Advertisement

ಪಡಿತರ:ಅಂತಿಮ ಗಡುವು ಇಲ್ಲ :ಸೋಮವಾರದಿಂದ ಕೇಂದ್ರದ ಪಡಿತರ ವಿತರಣೆ

07:17 PM Apr 11, 2020 | sudhir |

ಪುತ್ತೂರು: ಕೋವಿಡ್ 19 ಲಾಕ್‌ಡೌನ್‌ ಮಧ್ಯೆ ಬಡಜನತೆಗೆ ಆಹಾರದ ಸಂಕಷ್ಟ ಎದುರಾಗದಂತೆ ಪಡಿತರ ವಿತರಣೆ ಕಾರ್ಯ ನಡೆಯುತ್ತಿದೆ. ವಾರದೊಳಗೆ ರಾಜ್ಯ ಸರಕಾರ ನೀಡುವ ಪಡಿತರ ವಿತರಣೆ ಪೂರ್ಣಗೊಳ್ಳಲಿದ್ದು, ಅನಂತರ ಕೇಂದ್ರ ಸರಕಾರದ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ ವತಿಯಿಂದ ನೀಡಲಾಗುವ ಪಡಿತರ ವಿತರಣೆ ಆರಂಭಗೊಳ್ಳಲಿದೆ.

Advertisement

ರಾಜ್ಯ ಸರಕಾರದಿಂದ ಎ. 2ರಿಂದ ಬಿಪಿಎಲ್‌ ಪಡಿತರ ಕಾರ್ಡುದಾರರಿಗೆ ಹಾಗೂ ಎಪಿಎಲ್‌ ಕಾರ್ಡುದಾರರಿಗೂ ಪಡಿತರ ನೀಡುವ ಕಾರ್ಯ ಆರಂಭಗೊಂಡಿತ್ತು. ಗ್ರಾಮೀಣ ಭಾಗದ ಬಡ ಜನತೆಗೂ ಪಡಿತರ ನೀಡುವ ಕೆಲಸ ನಡೆದಿದೆ. 2 ತಿಂಗಳ ಪಡಿತರವನ್ನು ಪ್ರತಿ ಕುಟುಂಬಕ್ಕೆ ನೀಡಲಾಗುತ್ತಿದೆ. ಇದರ ವಿತರಣೆಗೆ ಸಂಬಂಧಿಸಿ ಅಂತಿಮ ಗಡುವು ವಿಧಿಸಿಲ್ಲ. ಆದರೆ ತುರ್ತಾಗಿ ವಿತರಿಸಲು ಸೂಚನೆ ನೀಡಲಾಗಿದೆ. ಜನರಲ್ಲಿ ವಿತರಣೆಯ ಕೊನೆಯ ದಿನಾಂಕದ ಕುರಿತು ಗೊಂದಲ ಇರುವುದರಿಂದ ಮತ್ತು ಇದರಿಂದ ಜನ ಸಂದಣಿ ಉಂಟಾಗಿ ಸಾಮಾಜಿಕ ಅಂತರಕ್ಕೆ ತೊಂದರೆ ಯಾಗುತ್ತಿರುವುದರಿಂದ ಆಹಾರ ಇಲಾಖೆಯು ಈ ಕುರಿತು ಸ್ಪಷ್ಟನೆ ನೀಡಿದೆ.
ಆದರೆ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವ ಅಕ್ಕಿ ಮತ್ತು ಬೇಳೆ ವಿತರಣೆ ಮಾಡುವ ಉದ್ದೇಶದಿಂದ ರಾಜ್ಯ ಸರಕಾರದ ಪಡಿತರ ನೀಡುವ ಕಾರ್ಯ ಜರೂರಾಗಿ ಕೊನೆಗೊಳ್ಳಬೇಕಾಗಿದೆ. ವಾರದ ಬಳಿಕ ಈ ಪ್ರಕ್ರಿಯೆಗೆ ಚಾಲನೆ ನೀಡುವ ಉದ್ದೇಶ ಹೊಂದಲಾಗಿದೆ.

ಪುತ್ತೂರಿಗೆ 25 ಸಾವಿರ ಕ್ವಿಂ. ಅಕ್ಕಿ
ಕೇಂದ್ರ ಸರಕಾರದ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ವತಿಯಿಂದ ಪುತ್ತೂರು ತಾಲೂಕಿಗೆ ವಾರದೊಳಗೆ 25, 620 ಕ್ವಿಂ. ಅಕ್ಕಿ ಮತ್ತು ಬೇಳೆ ಬರಲಿದೆ. ಇದನ್ನು ತೆಂಕಿಲ ವಿವೇಕಾನಂದ ಪ್ರೌಢ ಶಾಲೆಯಲ್ಲಿ ದಾಸ್ತಾನು ಇರಿಸುವ ವ್ಯವಸ್ಥೆ ಮಾಡಲಾಗಿದೆ.
ಈ ಯೋಜನೆಯಡಿಯಲ್ಲಿ ಬಿಪಿಎಲ್‌ ಪಡಿತರ ಕಾರ್ಡುದಾರರಿಗೆ ಮಾತ್ರ ವಿತರಣೆಯಾಗಲಿದೆ. ಕುಟುಂಬದ ಪ್ರತಿ ಸದಸ್ಯನಿಗೆ ತಲಾ 5 ಕೆ.ಜಿ.ಯಂತೆ ಎಪ್ರಿಲ್‌, ಮೇ, ಜೂನ್‌ ತಿಂಗಳು ಸೇರಿ ಒಟ್ಟು ಮೂರು ತಿಂಗಳಿಗೆ 15 ಕೆ.ಜಿ. ಅಕ್ಕಿಯ ವಿತರಣೆ ನಡೆಯಲಿದೆ.

ಜಿಲ್ಲೆಗೆ 1.53 ಲಕ್ಷ ಕ್ವಿಂ. ಅಕ್ಕಿ
ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ ದ. ಕ. ಜಿಲ್ಲೆಗೆ ಒಟ್ಟು 1,53,300 ಕ್ವಿಂಟಾಲ್‌ ಪಡಿತರ ಅಕ್ಕಿ ಹಾಗೂ ಒಎಂಎಸ್‌ಎಸ್‌ -ಡಿ ಯಲ್ಲಿ 13,850 ಕ್ವಿಂ. ಅಕ್ಕಿ ಮತ್ತು 8217 ಕ್ವಿಂಟಾಲ್‌ ತೊಗರಿಬೇಳೆ ಹಂಚಿಕೆಯಾಗಿ ವಿತರಣೆಗೆ ಲಭಿಸಲಿದೆ. ಪುತ್ತೂರು ತಾ|ಗೆ 25,620 ಕ್ವಿಂ., ಬೆಳ್ತಂಗಡಿ ತಾ|ಗೆ 27,810 ಕ್ವಿಂ., ಬಂಟ್ವಾಳ ತಾ|ಗೆೆ 36,420 ಕ್ವಿಂ., ಮಂಗಳೂರು ತಾ|ಗೆ 52,770 ಕ್ವಿಂ., ಸುಳ್ಯ ತಾ|ಗೆ 10,680 ಕ್ವಿಂ. ಅಕ್ಕಿ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next