕ್ಕಿ ಕೊಡುವ ಯೋಜನೆ ಪ್ರಕಟಿಸಿದರು. ಆಗ ನಾನು ಅವರ ಸಂಪುಟದಲ್ಲಿದ್ದೆ. ಈ ಯೋಜನೆಯನ್ನು ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದರು. ನಿಮ್ಮ ಹಸಿವನ್ನು ನೀಗಿಸಿದವರ ಜತೆಯಲ್ಲಿ ನಿಲ್ಲಬೇಕೆಂದು ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next